ರಾಜಕೀಯ ವ್ಯವಸ್ಥೆಗೆ ಮಾದರಿಯಾದ ಗ್ರಾಮೀಣ ಪ್ರದೇಶ ಸಹಕಾರಿ ಸಂಘ | ಮರ್ಕಂಜದ ಸಹಕಾರಿ ಸಂಘ ಏಕೆ ಆದರ್ಶ ? |

September 25, 2022
10:33 PM

ಮೊಳಹಳ್ಳಿ ಶಿವರಾಯರಿಂದ ಆರಂಭಗೊಂಡ ಪರಸ್ಪರ ಸಹಕಾರ ತತ್ತ್ವದ ಸಹಕಾರಿ ಸಂಘಗಳು ಇಂದು ದಕ್ಷಿಣ ಕನ್ನಡ ಜಿಲ್ಲೆಯ ಆರ್ಥಿಕ ಚಟುವಟಿಕೆಯ ಪ್ರಮುಖ ಕೇಂದ್ರ. ಗ್ರಾಮೀಣ ಭಾಗದಲ್ಲಂತೂ ಸಹಕಾರಿ ಸಂಘ ಮಾಡುತ್ತಿರುವ ಸೇವೆ ಅನನ್ಯ. ಇತ್ತೀಚೆಗೆ ಸಹಕಾರಿ ಕ್ಷೇತ್ರದ ಒಳಗೂ ರಾಜಕೀಯ ಪ್ರವೇಶ. ಹೀಗಾಗಿ ಸೇವೆಗಿಂತ ಅಧಿಕಾರವೇ ಮುಖ್ಯವಾಗುತ್ತಿರುವುದು ಸಾಮಾನ್ಯ. ಆದರೆ ನಿಜವಾದ ಸಹಕಾರಿ ಸಿದ್ಧಾಂತವನ್ನು ಪ್ರತಿಪಾದಿಸಿದ್ದು ಸುಳ್ಯ ತಾಲೂಕಿನ ಮರ್ಕಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ. ಇಲ್ಲಿನ ಅಧ್ಯಕ್ಷ ಹಾಗೂ ಉಪಾಧ್ಯ ಇಬ್ಬರೂ ತಮ್ಮ ಅಧಿಕಾರಾವಧಿಯ ಎರಡೂವರೆ ವರ್ಷದಲ್ಲಿ ರಾಜೀನಾಮೆ ನೀಡಿದ್ದಾರೆ. ಕಾರಣ, ಕೊಟ್ಟ ಮಾತು..!.

ಸುಳ್ಯ ತಾಲೂಕಿನ ಮರ್ಕಂಜ ಸಹಕಾರಿ ಸಂಘದ ಅಧ್ಯಕ್ಷ ಮಹಾಬಲ ಕಟ್ಟಕೋಡಿ ಹಾಗೂ ಉಪಾಧ್ಯಕ್ಷ ವೆಂಕಟ್ರಮಣ ಅಂಗಡಿಮಜಲು ಅವರು ರಾಜೀನಾಮೆ ನೀಡಿದ್ದರು. ಸಹಕಾರಿ ಸಂಘ ಉತ್ತಮವಾಗಿ ನಡೆಯುತ್ತಿತ್ತು, ಸಂಘದ ಅಧ್ಯಕ್ಷರ ವಿಶೇಷ ಆಸಕ್ತಿಯಿಂದ ಸೂಪರ್‌ ಮಾರ್ಕೆಟ್‌ ಕೂಡಾ ವ್ಯವಸ್ಥಿತವಾಗಿ, ಲಾಭದಾಯಕವಾಗಿ ನಡೆಯುತ್ತಿತ್ತು. ಹಾಗಿದ್ದರೂ ಸಂಘದ ಅಧ್ಯಕ್ಷ ಮಹಾಬಲ ಕಟ್ಟಕೋಡಿ ಅವರು ರಾಜೀನಾಮೆ ನೀಡಿದರು. ಅವರು ರಾಜೀನಾಮೆ ನೀಡಲು ಕಾರಣ, ಸಂಘದ ಚುನಾವಣೆಯ ಬಳಿಕ ಅಧ್ಯಕ್ಷರ ಆಯ್ಕೆಯ ಸಂದರ್ಭ ಎರಡು ಹೆಸರುಗಳು ಬಂದಿತ್ತು. ಆ ಸಂದರ್ಭ ಅವರ ಸಂಘಟನೆಯ ಪ್ರಮುಖರು ಎರಡೂವರೆ ವರ್ಷದ ಅವಧಿಗೆ ಅಧಿಕಾರ ಹಂಚಿಕೊಳ್ಳಿ ಎಂದಿದ್ದರು. ಅಂದಿನಿಂದ ಮಹಾಬಲ ಅವರು ಸಹಕಾರಿ ಸಂಘದ ಅಧ್ಯಕ್ಷರಾಗಿ  ವೆಂಕಟ್ರಮಣ ಅವರು ಉಪಾಧ್ಯಕ್ಷರಾಗಿ ಸಂಘವನ್ನು ಮುನ್ನಡೆಸುತ್ತಿದ್ದರು. ಇದೇ ತಿಂಗಳ ಆರಂಭದಲ್ಲಿ ತನಗೆ ನೀಡಿದ ಅವಧಿ ಮುಗಿಯಿತು ಎಂದು ರಾಜೀನಾಮೆ ನೀಡಿದರು. ಸಂಘದ ಯಾವ ನಿರ್ದೇಶಕರೂ ರಾಜೀನಾಮೆ ನೀಡುವಂತೆ ಕೇಳಿರಲಿಲ್ಲ, ಹೇಳಿರಲೂ ಇಲ್ಲ. ಆದರೆ ಕೊಟ್ಟ ಮಾತಿನಂತೆ, ಸಂಘಟನೆಯ ಹಿರಿಯರು ಹೇಳಿರುವ ನುಡಿಯಂತೆ ಮಹಾಬಲ ಕಟ್ಟಕೋಡಿ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ಹಿಂದೆ ಸೂಚಿಸಿದಂತೆ ರಮೇಶ್‌ ದೇಲಂಪಾಡಿ ಅವರು ಅಧ್ಯಕ್ಷರಾದರು.

