ಕಳೆದ 20 ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ವರುಣನ ಅಬ್ಬರ ಹೆಚ್ಚಾಗಿದೆ. ಇದರಿಂದ ಹಳೆ ಮೈಸೂರು ಭಾಗದ ಜೀವನಾಡಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಅಣೆಕಟ್ಟೆ ಸಂಪೂರ್ಣವಾಗಿ ಭರ್ತಿಯಾಗಿದೆ. ಜೊತೆಗೆ ಕೆಆರ್ಎಸ್ ಡ್ಯಾಂನಿಂದ ಅಪಾರ ಪ್ರಮಾಣದ ನೀರು ಬಿಟ್ಟಿರುವ ಕಾರಣ ಕಾವೇರಿ ಮೈದುಂಬಿ ಹರಿದು ತಮಿಳುನಾಡಿನ ಮೆಟ್ಟೂರು ಡ್ಯಾಂನ ಒಡಲು ಸೇರಿದ್ದಾಳೆ. ಹೀಗಿರುವಾಗ ಕೆಆರ್ಎಸ್ ಡ್ಯಾಂನ ನಂಬಿರುವ ಕಾರಣ ಕಳೆದ ವರ್ಷ ಬೆಳೆ ಇಲ್ಲದೆ ಕಂಗಾಲಾಗಿದ್ದ ರೈತರು ಈ ಬಾರಿ ಯಾವುದೇ ಅಡ್ಡಿ ಆತಂಕಗಳು ಇಲ್ಲದೆ ಬೆಳೆ ಬೆಳೆಯಬಹುದು ಎಂಬ ಸಂತಸದಲ್ಲಿದ್ದರು. ಆದರೆ ಆ ಖುಷಿಗೆ ಸರ್ಕಾರ ಬ್ರೇಕ್ ಹಾಕಿದೆ.
ಕಳೆದ ವರ್ಷ ಸರಿಯಾದ ಪ್ರಮಾಣದ ಮಳೆ ಬೀಳದ ಕಾರಣ ಕಾವೇರಿ ಕೊಳ್ಳದ ರೈತರು ಬೆಳೆ ಬೆಳೆಯಲು ಸಾಧ್ಯವಾಗಿರಲಿಲ್ಲ. ಈ ಬಾರಿ ಕನ್ನಂಬಾಡಿ ಕಟ್ಟೆ ಅವಧಿಗೂ ಮುನ್ನವೇ ಭರ್ತಿಯಾಗಿದೆ. ಹೀಗಾಗಿ ರೈತರು ಉತ್ತಮ ಬೆಳೆ ಬೆಳೆಯಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಇದೀಗ ಸರ್ಕಾರ ಕೆಆರ್ಎಸ್ ಡ್ಯಾಂನಿಂದ ಕಟ್ಟು ಪದ್ಧತಿಯಲ್ಲಿ ನಾಲೆಗಳಿಗೆ ನೀರು ಬಿಡುವ ತೀರ್ಮಾನಕ್ಕೆ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬರಲಾಗಿದೆ. ಆಗಸ್ಟ್ 8 ರಿಂದ ಪದ್ಧತಿಯಂತೆ ನೀರು ಹರಿಸಲು ತೀರ್ಮಾನ ಮಾಡಲಿದೆ. ನಾಲ್ಕು ತಿಂಗಳ ಕಾಲ ತಿಂಗಳಲ್ಲಿ 18 ದಿನಗಳು ಮಾತ್ರ ನೀರು ಹರಿಸಲಾಗುತ್ತಿದೆ ಎಂದು ಕಾವೇರಿ ನಿಗಮ ಆದೇಶ ಹೊರಡಿಸಿದೆ.ಈ ನಿರ್ಧಾರಕ್ಕೆ ಸ್ವತಃ ಕಾಂಗ್ರೆಸ್ ಪಕ್ಷದ ಶಾಸಕ ಗಣಿಗ ರವಿಕುಮಾರ್ ಇದಕ್ಕೆ ವಿರೋಧ ವ್ಯಕ್ತಪಡಿಸಿ ರೈತರ ಪರ ನಿಂತಿದ್ದಾರೆ. ಈ ವರ್ಷ ಕೆಆರ್ಎಸ್ ಡ್ಯಾಂನಲ್ಲಿ ನೀರಿದ್ದರೂ ರೈತರು ಬಾಯಿಗೆ ಮಣ್ಣು ಹಾಕಿಕೊಳ್ಳಬೇಕಾ? ಕಟ್ಟು ಪದ್ಧತಿಯಲ್ಲಿ ನೀರು ಬಿಡಲು ನಿರ್ಧಾರ ಮಾಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ವರುಣನ ಕೃಪೆಯಿಂದ ಅವಧಿಗೂ ಮುನ್ನವೇ ಕೆಆರ್ಎಸ್ ಡ್ಯಾಂ ಭರ್ತಿಯಾಗಿದೆ. ಇದೀಗ ಸರ್ಕಾರ ಯಾವ ಪೂರ್ವಗ್ರಹ ಪೀಡಿತವಾಗಿ ಕಟ್ಟು ಪದ್ಧತಿಯಲ್ಲಿ ನಾಲೆಗಳಿಗೆ ನೀರು ಹರಿಸುತ್ತೇವೆ ಎಂದು ಹೇಳಿದೆ ಗೊತ್ತಿಲ್ಲ. ಸರ್ಕಾರದ ಈ ನಿರ್ಧಾರದ ವಿರುದ್ಧ ರೈತಾಪಿ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಶ್ರೀಕೃಷ್ಣನನ್ನು ಕೇವಲ ದೇವರ ಅವತಾರವಾಗಿ ನೋಡುವುದಕ್ಕಿಂತ, ಮನುಷ್ಯರ ನಡುವೆ ನಿಂತು ಉಪದೇಶಿಸಿದ ಮಾನವಶಿಕ್ಷಕನಾಗಿಯೂ…
ಮುಂಗಾರು ದುರ್ಬಲಗೊಂಡಿದ್ದರೂ ಸ್ಥಳೀಯ ಮೋಡಗಳ ಬೆಳವಣಿಗೆಯಿಂದ ಮಲೆನಾಡು ಹಾಗೂ ಒಳನಾಡಿನಲ್ಲಿ ಗುಡುಗು ಸಹಿತ…
2024ರಲ್ಲಿ ಭಾರತದಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರು ಸೇರಿ 10,546 ಮಂದಿ ಆತ್ಮಹತ್ಯೆಯಿಂದ…
ಕರ್ನಾಟಕದಲ್ಲಿ ಈಗಾಗಲೇ 13,500 ಶಿಕ್ಷಕರ ನೇಮಕಾತಿ ನಡೆದಿದ್ದು, ಶಿಕ್ಷಣ ಇಲಾಖೆಯಲ್ಲಿ ಇನ್ನೂ 16…
ಕರ್ನಾಟಕದ ಹಲವು ಭಾಗಗಳಲ್ಲಿ ಸೆ.5ರಿಂದ ಕೆಲವು ದಿನ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ.…
ಹಿಮನದಿ ಕುಸಿತದಿಂದ ಸಂಭವಿಸಿದ ಭೀಕರ ಪ್ರವಾಹದ ಬಳಿಕ ನೇಪಾಳ ಪ್ರಧಾನಿ ಬಾಲೆಂದ್ರ ಶಾ…