ತೊಟ್ಟೆತ್ತೋಡಿಯ ತೋಟದಲ್ಲಿ ಜಾಲಿಯಾಗಿವೆ “ಜಾಯಿಕಾಯಿ” | ಕಲ್ಕಡ್ಕದ ಸುರೇಶ್ಚಂದ್ರ ಅವರ ಜಾಯಿಕಾಯಿ ಕೃಷಿ | ಅಡಿಕೆ ಬೆಳೆಗಾರರಿಗೆ ಉಪಬೆಳೆಯೂ ಏಕೆ ಬೇಕು ?

April 17, 2022
9:45 AM

“ನಮ್ಮಲ್ಲಿ ಜಾಯಿಕಾಯಿ ಆಗಲಿಕ್ಕಿಲ್ಲ. ಅಡಿಕೆ ಮರದ ಫಸಲಿಗೆ ಪೆಟ್ಟು. ಅದನ್ನು ಹೆಕ್ಕಿ ಒಣಗಿಸೋದೇ ತ್ರಾಸ ಎನ್ನುವುದು ಅನೇಕ ಕೃಷಿಕರ ಅನಿಸಿಕೆ. ಆಗುವುದಿಲ್ಲ ಎಂದರೆ ಯಾವುದೂ ಆಗದು. ಯೋಚಿಸಿ, ಶ್ರಮವಹಿಸಿ ಮಾಡಿದರೆ ಖಂಡಿತಾ ಅಡಿಕೆಯೊಂದಿಗೆ ಮಿಶ್ರ ಬೆಳೆಯಾಗಿ ಜಾಯಿಕಾಯಿ ಬೆಳೆಯಬಹುದು”. ಹೀಗೆಂದು ಕಲ್ಮಡ್ಕದ ಕೃಷಿಕ ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿಯವರು ವಿಟ್ಲದ ಸಿ.ಪಿ.ಸಿ.ಆರ್.ಐ ಸಂಸ್ಥೆಯಲ್ಲಿ ನಡೆದ ಅಡಿಕೆ ಕೃಷಿ ಕುರಿತ ಬಾನುಲಿ ಸರಣಿಯ ರೆಕಾರ್ಡಿಂಗ್ ಸಂದರ್ಭದಲ್ಲಿ ಹೇಳಿದ್ದರು.

Advertisement
Advertisement
Advertisement

ಅದು ನಮ್ಮ ಮೊದಲ ಭೇಟಿ. ಅನೇಕ ವಿಷಯಗಳನ್ನು ಅವರಿಂದ ತಿಳಿದುಕೊಂಡೆ. ಅಡಿಕೆಯೊಂದಿಗೆ ಮಿಶ್ರ ಬೆಳೆಯಾಗಿ ಜಾಯಿಕಾಯಿ ಬೆಳೆಸುವ ಕುರಿತು ಅವರು ಅನುಭವ ಹಂಚಿಕೊಂಡಿದ್ದರು. ಅವರ ಕೃಷಿ ನೋಡುವ ತವಕ, ಕುತೂಹಲ ನನಗಿತ್ತು. ಜಾಯಿಕಾಯಿ ಹಣ್ಣಾಗಲಿ ಎಂದು ಕಾದಿದ್ದೆ. ಇವತ್ತು ಸಮಯ ಕೂಡಿಬಂತು.