ಈ ಸಹಕಾರಿ ಸಂಘ ಮಾದರಿಯಾಗಿರುವುದು ಈ ಕಾರಣಕ್ಕೆ. ಅಧಿಕಾರದ ಆಸೆಯೇ ಇಂದು ಹಪಹಪಿಸುತ್ತಿರುವಾಗ ಗ್ರಾಮೀಣ ಭಾಗದ ಸಹಕಾರಿ ಸಂಘದಲ್ಲಿ ನೀಡಿರುವ ಮಾತಿಗೆ, ಸಂಘಟನೆಯ ಹಿರಿಯರು ಹೇಳಿರುವ ಸೂಚನೆಯಂತೆ ಸ್ವಯಂಪ್ರೇರಿತನಾಗಿ ರಾಜೀನಾಮೆ ನೀಡಿರುವ ಕಾರಣಕ್ಕೆ ಈ ಸಂಘ ಮಾದರಿ. ಎಲ್ಲೆಡೆಯೂ ಅಧಿಕಾರ ಸಿಕ್ಕಿದ ಬಳಿಕ ರಾಜೀನಾಮೆ ನೀಡುವ ಪಾಠವೇ ಇಲ್ಲ. ಇನ್ನೂ ಕೆಲವು ಸಮಯ ತಾನೇ ಮುಂದುವರಿಯುತ್ತೇನೆ ಎನ್ನುವ ಹಾಗೂ ಆ ಕಾರಣದಿಂದಲೇ ಮತ್ತೆ ಗುಂಪುಗಾರಿಕೆ ನಡೆಯುವುದು  ಇರುತ್ತದೆ. ಸುಳ್ಯವನ್ನೇ ಗಮನಿಸಿದರೆ, ರಾಜೀನಾಮೆ ನೀಡದೇ ಗುಂಪುಗಾರಿಕೆ ಮಾಡಿರುವ, ಗುಂಪುಗಾರಿಕೆ  ಆಗಿರುವ ಕೆಲವು ಸಂಸ್ಥೆಗಳು ಇವೆ. ಎಲ್ಲಾ ಅಧಿಕಾರವೂ ತನಗೇ ಶಾಶ್ವತವಾಗಿ ಬೇಕು ಎನ್ನುವ ಮನಸ್ಥಿತಿಯೂ ಹಲವು ಕಡೆ ಇದೆ. ಅಂತಹವರಿಗೆಲ್ಲಾ, ಅವುಗಳಿಗೆಲ್ಲಾ ಈ ಸಹಕಾರಿ ಸಂಘ ಮಾದರಿ. ಯಾವುದೇ ಕೆಲಸ ಮಾಡಿದಾಗ ಇನ್ನು ಒಂದು ವರ್ಷ ಅಧಿಕಾರ ಇರಲಿ ಎಂದು ಆಕಾಂಕ್ಷೆ ವ್ಯಕ್ತಪಡಿಸುವ ಜನರೇ ಇಂದು ಹೆಚ್ಚಾಗಿರುವುದು  ವಾಸ್ತವ.

ಆಡಳಿತದಲ್ಲೂ ಈ ಸಹಕಾರಿ ಸಂಘ ಮಾದರಿ. ಮರ್ಕಂಜ ಅಡಿಕೆ ಹಳದಿ ಎಲೆರೋಗ ಪೀಡಿತ ಪ್ರದೇಶ. ಹಲವು ಕೃಷಿಕರು ಸಹಜವಾಗಿಯೇ ಆರ್ಥಿಕವಾಗಿ ಸಂಕಷ್ಟವನ್ನು ಎದುರಿಸುತ್ತಿರುವ ಪ್ರದೇಶ. ಅದಕ್ಕಾಗಿಯೇ ಇಲ್ಲಿ ಕೃಷಿಕರಿಗಾಗಿ ಹಲವಾರು ಉಪಯೋಗ ಕೆಲಸವನ್ನು ಮಾಡಿದ್ದಾರೆ. ಮಹಾಬಲ ಕಟ್ಟಕೋಡಿ ಅವರ ಆಸಕ್ತಿಯಿಂದ  ಮರ್ಕಂಜದಲ್ಲಿ ಜನರಿಗೆ  ದಿನಸಿ ಖರೀದಿಗೆ ಕಷ್ಟವಾದಾಗ ಮರ್ಕಂಜದಲ್ಲಿಯೂ ದಿನಸಿ ಸಹಿತ ಹಾರ್ಡ್‌ವೇರ್‌ ಹೊಂದಿರುವ ಐಸಿರಿ ಸೂಪರ್‌ ಮಾರ್ಟ್‌ ತೆರೆಯಲು ಆರಂಭಿಸಿದರು. ಒಂದೇ ವರ್ಷದಲ್ಲಿ ಲಾಭಕ್ಕೆ ತಂದಿರಿಸಿ ಸೂಪರ್‌ ಮಾರ್ಕೆಂಟ್‌ ಇಂದು ಗಮನ ಸೆಳೆದಿದೆ.ಕಳೆದ ವರ್ಷ 6 ನಿವ್ವಳ ಲಾಭ ಗಳಿಸಿದೆ. ಗ್ರಾಮೀಣ ಭಾಗದಲ್ಲಿಯೂ ಸಹಕಾರಿ ಸಂಘವು ಜನಪರವಾದ ಕೆಲಸವನ್ನು ಮಾಡಬಹುದು ಎಂದು ತೋರಿಸಿದ್ದರು. ಇಂತಹ ಸನ್ನಿವೇಶದಲ್ಲಿ ಸಹಕಾರಿ ಸೂಪರ್‌ ಮಾರ್ಟ್‌ ಲಾಭಕ್ಕೆ ತಂದಿರಿಸಿ ಅಧಿಕಾರವನ್ನು ಹಸ್ತಾಂತರ ಮಾಡಿರುವುದು  , ಮಾಡುವುದು  ಗ್ರಾಮೀಣ ಭಾಗದಲ್ಲಿ ಮಾತ್ರವೇ ಸಾಧ್ಯವಿದೆ.

ಹೀಗಾಗಿ ಈ ಸಹಕಾರಿ ಸಂಘವು ಎರಡು ಕಾರಣಗಳಿಗೆ ಮಾದರಿಯಾಗಿದೆ. ಗ್ರಾಮೀಣ ಭಾಗದಲ್ಲಿ ಸಹಕಾರಿ ಸೂಪರ್‌ ಮಾರ್ಟ್‌ ರಚನೆ ಮಾಡಿ ಕೇವಲ ಎರಡೇ ವರ್ಷದಲ್ಲಿ ಲಾಭಕ್ಕೆ ತಂದಿರಿಸಿದ್ದು ಒಂದು ಮಾದರಿಯಾದರೆ ಸಂಘಟನೆ ಹೇಳಿದಂತೆ ಈ ಸಂಘದ ಅಧ್ಯಕ್ಷರು ರಾಜೀನಾಮೆ ನೀಡಿ ಮಾದರಿಯಾದದ್ದು ಇನ್ನೊಂದು ಗಮನಾರ್ಹ ಅಂಶ.

ನೂತನ ಅಧ್ಯಕ್ಷ ರಮೇಶ್‌ ದೇಲಂಪಾಡಿ ಅವರು ಅಧಿಕಾರ ಸ್ವೀಕರಿಸುವ ವೇಳೆ ಜ್ಞಾಪಿಸಿಕೊಂಡ ಅಂಶಗಳೂ ಇದೇ. ಉತ್ತಮ ಆಡಳಿತ ನಡೆಸುತ್ತಿದ್ದ ಮಹಾಬಲ ಕಟ್ಟಕೋಡಿ ಅವರನ್ನು ರಾಜೀನಾಮೆ ನೀಡುವಂತೆ ಹೇಳಿರಲಿಲ್ಲ.ಅಧಿಕಾರ ಕೇಳಲಿಲ್ಲ, ಒತ್ತಾಯವೂ ಮಾಡಿಲ್ಲ. ನೀವೇ ಮುಂದುವರಿಯಿರಿ ಎಂದೂ ಹೇಳಿದ್ದರು. ಕೊಟ್ಟ ಮಾತಿಗೆ ಬದ್ಧರಾದ ಮಹಾಬಲ ಅವರ ರಾಜೀನಾಮೆ ಬಳಿಕ ಎಲ್ಲರ ಸಲಹೆಯಂತೆ ಅಧ್ಯಕ್ಷರಾದರು.

ಈ ಹಿಂದೆಯೂ ಈ ಸಹಕಾರಿ ಸಂಘದಲ್ಲಿ ಇಂತಹದ್ದೇ ಮಾದರಿ ಆಗಿತ್ತು. ರಾಜೀನಾಮೆ ನೀಡಬೇಕು ಎಂದು ಸೂಚಿಸಿದ ತಕ್ಷಣವೇ ಅಧಿಕಾರದ ಯಾವ ಆಕಾಂಕ್ಷೆಯೂ ಇಲ್ಲದೆ ರಾಜೀನಾಮೆ ನೀಡಿದ್ದಾರೆ ಇಲ್ಲಿನ ಅಧ್ಯಕ್ಷರು. ರಾಜಕೀಯದ ಗೊಂದಲ ಇಲ್ಲದೆ, ಎಲ್ಲಾ ಪಕ್ಷಗಳೂ ಒಂದಾಗಿ ಸಾಗುವ ಇಲ್ಲಿನ ಸಹಕಾರಿ ಸಂಘವು ನಿಜವಾದ “ಸಹಕಾರಿ”ತತ್ತ್ವದಲ್ಲಿ ಕೆಲಸ ಮಾಡುತ್ತಿದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

ಹವಾಮಾನ ವರದಿ | 28-07-2026 | ಮುಂದಿನ 10 ದಿನ ಸಾಮಾನ್ಯ ಮಳೆ – ಆಗಸ್ಟ್ ಆರಂಭದಲ್ಲಿ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು ಸಾಧ್ಯತೆ
July 27, 2026
11:36 AM
by: ದ ರೂರಲ್ ಮಿರರ್.ಕಾಂ
200 ಹಸುಗಳಿಂದ ₹2 ಕೋಟಿ ವಾರ್ಷಿಕ ಆದಾಯ…! ಗಮನ ಸೆಳೆದ ಉತ್ತರ ಪ್ರದೇಶದ ಮಾದರಿ
July 27, 2026
11:27 AM
by: ದ ರೂರಲ್ ಮಿರರ್.ಕಾಂ
ರಬ್ಬರ್ ತೋಟ ಹಸಿರಾಗಿರಬಹುದು… ಆದರೆ ಕಾಡಿಗೆ ಪರ್ಯಾಯವಲ್ಲ…! ಮಲೇಷ್ಯಾ ಅಧ್ಯಯನ ವರದಿ
July 27, 2026
6:55 AM
by: ದ ರೂರಲ್ ಮಿರರ್.ಕಾಂ
ಅಡುಗೆ ಎಣ್ಣೆ ಆಮದು 7% ಏರಿಕೆ – ಭಾರತ ಇನ್ನೂ ಆಮದು ಅವಲಂಬಿತ
July 27, 2026
6:47 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror