ಮಲೆನಾಡಿನ ಇಂದಿನ ಬಿಕ್ಕಟ್ಟುಗಳು ಮತ್ತು ಶಾಶ್ವತ ಪರಿಹಾರದ ದಾರಿಗಳು | ಮಲೆನಾಡಿನ ಉಳ್ಳವರ ಒತ್ತುವರಿ ಮತ್ತು ಬಡವರ ಜೀವನೋಪಾಯ ಸರಣಿ |

February 28, 2024
1:09 PM
ಮಲೆನಾಡಿನ ಇಂದಿನ ಬಿಕ್ಕಟ್ಟುಗಳು ಮತ್ತು ಪರಿಹಾರದ ದಾರಿಗಳ ಬಗ್ಗೆ ಬರೆದಿದ್ದಾರೆ ನಾಗರಾಜ ಕೂವೆ .

ಜಗತ್ತಿನ(World) ಎಲ್ಲಾ ಅವಘಡಗಳ ದುಷ್ಪರಿಣಾಮಗಳನ್ನು ಯಾವತ್ತೂ ಎದುರಿಸುವುದು ಬಡಜನರು(Poor People), ಕಾರ್ಮಿಕರು(Labourers), ತಳ ಸಮುದಾಯಗಳ ಜನರು( bottom communities), ಭೂರಹಿತರು(landless), ವಸತಿರಹಿತರು(homeless) ಮೊದಲಾದ ದುರ್ಬಲರು. ಶ್ರೀಮಂತರು(Rich) ಮತ್ತು ದೊಡ್ಡ ದೊಡ್ಡ ಭೂ ಹಿಡುವಳಿದಾರರು(Land Lords) ತಮ್ಮಲ್ಲಿರುವ ಹಣ ಮತ್ತು ಸಂಪತ್ತಿನಿಂದ ಏನೇ ಆದರೂ ಹೇಗೋ ಪಾರಾಗುತ್ತಾರೆ. ಇದಕ್ಕೆ ಸ್ಪಷ್ಟ ನಿದರ್ಶನವಾಗಿ ಮೂರ್ನಾಲ್ಕು ವರ್ಷಗಳ ಹಿಂದೆ ಮಲೆನಾಡಿನಲ್ಲಿ ಸಂಭವಿಸಿದ ಭೂಕುಸಿತವೇ ಇದೆ.

Advertisement
Advertisement

ಪಶ್ಚಿಮ ಘಟ್ಟದ(Western Ghats) ಕಾಡುಗಳು ಮತ್ತು ಅಲ್ಲಿನ ಜೀವವೈವಿಧ್ಯ ಉಳಿದರೆ ಮಾತ್ರ ಅಲ್ಲಿನ ಜನ ಬದುಕುಳಿಯಲು ಸಾಧ್ಯ. ಮುಂದೆಯೂ ಕೂಡಾ ಗಣಿಗಾರಿಕೆ ಮಾಡುತ್ತಿದ್ದರೆ, ಕಾಡು ಕಡಿದು ರೈಲ್ವೇ ಲೈನ್ ಹಾಕುತ್ತಿದ್ದರೆ, ರಾಸಾಯನಿಕ ಗೊಬ್ಬರಗಳನ್ನು ಸುರಿದು ಕೃಷಿ ಮಾಡುತ್ತಿದ್ದರೆ, ಕಳೆನಾಶಕ ಹೊಡೆದು ವೈವಿಧ್ಯಮಯ ಹಸಿರು ಹೊದಿಕೆಯನ್ನು ನಾಶ ಮಾಡುತ್ತಿದ್ದರೆ, ಕೀಟನಾಶಕ ಹೊಡೆದು ಹುಳುಗಳನ್ನು ಸಾಯಿಸುತ್ತಿದ್ದರೆ, ಹೆದ್ದಾರಿಯ ನೆಪದಲ್ಲಿ ಜೆಸಿಬಿಗಳಿಂದ ಮಣ್ಣು ತೆಗೆಯುತ್ತಿದ್ದರೆ ಮಲೆನಾಡಿಗರ ಬದುಕು ಮಾತ್ರವಲ್ಲ, ಇಡೀ ದಕ್ಷಿಣ ಭಾರತದ ಜನಜೀವನ ಇದರ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