Advertisement

ಆತ್ಮೀಯರಾದ ಮಹೇಶ್ ಪುಚ್ಚಪ್ಪಾಡಿ ಅವರೊಂದಿಗೆ ಟಿ ಆರ್ ಸುರೇಶ್ಚಂದ್ರರ ತೋಟ ವೀಕ್ಷಣೆಗೆ ಹೊರಟೆವು. ಅವರು ನಗುಮುಖದಿ ನಮ್ಮನ್ನು ಬರಮಾಡಿಕೊಂಡರು. ಜೊತೆಗೆ, ಮನೆ ಮುಂಭಾಗದಲ್ಲಿ ಒಣಗಲು ಹಾಕಿದ್ದ ಜಾಪತ್ರೆ ಮತ್ತು ಜಾಕಾಯಿ ಕೂಡ ನಮ್ಮನ್ನು ಸ್ವಾಗತಿಸಿದವು. ಜಾಪತ್ರೆಯ ಬಣ್ಣ, ಗಾತ್ರ ಮತ್ತು ಆಕಾರಕ್ಕೆ ನಾ ಮನಸೋತೆ.‌ ಮೊದಲಿನಿಂದಲೂ ಜಾಯಿಕಾಯಿ ಕುರಿತು ನನಗೆ ಒಲವಿದೆ. ಅದು ಅಡಿಕೆಯೊಂದಿಗೆ ಮಿಶ್ರ ಬೆಳೆಯಾಗಿ ಹೊಂದಿಕೊಳ್ಳುವ ಬೆಳೆ. ಅಡಿಕೆಯ ಧಾರಣೆ ಗಮನಿಸಿದಾಗ ಸಾಮಾನ್ಯ ಕೃಷಿಕನನ್ನು ಅದು ಆಕರ್ಶಿಸದು. ಆದರೆ, ಭವಿಷ್ಯದಲ್ಲಿ ನಮಗದು ಊರುಗೋಲು ಆಗಬಹುದು.

Advertisement

ಕಾರಣವಿಷ್ಟೇ… ಅಡಿಕೆಯನ್ನು ಬಳಕೆ ಮಾಡುತ್ತಿರುವ ರೀತಿ ಮತ್ತು ಸೀಮಿತ ಪರ್ಯಾಯ ಉಪಯೋಗದಿಂದಾಗಿ ಇತರ ಬೆಳೆಗಳನ್ನು ಅಡಿಕೆ ತೋಟದಲ್ಲಿ ಬೆಳೆಯುವುದು ಮುಖ್ಯ. ಅದಕ್ಕೆ ಬೇಕಾದ ಪೂರಕ ವಾತಾವರಣವೂ ಅಡಿಕೆ ತೋಟದಲ್ಲಿದೆ. ಇದು ನಮಗೆಲ್ಲ ತಿಳಿದಿರುವ ಸಂಗತಿ. ನನ್ನನ್ನು ಇನ್ನೂ ಹತ್ತಿರ ಸೆಳೆದಿದ್ದು ಅದರ ಬಣ್ಣ ಮತ್ತು ಆಕಾರ. ಮಾತ್ರವಲ್ಲ, ಭವಿಷ್ಯದಲ್ಲಿ ಅದರ ಅವಶ್ಯಕತೆ.

ಏಕೆಂದರೆ, ಅಡಿಕೆ ಹಳದಿ ರೋಗದಂತಹ ಗಂಭೀರ ರೋಗವೊಂದು ನಮ್ಮನ್ನು ಸುತ್ತುವರಿದಿದ್ದಾಗ, ಅಡಿಕೆಯೊಂದಿಗೆ ಉಪಬೆಳೆಯನ್ನು ಬೆಳೆಯುವತ್ತ ನಮ್ಮ ಚಿತ್ತ ಇರಬೇಕಾಗಿದೆ. ಕಾಳುಮೆಣಸನ್ನು ಅಡಿಕೆಯೊಂದಿಗೆ ಬೆಳೆಯಬಹುದಾದರೂ, ರೋಗದಿಂದ ಮರ ಸತ್ತರೆ, ದೀರ್ಘಕಾಲ ಬಳ್ಳಿಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಜಾಯಿಕಾಯಿ ಹಾಗಲ್ಲ. “ಅಡಿಕೆಯ ನೆರಳಿನ ಆಶ್ರಯದಲ್ಲಿ ಜಾಯಿಕಾಯಿಯನ್ನು ಪ್ರಾರಂಭಿಕ ವರುಷಗಳಲ್ಲಿ ಬೆಳೆಯಬಹುದು. ಒಂದು ವೇಳೆ, ಅವು ದೊಡ್ಡದಾದ ಮೇಲೆ ಅಡಿಕೆ ಮರ ಸತ್ತರೂ ದೊಡ್ಡ ತೊಂದರೆ ಜಾಯಿಕಾಯಿ ಮರದ ಮೇಲಾಗದು. ಯಾಕೆಂದರೆ, ನಾನು ಜಾ ಕಾ (ಜಾಯಿಕಾಯಿ) ಗಿಡ ತಂದ ಮನೆಯಲ್ಲಿ ನೆರಳಿಲ್ಲದೆ ಒಳ್ಳೆಯ ಇಳುವರಿ ನೀಡುತ್ತಿರುವ ಜಾಕಾ ಮರಗಳಿವೆ ಎಂದು ಅವರು ಹೇಳಿದ್ದನ್ನು ಕೇಳಿದ್ದೇನೆ”. ಎಂದು ಸುರೇಶ್ಚಂದ್ರರು ಹೇಳಿದಾಗ ಜಾ ಕಾ ಬಗೆಗಿನ ಒಲವು ಇನ್ನೂ ಹೆಚ್ಚಾಯಿತು.

