ಪತ್ತನಾಜೆಗೆ ಹತ್ತುಹನಿ……

May 24, 2024
7:00 AM
ತುಳುನಾಡಿನಲ್ಲಿ ವೃಷಭ ಮಾಸದ 10 ನೇ ದಿನ ವಿಶೇಷವಾದ ದಿನ. ಪತ್ತನಾಜೆ ಎಂದು ಆಚರಿಸುತ್ತಾರೆ.ಅಂದಿನಿಂದ ಮಳೆಗಾಲ ಮುಗಿಯುವವರೆಗೆ ಯಾವುದೇ ಉತ್ಸವ ನಡೆಯುವುದಿಲ್ಲ. ಯಕ್ಷಗಾನ ಕಲಾವಿದರು ಪತ್ತನಾಜೆ ದಿನ ಗೆಜ್ಜೆ ಬಿಚ್ಚುತ್ತಾರೆ.

ಬೆಳಗಿನಿಂದಲೇ ಸಡಗರದಿಂದ ಕೆಲಸ ಮಾಡುತ್ತಿರುವ ಅಜ್ಜಿಯನ್ನು ರಜೆಯಲ್ಲಿ ಮನೆಗೆ ಬಂದ ಮೊಮ್ಮಗಳಿಗೆ ನೋಡಿಯೇ ಬಾಕಿ..! ಯಾವಾಗಲೂ ಅಲ್ಲಿ ನೋವು ಇಲ್ಲಿ ನೋವು ಎಂದು ಬೆನ್ನು ಬಗ್ಗಿಸಿ ನಡೆಯುವ ಅಜ್ಜಿಯ ನೋವುಗಳೆಲ್ಲಾ ಇಂದು ಮಾಯ. ಕುತೂಹಲದಿಂದ ಅಜ್ಜಿಯನ್ನು ನೋಡುತ್ತಿದ್ದ ಮೊಮ್ಮಗಳಿಗೆ ಏನೂ ಕೇಳದೇ ಉತ್ತರ ಸಿಕ್ಕಿತು….. ಇವತ್ತು “ಪತ್ತನಾಜೆ”ಯಲ್ಲವಾ, ಮಾವ ಮನೆಗೆ ಬರುತ್ತಿದ್ದಾನೆ…!

ಬಹಳ ಸಮಯದ ಮೇಲೆ ಮನೆಗೆ ಬರುತ್ತಿದ್ದಾನೆ. ನೀನು ಬಂದುದು ನೋಡಿ ಅವನು ಖುಷಿ ಪಡುತ್ತಾನೆ . ಯಕ್ಷಗಾನ ಮೇಳದಲ್ಲಿ ವೇಷ ಹಾಕುವ ಮಾವನೆಂದರೆ ಮಕ್ಕಳಿಗೆ ಬಹಳ ಇಷ್ಟ. ಮೇಳದ ರಂಜನೀಯ ಕಥೆಗಳನ್ನು, ಪೌರಾಣಿಕ ಪ್ರಸಂಗಗಳನ್ನು ಮಾವ ಹೇಳುತ್ತಿದ್ದರೆ ಮಕ್ಕಳಿಗೆ ಸಮಯ ಹೋದದ್ದೇ ಗೊತ್ತಾಗುತ್ತಿರಲಿಲ್ಲ. ಹೌದಾ ಮಾವನಿಗೆ ರಜೆಯುಂಟಾ? ಎಷ್ಟು ದಿನ ? ಎಂಬ ಪ್ರಶ್ನೆಗೆ ಅಜ್ಜಿ ಖುಷಿಯಿಂದ ಉತ್ತರ ಕೊಟ್ಟಳು. ನೋಡು ಮಗ ಇಂದು ಪತ್ತನಾಜೆ. ತುಳು ತಿಂಗಳ ಹತ್ತನೇಯ ದಿನ. ಇಂದಿನಿಂದ ಮಳೆಗಾಲ ಆರಂಭ ಎಂಬುದು ಇಲ್ಲಿನವರ ನಂಬಿಕೆ. ಹಾಗಾಗಿ ಭೂತ ಕೋಲ, ನೇಮ, ತಂಬಿಲ, ಯಕ್ಷಗಾನ, ಜಾತ್ರೆಗಳಿಗೆಲ್ಲ ಇನ್ನು ವಿರಾಮ.ಗದ್ದೆ ಬೇಸಾಯದ ಕೆಲಸಗಳೆಲ್ಲ ಆರಂಭಿಸಲು ಸಕಾಲ. ಪತ್ತನಾಜೆಯಾದ ಮೇಲೆ ದೈವ ಬೂತಗಳೆಲ್ಲಾ ಘಟ್ಟ ಹತ್ತುತ್ತವೆ ಎಂಬುದು ಜನಸಾಮಾನ್ಯರ ನಂಬಿಕೆ. ದೀಪೋತ್ಸವಕ್ಕೆ ಮತ್ತೆ ಶುರು ಆಗುವ ಮೇಳಗಳ ತಿರುಗಾಟಕ್ಕೆ ಪತ್ತನಾಜೆಯಿಂದ ವಿಶ್ರಾಂತಿ. ಊರಿಂದ ಊರಿಗೆ ತಿರುಗಾಡಿ ಸುಸ್ತಾದ ಕಲಾವಿದರ ಪಯಣಕ್ಕೆ ತಾತ್ಕಾಲಿಕ ವಿರಾಮ. ಬೇಸಾಯ ,ತೋಟದ ಕೆಲಸಗಳಲ್ಲಿ ‌ಮಾವ ತೊಡಗುವುದರಿಂದ ನಮಗೂ ನೆಮ್ಮದಿ ಎಂದು ಅಜ್ಜಿಯ ಕಣ್ಣಲ್ಲಿ ‌ತೆಳ್ಳನೆಯ ಕಣ್ಣೀರು.

ಪತ್ತನಾಜೆಯು ದಕ್ಷಿಣ ಕನ್ನಡ , ಉಡುಪಿ ಕಾಸರಗೋಡುಗಳಲ್ಲಿ ಆಚರಣೆಯಲ್ಲಿದೆ. ಹಿಂದೆ ಆರು ತಿಂಗಳು ಸತತ ಮಳೆಯಾಗುತ್ತಿದ್ದದ್ದರಿಂದ ‌ಜಾತ್ರೆ, ನೇಮಗಳು, ಯಕ್ಷಗಾನಗಳನ್ನು ಈ ತಿಂಗಳುಗಳಲ್ಲಿ ‌ನಡೆಸುವುದು ಕಷ್ಟಸಾಧ್ಯವಾದುದರಿಂದ
ಪತ್ತನಾಜೆಯನ್ನು ಒಂದು ಗಡುವೆಂದು ಜನರು ಪರಿಗಣಿಸಿರುವ ಸಾಧ್ಯತೆ ಇದೆ. ಆದರೆ ಇಲ್ಲಿನ ಜನರು ಈ ಪದ್ಧತಿ ಯನ್ನು ಬಹು ಶ್ರದ್ಧೆಯಿಂದ ಇಂದಿಗೂ ಪಾಲಿಸಿಕೊಂಡು ಬಂದಿದ್ದಾರೆ. ಪತ್ತನಾಜೆಗೆ ಪತ್ತ್ ಪನಿ ಎಂಬ ಮಾತು ಚಾಲ್ತಿಯಲ್ಲಿದೆ.

ಬರಹ :
ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ – ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯಲ್ಲಿ ಜು.25ರಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ
July 24, 2026
9:47 PM
by: ದ ರೂರಲ್ ಮಿರರ್.ಕಾಂ
ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ಜುಲೈ 30ರಂದು ಮಂಗಳೂರಿನಲ್ಲಿ ನೇರ ಸಂದರ್ಶನ
July 24, 2026
9:05 PM
by: ದ ರೂರಲ್ ಮಿರರ್.ಕಾಂ
ರಸಗೊಬ್ಬರದಲ್ಲಿ ಆತ್ಮನಿರ್ಭರತೆ ಅನಿವಾರ್ಯ – ಸಂಕಷ್ಟದಿಂದ ಅವಕಾಶದತ್ತ ಭಾರತ ಸಾಗಬೇಕಿದೆ
July 24, 2026
5:01 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 24-07-2026 | ಕರಾವಳಿಯಲ್ಲಿ ಮುಂದುವರಿಯುವ ಮಳೆ, ಜುಲೈ ಅಂತ್ಯದ ವೇಳೆಗೆ ಮುಂಗಾರು ಹೇಗೆ..?
July 24, 2026
4:21 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror