‘ನಮ್ಮೂರ ಶಾಲೆ ಉಳಿಸೋಣ’. ಇದು ಕಲ್ಲುಗುಂಡಿ-ಸಂಪಾಜೆಯ ಯುವಕರು ಹಮ್ಮಿಕೊಂಡ ಅಭಿಯಾನ. ಯುವಕ, ಪತ್ರಕರ್ತ ಹೇಮಂತ್ ಸಂಪಾಜೆ ಹಾಗೂ ಅವರ ತಂಡ ಸರಕಾರಿ ಶಾಲೆ ಉಳಿಸುವ ಹಮ್ಮಿಕೊಂಡ ವಿಶೇಷ ಅಭಿಯಾನವಾಗಿತ್ತು. ಯುವಶಕ್ತಿ ಜಾಗೃತವಾದರೆ ಯಾವ ಕೆಲಸವೂ ಕಷ್ಟವಿಲ್ಲ ಎನ್ನುವುದಕ್ಕೆ ಇದೊಂದು ಮಾದರಿಯೂ ಹೌದು. ಇದೀಗ ಯಶಸ್ವಿಯಾಗಿ ಈ ಅಭಿಯಾನ ಪೂರೈಸಿದ ಬಳಿಕ ಊರಿನ ದೈವಿಕ ಶಕ್ತಿಗಳಾದ ಕೈಪಡ್ಕ ಕೊರಗಜ್ಜ ಸ್ವಾಮಿ, ಶ್ರೀ ಮಹಾವಿಷ್ಣುಮೂರ್ತಿ ದೈವಕ್ಕೆ ಹೇಳಿಕೊಂಡಿದ್ದ ಹರಕೆ ಸಮರ್ಪಿಸಿದರು.
ಕೊರೋನಾ 2 ನೇ ಅಲೆ ಸಂದರ್ಭದಲ್ಲಿ ‘ನಮ್ಮೂರ ಶಾಲೆ ಉಳಿಸೋಣ’ ನಾವು ಓದಿದ ಕನ್ನಡ ಶಾಲೆ ಉಳಿಸುವ ವಾಟ್ಸಪ್ ಅಭಿಯಾನವನ್ನು ಸಂಪಾಜೆಯ ಯುವಕರ ತಂಡ ನಡೆಸಿತ್ತು. ಪತ್ರಕರ್ತ ಹೇಮಂತ್ ಸಂಪಾಜೆ ನೇತೃತ್ವದಲ್ಲಿ ನಡೆಸಿದ ಈ ರಾಜಕೀಯ ರಹಿತವಾದ ಅಭಿಯಾನ ಯಶಸ್ವಿಯಾಗಿತ್ತು. ಹಳೆ ವಿದ್ಯಾರ್ಥಿಗಳು, ಊರ-ಪರವೂರ ದಾನಿಗಳನ್ನೆಲ್ಲ ಒಗ್ಗೂಡಿಸಿ 2 ಲಕ್ಷದ 41 ಸಾವಿರಕ್ಕೂ ಅಧಿಕ ಮೊತ್ತ ಸಂಗ್ರಹಿಸಿ ಕಲ್ಲುಗುಂಡಿ ಶಾಲೆಗೆ ಸಿಸಿಟಿವಿ, ಬೆಂಚ್ – ಡೆಸ್ಕ್, ಪ್ರತಿ ಕ್ಲಾಸ್ ರೂಂ ಗೆ ಫ್ಯಾನ್ , ಇನ್ವರ್ಟರ್ ಮೊದಲಾದ ಮೂಲಭೂತ ಸೌಲಭ್ಯ ಕಲ್ಪಿಸಿಕೊಟ್ಟಿದ್ದರು. ಇದಕ್ಕಾಗಿ ಸುಮಾರು 2-3 ತಿಂಗಳು ತಪ್ಪಸ್ಸಿನಂತೆ ಹಗಲು- ರಾತ್ರಿ ಅನ್ನದೇ ಕೆಲಸ ಮಾಡಿದ್ದರು.

ಯುವಕರ ಈ ಸತತ ಪರಿಶ್ರಮ ಹಾಗೂ ಕೆಲಸಕ್ಕೆ ಭಗವಂತನೂ ಅವಕಾಶ ಕಲ್ಪಿಸಿದ. ಕಳೆದ ವರ್ಷ ಕಲ್ಲುಗುಂಡಿ ಒತ್ತೆಕೋಲದ ಸಮಯದಲ್ಲಿ ಕಲ್ಲುಗುಂಡಿ ಶಾಲೆಗೆ ಸಾಧ್ಯವಾದ ಸಹಾಯಕ್ಕೆ ಸಂಕಲ್ಪ ಮಾಡಿದ್ದರು. ಈಸಂದರ್ಭದಲ್ಲಿ ಊರಿನ ಶಕ್ತಿಗಳಾದ ಕೈಪಡ್ಕ ಕೊರಗಜ್ಜ ಸ್ವಾಮಿ, ಶ್ರೀ ಮಹಾವಿಷ್ಣುಮೂರ್ತಿ ದೈವಕ್ಕೆ ಹರಕೆ ಹೇಳಿಕೊಂಡು ಶಾಲೆಯ ಮೂಲಸೌಕರ್ಯ ಹೆಚ್ಚಿಸುವ ಕೆಲಸದಲ್ಲಿ ಯಾವುದೇ ಅಡೆತಡೆ ಬರಬಾರದು ಎಂದು ಪ್ರಾರ್ಥಿಸಿಕೊಂಡಿದ್ದರು.

ಟೀಕೆ, ಟಿಪ್ಪಣಿ, ಅಸಹಕಾರದ ನಡುವೆಯೂ ‘ನಮ್ಮೂರ ಶಾಲೆ ಉಳಿಸೋಣ’ ಅಭಿಯಾನ ಇದೀಗ ಯಶಸ್ವಿಯಾಗಿ ಪೂರೈಸಿದ್ದರೆ ಇಲ್ಲಿನ ಯುವಕರು. ಈ ಹಿನ್ನೆಲೆಯಲ್ಲಿ ದೇವರಿಗೆ ಹೇಳಿಕೊಂಡಿದ್ದ ಹರಕೆಯನ್ನು ತೀರಿಸಿದ್ದಾರೆ. ಹೇಮಂತ್ ಸಂಪಾಜೆ ಅವರು ಮಿತ್ರರೆಲ್ಲರ ಸಹಕಾರದೊಂದಿಗೆ ಮಹಾವಿಷ್ಣುವಿಗೆ ಹರಿಕೆಯ ಸುರಿಗೆ (ಖಡ್ಗ) ಒಪ್ಪಿಸಿದ್ದಾರೆ. ಈ ಕಾರ್ಯದಲ್ಲಿ ಜೊತೆಯಾದ ವಿನಯ್ ಸುವರ್ಣ ಹಾಗೂ ಶರತ್ ಕೈಪಡ್ಕ , ಸ್ನೇಹ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಚಂದ್ರಶೇಖರ ದಾಮ್ಲೆ, ನಿವೃತ್ತ ನಬಾರ್ಡ್ ಅಧಿಕಾರಿ ರಮೇಶ್ ತೆಂಕಿಲ್ ಸೇರಿದಂತೆ ಹಲವರನ್ನು ನೆನಪಿಸಿಕೊಂಡಿದ್ದಾರೆ.