Advertisement

ಹಳದಿ ಎಲೆ ರೋಗದ ನಿರ್ವಹಣೆಗೆ ನಮ್ಮದೊಂದು ಯೋಜನೆಯಿದೆ. ಸಂಪಾಜೆ ಗ್ರಾಮದಲ್ಲಿ ಶೇ. 99 ರಷ್ಟು ರೋಗಬಾಧಿತ ಮರಗಳಿರುವ ತೋಟದಲ್ಲಿ ರೋಗ ರಹಿತ ಹಸಿರು ಮರಗಳನ್ನು ಗುರುತಿಸಿ, ಅವುಗಳನ್ನು ಟಿಶ್ಯೂ ಕಲ್ಚರ್ ವಿಧಾನದಲ್ಲಿ ಸಸ್ಯಾಭಿವೃದ್ಧಿ ಮಾಡಿ, ನಂತರ ಇಂಟರ್ಸೆ ವಿಧಾನದ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಸಸ್ಯಾಭಿವೃದ್ಧಿ ಮಾಡುವುದು. ಒಟ್ಟು ಒಂಬತ್ತು ರೋಗರಹಿತ ಹಸಿರು ಮರಗಳನ್ನು ಗುರುತು ಮಾಡಲಾಗಿದ್ದು, ಟಿಶ್ಯೂ ಕಲ್ಚರ್ ವಿಧಾನದ ಮೊದಲ ಹಂತದಲ್ಲಿದೆ.  ರಮೇಶ್ ದೇಲಂಪಾಡಿ,  ಮಹೇಶ್ ಪುಚ್ಚಪ್ಪಾಡಿ,  ಸೋಮಶೇಖರ ಕೊಯಿಂಗಾಜೆ,  ಭವ್ಯಾನಂದ ಕೊಯಿಂಗೊಡು ಸೇರಿದಂತೆ ಹಲವರು ಜೊತೆ ಸೇರಿದ್ದಾರೆ. ಸಹಕರಿಸಿದ್ದಾರೆ. ನಮಗೆಲ್ಲ ಈ ಯೋಜನೆ ಕುರಿತು ವಿಶ್ವಾಸವಿದೆ.

ಆದರೂ, “ಅಡಿಕೆಯ ಫಸಲು 25-30 ವರ್ಷದ ನಂತರ ಕಡಿಮೆಯಾಗುವುದು ಸಹಜ. ಆದರೆ, ಜಾಕಾ ಮರ ಬೆಳೆದಂತೆ ಇಳುವರಿಯೂ ಹೆಚ್ಚುತ್ತದೆ. ದೀರ್ಘಕಾಲದ ಇನ್ವೆಸ್ಟ್ಮೆಂಟ್ ಆಗಿ ಜಾಕಾ ನಮ್ಮ ಜೊತೆಯಿರಬಹುದು” ಎಂದು ಸುರೇಶ್ಚಂದ್ರರು ಹೇಳಿದ್ದು ಸರಿ ಇದೆ. ಅವರು ಅಡಿಕೆ ತೋಟದಲ್ಲಿ 40 * 40 ಅಂತರದಲ್ಲಿ ನೆಟ್ಟ ಜಾಕಾ ಕಸಿ ಗಿಡಗಳು ಚೆನ್ನಾಗಿ ಬೆಳೆದಿವೆ. ಸಂತೋಷದಿಂದ ನಗುತ್ತಿವೆ, ಸೂಕ್ಷ್ಮವಾಗಿ ಗಮನಿಸಬೇಕಷ್ಟೇ. ಒಂದು ಎಕರೆಗೆ 22-25 ಕಸಿ ಗಿಡಗಳನ್ನು ಬೆಳೆದಿದ್ದಾರೆ.

