ನಿವೃತ್ತರಾದ ಮೇಲೆ ಹಳ್ಳಿಯಲ್ಲಿ ಯೌವನ ಮೈದುಂಬಿಸಿಕೊಂಡ ಪ್ರಸಾದರು | ಹಾಗಿದ್ದರೆ ಹಳ್ಳಿಯಲ್ಲೇನಿದೆ…!? |

July 4, 2024
8:16 PM
ಹೀಗೆ "ಗೋ ಗೊಬ್ಬರ" ಯಾತ್ರೆಯ ನಿಮಿತ್ತ ಮೊನ್ನೆ ಹೋಗಿ ತಲುಪಿದ್ದು ಸುಳ್ಯ ತಾಲೂಕಿನ ಸಮೀಪದ ಬಂಟಮಲೆ ಎಂಬ ಬೃಹತ್ ಪರ್ವತದ ತಪ್ಪಲಿನ ಕೃಷಿ ಕುಟುಂಬದ ಈ ಮನೆಗೆ. ಇಲ್ಲಿ ಕೃಷಿಕರ, ಕೃಷಿ ಕುಟುಂಬದ ಪಾಸಿಟಿವ್‌ ಅಂಶಗಳನ್ನು ಯುವ ಕೃಷಿಕರೂ ತಿಳಿಯಬೇಕು.

ನಾವು ಸಾಕಿದ ಗೋವುಗಳು ನನಗೆ ಜಗದ್ದರ್ಶನ ಮಾಡಿಸುತ್ತಿವೆ. ನಾನು ನಮ್ಮ ತಯಾರಿಕೆಯ ಗೊಬ್ಬರ ತೆಗೆದುಕೊಂಡು ಹತ್ತು ಹಲವಾರು ಊರುಗಳನ್ನ ಸುತ್ತಿ ನೋಡಿ ಕಲಿಯುವ ಸದವಕಾಶವನ್ನು ನನಗೆ ನೀಡುತ್ತಿವೆ. ನಮ್ಮಲ್ಲಿಂದ ಇನ್ನೂರಡಿ ದೂರದ ರೈತ ಬಂಧುಗಳು ಊರು ಮನೆಯವ ಜಾನುವಾರುಗಳ ಕಟ್ಟಿ ಕೊಂಡು ಏನೋ ಗೊಬ್ಬರ ಗಿಬ್ರ ಮಾಡ್ತಾನೇ ನೋಡೋಣ ನಾವೊಂದು ಸೊಲಪ ಗೊಬ್ಬರ ಕೊಂಡು ಪ್ರಯತ್ನ ಮಾಡಿ ಪ್ರೋತ್ಸಾಹಿಸೋಣ ” ಎಂದು ಮನಸು ಮಾಡೋಲ್ಲ. ಆದರೆ ದೂರದ ಇನ್ನೂರು ಕಿಲೋಮೀಟರ್ ಆಚೆಯ ಈ ರೈತ ಬಂಧುಗಳು ನನ್ನ ಕರೆದು ಗೊಬ್ಬರ ಕೊಂಡು ಪ್ರೋತ್ಸಾಹಿಸುತ್ತಾರೆ. ಹೌದು ಸುಳ್ಯ ತಾಲೂಕಿನ ಚೊಕ್ಕಾಡಿ ಗ್ರಾಮದ ರೈತ  ಪ್ರಸಾದ್. ಅವರು ನಮ್ಮ ಗೋ ಸಂವರ್ಧನ ಕೇಂದ್ರ ದ ಗೊಬ್ಬರ ಕೊಂಡು ನಮ್ಮ ಗೋವುಗಳ “ಗೋಗ್ರಾಸ”ದಾತರಾದರು.…….. ಮುಂದೆ ಓದಿ ……

