09.08.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ರಾಜ್ಯದಲ್ಲಿ ಮುಂಗಾರು ಸದ್ಯ ಚುರುಕಾಗಿದ್ದರೂ, ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಆಗಸ್ಟ್ 10 ರಿಂದ ಮಳೆಯ ಪ್ರಮಾಣ ಮತ್ತಷ್ಟು ಕಡಿಮೆಯಾಗುವ ಲಕ್ಷಣಗಳಿವೆ. ಕರಾವಳಿಯ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಮಳೆಯ ನಡುವಿನ ಬಿಡುವಿನ ಅವಧಿ ಹೆಚ್ಚಾಗುವ ಸಾಧ್ಯತೆ ಇದ್ದು, ದಿನದಲ್ಲಿ ಒಂದೆರಡು ಸಾಮಾನ್ಯ ಮಳೆ ಮುಂದುವರಿಯಬಹುದು.
ಕರಾವಳಿ: ಬಿಸಿಲು, ಮೋಡ, ಮಧ್ಯಂತರ ಮಳೆ : ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಬಿಸಿಲು, ಮೋಡ ಹಾಗೂ ಬಿಟ್ಟು ಬಿಟ್ಟು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಮಳೆಯ ನಡುವಿನ ಬಿಡುವಿನ ಅವಧಿ ಸ್ವಲ್ಪ ಹೆಚ್ಚಿರಬಹುದು. ಕರಾವಳಿಯ ಇತರೆ ಭಾಗಗಳಲ್ಲಿಯೂ ಬಿಸಿಲು ಮತ್ತು ಮೋಡದ ವಾತಾವರಣದ ನಡುವೆ ಅಲ್ಲಲ್ಲಿ ಎರಡು–ಮೂರು ಸುತ್ತು ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ.
ಪ್ರಸ್ತುತ ಮುನ್ಸೂಚನೆಯಂತೆ ಆಗಸ್ಟ್ 10ರಿಂದ ಕರಾವಳಿಯಲ್ಲಿ ಮಳೆ ಮತ್ತಷ್ಟು ಕಡಿಮೆಯಾಗಲಿದೆ. ಆದರೆ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಹಗಲಿನ ವೇಳೆಯಲ್ಲಿ ಒಂದೆರಡು ಸಾಮಾನ್ಯ ಮಳೆ ಮುಂದುವರಿಯುವ ಲಕ್ಷಣಗಳಿವೆ.
ಮಲೆನಾಡು: ಆಗಸ್ಟ್ 10ರಿಂದ ಮಳೆ ಇಳಿಕೆ : ಕೊಡಗು, ಹಾಸನ ಜಿಲ್ಲೆಯ ಸಕಲೇಶಪುರ ಸುತ್ತಮುತ್ತ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಅಲ್ಲಲ್ಲಿ ಒಂದೆರಡು ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಮಲೆನಾಡು ಪ್ರದೇಶಗಳಲ್ಲಿ ಬಿಸಿಲಿನೊಂದಿಗೆ ಅಲ್ಲಲ್ಲಿ ಮೋಡ ಕವಿದ ವಾತಾವರಣ ಹಾಗೂ ಒಂದೆರಡು ಕಡೆ ತುಂತುರು ಮಳೆಯ ಸಾಧ್ಯತೆ ಇದೆ.ಆಗಸ್ಟ್ 10ರಿಂದ ಮಲೆನಾಡಿನಲ್ಲಿಯೂ ಮಳೆಯ ಪ್ರಮಾಣ ಮತ್ತಷ್ಟು ಕಡಿಮೆಯಾಗುವ ಲಕ್ಷಣಗಳಿವೆ.
ಉತ್ತರ ಒಳನಾಡು: ಆಗಸ್ಟ್ 14ರವರೆಗೆ ಮಳೆಯ ಸಾಧ್ಯತೆ : ಹಾವೇರಿ ಹಾಗೂ ಬಳ್ಳಾರಿ ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಬಿಸಿಲು ಮತ್ತು ಅಲ್ಲಲ್ಲಿ ಮೋಡದ ವಾತಾವರಣ ಇರಲಿದ್ದು, ಒಂದೆರಡು ಕಡೆ ತುಂತುರು ಮಳೆಯಾಗಬಹುದು.
ಪ್ರಸ್ತುತ ಮುನ್ಸೂಚನೆಯಂತೆ ಆಗಸ್ಟ್ 14ರವರೆಗೆ ಉತ್ತರ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆಯ ಸಾಧ್ಯತೆ ಮುಂದುವರಿಯಲಿದೆ.
ದಕ್ಷಿಣ ಒಳನಾಡು: ಆಗಸ್ಟ್ 12ರವರೆಗೆ ಮಳೆ : ಮೈಸೂರು ಜಿಲ್ಲೆಯ ಒಂದೆರಡು ಕಡೆ, ಚಾಮರಾಜನಗರ, ರಾಮನಗರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಚಿಕ್ಕಬಳ್ಳಾಪುರ, ಪಾವಗಡ, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳ ಅಲ್ಲಲ್ಲಿ ಒಂದೆರಡು ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ. ಪ್ರಸ್ತುತ ಅಂದಾಜಿನಂತೆ ಆಗಸ್ಟ್ 12ರವರೆಗೆ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ.
ಮುಂಗಾರು ಚುರುಕಾಗಲು ಜಪಾನ್ ಚಂಡಮಾರುತದ ಪ್ರಭಾವ : ಮಧ್ಯಮ ಸ್ತರದಲ್ಲಿ ಅತ್ಯಂತ ಪ್ರಬಲವಾಗಿರುವ ಜಪಾನ್ ಚಂಡಮಾರುತವು ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯ ಮಾರುತಗಳನ್ನು ತನ್ನತ್ತ ಸೆಳೆಯುತ್ತಿರುವ ಪರಿಣಾಮ ಮುಂಗಾರು ಚುರುಕಾಗಿದೆ.
ಇದರೊಂದಿಗೆ ಪಶ್ಚಿಮ ಬಂಗಾಳ, ಜಾರ್ಖಂಡ್ ಹಾಗೂ ಬಿಹಾರ ರಾಜ್ಯಗಳಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವುದೂ ಮುಂಗಾರು ಚಟುವಟಿಕೆ ಹೆಚ್ಚಲು ಕಾರಣವಾಗಿದೆ.
ಈ ಜಪಾನ್ ಚಂಡಮಾರುತ ಶಿಥಿಲಗೊಳ್ಳುತ್ತಿದ್ದಂತೆ ಮುಂಗಾರು ದುರ್ಬಲಗೊಳ್ಳುವ ಸಾಧ್ಯತೆ ಇದೆ. ಆದರೆ ಇದೇ ಸಂದರ್ಭದಲ್ಲಿ ಜಪಾನ್ನ ಆಗ್ನೇಯ ಕರಾವಳಿ ಸಮೀಪ ಮತ್ತೊಂದು ಬೃಹತ್ ಚಂಡಮಾರುತದ ಬೆಳವಣಿಗೆ ಆರಂಭವಾಗುವ ಲಕ್ಷಣಗಳು ಕಾಣಿಸುತ್ತಿದ್ದು, ಮುಂದಿನ ದಿನಗಳ ಹವಾಮಾನ ಪರಿಸ್ಥಿತಿಯಲ್ಲಿ ಅದರ ಪ್ರಭಾವವನ್ನು ಗಮನಿಸಬೇಕಿದೆ.
ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
Karnataka is likely to see a further reduction in rainfall from August 10, particularly across the coastal and Malnad regions. Coastal areas may experience more sunshine and longer rain breaks, although one or two moderate showers may continue in the foothill areas. Rainfall may persist intermittently in South Interior Karnataka until August 12 and North Interior Karnataka until August 14. The current active monsoon is being influenced by a strong cyclone near Japan and circulation over eastern India, while another major storm system may develop near southeastern Japan.