Advertisement

ಇಂತಹ ಪರಿಸ್ಥಿತಿಯಲ್ಲಿ ಕಾಡು ಬೆಳೆಸಿದ್ದಕ್ಕೆ ಹಣ ಕೊಡುವ Payment for ecological services ಎನ್ನುವ ಪರಿಕಲ್ಪನೆ ಆಶಾಕಿರಣ. ಇದಕ್ಕೆ ಬೇಕಾದ ಸಂಪನ್ಮೂಲಗಳನ್ನು ಉದ್ಯಮಿಗಳು, ಕಂಪೆನಿಗಳು, ಪಶ್ಚಿಮ ಘಟ್ಟದ ಮೇಲೆ ಅವಲಂಬಿತವಾಗಿರುವ ಅದರಾಚೆಯ ನಾಗರಿಕರು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ನೌಕರರು ಮೊದಲಾದವರುಗಳ ಮೇಲೆ ‘ಪರಿಸರ ಸೇವೆಗಳ ಶುಲ್ಕ’ ಎಂದು ವಿಧಿಸಿ ತೆರಿಗೆ ರೂಪದಲ್ಲಿ ಸರ್ಕಾರ ಸಂಗ್ರಹಿಸಬೇಕು.

ಇವತ್ತು ಹೆದ್ದಾರಿ, ರೈಲುಮಾರ್ಗ, ಟೌನ್ ಶಿಪ್, ರೂಪ್ ವೇ, ಕೇಬಲ್ ಕಾರು, ಸುರಂಗ ಮಾರ್ಗ ಇತ್ಯಾದಿಗಳನ್ನು ಅಭಿವೃದ್ಧಿ ಎನ್ನಲಾಗುತ್ತಿದೆ. ಇವುಗಳಿಂದ ಶ್ರೀಮಂತರು, ಉದ್ಯಮಿಗಳು, ರಾಜಕಾರಣಿಗಳು ಮತ್ತು ಗುತ್ತಿಗೆದಾರರು ಮಾತ್ರ ಅಭಿವೃದ್ಧಿಯಾಗುತ್ತಿದ್ದಾರೆ. ‘ಹೆದ್ದಾರಿಯಾದರೆ ನಿಮ್ಮ ಬದುಕೇ ಬದಲಾಗುತ್ತದೆ. ಶಿಕ್ಷಣ, ವೈದ್ಯಕೀಯ, ವ್ಯಾಪಾರ ವಹಿವಾಟು ಚೆನ್ನಾಗಾಗಲಿದೆ’ ಎಂಬ ಭ್ರಮೆಯನ್ನು ಜನರಿಗೆ ತುಂಬಲಾಗಿದೆ. ವಾಸ್ತವದಲ್ಲಿ ಇಲ್ಲಿಯವರೆಗೆ ಹೆದ್ದಾರಿಗಳಾದ ಮಲೆನಾಡಿನಲ್ಲಿ ಪಟ್ಟಣಗಳಲ್ಲಿ ಅಂತಹದು ಏನು ಆಗಿಯೇ ಇಲ್ಲ! ವಾಸ್ತವದಲ್ಲಿ ಇಲ್ಲಿ ಯಾವ ಹೆದ್ದಾರಿಗಳೂ ಸ್ಥಳೀಯರ ಅನುಕೂಲಕ್ಕಾಗಿ ಆಗುತ್ತಿಲ್ಲ‌. ಇವತ್ತು ನಮ್ಮ ಮನೆಯ ಮುಂದೆ ಆಗುವ ಹೆದ್ದಾರಿಯ ಹಿಂದೆ ಜಾಗತಿಕ ಶಕ್ತಿಗಳಿದ್ದಾವೆ.

