ಬರ ಬಂದ್ರೂ ಸಮಸ್ಯೆ, ಅತಿವೃಷ್ಟಿಯಾದ್ರು ಸಮಸ್ಯೆ. ಏನೇ ಆದರೂ ತರಕಾರಿ #Vegetable ಗಳ ಬೆಲೆ ಏರಿಳಿತ ಖಂಡಿತ. ಇಷ್ಟು ದಿನ ಟೊಮೆಟೋ ಬೆಲೆ #Tomatoprice ಏರಿಕೆ ಬಿಸಿ ತಡೆದುಕೊಂಡದ್ದಾಯ್ತು. ಈಗ ಈರುಳ್ಳಿ #Onion ಸರದಿ. ಈರುಳ್ಳಿ ಇಲ್ಲದೆ ಅಡುಗೆ ಕಷ್ಟ. ಈ ಬಾರಿಯ ಮುಂಗಾರಿನಲ್ಲಿ ನಿರೀಕ್ಷಿತ ರೀತಿಯಲ್ಲಿ ಈರುಳ್ಳಿ ಬೆಳೆ ಬಾರದ ಕಾರಣ ಈರುಳ್ಳಿ ಬೆಲೆ ಹೆಚ್ಚಳವಾಗಿದೆ. ಇದರ ಜೊತೆಗೆ, ಈರುಳ್ಳಿ ಸಾಕಷ್ಟು ಪ್ರಮಾಣದಲ್ಲಿ ಭಾರತದಿಂದ ರಫ್ತು ಆಗುತ್ತಿದೆ. ಇದೂ ಕೂಡ ಭಾರತದೊಳಗೆ ಈರುಳ್ಳಿ ಆವಕ ಕಡಿಮೆಯಾಗುವಂತೆ ಮಾಡಿದೆ. ಈ ಕಾರಣಕ್ಕೆ ಕೇಂದ್ರ ಸರ್ಕಾರ ಈರುಳ್ಳಿಯಿಂದ ಬೆಲೆ ಏರಿಕೆ ಹೊಡೆದ ಬೀಳುವ ಮುನ್ನವೇ ಎಚ್ಚೆತ್ತುಕೊಂಡು ಈರುಳ್ಳಿ ರಫ್ತಿನ ಮೇಲೆ ಶೇ. 40ರಷ್ಟು ಸುಂಕ ವಿಧಿಸಲು ನಿರ್ಧರಿಸಿದೆ.
ಸರ್ಕಾರ ಈರುಳ್ಳಿ ಮೇಲೆ ರಫ್ತು ಸುಂಕ ಏರಿದ್ದೂ ಕೂಡ ದೇಶದ ಹಲವೆಡೆ ಈರುಳ್ಳಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಭಾರತದ ಅನೇಕ ರಾಜ್ಯಗಳಲ್ಲಿ ಈರುಳ್ಳಿ ಬೆಲೆ ಐದಾರು ರೂಗಳಷ್ಟು ಹೆಚ್ಚಾಗಿದೆ. ಕೆಲವಡೆ 20 ರೂನಷ್ಟು ಬೆಲೆ ಹೆಚ್ಚಳವಾಗಿದೆ. ಸರ್ಕಾರ ತನ್ನಲ್ಲಿರುವ ಈರುಳ್ಳಿ ದಾಸ್ತಾನನ್ನು ಬಳಸಿ ಕೆಲ ಆಯ್ದ ಪ್ರದೇಶಗಳಲ್ಲಿ ರಿಯಾಯಿತಿ ದರದಲ್ಲಿ ಈರುಳ್ಳಿ ಮಾರಾಟ ಮಾಡುತ್ತಿದೆ. ವಿಶ್ವದಲ್ಲಿ ಅತಿಹೆಚ್ಚು ಈರುಳ್ಳಿ ಬೆಳೆಯುವುದು ಚೀನಾ ಬಿಟ್ಟರೆ ಭಾರತದಲ್ಲೇ. ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಗುಜರಾತ್ ರಾಜ್ಯಗಳಲ್ಲಿ ದೇಶದ ಶೇ. 60ರಷ್ಟು ಈರುಳ್ಳಿ ಉತ್ಪಾದನೆ ಆಗುತ್ತದೆ. 2022-23ರ ಹಣಕಾಸು ವರ್ಷದಲ್ಲಿ ಭಾರತದಿಂದ ಸುಮಾರು 25 ಲಕ್ಷ ಟನ್ಗಳಷ್ಟು ಈರುಳ್ಳಿ ರಫ್ತಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈರುಳ್ಳಿ ರಫ್ತು ಶೇ. 64ರಷ್ಟು ಹೆಚ್ಚಾಗಿದೆ. ಭಾರತದ ಹೆಚ್ಚಿನ ಈರುಳ್ಳಿ ರಫ್ತು ಬಾಂಗ್ಲಾದೇಶ, ಮಲೇಷ್ಯಾ, ಯುಎಇ ಮತ್ತು ಶ್ರೀಲಂಕಾಗೆ ಹೋಗಿದೆ.
ಕಳೆದ ಎರಡು ಮೂರು ವರ್ಷಗಳಿಂದ ಈರುಳ್ಳಿ ಮೇಲಿನ ರಫ್ತು ನಿರ್ಬಂಧಗಳು ಇಲ್ಲದ್ದರಿಂದ ಈ ಬಾರಿ ಈರುಳ್ಳಿ ರಫ್ತು ಬಹಳ ಮಟ್ಟಿಗೆ ಹೆಚ್ಚಾಗಿತ್ತು. ಇದೂ ಕೂಡ ಭಾರತದಲ್ಲಿ ಈರುಳ್ಳಿ ಸಂಗ್ರಹ ಕಡಿಮೆಗೊಂಡು ಬೆಲೆ ಹೆಚ್ಚಳಕ್ಕೆ ದಾರಿ ಮಾಡಿದೆ. ಭಾರತದಲ್ಲಿ ಅತಿಹೆಚ್ಚು ಈರುಳ್ಳಿ ಬೆಳೆಯುವ ಪ್ರದೇಶ ಮಹಾರಾಷ್ಟ್ರದ ನಾಸಿಕ್ ಜಿಲ್ಲೆ. ಇಲ್ಲಿನ ಈರುಳ್ಳಿ ವರ್ತಕರು ಸರ್ಕಾರದ ರಫ್ತು ಸುಂಕ ಹೇರಿಕೆ ಕ್ರಮವನ್ನು ಬಲವಾಗಿ ವಿರೋಧಿಸಿದ್ದಾರೆ. ಬಹಳ ಹೆಚ್ಚು ಕಾಲ ಈರುಳ್ಳಿ ಬೆಲೆ ಕಡಿಮೆ ಮಟ್ಟದಲ್ಲಿ ಇದ್ದು ರೈತರಿಗೆ ಬಹಳ ನಷ್ಟ ಆಗಿದೆ. ಸರ್ಕಾರದಿಂದಲೂ ರೈತರಿಗೆ ಪರಿಹಾರ ಸಿಕ್ಕಿಲ್ಲ. ಈಗ ರಫ್ತಿಗೆ ನಿರ್ಬಂಧ ಹಾಕಿರುವುದು ರೈತರಿಗೆ ಇನ್ನಷ್ಟು ಅನ್ಯಾಯ ಮಾಡಿದಂತಾಗುತ್ತದೆ ಎಂಬುದು ಇಲ್ಲಿನ ವರ್ತಕರ ವಾದ.
ಈರುಳ್ಳಿ ರಫ್ತು ಸುಂಕಕ್ಕೆ ಕನಿಷ್ಠ ಬೆಲೆ ನಿಗದಿ ಮಾಡಲು ಒತ್ತಾಯ : ಈರುಳ್ಳಿ ಮೇಲೆ ಶೇ. 40ರಷ್ಟು ರಫ್ತು ಸುಂಕ ಹೇರುವ ಸರ್ಕಾರದ ನಿರ್ಧಾರಕ್ಕೆ ಉದ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆ ಇದೆ. ಆದರೆ ರಫ್ತು ಸುಂಕ ಎಷ್ಟೆಂದು ನಿರ್ಧರಿಸಲು ಫ್ಲೋರ್ ಪ್ರೈಸ್ ಅಥವಾ ಕನಿಷ್ಠ ಬೆಲೆ ನಿಗದಿ ಮಾಡುವಂತೆ ಈರುಳ್ಳಿ ವರ್ತಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸರ್ಕಾರ ಶೇ. 40ರಷ್ಟು ರಫ್ತು ಸುಂಕ ಹೇರಿದೆ. ಅದರೆ, ಕನಿಷ್ಠ ಬೆಲೆ ಎಷ್ಟು ಎಂದು ನಿರ್ದಿಷ್ಟಪಡಿಸಿಲ್ಲ. ಇದರಿಂದ ಕೆಲ ರಫ್ತುದಾರರಿಗೆ ಮತ್ತು ಬಂದರುಗಳಿಗೆ ಹೆಚ್ಚು ಅನುಕೂಲ ಆಗಬಹುದು. ಇತರರಿಗೆ ಅನ್ಯಾಯ ಆಗುತ್ತದೆ ಎಂಬುದು ಈರುಳ್ಳಿ ವರ್ತಕರ ವಲಯದಲ್ಲಿ ಕೇಳಿಬಂದಿರುವ ಅನಿಸಿಕೆ. ಸರ್ಕಾರ ಇತ್ತೀಚೆಗೆ ಬಾಸ್ಮತಿಯೇತರ ತಳಿಯ ಅಕ್ಕಿಗಳು ಮತ್ತು ಗೋಧಿಯ ರಫ್ತನ್ನು ನಿಷೇಧಿಸಿತ್ತು. ಇದರಿಂದ ಕೃಷಿ ವ್ಯವಹಾರ ವಲಯಕ್ಕೆ ಹಿನ್ನಡೆಯಾಗಿತ್ತು.
Source : Digital Media
ಆಮದುಗೊಂಡ ಕಳಪೆ ಅಡಿಕೆಯನ್ನು ದೇಶೀಯ ಅಡಿಕೆಯೊಂದಿಗೆ ಮಿಶ್ರಣ ಮಾಡಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ…
ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಬಿಟ್ಟು ಬಿಟ್ಟು ಸಾಧಾರಣ ಮಳೆ…
ಅಡಿಕೆ ತೋಟಗಳಲ್ಲಿ ಹೆಚ್ಚುತ್ತಿರುವ ಎಲೆ ಚುಕ್ಕೆ, ಹಳದಿ ಎಲೆ ಮತ್ತು ಕೊಳೆ ರೋಗಗಳಿಗೆ…
ದೇಶಾದ್ಯಂತ ಮುಂಗಾರು ಮತ್ತಷ್ಟು ತೀವ್ರಗೊಂಡಿದ್ದು, ಉತ್ತರ ಭಾರತದ ಹಲವು ಭಾಗಗಳಿಗೆ ರೆಡ್ ಅಲರ್ಟ್…
ರಾಜ್ಯದಲ್ಲಿ ಮುಂಗಾರು ಮಳೆ 39% ಕೊರತೆಯಾಗಿದ್ದು, 26 ಜಿಲ್ಲೆಗಳ 178 ತಾಲ್ಲೂಕುಗಳಲ್ಲಿ ಬರದ…
ಪುತ್ತೂರಿನ ರಾಜಕೀಯದಲ್ಲಿ ವ್ಯಕ್ತಿತ್ವದ ಪ್ರಭಾವ ಹೆಚ್ಚುತ್ತಿರುವ ಕುರಿತು ಈ ವಿಶ್ಲೇಷಣೆ ಬೆಳಕು ಚೆಲ್ಲುತ್ತದೆ.…