Advertisement

ನಾನು ನಮ್ಮ ತೀರ್ಥಹಳ್ಳಿ ಹೊಸನಗರ ಶೃಂಗೇರಿ ಕೊಪ್ಪ ಭಾಗದ ಮಲೆನಾಡು ಕಡೆಯ ಮೂಲೆ ಊರು ಗಳನ್ನೇ ಭಯಂಕರ ಮೂಲೆ ಎಂದುಕೊಂಡ ಅನಿಸಿಕೆಯನ್ನು ಆ ಕೃಷಿಕ ಬಂಧುಗಳ ಮನೆ ತಿರುಗಮುರುಗ ಮಾಡಿತು. !!!. ಪ್ರಸಾದರ ಮನೆ ಮುಖ್ಯ ರಸ್ತೆಯಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿದೆ. ಮುಖ್ಯ ರಸ್ತೆಯಿಂದ ಅವರ ಮನೆಗೆ “ನಡೆದು” ಹೋದರೆ ಟ್ರಕಿಂಗ್ – ಚಾರಣ.. ವಾಹನದಲ್ಲಿ ಹೋದರೆ “ಆಫ್ ರೋಡ್ ನಲ್ಲಿ ರೇಸ್” ಸರ್ಕಸ್ ಮಾಡಿ ಹೋದ ಸಾಹಸದ ಚಾಲನೆ ಮಾಡಿದ ಅನುಭವ…!! ದಟ್ಟ ಕಾಡಿನ ನಡುವೆ ಅಲ್ಲಲ್ಲಿ ಮನೆಗಳು ..‌!! ಆಳ ಕಂದಕದ ನಡುವೆ ಅಡಿಕೆ ತೋಟಗಳು.

ಬಹುಶಃ ಪಶ್ಚಿಮ ಘಟ್ಟಗಳ ದಕ್ಷಿಣ ಕರ್ನಾಟಕದ ಭಾಗದೆಲ್ಲೆಲ್ಲ ಇಂತಹ “ಬಂಟಮಲೆ” ಯಂತಹ ಅಭೇದ್ಯ ನಿತ್ಯ ಹರಿದ್ವರ್ಣದ ದಟ್ಟ ಕಾಡು ಇನ್ನೂ ನಾಶವಾಗದೇ ಉಳಿದ ಕಾರಣಕ್ಕಾಗಿ ಈಗ ಬರುತ್ತಿರುವ ಅಕಾಲಿಕ ಆಕಸ್ಮಿಕ ಸೈಕ್ಲೋನ್ ಮಳೆಯಾದರೂ ಬರುತ್ತಿದೆ..!!

ಚೊಕ್ಕಾಡಿಯ ಸತ್ಯಸಾಯಿ ವಿದ್ಯಾಮಂದಿರದ ದಾರಿಯ ಮೇಲಿನಿಂದ ನಿಂತು ನೋಡಿದರೆ ದಟ್ಟ ಕಾಡಿನ ಪರ್ವತದ ಮುಗಿಲೆತ್ತರದಲ್ಲಿ ಒಂದು ಹುಲ್ಲುಗಾವಲು ಕಾಣಿಸುತ್ತದೆ. ದಟ್ಟವಾದ ಕಾನನದ ಮದ್ಯ ಚೂರೇ ಚೂರು ಹುಲ್ಲು ಗಾವಲು ಇರುವುದು ಅಪರೂಪದ ಸಂಗತಿ . ಸಾಮಾನ್ಯವಾಗಿ ಅಷ್ಟು ಎತ್ತರದ ಗಿರಿ ಶಿಖರದ ತುತ್ತ ತುದಿಯ ತನಕವೂ ಮರಗಳು ಇರುವುದು ಬಹಳ ವಿಶೇಷ. ಸಾಮಾನ್ಯವಾಗಿ ಇಂತಹ ಎತ್ತರದ ಪರ್ವತ ದ ತುದಿಯಲ್ಲಿ ಹುಲ್ಲು ಗಾವಲು ಇರುತ್ತದೆ. ಆದರಿಲ್ಲಿ ದಟ್ಟ ಕಾನನ ಇದೆ… ಇಳಿ ವಯಸ್ಸಿನ ವೃದ್ದರಿಗೆ ಅಪರೂಪಕ್ಕೆ ನೆತ್ತಿಯ ಮೇಲೆ ಒತ್ತಾದ ಸಮೃದ್ದ ತಲೆಗೂದಲು ಇದ್ದಂತೆ….!!!