Advertisement

ಅವುಗಳಿಗೀಗ ಹತ್ತು ವರ್ಷ. ಮರದ ಆಕಾರ ನೋಡಲು ಚೆಂದ. ರೆಂಬೆಗಳು ಒತ್ತೊತ್ತಾಗಿ ಬೆಳೆದಿಲ್ಲ. ಪ್ರತಿ ಹಂತದ ರೆಂಬೆಗಳ ನಡುವೆ ಅಂತರವಿದೆ. ಹಾಗಾಗಿ, ಕಾಯಿಗಳು ಎಲೆಗಳ ನಡುವೆ ಮರೆಯಾಗಿಲ್ಲ. ಅವುಗಳು ಗಾತ್ರದಲ್ಲಿ ದೊಡ್ಡದಿದ್ದು, ಆಕರ್ಷಕವಾಗಿವೆ. ಕಸಿ ಗಿಡಗಳನ್ನು ನೆಡುವ ಮೊದಲು ನೆಟ್ಟ ಕೆಲವು ಲೋಕಲ್ ಜಾಕಾ ಮರಗಳಿವೆ. ಒಳ್ಳೆಯ ಫಸಲು ನೀಡುವ ಮರಗಳನ್ನು ಉಳಿಸಿಕೊಂಡಿದ್ದಾರೆ. ಆದರೆ, ಗುಣಮಟ್ಟದಲ್ಲಿ ಕಸಿ ಮರಗಳದ್ದೇ ಮೇಲುಗೈ. ಯಾಕೆಂದರೆ, ಕೇವಲ 420-450 ಜಾಪತ್ರೆಗಳು ಕಿಲೋ ತೂಗುತ್ತವೆ. ಅವುಗಳು ದಪ್ಪಗಿದ್ದು, ಆಕರ್ಷಕವಾಗಿವೆ. ನೋಡಲು ಚೆಂದ. ಲೋಕಲ್ ಜಾಪತ್ರೆಯಾದರೆ 600-700 ಪತ್ರೆಗಳು ಬೇಕು.

ಅಡಿಕೆಗೆ ಗೊಬ್ಬರ ಹಾಕುವಾಗ, ಜಾಕಾ ಮರಗಳಿಗೂ ದುಪ್ಪಟ್ಟು ಹಾಕುತ್ತಾರೆ. ನೀರನ್ನು ಹಂಚಿಕೊಂಡು ಕುಡಿಯುತ್ತವೆ. ಹತ್ತು ವರ್ಷದ ಜಾಕಾ ಮರಗಳು ಅಡಿಕೆಯ ಇಳುವರಿಯನ್ನು ಕಡಿಮೆ ಮಾಡಿಲ್ಲವಂತೆ. ಮರ ದೊಡ್ಡದಾದಂತೆ ಸುತ್ತಲಿನ ನಾಲ್ಕು ಅಡಿಕೆ ಮರಗಳ ಫಸಲಿಗೆ ತೊಂದರೆ ಮಾಡಬಹುದು. ಆದರೆ, ಅಷ್ಟೊತ್ತಿಗೆ ಅಡಿಕೆ ಮರಕ್ಕೂ ವಯಸ್ಸಾಗಿರುತ್ತದೆ. ಜಾಕಾ ಮರ ಬೆಳೆದು ಹೆಚ್ಚಿನ ಫಸಲು ನೀಡಲಾರಂಭಿಸುತ್ತವೆ. ಎಡೆಗಿಡ ಹಾಕಲು ಸಾಧ್ಯವಿಲ್ಲ ಎನ್ನುವುದು ಒಂದು ಸಮಸ್ಯೆ. ಆದರೆ, ಹಳದಿ ಎಲೆ ರೋಗಪೀಡಿತ ಪ್ರದೇಶದಲ್ಲಿ ಇದು ಸಮಸ್ಯೆಯಲ್ಲ.

Advertisement

ಸಾಮಾನ್ಯವಾಗಿ, ಮಳೆಗಾಲದ ಪ್ರಾರಂಭದಲ್ಲಿ ಜಾಕಾ ಹಣ್ಣಾಗುವ ಕಾರಣ, ಬಿದ್ದ ಹಣ್ಣುಗಳನ್ನು ಹೆಕ್ಕಿ ಒಣಗಿಸುವುದು ಬಹಳ ಕಷ್ಟ. ಸುರೇಶ್ಚಂದ್ರರ ಕಸಿ ಗಿಡಗಳಲ್ಲಿ ಈಗಲೇ ಹಣ್ಣಾಗಲು ಪ್ರಾರಂಭವಾಗಿದೆ. ಬಿದ್ದ ಹಣ್ಣುಗಳನ್ನು ಎರಡರಿಂದ ಮೂರು ದಿನಕ್ಕೊಮ್ಮೆ ಹೆಕ್ಕುವ ಕ್ರಮ ಅವರದ್ದು. ಹಣ್ಣುಗಳನ್ನು ಕೋಲಿನ ಸಹಾಯದಿಂದ ಉದುರಿಸುವುದೂ ಇದೆ. ಮರದ ಬುಡದಲ್ಲಿಯೇ ಸಿಪ್ಪೆಯನ್ನು ಬೇರ್ಪಡಿಸಿ, ಜಾಪತ್ರೆ ಮತ್ತು ಜಾಕಾಯಿಯನ್ನು ಮನೆಗೆ ತಂದು, ನೀರಿನಲ್ಲಿ ತೊಳೆದು, ಬಿಸಿಲಿನಲ್ಲಿ ಒಣಗಿಸುತ್ತಾರೆ. ಏಪ್ರಿಲ್-ಮೇ ತಿಂಗಳಲ್ಲಿ ಬಹುಪಾಲು ಫಸಲು ಸುರೇಶ್ಚಂದ್ರರ ಶೇಖರಣಾ ಡಬ್ಬ / ಚೀಲ ಸೇರುವುದು ಕಸಿ ಗಿಡಗಳ ಬಹುದೊಡ್ಡ ಗುಣ. ಮಳೆಗಾಲದಲ್ಲಿ ಸಿಕ್ಕ ಪತ್ರೆಗಳನ್ನು ನೀರಿನಲ್ಲಿ ತೊಳೆದು, ಫ್ಯಾನಿನ ಅಡಿಯಲ್ಲಿ ತೇವಾಂಶ ಕಳೆದುಕೊಳ್ಳಲು ಇಡುತ್ತಾರೆ. ಮಾರನೇ ದಿನ, ಓವೆನ್ ಬಳಸಿ ಹತ್ತು ನಿಮಿಷದಲ್ಲಿ ಒಣಗಿಸುತ್ತಾರೆ. ಅದರ ನಿರ್ವಹಣೆ ಸುರೇಶ್ಚಂದ್ರರ ಶ್ರೀಮತಿ ಸಹನ ಅವರದ್ದು. ಜಾಕಾಯಿ ಸೋಲಾರ್ ಗೂಡು ಸೇರುತ್ತದೆ.

ಒಣಗಿದ ಜಾಪತ್ರೆ ಮತ್ತು ಜಾಕಾಯಿಗಳ ಗುಣಮಟ್ಟ ಅತ್ಯುತ್ತಮವಾದದ್ದು. ಖರೀದಿದಾರರನ್ನು ಮನೆ ಬಾಗಿಲಿಗೆ ಬರಮಾಡಿಸಬಲ್ಲ ಆಕರ್ಷಣೆ ಅದಕ್ಕಿದೆ. ಜೊತೆಗೆ, ಬೆಳೆಗಾರನೇ ದರ ನಿಗದಿ ಮಾಡುವ ಗುಣಮಟ್ಟವೂ ಇದೆ.

Advertisement

ಒಟ್ಟಿನಲ್ಲಿ, ಸುರೇಶ್ಚಂದ್ರರ ಜಾಯಿಕಾಯಿ ಮತ್ತು ಕಾಳು ಮೆಣಸಿನ ಕೃಷಿ ಬಹಳ ಉತ್ತಮವಾಗಿದೆ. ಹಳದಿ ಎಲೆ ರೋಗ ಪೀಡಿತ ಪ್ರದೇಶದ ತೋಟಗಳಲ್ಲಿ ಬೆಳೆಯುವ ಅರ್ಹತೆಯೂ ಅದಕ್ಕಿದೆ. “ಒಳ್ಳೆಯ ಕಸಿ ಗಿಡಗಳನ್ನು ಆಯ್ಕೆ ಮಾಡಿ, ಕ್ರಮಬದ್ದವಾಗಿ ಕೃಷಿ ಮಾಡಿದರೆ ಖಂಡಿತಾ ಇವುಗಳು ನಮ್ಮ ಕೈ ಹಿಡಿಯಬಹುದು” ಎನ್ನುವುದು ಸುರೇಶ್ಚಂದ್ರರ ಮಾತು. ಅದು ಸರಿ ಕೂಡ. ಅಲ್ಲವೇ?

( ವಿಜ್ಞಾನಿ #ಡಾ.ಭವಿಷ್ಯ ಅವರ ಸಾಮಾಜಿಕ ಜಾಲತಾಣದಲ್ಲಿನ ಅಭಿಪ್ರಾಯ ಯಥಾವತ್‌ ಪ್ರಕಟಿಸಲಾಗಿದೆ )

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭಾರತದಲ್ಲಿ ಸಮುದ್ರ ಜಲಕೃಷಿ ಚಟುವಟಿಕೆ ಉತ್ತೇಜನ | ಸಮುದ್ರ ಮೀನಿನ ಕೃಷಿಯಲ್ಲಿ ಹೊಸ ಸಾಧನೆ ಮಾಡಿದ ಸಿಎಂಎಫ್​ಆರ್​ಐ
April 24, 2024
9:33 PM
by: The Rural Mirror ಸುದ್ದಿಜಾಲ
ಪ್ಯಾರೀಸ್‌ನಲ್ಲಿ ಕ್ರೀಡೆಗಳ ಮಹಾಸಂಗಮ ಒಲಿಂಪಿಕ್ಸ್‌ಗೆ ಕೆಲವೇ ದಿನ ಬಾಕಿ | ಕೈಬೀಸಿ ಕರೆಯುತ್ತಿದೆ ಪ್ಯಾರಿಸ್‌ | ಒಲಿಂಪಿಕ್ಸ್‌ನಲ್ಲಿರಲಿದೆ ನೂರಾರು ವಿಶೇಷ
April 24, 2024
9:02 PM
by: The Rural Mirror ಸುದ್ದಿಜಾಲ
ಹೊಸ ಬೆಳೆ | ರೈತರು ಚಿಂತನೆ ಮಾಡಬೇಕಾದ್ದೇನು…? ಕರಾವಳಿ, ಮಲೆನಾಡಿನಲ್ಲಿ ಉತ್ಪತ್ತಿ ನೀಡುವ “ಪರ್ಯಾಯ ಬೆಳೆಯ ಅಗತ್ಯವಿದೆ” |
April 24, 2024
2:57 PM
by: ಪ್ರಬಂಧ ಅಂಬುತೀರ್ಥ
ಪ್ಯಾಕೆಟ್ ಹಿಟ್ಟು ಆರೋಗ್ಯಕ್ಕೆ ಒಳ್ಳೆಯದೆ ಅಥವಾ ಹಾನಿಕರವೇ? ಪ್ಯಾಕೆಟ್ ಹಿಟ್ಟು ಉಪಯೋಗಿಸಿದರೆ ಏನಾಗುತ್ತದೆ ತಿಳಿದುಕೊಳ್ಳಿ..
April 24, 2024
2:32 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror