ಕೇಂದ್ರ ಸರ್ಕಾರ ಮನಸು ಮಾಡಿದರೆ ಅಡಿಕೆ ಬೆಳೆಗಾರರ ಕಾಪಾಡಬಹುದು…!

August 22, 2024
11:53 AM

ಕಳೆದ ವರ್ಷ ನಮ್ಮ ಮಲೆನಾಡಿನ ಭಾಗದ ಸಿಪ್ಪೆಗೋಟಿನ(Arecanut) ಮಾದರಿಗೆ ಕಟ್ಟ ಕಡೆಗೆ ಹದಿನೆಂಟು ಸಾವಿರಕ್ಕೆ ಕುಸಿದು ನಂತರ ಇನ್ನೂ ಕುಸಿದು ಈ ವರ್ಷ ಸಿಪ್ಪೆಗೋಟಿನ ದರ ಹದಿನೈದು ಹದಿನಾರು ಸಾವಿರದ ಸಮೀಪದಲ್ಲಿ ಹೋಯ್ದಾಡುತ್ತಿದೆ. ಬಹಳಷ್ಟು ಜನ ರೈತರು(Farmers) ಹೆಚ್ಚು ಕೆಲಸ ಇಲ್ಲದ ಹೆಚ್ಚು ಲಾಭದಾಯಕವಾದ ಸಿಪ್ಪೆಗೋಟು ಅಡಿಕೆ ಬೆಳೆಗಾರರ “ಶೇಷ” ದಲ್ಲಿ ಉಳಿವ “ಲಾಭಾಂಶ” ಎಂದು ತಜ್ಞ ಅಡಿಕೆ ಬೆಳೆಗಾರರು ಸಿಪ್ಪೆಗೋಟಿನ ಬಗ್ಗೆ ವಿಶ್ಲೇಷಣೆ ಮಾಡುತ್ತಾರೆ. ನಮ್ಮ ತೀರ್ಥಹಳ್ಳಿ ತಾಲ್ಲೂಕಿನಲ್ಲೇ ಕೆಲವರು ಕೆಂಪಡಿಕೆ ಮಾಡದೇ ಸಿಪ್ಪೆಗೋಟನ್ನೇ ಮಾಡುವವರಿದ್ದಾರೆ…!

ಸುಮಾರು ಕ್ವಿಂಟಾಲ್ ಗೆ ಇಪ್ಪತ್ತು ಸಾವಿರ ರೂಪಾಯಿ ಸಿಪ್ಪೆಗೋಟಿನ ಮಾದರಿ ಅಡಿಕೆಗೆ ದರ ಬಂದರೆ ನಮ್ಮ ತೀರ್ಥಹಳ್ಳಿ ಭಾಗದ ರಾಶಿ ಇಡಿ ಮಾದರಿಗಿಂತ ಲಾಭ ದಾಯಕ ಎನ್ನುತ್ತಾರೆ. ಆದರೆ ಈ ಬಾರಿಯ ಸಿಪ್ಪೆಗೋಟಿನ ದರ ಆಘಾತಕಾರಿಯಾಗಿದೆ. ಸಣ್ಣಪುಟ್ಟ ಮದ್ಯಮ ವರ್ಗದವರಿಂದ ಹಿಡಿದು ನೂರಾರು ಕ್ವಿಂಟಾಲ್ ಸಿಪ್ಪೆಗೋಟು ಆಗುವ (ಕೆಲ ದೊಡ್ಡ ಅಡಿಕೆ ಬೆಳೆಗಾರರ ಬಳಿ ಕೆಂಪಡಿಕೆ ಪಾಲಿಷರ್ ಇದ್ದೂ ಕೂಡ) ದೊಡ್ಡ ಜಮೀನ್ದಾರಿಗೆ ಕಳೆದ ವರ್ಷದ ದರ ಕ್ಕೆ ಹೋಲಿಸಿದರೆ ಈ ವರ್ಷ ಲಕ್ಷಾಂತರ ರೂಪಾಯಿ ಬೆಲೆ ನಷ್ಟ..!!

ಈ ಸಲ ಭಾರೀ ಮಳೆಗೆ ಮುಂಗೋಟಿನ ಕೊನೆ ಅಡಿಕೆ ಕಾಯಿ ಸಂಪೂರ್ಣ ಉದುರಿ ಹೋಗಿದೆ. ಮುಂದಿನ ವರ್ಷ ಈ ಮಳೆಗಾಲದ ಕೊಳೆಯ ಕಾರಣಕ್ಕೆ ಕೆಂಪಡಿಕೆಯೂ ಕಡಿಮೆ ಎಂದು ಮೇಲ್ನೋಟಕ್ಕೆ ಅಂದಾಜಾದರೂ ರಾಶಿ ಇಡಿ , ಸಿಪ್ಪೆಗೋಟಿನ ಬೆಲೆ ಪಾತಾಳದತ್ತ ಕುಸಿಯುತ್ತಿದೆ.!. ಅಡಿಕೆ ಮಾರಾಟ ತಜ್ಞರ ಪ್ರಕಾರ ಈ ಪಾರ್ಲಿಮೆಂಟ್ ಕೇಂದ್ರ ಚುನಾವಣಾ ಸಂದರ್ಭದಲ್ಲಿ ವಿದೇಶಗಳ ಕಳ್ಳ ಅಡಿಕೆ ಮ್ಯಾನ್ಮಾರ್ ಮೂಲಕ ಎಗ್ಗಿಲ್ಲದೇ ದೇಶದೊಳಗೆ ನುಗ್ಗಿದೆ.!. ದೆಹಲಿಯ ಮೂಲಕ ನಮ್ಮ ಮಲೆನಾಡು ಕರಾವಳಿ ದೊಡ್ಡ ದೊಡ್ಡ ಅಡಿಕೆ ಮಾರಾಟಗಾರರ ಮಂಡಿಗೆ ಈ ಕಳ್ಳ ಅಡಿಕೆ ಬಂದಿದೆಯಂತೆ.!.

ನಮ್ಮ ಶಿವಮೊಗ್ಗದ ಜಿಲ್ಲೆಯ ಸಾಗರದ ಎಪಿಎಂಸಿ ಯ ಪ್ರಮುಖ ಮಂಡಿಯೊಂದಕ್ಕೆ ನಲವತ್ತು ಟನ್ ಸಾಮರ್ಥ್ಯದ ದೊಡ್ಡ ಲಾರಿಯಲ್ಲಿ ಸುಮಾರು ಐವತ್ತು ಲಾರಿ ಸುಲಿದ ಸಿಪ್ಪೆಗೋಟು ಚಾಲಿ ಅಡಿಕೆ ಬಂದಿದೆಯಂತೆ…!. ಈ ಸುಲಿದ ಚಾಲಿ ಅಡಿಕೆಗೆ ಕೇವಲ ಇಪ್ಪತ್ತೆಂಟು ಸಾವಿರವಂತೆ‌..‌!. ಅದೂ ಮಲೆನಾಡಿನ ಅಡಿಕೆ ವ್ಯಾಪಾರಿಗಳ ಮಂಡಿಗೆ ನೇರ ಡೆಲವರಿ… ಈ ಸಲ ಗೌರಿ ಗಣಪತಿ ಹಬ್ಬಕ್ಕೂ ಯಾವುದೇ ಮಾದರಿಯ ಅಡಿಕೆ ಗೂ ದರ ಏರಿಕೆಯಾಗೋಲ್ಲ…! ಇದು ಆಘಾತಕಾರಿ ಬೆಳವಣಿಗೆ…

ನಮ್ಮ ಮಲೆನಾಡಿನ ಅಡಿಕೆ ಬೆಳೆಗಾರರು ಈ ಬಾರಿ ಭಾರಿ ಮಳೆಯಲ್ಲಿ ಕೊಳೆ ಏಟು ತಿಂದು ಹೈರಾಣಾಗಿದ್ದಾರೆ. ಈಗ ಅಡಿಕೆ ದರ ಕುಸಿತದ “ಗುದ್ದೇಟು” ಅಡಿಕೆ ಬೆಳೆಗಾರರನ್ನ ಮೇಲೇಳದಂತೆ ನೆಲಕಚ್ಚಿಸುತ್ತದೆ. ಹೀಗೆ ಹಿಂದೊಮ್ಮೆ ಅಡಿಕೆಗೆ ಎಂಬತ್ತು ಸಾವಿರ ದಾಟಿ ಒಂದು ಲಕ್ಷ ಕ್ಕೆ ಮುಟ್ಟುತ್ತದೆ ಎಂದು ಸದ್ದಾದಾಗ ಶ್ರೀಲಂಕಾ ಅಡಿಕೆ ಯ ಹೆಸರಿನಲ್ಲಿ ಮಲೆನಾಡಿಗೆ ಕೆಲವು ದೂರ್ತ ವ್ಯಾಪಾರಿಗಳು ಆಮದು ಮಾಡಿಕೊಂಡು ಅಡಿಕೆ ದರವನ್ನು ಕೆಳಕ್ಕೆ ಹಾಕಿತ್ತು. ಆಗ ವ್ಯಾಪಾರಿಗಳು ಈ ಶ್ರೀಲಂಕಾ ಕಾಡು ಅಡಿಕೆಯನ್ನ ಸುಲಿಸಿ ಅದಕ್ಕೆ ಕಾವಿ ಬಣ್ಣ ದಲ್ಲಿ ಅದ್ದಿ ನೆನಸಿ ಅದನ್ನು ಸಿಮೆಂಟ್ ಕಾಂಕ್ರೀಟ್ ಮಿಕ್ಸರ್ ನಲ್ಲಿ ಚೆನ್ನಾಗಿ ತಿರುಗಿಸಿ ಬಿಸಿಲಿನಲ್ಲಿ ಒಣಗಿಸಿ ಕೆಂಪು ಮಾಡಿ ಮಾರುಕಟ್ಟೆ ಗೆ ಬಿಟ್ಟಿದ್ದವು…

ಆಗಿನಿಂದ ಕೆಲ ದೂರ್ತ ವ್ಯಾಪಾರಿಗಳಿಗೆ ಕಳ್ಳ ಅಡಿಕೆಯನ್ನು ವಿದೇಶದಿಂದ ತರಿಸಿ ಅದನ್ನು ಹೆಂಗೋ ಕೆಂಪು ಮಾಡಿ ಮಾರಾಟ ಮಾಡುವ ಚಾಳಿ ಶುರುವಾಗಿ‌ ಅದೀಗ ಅತ್ಯಂತ ಆರೋಗ್ಯ ಕಾರಿ ಚೈತನ್ಯ ಕಾರಿ ಆಯುರ್ವೇದ ಔಷದೀಯ ಗುಣದ ಅಡಿಕೆಯನ್ನ “ಕ್ಯಾನ್ಸರ್ ಕಾರಕ ” ಹಣೆಪಟ್ಟಿ ಕಟ್ಟಿ ಅಡಿಕೆ ಯನ್ನು ಕಳಂಕಿತ ವಸ್ತುವನ್ನಾಗಿ ಮಾಡಿದೆ. ಸರ್ಕಾರ ಗಳು ಎಷ್ಟೇ ಈ ಆಮದು ತಡಿತೀವಿ ಎಂದರೂ ದೂರ್ತ ವ್ಯಾಪಾರಿಗಳು ಅದೆಂಗೋ ಅದ್ಯಾವುದೋ ಸಂದಿಯಿಂದ ಅಡಿಕೆಯನ್ನು ವಿದೇಶದಿಂದ ಆಮದು ಮಾಡಿಕೊಂಡು ದೇಶಿ ಅಡಿಕೆ ಬೆಳೆಗಾರರಿಗೆ ಪೆಟ್ಟು ನೀಡುತ್ತಿದೆ. ಏನೇ ಮಾಡಿದರೂ ಈ ದೂರ್ತ ಅಡಿಕೆ ಆಮದುದಾರರ ಕೈಮೇಲಾಗುತ್ತಿದೆ.

ಈಗಾಗಲೇ ದೇಶದ ಒಳಗೆ ಮೂಲೆ ಮೂಲೆಗೂ ಅಡಿಕೆ ವಿಸ್ತರಣೆ ಆಗಿದೆ. ಮಂಡಿಗಳಲ್ಲಿ ಎರಡು ಮೂರು ವರ್ಷಗಳ ಅಡಿಕೆ ದಾಸ್ತಾನು ಇದೆ…! ಹೀಗಿರುವಾಗ ಅಗ್ಗದ ವಿದೇಶಿ ಅಡಿಕೆ ಭಾರತೀಯ ಅಡಿಕೆ ಬೆಳೆಗಾರರಿಗೆ ಬಹಳ ದೊಡ್ಡ ನಷ್ಟ ಉಂಟುಮಾಡುತ್ತಿದೆ. ಅದರಲ್ಲೂ ನಮ್ಮ ಮಲೆನಾಡು ಕರಾವಳಿಯ ಸಾಂಪ್ರದಾಯಿಕ ಅಡಿಕೆ ಬೆಳೆ, ಮಳೆ ಕೊಳ ನಿರ್ವಹಣಾ ದೃಷ್ಟಿಯಿಂದ ಬಹಳ ತುಟ್ಟಿ…! ಹೀಗಾದರೆ ಮಲೆನಾಡು ಕರಾವಳಿಯ ಸಾಂಪ್ರದಾಯಿಕ ಅಡಿಕೆ ಬೆಳೆಗಾರರು ಏನು ಮಾಡಬೇಕು…? ಈ ವರ್ಷದ ಕೊಳೆ ನಷ್ಟ , ಆಮದಿನಿಂದ ಬೆಲೆ ನಷ್ಟ… ಅಡಿಕೆ ಬೆಲೆ ಏರಬಹುದು ಎಂದು ಆಸೆಯಿಂದ ಕೂತಿರುವ ಮಲೆನಾಡು ಕರಾವಳಿಯ ಅಡಿಕೆ ಬೆಳೆಗಾರರಿಗೆ ಮಳೆಗಾಲದ ಈ ಬಿಡುವಿನ ಹೊಳವಿನ ನಡುವೆ ಬೆಲೆ ಕುಸಿತದ ಕಾರ್ಮೋಡ ಕವಿದು ಕೂತಿದೆ…!.

ಬಹುಶಃ ಕೆಂಪಡಿಕೆ ಕಳೆದ ವರ್ಷದ ಆರಂಭದಲ್ಲಿ ಇದ್ದಂತೆ ಕ್ವಿಂಟಾಲ್ ಗೆ ನಲವತ್ತೈದು ಸಾವಿರಕ್ಕೆ ಬಂದು ನಿಲ್ಲಬಹುದು..‌ ಚಾಲಿ , ಸಿಪ್ಪೆಗೋಟು ಎಷ್ಟೇ ಏರಿದರೂ ಕಿಂಚಿತ್ತು ಬೆಲೆ ಏರಬಹುದು.. ‌ಈಗಿನ ದರಕ್ಕಿಂತ ಐದನೂರು ಸಾವಿರ ರೂ ಏರಬಹುದು. ಬಹುಶಃ ಏರಲಾರದು ಎಂಬುದು ಅಡಿಕೆ ನುರಿತ ಮಾರಾಟ ತಜ್ಞರ ಅಭಿಪ್ರಾಯ. ‌ಅಡಿಕೆ ಈ ಬಾರಿ ಲಾಂಗ್ ಜಂಪು ಹೈಜಂಪು ಮಾಡಲಾರದು… ಅಡಿಕೆ ವ್ಯಾಪಾರಿಗಳು ದಾಸ್ತಾನು ಬಗ್ಗೆ ಗಮನಿಸಿ ಬಂಡವಾಳ ಹೂಡಿ… ನಮ್ಮ ಮಲೆನಾಡು ಕರಾವಳಿಯ ಭಾಗದ ಸಂಸದರು ಶಾಸಕರು ಕೇಂದ್ರ ಸರ್ಕಾರದ ವಾಣಿಜ್ಯ ಸಚಿವಾಲಯ, ಆಮದು ರಫ್ತು ವಿಭಾಗವನ್ನು ನಿಯೋಗ ಕೊಂಡೊಯ್ದು ಬೇಟಿ ಮಾಡಿ‌ ಈ ಅಡಿಕೆ ಕಳ್ಳಸಾಗಣೆಕೆ ಗೆ ಒಂದು ಶಾಶ್ವತವಾದ ಬೇಲಿ ಕಟ್ಟಲು ಒತ್ತಾಯ ಮಾಡಲಿ ಎಂದು ಸಮಸ್ತ ಅಡಿಕೆ ಬೆಳೆಗಾರರ ಪರವಾಗಿ ಕೋರುತ್ತಿದ್ದೇನೆ.

ಕೇಂದ್ರ ಸರ್ಕಾರ ಕಾಶ್ಮೀರದಲ್ಲಿ ಅತ್ಯಂತ ಅಪಾಯಕಾರಿಯಾಗಿ ಪಾಕಿಸ್ತಾನ ಗಡಿಯಿಂದ ನುಸುಳುತ್ತಿದ್ದ ಭಯೋತ್ಪಾದಕರನ್ನ ಗಣನೀಯವಾಗಿ ತಡೆ ಹಿಡಿದಿದೆ. ಹಾಗೆಯೇ ಕೇಂದ್ರ ಸರ್ಕಾರ ಮನಸು ಮಾಡಿದರೆ ಮಲೆನಾಡು ಕರಾವಳಿಯ ಅಡಿಕೆ ಬೆಳೆಗಾರರ ಕಾಪಾಡಬಹುದು. ಸದಾ ಅಡಿಕೆ ಬೆಳೆಗಾರರ ಪ್ರದೇಶದ ಮತದಾರರು ಚಾಲ್ತಿ ಸರ್ಕಾರವನ್ನು ಪ್ರೋತ್ಸಾಹಿಸುತ್ತಾ ಬಂದಿರುವುದು ಗಮನಾರ್ಹ. ಈ ಪ್ರೀತಿ ಪ್ರೋತ್ಸಾಹಕ್ಕೆ ಚಾಲ್ತಿ ಕೇಂದ್ರ ಸರ್ಕಾರ ಋಣ ತೀರಿಸಿ ಕೃತಜ್ಞತೆ ಸಲ್ಲಿಸುವ ಕ್ರಿಯಾಧರ್ಮ ತೋರಿಸಲಿ ಎಂದು ಸಮಸ್ತ ಅಡಿಕೆ ಬೆಳೆಗಾರರ ಪರವಾಗಿ ಕೋರುತ್ತಿದ್ದೇನೆ.

ಬರಹ :
ಪ್ರಬಂಧ ಅಂಬುತೀರ್ಥ
ನಿಮ್ಮ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿ…


If the central government is willing, it can provide protection to Arecanut growers in the malenadu and coastal regions. It is important to recognize that the voters in these Arecanut growing areas have consistently supported the current government. It is time for the central government to repay this debt and demonstrate appreciation for the support and encouragement shown by the Arecanut growers.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

ಅಡಿಕೆ ರೋಗ ನಿಯಂತ್ರಣಕ್ಕೆ ಕೇಂದ್ರದ ಬೆಂಬಲ – ಕ್ಯಾ. ಚೌಟಗೆ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್ ಭರವಸೆ
August 23, 2026
7:58 PM
by: ದ ರೂರಲ್ ಮಿರರ್.ಕಾಂ
ಪಿಒಪಿ ಗಣಪತಿಗೆ ಬ್ರೇಕ್..? ಕರಾವಳಿಯ 90–95% ಪರಿಸರ ಸ್ನೇಹಿ ಮಾದರಿ ರಾಜ್ಯಕ್ಕೆ ಪಾಠ
August 23, 2026
12:18 PM
by: ದ ರೂರಲ್ ಮಿರರ್.ಕಾಂ
ಪಶ್ಚಿಮ ಘಟ್ಟ ಸಂರಕ್ಷಣೆ ಹೆಸರಿನಲ್ಲಿ ಕೃಷಿಕರಿಗೆ ನಿರ್ಬಂಧ ಬೇಡ – ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕರಿಸಲು ಆಗ್ರಹ
August 23, 2026
11:47 AM
by: ಮಿರರ್‌ ಡೆಸ್ಕ್‌
ಮುಂಗಾರು ಬೇಗನೆ ವಿದಾಯ ಹೇಳುತ್ತಿದೆಯೇ..? ಸೆಪ್ಟೆಂಬರ್‌ನಲ್ಲಿ ಮಳೆ ಕಡಿಮೆಯಾಗುವ ಮುನ್ಸೂಚನೆ..?
August 22, 2026
10:25 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror