ಸರಕಾರಗಳು ಇವರ ಅಭಿವೃದ್ಧಿ ಯೋಜನೆಗಳನ್ನು ಹಾಕಿಕೊಂಡಿದೆ. ಆದರೂ ಸೌಲಭ್ಯಗಳು ಇನ್ನೂ ತಲಪುತ್ತಿಲ್ಲ. ದಾಖಲೆಗಳು ಹೇಳುತ್ತವೆ ಇವರು ಕ್ರೈಸ್ತರೆಂದು…!. ಇವರು ಸುಳ್ಯ ತಾಲೂಕಿನ ಪಂಜ ಪರಿಸರದಲ್ಲಿರುವ ಕೊರಗ ಸಮುದಾಯದ ಹಲವು ಕುಟುಂಬಗಳು ಇಂದಿಗೂ ಮೂಲಭೂತ ಸೌಲಭ್ಯದ ಕೊರತೆಯಿಂದ ಬಳಲುತ್ತಿವೆ. ಮಾನವೀಯ ನೆಲೆಯಲ್ಲಿ ಇವರಿಗೆ ಸೌಲಭ್ಯಗಳು ಈಗ ತಲುಪಬೇಕಿದೆ.
ಸುಳ್ಯ ತಾಲೂಕಿನ ಪಂಜದಲ್ಲಿ ಕೊರಗ ಸಮುದಾಯದ ಹಲವು ಮನೆಗಳು ಇವೆ. ಸರಕಾರ ಎಲ್ಲಾ ವ್ಯವಸ್ಥೆ ಕಡೆಗೂ ಗಮನಕೊಟ್ಟರೂ ಈಗಲೂ ಮೂಲಭೂತ ಸಮಸ್ಯೆಗಳ ಕೊರತೆಯಿಂದ ಈ ಕುಟುಂಬಗಳು ಅನೇಕ ವರ್ಷಗಳಿಂದ ಬಳಲುತ್ತಿವೆ. ಈಗ ಯಾವುದೇ ಕಚೇರಿಗೆ ಈ ಕೊರಗ ಸಮುದಾಯದ ಕುಟುಂಬಗಳು ಸೌಲಭ್ಯಕ್ಕೆ ಹೋದಾಗ ದಾಖಲೆಗಳಲ್ಲಿ ಮತಾಂತರವಾದ ಬಗ್ಗೆ ಬೆಳಕಿಗೆ ಬರುತ್ತದೆ. ಹೆಸರುಗಳು ಬದಲಾಗಿವೆ, ಧರ್ಮವೂ ಬದಲಾಗಿದೆ. ಹಾಗಾಗಿ ಸೌಲಭ್ಯಗಳು ಸಿಗುತ್ತಿಲ್ಲ. ಮತಾಂತರ ಯಾಕಾದರು ಎಂದು ಕೇಳಿದರೂ ಉತ್ತರವಿಲ್ಲ. ಮೂಲಭೂತ ಸೌಲಭ್ಯ ಬೇಕು ಎಂದು ಕೆಲವರು ಮತಾಂತರವಾದರು, ಮನೆಯ ಮುಂದೆ ಶಿಲುಬೆ ಹಾಕಿಕೊಂಡರು. ಒಳ್ಳೆಯದಾಗುತ್ತದೆ ಎಂದು ಅಂದುಕೊಂಡರು. ಈಗ ಮತಾಂತರ ಮಾಡಿಸಿಕೊಂಡವರೂ ಇಲ್ಲ, ಸಾಮಾಜಿಕ ಮುಖಂಡರೂ ಇಲ್ಲ, ರಾಜಕೀಯ ಮುಖಂಡರೂ ಇಲ್ಲ.
ಸೌಲಭ್ಯಕ್ಕಾಗಿ , ಮನೆ ನಿರ್ಮಾಣಕ್ಕಾಗಿ ಕಚೇರಿಗಳಿಗೆ ಅಲೆದೂ ಅಲೆದೂ ಈಗ ಕಚೇರಿ ಎಂದಾಗಲೇ ಇವರಲ್ಲಿ ಕೆಲವರಿಗೆ ಅಲರ್ಜಿ ಆಗಿದೆ. ನಮಗೇನು ಸಿಗಲ್ಲ ಎಂಬ ಭಾವನೆ ಇದೆ. ರಾಜಕೀಯ ಮುಖಂಡರೂ ಚುನಾವಣೆಯ ವೇಳೆಗೆ ಬರುತ್ತಾರೆ ಮತ್ತೆ ಈ ಕಡೆ ಬರಲ್ಲ ಎನ್ನುತ್ತಾರೆ.

ಆದರೆ ರಾಜಕೀಯ ಮುಖಂಡರು ಹೇಳುತ್ತಾರೆ, ಚುನಾವಣೆ ನಂತರ ಮನೆ ನಿರ್ಮಾಣ ಸೇರಿದಂತೆ ಮೂಲಭೂತ ಸೌಲಭ್ಯಕ್ಕಾಗಿ ಅವರನ್ನು ಕರೆದುಕೊಂಡು ಹೋದರೂ ಮತ್ತೆ ಬರಲ್ಲ, ಹೀಗಾಗಿ ಸೌಲಭ್ಯ ನೀಡುವುದಾದರೂ ಹೇಗೆ ಎಂದು ಹೇಳುತ್ತಾರೆ. ಮತಾಂತರ ಆಗಿರುವುದು ಒಂದು ಭಾಗವಾದರೆ, ಇನ್ನೂ ಮತಾಂತರ ಆಗದೇ ಇರುವವರಿಗೂ ಸೌಲಭ್ಯಗಳು ದೊರೆತಿಲ್ಲ, ಈಗಲೂ ದುಸ್ಥಿತಿಯಲ್ಲಿರುವ ಮನೆಯಲ್ಲಿ ಬದುಕುತ್ತಿದ್ದಾರೆ.
ಪಂಜದಲ್ಲಿ ಕೊರಗ ಸಮುದಾಯದ ಮೂಲಭೂತ ಸಮಸ್ಯೆ pic.twitter.com/o8VX4oLPRB
— theruralmirror (@ruralmirror) August 29, 2021
ಸದ್ಯ ಮತಾಂತರ ಆಗಿರಬಹುದು , ಕೆಲವರು ಹೆಸರುಗಳು ಬದಲಾಗಿರಬಹುದು , ಧರ್ಮ ಹಾಗೂ ಹೆಸರಿನ ದಾಖಲೆಗಳಲ್ಲಿ ಲೋಪ ಇರಬಹುದು, ಅದೇನೇ ಇದ್ದರೂ ಮಾನವೀಯತೆಯಿಂದ ಮೇಲಾದ್ದು ಯಾವುದೂ ಇಲ್ಲ. ಈಗ ಸರಕಾರಗಳು, ಇಲಾಖೆಗಳು, ರಾಜಕೀಯ ಮುಖಂಡರು ಮಾನವೀಯತೆಯ ಆಧಾರದಲ್ಲಿಯೇ ಇಲ್ಲಿನ ಕುಟುಂಬಗಳಿಗೆ ಮೂಲಭೂತ ಸೌಲಭ್ಯ ಒದಗಿಸಿಕೊಡುವ ಕೆಲಸ ಆಗಬೇಕಿದೆ.