Advertisement

ಇವತ್ತು ಹೆದ್ದಾರಿ ನಿರ್ಮಾಣದಿಂದಾಗಿ ಒಂದು ಕಡೆ ಅಮೂಲ್ಯವಾದ ಜೀವವೈವಿಧ್ಯ ನಾಶವಾಗುತ್ತಿದ್ದರೆ, ಇನ್ನೊಂದು ಕಡೆ ಅಭಿವೃದ್ಧಿಯ ಹೂಳು ಸಣ್ಣ ರೈತರ ಜೀವನೋಪಾಯವನ್ನೇ ಕಸಿಯುತ್ತಿದೆ. ಕಾಡಂಚಿನ ಹಳ್ಳಿಗಳಿಗೆ ರಸ್ತೆ ಮಾಡುವ ಬಗೆಗಾಗಲಿ, ಇರುವ ರಸ್ತೆ ದುರಸ್ತಿ ಮಾಡಿ ಟಾರ್ ಹಾಕಿ ‘ಜನಪರ’ ವಾಗುವ ಬಗೆಗಾಗಲಿ ಜನಪ್ರತಿನಿಧಿಗಳಿಗೆ ಆಸಕ್ತಿಯೇ ಇಲ್ಲ. ಎಲ್ಲರಿಗೂ ಹೆಚ್ಚು ಹಣವಿರುವ ಹೆದ್ದಾರಿಯೆಂದರೇ ಪ್ರೀತಿ.

ಹೆದ್ದಾರಿಯಾಯಿತು ಅಂದಿಟ್ಟುಕೊಳ್ಳೋಣ. ನಾವು ಆ ಹೆದ್ದಾರಿಯಲ್ಲಿ ಓಡಾಡಲು ಕಾರು ತೆಗೆದುಕೊಳ್ಳಬೇಕೆಂದರೆ ನಮ್ಮಲ್ಲಿ ದುಡ್ಡಿರಬೇಕು. ದುಡ್ಡಿರಬೇಕೆಂದರೆ ಕೃಷಿ ಆದಾಯ ಚೆನ್ನಾಗಿರಬೇಕು. ಆದರೆ ಇವತ್ತು ತೋಟಗಳೆಲ್ಲಾ ರೋಗಗಳಿಂದ ತತ್ತರಿಸುತ್ತಿದೆ. ಜನರ ಜೀವನೋಪಾಯವೇ ಕಳೆದು ಹೋಗುತ್ತಿದೆ. ಈ ಸಂದರ್ಭದಲ್ಲಿ ಜನರ ಜೀವನ ಮಟ್ಟವನ್ನು ಉತ್ತಮಗೊಳ್ಳುವಂತೆ ಮಾಡಬೇಕಾದುದು ಅಭಿವೃದ್ಧಿಯೇ ಅಥವಾ ಹೆದ್ದಾರಿ ಅಭಿವೃದ್ಧಿಯೇ? ದೊಡ್ಡ ದೊಡ್ಡ ಯೋಜನೆಗಳ ಹಿಂದಿರುವ ಗುತ್ತಿಗೆದಾರರ ಲಾಭಿಗಳನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ.

Advertisement

ಇವತ್ತು ಮಲೆನಾಡಿನ ಯಾವುದೇ ಕಾಡು ನಡುವಿನ ಮುಖ್ಯ ರಸ್ತೆ ನೋಡಿದರೂ ವಾರಾಂತ್ಯದಲ್ಲಿ ವಿಪರೀತ ವಾಹನಗಳ ಸಾಲು, ಕರ್ಕಶ ಹಾರ್ನ್, ಡಿಜೆ, ಗದ್ದಲ, ಪ್ಲಾಸ್ಟಿಕ್ ತ್ಯಾಜ್ಯ, ಮಧ್ಯದ ತೊಟ್ಟೆಗಳು, ಗಾಜಿನ ಚೂರು, ತೀರ್ಥದ ಬಾಟಲಿ, ಪ್ರವಾಸಿಗರ ಮಲ-ಮೂತ್ರ, ವಾಂತಿ ಇತ್ಯಾದಿಗಳಿಂದ ತುಂಬಿ ತುಳುಕುತ್ತಿರುತ್ತದೆ. ಶಾಂತ ಪರಿಸರದ ಮಧ್ಯೆ ಮನುಷ್ಯನ ವಿಕೃತಿಯ ಗುರುತುಗಳು ಎಲ್ಲೆಲ್ಲೂ ಕಾಣಿಸುತ್ತದೆ. ಮಾಲಿನ್ಯ ಮಿತಿಮೀರಿದೆ. ಪ್ರವಾಸಿಗರಿಂದಾಗಿ ಇಲ್ಲಿನ ಕಾಡು, ನದಿ, ಬೆಟ್ಟಗಳಲ್ಲಾ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿದೆ. ಅದರ ದುಷ್ಪರಿಣಾಮಗಳು ಜನಜೀವನ ಮತ್ತು ವನ್ಯಜೀವಿಗಳ ಮೇಲಾಗುತ್ತಿದೆ. ಹಾಗಾಗಿ ಇವತ್ತು ಪ್ರವಾಸೋದ್ಯಮಕ್ಕೆ ಕಠಿಣ ನಿಯಮಗಳನ್ನು ಹಾಕಬೇಕಿದೆ.

ನಮ್ಮ ದೇಶದ ಈಶಾನ್ಯ ರಾಜ್ಯಗಳಿಗೆ ಯಾರೇ ಪ್ರವಾಸ ಹೋಗಬೇಕಾದರೂ, ಅವರು ಭಾರತೀಯರೇ ಆಗಿರಲಿ, ಸರ್ಕಾರದ ಅನುಮತಿ ಪತ್ರ ತೆಗೆದುಕೊಂಡೇ ಹೋಗಬೇಕು. ಜೊತೆಗೆ ಸೀಮಿತ ಕಾಲಮಿತಿಯೊಳಗೆ ಅಲ್ಲಿಂದ ವಾಪಸ್ಸು ಬರಬೇಕು. ಇದನ್ನು Inner Line Permit ಎನ್ನುತ್ತಾರೆ. ಇದನ್ನು ಪಶ್ಚಿಮ ಘಟ್ಟಗಳಿಗೂ ಅನ್ವಯಿಸಿ ಇಲ್ಲಿನ ಪರಿಸರವನ್ನು ಕಾಪಾಡಬೇಕಿದೆ. ಹವಾಗುಣ ಬಿಕ್ಕಟ್ಟಿನ ಭೀಕರ ದಿನಗಳು ಮುಂದೆ ನಮ್ಮನ್ನು ಕಾಡಲಿವೆ. ಒಂದು ಕಡೆ ಅನಿಶ್ಚಿತ ಹವಾಮಾನ, ಇನ್ನೊಂದು ಕಡೆ ಕೃಷಿಯ ನಷ್ಟ. ಭವಿಷ್ಯದ ದೃಷ್ಟಿಯಿಂದ ಗುತ್ತಿಗೆದಾರರ, ಗಣಿ ಉದ್ಯಮಿಗಳ, ಕಾರ್ಪೋರೇಟ್ ಗಳ, ರೆಸಾರ್ಟ್ ಗಳ, ಪ್ಲಾಂಟೇಶನ್ ಗಳ, ರಾಸಾಯನಿಕ ಕಂಪೆನಿಗಳ, ಧಾರ್ಮಿಕ ಉದ್ಯಮದ ಲಾಭಿಗಳನ್ನು ನಾವು ಇವತ್ತು ತುರ್ತಾಗಿ ಅರ್ಥಮಾಡಿಕೊಳ್ಳಬೇಕಿದೆ. ನಮ್ಮ ಕಾಡು, ಗುಡ್ಡ, ನದಿಗಳನ್ನು ಉಳಿಸಿಕೊಳ್ಳಬೇಕಿದೆ. ಭವಿಷ್ಯದ ಜನಾಂಗಕ್ಕಲ್ಲ, ನಾವು ಉಳಿಯಬೇಕೆಂದರೆ.

Advertisement

ಇವತ್ತು ಹೊರಗಿನ ಪ್ರಭಾವಿ ವ್ಯಕ್ತಿಗಳು ಇಲ್ಲಿ ನೂರಾರು ಎಕರೆಯ ಎಸ್ಟೇಟ್ ಗಳನ್ನು ಖರೀದಿಸುತ್ತಿದ್ದಾರೆ. ಹೀಗಿರುವಾಗ ಈಶಾನ್ಯ ರಾಜ್ಯಗಳಲ್ಲಿರುವಂತೆ ಪಶ್ಚಿಮ ಘಟ್ಟಕ್ಕೊಂದು ವಲಸೆ ನೀತಿ ಅತೀ ಅಗತ್ಯವಿದೆ. ಅಂದರೆ ಸ್ಥಳೀಯರನ್ನು ಹೊರತು ಪಡಿಸಿ ಹೊರಗಿನವರು ಬಂದು ಇಲ್ಲಿ ಜಮೀನು ತೆಗೆದುಕೊಳ್ಳಲು, ನೆಲೆಸಲು ನಿಷೇಧ ಹೇರಬೇಕು. ಮಲೆನಾಡಿನ ಜೀವಂತ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಶ್ರೀಮಂತರ ಒತ್ತುವರಿ ಭೂಮಿ ತೆರವು, ವಸತಿ ರಹಿತರು ಮತ್ತು ಭೂರಹಿತರಿಗೆ ಭೂಹಂಚಿಕೆ, Payment for ecological services, Inner Line Permit, ವಲಸೆ ನೀತಿ, ಕಾಡುತ್ಪನ್ನಗಳ ಮೌಲ್ಯವರ್ಧನೆ, ಸಂಶೋಧನಾ ಚಟುವಟಿಕೆಗಳಿಗೆ ಉತ್ತೇಜನ ಮೊದಲಾದವುಗಳನ್ನು ಜಾರಿಗೆ ತನ್ನಿ ಎಂದು ಸರ್ಕಾರಗಳನ್ನು ಇವತ್ತು ಮಲೆನಾಡಿಗರು ಒತ್ತಾಯಿಸಬೇಕಿದೆ.

ಇವೆಲ್ಲ ಜಾರಿಗೆ ಬಂದರೆ ಮಾತ್ರ ಹವಾಗುಣ ಬಿಕ್ಕಟ್ಟಿನ ಮುಂದಿನ ದಿನಗಳಲ್ಲಿ ಮಲೆನಾಡಿನ ಬಡವರು, ತಳ ಸಮುದಾಯಗಳ ಜನರು ಘನತೆಯಿಂದ ಬದುಕಬಹುದು ಹಾಗೂ ಪಶ್ಚಿಮ ಘಟ್ಟದ ಅಮೂಲ್ಯ ಜೀವಸಂಕುಲಗಳನ್ನೂ ಉಳಿಸಿಕೊಳ್ಳಬಹುದು. ಬಡಜನರನ್ನು ಅರಣ್ಯ ಸಂರಕ್ಷಣೆಯ ವಿರುದ್ಧ ಶ್ರೀಮಂತರು ಎತ್ತಿಕಟ್ಟುತ್ತಾ ತಮ್ಮ ಒತ್ತುವರಿ ಉಳಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಇವತ್ತು ನಾವು ತುರ್ತಾಗಿ ಅರ್ಥಮಾಡಿಕೊಳ್ಳಬೇಕು. ಈ ಎಲ್ಲಾ ನಮ್ಮ ನೈಜ ಸಮಸ್ಯೆಗಳಿಂದ ಜನರನ್ನು ಮರೆಮಾಚಿಸಲು ಜಾತಿ, ಧರ್ಮ, ದೇವರು, ಧಾರ್ಮಿಕ ಸಂಘರ್ಷ ಮೊದಲಾದ ಅನಗತ್ಯ ವಿಚಾರಗಳನ್ನು ಪಕ್ಷಗಳು ಮೆರೆಸುತ್ತಿವೆ. ಓಟು ಮತ್ತು ಅದರಿಂದ ದಕ್ಕುವ ಅಧಿಕಾರ ಮಾತ್ರ ಮುಖ್ಯವಾಗಿರುವ ರಾಜಕಾರಣಿಗಳು ಎಲ್ಲಾ ಕೋಮಿನ ಯುವಜನರ ಮನಸ್ಸುಗಳಿಗೆ ಧಾರ್ಮಿಕ ದ್ವೇಷವನ್ನು ತುಂಬುತ್ತಿದ್ದಾರೆ. ಈಗ ಎಚ್ಚರ ಅತೀ ಅಗತ್ಯ. ಭಾವನಾತ್ಮಕ ವಿಚಾರಗಳನ್ನು ಬಿಟ್ಟು ನಮ್ಮ ವಾಸಕ್ಕೆ ಬೇಕಾದ ಮನೆ, ಬದುಕಲು ಬೇಕಾದ ಕೃಷಿ ಭೂಮಿಗಾಗಿ, ನಮ್ಮ ಬದುಕಿನ ಅಗತ್ಯಗಳಾದ ಒಳ್ಳೆಯ ನೀರು, ಗಾಳಿ ಮತ್ತು ಆಹಾರವನ್ನೋದಗಿಸುವ ಪರಿಸರದ ಸಂರಕ್ಷಣೆಗಾಗಿ ಈ ಚುನಾವಣೆಯಲ್ಲಿ ಆಗ್ರಹಿಸೋಣ.

Advertisement
ಬರಹ
 ನಾಗರಾಜ ಕೂವೆ
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

20 ಕೃಷಿ ಉತ್ಪನ್ನಗಳ ರಫ್ತುಗಳಿಗೆ ಉತ್ತೇಜನ ನೀಡುವ ಯೋಜನೆ |
April 27, 2024
9:05 PM
by: ದ ರೂರಲ್ ಮಿರರ್.ಕಾಂ
Karnataka Weather | 27-04-2024 | ಮೋಡ- ಬಿಸಿಗಾಳಿ | ಮಳೆ ಸಾಧ್ಯತೆ ಕಡಿಮೆ |
April 27, 2024
3:21 PM
by: ಸಾಯಿಶೇಖರ್ ಕರಿಕಳ
ಕೋವಿ ಠೇವಣಾತಿ ಪ್ರಕರಣ | ಬೆಳ್ಳಾರೆ ಜಯಪ್ರಸಾದ್ ಜೋಶಿ ಹಾಗೂ ಇತರ 4 ರಿಟ್ ಅರ್ಜಿದಾರರ ಪರ ಹೈಕೋರ್ಟ್ ಆದೇಶ‌ |
April 27, 2024
2:15 PM
by: ದ ರೂರಲ್ ಮಿರರ್.ಕಾಂ
ಮಲೆನಾಡಗಿಡ್ಡ ಉಳಿಸುವ ಆಂದೋಲನಕ್ಕೆ ತೊಡಗುವ ಅನಿವಾರ್ಯತೆ ಇದೆ | ಯಾಕೆ ಗೊತ್ತಾ…?
April 25, 2024
11:48 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror