ಕಿರಾತಕಡ್ಡಿಇದರ ಹೆಸರಿನಲ್ಲಿ ಕಿರಾತ ಮತ್ತು ಕಡ್ಡಿ ಎಂಬ ಶಬ್ಧಗಳಿದ್ದರೂ ಇದೊಂದು ಸುಂದರವಾದ ಸಸ್ಯ. ಸಪೂರ ಉದ್ದ ಎಲೆಗಳನ್ನು ಹೊಂದಿರುವ ಕಿರಾತಕಡ್ಡಿ ಪೊದರು ಪೊದರಾಗಿ ಬೆಳೆಯುವ ಸಸ್ಯ. ಅದಕ್ಕೆ ನೀರು ಕೊಡುತ್ತಿದ್ದರೆ ವರ್ಷ ಪೂರ್ತಿ ಹಸಿರಾಗಿಯೇ ಇರುವ ಈ ಗಿಡದ ಎಲೆಗಳು ಔಷಧೀಯ ಗುಣಗಳನ್ನು ಹೊಂದಿವೆ.…… ಮುಂದೆ ಓದಿ……
ಬಾಯಲ್ಲಿಟ್ಟು ಜಗಿದಾಗ ಅತಿಯಾದ ಕಹಿ ರುಚಿ ಇರುವ ಈ ಗಿಡದ ಎಲೆಗಳ ಕಷಾಯವು ಹಿಂದೆ ಮಲೇರಿಯಾ ಜ್ವರ ನಿವಾರಣೆಗೆ ರಾಮಬಾಣವಾಗಿತ್ತು. ಈಗಲೂ ಮಳೆಗಾಲದ ಆರಂಭದಲ್ಲಿ ಬರುವ ಶೀತ, ಕೆಮ್ಮು, ಜ್ವರ, ತಲೆನೋವು ಮುಂತಾದ ಕಾಯಿಲೆಗಳು ಕಿರಾತಕಡ್ಡಿಯ ಕಷಾಯ ಸೇವನೆಯಿಂದ ನಿಯಂತ್ರಣದಲ್ಲಿರುತ್ತವೆ. ಇದರ ಕಷಾಯ ಸೇವನೆಯಿಂದ ಜಂತುಹುಳುಗಳು ನಾಶವಾಗುತ್ತವೆ. ಹೊಟ್ಟೆ ಶುದ್ಧಿಯಾಗುತ್ತದೆ.
ನಮ್ಮ ಶಾಲೆಯಲ್ಲಿ( ಸುಳ್ಯ ಸ್ನೇಹ ಶಾಲೆ) ಪ್ರತಿವರ್ಷ ಮಳೆಗಾಲದ ಆರಂಭದಲ್ಲಿ ಕಿರಾತಕಡ್ಡಿಯೊಂದಿಗೆ ಇತರ ಔಷಧ ಮೂಲಗಳನ್ನು ಸೇರಿಸಿ ದೊಡ್ಡ ಹಂಡೆಯಲ್ಲಿ ಕಷಾಯ ಮಾಡಿ ಎಲ್ಲಾ ಮಕ್ಕಳಿಗೆ ಹಂಚುತ್ತೇವೆ. ಅದರಿಂದಾಗಿ ಮಳೆಗಾಲ ಇಡೀ ಮಕ್ಕಳು ಆರೋಗ್ಯವಾಗಿರುವುದಲ್ಲದೆ ಹಾಜರಾತಿ ಪ್ರಮಾಣವೂ ಹೆಚ್ಚುತ್ತದೆ.
ಇನ್ನು, ಮಧುಮೇಹಿಗಳಿಗೆ ಸಕ್ಕರೆ ನಿಯಂತ್ರಣಕ್ಕಾಗಿ ಬಳಕೆ ಮಾಡಲು ಕಿರಾತ ಕಡ್ಡಿ ಉಪಯುಕ್ತವಾಗಿದೆ. ದಿನಾ ಬೆಳಗ್ಗೆ ಕಿರಾತಕಡ್ಡಿಯ
ನಾಲ್ಕಾರು ಹಸಿ ಎಲೆಗಳನ್ನು ಚೆನ್ನಾಗಿ ಜಗಿದು ತಿಂದರೆ ಮಧುಮೇಹ ಹಿಡಿತದಲ್ಲಿರುತ್ತದೆ. ಇದಲ್ಲದೆ ಶರೀರದಲ್ಲಿ ನಂಜಿನ ಕಜ್ಜಿ ಅಥವಾ ತುರಿಕೆ ಕಾಣಿಸಿಕೊಂಡರೆ ಈ ಗಿಡದ ಎಲೆಗಳನ್ನು ನಾಲ್ಕಾರು ಕಾಳುಜೀರಿಗೆಯೊಂದಿಗೆ ಚೆನ್ನಾಗಿ ಅರೆದು ಹಚ್ಚಿದರೆ ಕಜ್ಜಿ ಕಡಿಮೆಯಾಗುತ್ತದೆ. ಕೆಲವು ವೇಳೆ ಇಡೀ ಮೈಗೆ ಕಜ್ಜಿ ಇದ್ದರೆ ಈ ಸೊಪ್ಪಿನ ಕಷಾಯ ಮಾಡಿ ಕಷಾಯಸ್ನಾನ ಮಾಡಿದರೂ ಗುಣವಾಗುತ್ತದೆ. ಬಾಣಂತಿಯರಿಗೆ ಈ ಕಷಾಯ ಸೇವನೆ ದಾಹ ನಿವಾರಿಸುತ್ತದೆ.
ಇದರ ಗೆಲ್ಲುಗಳನ್ನು ನೆಟ್ಟು ಹೊಸ ಗಿಡಗಳನ್ನು ಮಾಡ ಬಹುದಾಗಿದೆ. ಗಿಡ ನೆಟ್ಟು 2. 3 ತಿಂಗಳಲ್ಲಿ ಗಿಡದಲ್ಲಿ ನೀಲಿ ಹೂಗಳು ಅರಳುತ್ತವೆ.
ಈ ಗಿಡದ ಸಸ್ಯ ಶಾಸ್ತ್ರೀಯ ಹೆಸರು Andrographis Paniculata. ಕಿರಾತಕಡ್ಡಿಗೆ ನೆಲಬೇವು ಎಂಬ ಹೆಸರೂ ಇದೆ. ನಾಲಿಗೆಗೆ ಕಹಿಯಾದರೂ ಉದರಕ್ಕೆ ಸಿಹಿಯಾಗಿರುವ ಈ ಗಿಡಕ್ಕೆ ಸಂಸ್ಕ್ರತ ದಲ್ಲಿ ಕಾಲ ಮೇಘ ಎಂದು ಹೆಸರು. ಆಯುರ್ವೇದದಲ್ಲಿ ಈ ಗಿಡದ ಬಳಕೆ ತುಂಬಾ ಹೆಚ್ಚು.
ನಾವು ನಮ್ಮ ಶಾಲೆಯಲ್ಲಿ ಇದನ್ನು ಸಾಲುಗಿಡಗಳಾಗಿ ವೃತ್ತಾಕಾರದ ತರಗತಿ ಕೊಠಡಿಗಳ ಸುತ್ತಲೂ ನೆಟ್ಟು ಬೆಳೆಸುತ್ತಿದ್ದೇವೆ. ಎರಡು ಮೂರು ದಿನಕ್ಕೊಮ್ಮೆ ನೀರುಣಿಸುತ್ತೇವೆ. ಶಾಲೆ ನೋಡಲು ಬಂದ ಅನೇಕರು ತಮ್ಮಲ್ಲಿ ನೆಡಲು ಕಿರಾತಕಡ್ಡಿಯ ಗೆಲ್ಲುಗಳನ್ನು ಕೊಂಡೊಯ್ಯುತ್ತಾರೆ. ಮನೆಯಂಗಳದಲ್ಲಿ ಆಥವಾ ಚಟ್ಟಿಯಲ್ಲಿ ಬೆಳೆಸಬಹುದಾದ ಈ ಗಿಡ ಎಲ್ಲರ ಮನೆಯಲ್ಲೂ ಬೆಳೆಸಬೇಕಾದ ಸಸ್ಯ.