ಮುಖ್ಯ ರಸ್ತೆಯಿಂದ ಸುತ್ತಿಬಳಸುವ ಕಡಿದಾದ ಏರಿಳಿತದ ಕಚ್ಚಾ ರಸ್ತೆಯಲ್ಲಿ ಸಂಚರಿಸಿ ಪ್ರಸಾದ್ ರ ಮನೆಯ ಅಂಗಳಕ್ಕೆ ನಮ್ಮ ವಾಹನ ತಲುಪಿತು.

ಪ್ರಸಾದ್ ಅವರು ಬೆಂಗಳೂರಿನಲ್ಲಿ ಪ್ರತಿಷ್ಠಿತ ಹೆಚ್ ಎ ಎಲ್ ನಲ್ಲಿ ಇಪ್ಪತ್ತು ವರ್ಷ ಕಾಲ ಕಾರ್ಯ ನಿರ್ವಹಣೆ ಮಾಡಿ ನಂತರ ಕೆಲವು ವರ್ಷಗಳ ಕಾಲ “ಟೆಕ್ ಮಹೀಂದ್ರದಲ್ಲೂ” ಕೆಲಸ ಮಾಡಿ ನಿವೃತ್ತರಾಗಿ ಎರಡು ವರ್ಷಗಳ ಹಿಂದೆ ತಮ್ಮ ತವರಿಗೆ ಮರಳಿದ್ದಾರೆ ಒಬ್ಬನೇ . ಮಗ ಸಾಫ್ಟ್‌ವೇರ್ ಇಂಜಿನಿಯರ್ – ಸೊಸೆ ಇಡೀ ದೇಶವೇ ಹೆಮ್ಮೆ ಪಡುವ ಇಸ್ರೋ ಸಂಸ್ಥೆಯು ವಿಜ್ಞಾನಿ. ಪ್ರಸಾದ್ ರ ಪತ್ನಿ‌ ಗೃಹಿಣಿ ಮತ್ತು ಗಂಡನ ಕೃಷಿ ಪ್ರೀತಿ ಅನಸರಿಸಿ ಅನುಮೋದಿಸಿ ಶ್ರೀ ರಾಮ ನ ಹಿಂದೆ ಸೀತಾಮಾತೆ ವನವಾಸಕ್ಕೆ ಬಂದಂತೆ ಈ ದಂಡಕಾರಣ್ಯ ದ ಕೃಷಿ ವನಕ್ಕೆ “ಕೃಷಿ ವಾಸ ಕ್ಕೆ ” ಬಂದವರು. ಈಗ ಇಬ್ಬರು ಸೇರಿ ಕೃಷಿ ಯನ್ನು ಚಂದಗಾಣಿಸುತ್ತಿದ್ದಾರೆ.

ಪ್ರಸಾದ್ ಅವರಿಗೆ ಸಾಕಷ್ಟು ಹಣಕಾಸಿನ ಅನುಕೂಲ ಮತ್ತು ಬೆಂಗಳೂರಿನಲ್ಲಿ ಸ್ವಂತ ಮನೆ ಎಲ್ಲಾ ಇದ್ದೂ ಇವರುಗಳು ಈ ದಟ್ಟ ಕಾನನದ ನಡುವೆ ಕೃಷಿ ಮಾಡಿ ಜೀವನ ಮಾಡಲು ಬಂದಿರುವುದು ಅಚ್ಚರಿಯೊಳ ಗೆ ಅಚ್ಚರಿಯ ವಿಚಾರ. ಏಕೆಂದರೆ ನಮ್ಮಂಥವರು ಯೌವನದಲ್ಲೇ ಕೃಷಿ ಬದುಕು ಆರಿಸಿಕೊಂಡು ಕೃಷಿ ಯಲ್ಲಿ ಜೀವನ ಮಾಡುತ್ತಿದ್ದೇವೆ. ಕೃಷಿ ಬದುಕಿನ ಅಭದ್ರತೆ ನಮ್ಮನ್ನು ಎಷ್ಟೋ ಸರ್ತಿ ನಾವೇಕಾದರೂ ಕೃಷಿ ಬದುಕನ್ನು ಆಯ್ಕೆ ಮಾಡಿಕೊಂಡೆವೋ ಎಂದೆನ್ನಿಸುತ್ತದೆ.

ಆದರೆ  ಪ್ರಸಾದ್ ರು ಈ “ದಂಡಕಾರಣ್ಯ ” ಕ್ಕೆ ಕೃಷಿ ವನ ವಾಸ ಮಾಡಿಕೊಂಡು ಜೀವನ ಮಾಡಲೇ ಬೇಕೆಂಬ ಅನಿವಾರ್ಯತೆ ಏನಿರದಿದ್ದರೂ ಈ ಕಾಡಿನ ನಡುವಿನ ತೋಟದ ತಟದಲ್ಲಿ ನೆಲಸಿ ಪ್ರೀತಿಯಿಂದ ಕೃಷಿ ಮಾಡುತ್ತಿದ್ದಾರೆ. ನಮ್ಮಂಥ ಚಾಲ್ತಿ ಕೃಷಿಕರಿಗೇ ಕಾಲ ಕಾಲಕ್ಕೆ ತೋಟದ ಕೃಷಿ ಕಾರ್ಯ ಗಳಿಗೆ ಕಾರ್ಮಿಕ ರನ್ನ ಹೊಂದಿಸಿ ಕೆಲಸ ಮಾಡಿಸುವುದು ಕಷ್ಟ ಅಂತದ್ದರಲ್ಲಿ ಈ ವಯಸ್ಸಿನಲ್ಲಿ ಈ ಕಾಲದಲ್ಲಿ ಈ ರಿಸ್ಕ್ ತೆಗದುಕೊಂಡು ಕೃಷಿ ಕಾಯಕ ಮಾಡಿಸುತ್ತಿದ್ದಾರೆ…‌!!

ಪ್ರಸಾದ್ ಅವರು ನಿವೃತ್ತ ರಾದ ಮೇಲೆ ಯೌವನ ಮೈದುಂಬಿಸಿಕೊಂಡಿದ್ದಾರೆ ಎನಿಸುತ್ತದೆ. ಬೆಂಗಳೂರಿನ ಮಹಾನಗರ ದ ಜೀವನ ಸುಖ ಐಷಾರಾಮಿ ಸ್ವರ್ಗ, ಎಲ್ಲಾ ಅನುಕೂಲಗಳ ಆಗರ ಎಂದು ಹಳ್ಳಿ ಹಳ್ಳಿಯ ಮೂಲೆಯಿಂದ ಪ್ರವಾಹೋಪಾದಿಯಲ್ಲಿ ಜನ ಬೆಂಗಳೂರು ಸೇರುತ್ತಿರುವ ಆ ಪ್ರವಾಹದ ನಡುವೆ ಹಿಂದಕ್ಕೆ ಬಂದು ಅಥವಾ ಪ್ರವಾಹದ ವಿರುದ್ಧವಾಗಿ ಹಳ್ಳಿ ಸೇರಿದ್ದು ಪ್ರಸಾದ್ ದಂಪತಿಗಳು.

ಎರಡು ವರ್ಷಗಳ ಹಿಂದೆ ತವರಿಗೆ ಮರಳಿದವರು ಈ ಮೂಲೆ ಊರಿಗೆ ಮುಖ್ಯ ರಸ್ತೆಯಿಂದ ಬರುವ ರಸ್ತೆಯನ್ನು ಕಲ್ಲು ಹಾಕಿ ಮಳೆಗಾಲದಲ್ಲೂ ವಾಹನ ಓಡಾಡು ವಂತೆ ರಸ್ತೆ ಸರಿಪಡಿಸಿಕೊಂಡರು. ನಂತರ ಮೂಲೆ ಮೂಲೆಯಲ್ಲಿ ನಕ್ಷತ್ರ ದಂತೆ ಇರುವ ಮನೆಗಳವರನ್ನ ಸೇರಿಸಿ ಒಟ್ಟು ಮಾಡಿ ದೂರವಾಣಿ ಕೇಬಲ್ ಸಂಪರ್ಕ ದ ವ್ಯವಸ್ಥೆ ಮಾಡಿಕೊಂಡರು. ಈಗ ಈ ಊರಿನ ಇಪ್ಪತ್ತೈದು ಮನೆಗಳಿಗೂ ದೂರವಾಣಿ ಕೇಬಲ್ ಸಂಪರ್ಕ ಇದೆ.

ಪ್ರಸಾದರು ನಿವೃತ್ತರಾದ ಮೇಲೆ ಈ ಕಾಡ ನಡುವಿನ ತವರಿಗೆ ಬರಲೇ ಬೇಕಾದ ಅನಿವಾರ್ಯತೆಯೇನಿರಲಿಲ್ಲ..!! ಇಲ್ಲಿನ ಅಡಿಕೆ ತೋಟದಲ್ಲಿ “ಖಂಡಿಗೆಗಟ್ಟಲೆ” ಅಡಿಕೆ ಬೆಳೆದು ದೊಡ್ಡ ಸಾಧನೆ ಮಾಡಬೇಕೆಂದೇನೂ ಅವರಿಗೆ ಇರಲಿಲ್ಲ. ಆದರೆ ಸ್ನಿಗ್ಧ ನಿತ್ಯ ನಿರಂತರವಾದ ಸೌಂದರ್ಯ ದ ಸಿರಿಯಾದ ಈ ಪ್ರಕೃತಿ ಇವರನ್ನು ಸೆಳೆದು ತನ್ನ ಮಡಲಿಗೆ ಹಾಕಿ ಕೊಂಡಿತು.
ಏನಿದೆ ಹಳ್ಳಿಯಲ್ಲಿ …? ಮಹಾನಗರದ ಐಷಾರಾಮಿ ಜೀವನ ಅನುಭವಿಸಿದವರು ಈ ಹಳ್ಳಿ ಮೂಲೆಯ ರಿಸ್ಕೇ ಹೆಚ್ಚು ಇರುವ ಕೃಷಿ ಜೀವನಕ್ಕೆ ಮರಳಲು ಯಾರು ತಾನೇ ಇಷ್ಟ ಪಡುತ್ತಾರೆ‌…?!

ಆದರೆ ಪ್ರಸಾದ್ ರ ಮನೆಯಂಗಳ ದಿಂದ ಪೂರ್ವ ದತ್ತ ನೋಡಿದರೂ ಹಸಿರ ಸೆರಗ ಹೊದ್ದ ಬಂಟಮಲೆ ಪರ್ವತ ಕಣ್ ಮನ ಸೆಳೆಯುತ್ತದೆ…!! ಈ ಬಂಟ ಮಲೆ ಮಲೆನಾಡಿನ ಪಶ್ಚಿಮ ಘಟ್ಟಗಳ ವ್ಯಾಪ್ತಿ ಯ “ಕೈಲಾಸ ಪರ್ವತ” ಇದ್ದಂತೆ..ತದ್ಯಾತ್ಮ ದಿಂದ ಆದ್ಯಾತ್ಮವನ್ನ ಆವಾಹಿಸಿಕೊಂಡು ಈ ಬಂಟಮಲೆ ಪರ್ವತವನ್ನು ಎವಯಕ್ಕದೇ ನೋಡುತ್ತಿದ್ದರೆ ನಿಮಗೆ ಪರ್ವತ ದ ತುದಿಯಲ್ಲಿ” ಶಿವಪಾರ್ವತಿ” ಯರು ಕಂಗೊಳಿಸುತ್ತಾರೆ…. ಈ ಭಗವಂತನನ್ನು ಹಸಿರಲ್ಲಿ ಕಾಣುವ ಸೌಭಾಗ್ಯಕ್ಕಿಂತ ದೊಡ್ಡದು ಏನಿದೆ ಹೇಳಿ…..!???

ಈ ದಂಪತಿಗಳಿಗೆ ಈ ಮೌಲ್ಯದ ಅರಿವಿದೆ…..ಬೆಂಗಳೂರಿನ ಜೆಪಿ ನಗರವೋ, ಬಸವನ ಗುಡಿಯೋ, ಡಾಲರ್ಸ್ ಕಾಲೋನಿಯೋ ಇನ್ಯಾವುದೋ ಪ್ರತಿಷ್ಠಿತ ಐಷಾರಾಮಿ ನಗರದಲ್ಲಿ ಸೈಟೋ ಪ್ಲಾಟೋ ಕೊಂಡರೆ ಅಲ್ಲಿ ನಿಸರ್ಗ ದ ಅದ್ಭುತವಾದ ಚಿತ್ರ “ಬಂಟ ಮಲೆ” ಕಾಣಿಸುತ್ತದಾ….? !! ಇಲ್ವಲ್ಲ…!! ನಿವೃತ್ತ ಜೀವನಕ್ಕೆ ಇನ್ನೇನು ಬೇಕು ಹೇಳಿ….!? ಅಮೃತ ದಂತಹ ನೀರು , ಪರಿಶುದ್ಧ ಗಾಳಿ … ದೇಹ ವ್ಯಾಯಾಮಕ್ಕೆ ಚೂರು ಕೃಷಿ.. ಹೆಚ್ಚು ಆದಾಯದ “ನಿರೀಕ್ಷೆ” ಇಲ್ಲದ ಕೃಷಿ…. ಮತ್ತೇನು ಬೇಕು ಹೇಳಿ….!?

ಈ ಕಾಡೂರಿನ ಒಂದು ವರ್ಷದ ಕೃಷಿ ಜೀವನಕ್ಕೆ ಭಗವಂತ ಈ ಕೃಷಿಕರಿಗೆ ಮತ್ತೆ ಎರಡು ವರ್ಷ ಹೆಚ್ಚು ಆಯಸ್ಸು ಬೋನಸ್ ಆಗಿ ನೀಡುತ್ತಾನೆ… ಹಳ್ಳಿಯಲ್ಲಿ ಆಸ್ಪತ್ರೆ ದೂರ ಇರುತ್ತದೆ, “ವೃದ್ಯಾಪ್ಯ” ಇನ್ನೇನೋ ದೂರು ಹೇಳುವವರಿಗೆ ಬೆಂಗಳೂರಿನ ಮಹಾನಗರದಲ್ಲಿದ್ದು , ಯೌವನ , ಹಣ ಪ್ರಭಾವ ಎಲ್ಲಾ ಇದ್ದೂ ಉಳಿಸಿಕೊಳ್ಳಲು ಆಗದ ನಟ ಪುನಿತ್ ರಾಜಕುಮಾರ್ ರನ್ನ ಜ್ಞಾಪಕ ಮಾಡಿಕೊಳ್ಳಿ… ಜೀವ ಉಳಿಬೇಕು ಅಥವಾ ಉಳಿಯುವ ಯೋಗ ಇದ್ದರೆ ಆ ಭಗವಂತ ಎಂತಹ ಅಂಡಮಾನ್ ನಲ್ಲೂ ಸೂಕ್ತ ವೈದ್ಯಕೀಯ ಚಿಕಿತ್ಸೆಯ ಅನುಕೂಲ ಮಾಡಿಕೊಟ್ಟು ಉಳಿಸುತ್ತಾನೆ….. ಉಸಿರು ಭಗವಂತನ ಭಿಕ್ಷೆ ‌. ಅದು ನಿಲ್ಲಿಸದಂತೆ ತಡೆ ಯೋದು ಎಂತಹ ಹೈಟೆಕ್ ಆಸ್ಪತ್ರೆ ಯ ಎಂತಹ ನುರಿತ ವೈದ್ಯರ ತಂಡ ಎಂತಹ ವೆಂಟಿಲೇಟರ್ ಇದ್ದರೂ ಭಗವಂತನ ಕೃಪೆ ಮುಗಿದರೆ ಎಲ್ಲಾ ಮುಗಿದು ಹೋಗುತ್ತದೆ. ಜೀವ ಉಳಿಯುವ ಯೋಗ ಇದ್ದರೆ ಎಲ್ಲಾ ವ್ಯವಸ್ಥೆಯೂ ಆಗುತ್ತದೆ. ಅದಕ್ಕೆ ಹಳ್ಳಿ ಮೂಲೆ ಪಟ್ಟಣ ಅಂತಿಲ್ಲ…!!

ಎಷ್ಟೋ ಜನ ಪಟ್ಟಣಿಗರು ಮಲೆನಾಡು ಕರಾವಳಿಯ ಇಂತಹ ಸುಂದರವಾದ ಕೃಷಿ ಭೂಮಿ ಮನೆಯನ್ನು ಬಿಟ್ಟು ಮಹಾ ನಗರ ದಲ್ಲೇ ಉಳಿದು ಅನ್ಯರಿಗೆ ಅಲಭ್ಯ ವಾಗಿರುವ ಇಂತಹ ಸ್ವರ್ಗ ಸದೃಶ ಜಾಗದಲ್ಲಿ ವಾಸ ಮಾಡುವ ಸೌಭಾಗ್ಯ ಕಳೆದು ಕೊಳ್ಳುತ್ತಿದ್ದಾರೆ….!! ಇಂತಹ ಹಳ್ಳಿ ಮನೆಯ” ಕೃಷಿ ಭೂಮಿ ಮನೆ”ಗೆ ಬೆಲೆ ಕಟ್ಟಲಾಗದು. ಯಾವತ್ತೂ ಯಾರೂ ಮಲೆನಾಡು ಕರಾವಳಿಯ ಮೂಲೆ ನೆಲೆಯನ್ನು ಅಲ್ಲಿನ ಮೂಲ ಸೌಕರ್ಯದ ಕೊರತೆ ಮತ್ತು ಅಲ್ಲಿನ ಕೃಷಿ ಉತ್ಪತ್ತಿ ಆಧಾರದಲ್ಲಿ ಲೆಕ್ಕಾಚಾರ ಹಾಕಬಾರದು…

ಬಂಧುಗಳೇ ಮಲೆನಾಡು ಕರಾವಳಿಯ ಕೃಷಿ ಭೂಮಿ ಯನ್ನು “ಯಾರು ಯಾರಿಗೋ” ಮಾರದಿರಿ… ದಯವಿಟ್ಟು ನಿಮ್ಮ ನಿಮ್ಮ ಮೂಲ ನೆಲೆಯನ್ನ ಉಳಿಸಿಕೊಳ್ಳಿ… ವರ್ಷದಲ್ಲಿ ಮೂಲ ಊರು ಮೂಲ ಮನೆ ಯಲ್ಲಿ ಕೆಲವು ದಿವಸಗಳಾದರೂ ಕಳೆಯುವ ಮನಸು ಮಾಡಿ… Please..

ಸಂಸ್ಕೃತದ ಒಂದು ನುಡಿಗಟ್ಟಿನಂತೆ ” ಜನ್ಮ ಭೂಮಿ ಸ್ವರ್ಗ ಕ್ಕಿಂತ ಮಿಗಿಲು ‘” ಎಂಬ ಮಾತು ನೂರಕ್ಕೆ ನೂರರಷ್ಟು ಅಪ್ಪಟ ಸತ್ಯ…ಈ ಮಾತಿಗೆ  ಪ್ರಸಾದ್ ದಂಪತಿಗಳ ಕೃಷಿ ಬದುಕು ಒಂದು ಜೀವಂತ ಉದಾಹರಣೆ….

ಬರಹ :
ಪ್ರಬಂಧ ಅಂಬುತೀರ್ಥ
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

ಹೊಸರುಚಿ | ಹಲಸಿನ ಕಾಯಿ ಬೋಂಡಾ ರೆಸಿಪಿ – ಇದು ರುಚಿಕರ ಗ್ರಾಮೀಣ ಸ್ನ್ಯಾಕ್
February 15, 2026
6:32 AM
by: ದಿವ್ಯ ಮಹೇಶ್
ಜೀವನಪ್ರೀತಿ
February 15, 2026
6:21 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಅಂಕದ “ಸುರಕ್ಷತೆ”ಯಾ? ಬದುಕಿನ “ಸುರಕ್ಷತೆ”ಯಾ? – ಗ್ರಾಮೀಣ ಶಿಕ್ಷಣದ ಮಣ್ಣಿನ ಸತ್ವ ಕಳೆದುಕೊಳ್ಳದಿರೋಣ
February 15, 2026
5:54 AM
by: ಮಹೇಶ್ ಪುಚ್ಚಪ್ಪಾಡಿ
ಕಾಲದ ದೋಷವೇ..? ನಮ್ಮ ಮನಸ್ಸಿನ ದೋಷವೇ..?
February 10, 2026
7:23 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror