2026ರ ಖಾರಿಫ್ ಹಂಗಾಮಿನ ಸಿದ್ಧತೆಗಳನ್ನು ಪರಿಶೀಲಿಸಲು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ನವದೆಹಲಿಯ ಕೃಷಿ ಭವನದಲ್ಲಿ ಸಭೆ ನಡೆಸಿದರು. ಸಂಭವನೀಯ ಎಲ್ ನಿನೋ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಹತ್ತಿ ಉತ್ಪಾದನೆ ಹೆಚ್ಚಳ, ದ್ವಿದಳ ಧಾನ್ಯಗಳಲ್ಲಿ ಸ್ವಾವಲಂಬನೆ ಸಾಧನೆ ಹಾಗೂ ಕಡಿಮೆ ಮಳೆಯಾಗುವ ಜಿಲ್ಲೆಗಳಿಗೆ ಮುಂಚಿತ ತುರ್ತು ಯೋಜನೆ ರೂಪಿಸುವುದಕ್ಕೆ ಸಚಿವರು ವಿಶೇಷ ಒತ್ತು ನೀಡಿದರು. ಯಾವುದೇ ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದ ಕೃಷಿ ಮತ್ತು ರೈತರನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ಮುಂಚಿತವಾಗಿಯೇ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಎಲ್ ನಿನೋ ಜಿಲ್ಲೆಗಳಿಗೆ ವಿಶೇಷ ಯೋಜನೆ : ಸಭೆಯಲ್ಲಿ ಎಲ್ ನಿನೋ ಪರಿಣಾಮ ಹೆಚ್ಚು ಕಾಣಬಹುದಾದ ಜಿಲ್ಲೆಗಳನ್ನು ಗುರುತಿಸಿ ಬೆಳೆವಾರು ಆಕಸ್ಮಿಕ (Contingency) ಯೋಜನೆಗಳನ್ನು ರೂಪಿಸುವಂತೆ ನಿರ್ದೇಶನ ನೀಡಲಾಯಿತು. ಕಡಿಮೆ ಮಳೆ ಅಥವಾ ಅಸಮಾನ ಮಳೆಯ ಸಾಧ್ಯತೆ ಇರುವ ಪ್ರದೇಶಗಳಲ್ಲಿ ಜಲ ಸಂರಕ್ಷಣೆ, ತೇವಾಂಶ ನಿರ್ವಹಣೆ, ಅಂತರ ಬೆಳೆ ಹಾಗೂ ಪರ್ಯಾಯ ಬೆಳೆ ಪದ್ಧತಿಗಳ ಬಗ್ಗೆ ರೈತರಿಗೆ ಮಾರ್ಗದರ್ಶನ ನೀಡಲು ಒತ್ತು ನೀಡಲಾಗಿದೆ.
ರಾಜ್ಯ ಸರ್ಕಾರಗಳೊಂದಿಗೆ ಸಮನ್ವಯ ಸಾಧಿಸಿ ಅಪಾಯದ ಜಿಲ್ಲೆಗಳಿಗೆ ಪ್ರತ್ಯೇಕ ಕಾರ್ಯತಂತ್ರ ರೂಪಿಸುವ ಮೂಲಕ ರೈತರಿಗೆ ತಕ್ಷಣದ ಸಲಹೆ ಮತ್ತು ಬೆಂಬಲ ವ್ಯವಸ್ಥೆ ಕಲ್ಪಿಸಬೇಕೆಂದು ಸಚಿವರು ಸೂಚಿಸಿದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
9-10 ರಾಜ್ಯಗಳಲ್ಲಿ ಜಾಗೃತಿ ಅಭಿಯಾನ : ಎಲ್ ನಿನೋ ಪರಿಣಾಮ ಹೆಚ್ಚು ಕಾಣಬಹುದಾದ 9-10 ರಾಜ್ಯಗಳಲ್ಲಿ ಜಿಲ್ಲಾಧಿಕಾರಿಗಳು, ಕೃಷಿ ಇಲಾಖೆಗಳು, ಕೃಷಿ ವಿಜ್ಞಾನ ಕೇಂದ್ರಗಳು (KVK) ಹಾಗೂ ವಿಸ್ತರಣಾ ವ್ಯವಸ್ಥೆಗಳೊಂದಿಗೆ ವಿಶೇಷ ಸಭೆಗಳನ್ನು ನಡೆಸುವಂತೆ ಸೂಚಿಸಲಾಗಿದೆ.
ಪ್ರತಿ ರೈತನಿಗೂ ತನ್ನ ಪ್ರದೇಶಕ್ಕೆ ಸೂಕ್ತವಾದ ಬೆಳೆ ಆಯ್ಕೆಗಳು ಮತ್ತು ಮುನ್ನೆಚ್ಚರಿಕೆಗಳ ಬಗ್ಗೆ ಸ್ಪಷ್ಟ ಮಾಹಿತಿ ತಲುಪಿಸುವಂತೆ ಜಾಗೃತಿ ಅಭಿಯಾನ ಕೈಗೊಳ್ಳಬೇಕು ಎಂದು ಸಚಿವರು ಹೇಳಿದ್ದಾರೆ. ಆತಂಕ ಸೃಷ್ಟಿಸುವ ಬದಲು ವೈಜ್ಞಾನಿಕ ಮಾಹಿತಿಯ ಆಧಾರದ ಮೇಲೆ ವಿಶ್ವಾಸಾರ್ಹ ಸಲಹೆಗಳನ್ನು ರೈತರಿಗೆ ನೀಡಬೇಕು ಎಂದು ಒತ್ತಿ ಹೇಳಿದರು.
ಹತ್ತಿ ಉತ್ಪಾದನೆ ಹೆಚ್ಚಳಕ್ಕೆ ಮಿಷನ್ ಮೋಡ್ : 2026ರ ಖಾರಿಫ್ ಹಂಗಾಮಿನಲ್ಲಿ ಹತ್ತಿ ಉತ್ಪಾದನೆ ಹೆಚ್ಚಿಸಲು ಮಿಷನ್ ಮೋಡ್ನಲ್ಲಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಉತ್ತಮ ತಳಿಗಳ ಆಯ್ಕೆ, ಅಂತರ ಬೆಳೆ ಪದ್ಧತಿ, ಹಸಿರು ಗೊಬ್ಬರ ಬಳಕೆ ಹಾಗೂ ತೇವಾಂಶ ಸಂರಕ್ಷಣೆ ತಂತ್ರಜ್ಞಾನಗಳ ಮೂಲಕ ಉತ್ಪಾದಕತೆ ಮತ್ತು ರೈತರ ಆದಾಯ ಹೆಚ್ಚಿಸುವ ಗುರಿ ಹೊಂದಲಾಗಿದೆ.
ದ್ವಿದಳ ಧಾನ್ಯಗಳಲ್ಲಿ ಆತ್ಮನಿರ್ಭರ ಭಾರತ : ಬಟಾಣಿ, ಉದ್ದು, ಹೆಸರು ಸೇರಿದಂತೆ ಪ್ರಮುಖ ದ್ವಿದಳ ಧಾನ್ಯಗಳಲ್ಲಿ ದೇಶವನ್ನು ಸ್ವಾವಲಂಬಿಯನ್ನಾಗಿಸುವ ಗುರಿಯೊಂದಿಗೆ ವಿಶೇಷ ಮಿಷನ್ ಕೈಗೊಳ್ಳಲಾಗಿದೆ. ಉತ್ತಮ ಬೀಜ, ತಾಂತ್ರಿಕ ಮಾರ್ಗದರ್ಶನ, ಪ್ರದೇಶ ವಿಸ್ತರಣೆ ಹಾಗೂ ಬೆಳೆ ಚಕ್ರ ನಿರ್ವಹಣೆಯ ಮೂಲಕ ಉತ್ಪಾದನೆ ಹೆಚ್ಚಿಸಿ ಆಮದು ಅವಲಂಬನೆ ಕಡಿಮೆ ಮಾಡಲು ಸರ್ಕಾರ ಯೋಜಿಸಿದೆ.
ರಸಗೊಬ್ಬರ ಪೂರೈಕೆಗೆ ಭರವಸೆ : ದೇಶದಲ್ಲಿ ಅಗತ್ಯ ಪ್ರಮಾಣದ ರಸಗೊಬ್ಬರ ದಾಸ್ತಾನು ಲಭ್ಯವಿದ್ದು, ಮಾನ್ಸೂನ್ ಚುರುಕುಗೊಳ್ಳುತ್ತಿದ್ದಂತೆ ರಾಜ್ಯಗಳಿಗೆ ಪೂರೈಕೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲಾಗುವುದು ಎಂದು ಸಭೆಯಲ್ಲಿ ತಿಳಿಸಲಾಯಿತು. ಯಾವುದೇ ಜಿಲ್ಲೆಯಲ್ಲಿ ಕೊರತೆ ಉಂಟಾಗದಂತೆ ಮುಂಚಿತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಸಂಶೋಧನೆ ಮತ್ತು ರೈತರ ನಡುವೆ ಸಂಪರ್ಕ ಬಲಪಡಿಸಲು ಒತ್ತು : ಕೃಷಿ ವಿಶ್ವವಿದ್ಯಾಲಯಗಳು, ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR), ಕೃಷಿ ವಿಜ್ಞಾನ ಕೇಂದ್ರಗಳು ಹಾಗೂ ರಾಜ್ಯ ಕೃಷಿ ಇಲಾಖೆಗಳ ನಡುವೆ ಸಮನ್ವಯ ಬಲಪಡಿಸುವ ಅಗತ್ಯವನ್ನು ಸಚಿವರು ಒತ್ತಿ ಹೇಳಿದರು. ಸಂಶೋಧನಾ ಮಾಹಿತಿ ಸಮಯಕ್ಕೆ ಸರಿಯಾಗಿ ರೈತರ ಹೊಲಗಳಿಗೆ ತಲುಪಿದಾಗ ಮಾತ್ರ ಅದರ ಪ್ರಯೋಜನ ಸಿಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಭೆಯ ಪ್ರಮುಖ ಅಂಶವೆಂದರೆ ಎಲ್ ನಿನೋ ಪರಿಸ್ಥಿತಿಯನ್ನು ಕೇವಲ ಹವಾಮಾನ ಸವಾಲಾಗಿ ನೋಡದೆ, ಮುಂಚಿತ ಯೋಜನೆ ರೂಪಿಸುವ ಮೂಲಕ ರೈತರ ನಷ್ಟವನ್ನು ತಡೆಯುವ ಪ್ರಯತ್ನವಾಗಿದೆ. ಕರ್ನಾಟಕ ಸೇರಿದಂತೆ ಮಳೆ ಆಧಾರಿತ ಕೃಷಿ ಪ್ರದೇಶಗಳಿಗೆ ಇದು ಅತ್ಯಂತ ಮಹತ್ವದ್ದಾಗಿದೆ. ವಿಶೇಷವಾಗಿ ಉದ್ದು, ಹೆಸರು, ತೊಗರಿ ಮತ್ತು ಹತ್ತಿ ಬೆಳೆಗಾರರಿಗೆ ಕೇಂದ್ರದ ಈ ತಂತ್ರಗಳು ಮುಂದಿನ ದಿನಗಳಲ್ಲಿ ಹೆಚ್ಚಿನ ಅವಕಾಶಗಳನ್ನು ಒದಗಿಸಬಹುದು.
Union Agriculture Minister Shivraj Singh Chouhan reviewed Kharif 2026 preparedness with a special focus on possible El Niño conditions, cotton production enhancement, and self-reliance in pulse production. The government has directed states to prepare contingency plans for low-rainfall districts and strengthen farmer awareness and support systems.

