Advertisement
ಸುದ್ದಿಗಳು

ವ್ಯಕ್ತಿಗೆ ಶಕ್ತಿ ತುಂಬಲು ಸಂಘಟನೆ ಮುಖ್ಯ | ರಾಘವೇಶ್ವರ ಶ್ರೀ

Share

ವ್ಯಕ್ತಿಯಲ್ಲಿ ಶಕ್ತಿ- ಧೈರ್ಯ ತುಂಬುವಲ್ಲಿ ಸಂಘಟನೆ ಮಹತ್ವದ ಪಾತ್ರ ವಹಿಸುತ್ತದೆ ಹಾಗೂ ನಮ್ಮನ್ನು ಸರಿದಾರಿಯಲ್ಲಿ ಕರೆದೊಯ್ಯಲು ಕೂಡಾ ಇದು ಪೂರಕ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.

ಗೋಕರ್ಣದ ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಅವರು ಮಂಗಳವಾರ ಗೇರುಸೊಪ್ಪ, ಮುಗ್ವಾ ಮತ್ತು ಅಪ್ಸರಕೊಂಡ ವಲಯಗಳಿಂದ ಆಗಮಿಸಿದ ಶಿಷ್ಯಭಕ್ತರಿಂದ ಶ್ರೀಗುರುಭಿಕ್ಷಾಸೇವೆ ಸ್ವೀಕರಿಸಿ ಶ್ರೀಸಂದೇಶ ನೀಡಿದರು.

ಸಮಾಜದ ಮುಂದೆ ಮನುಷ್ಯ ತಪ್ಪುಗಳನ್ನು ಎಸಗುವುದಿಲ್ಲ. ಮನುಷ್ಯ ಒಬ್ಬಂಟಿಯಾದಾಗ ಋಣಾತ್ಮಕ ಭಾವನೆಗಳು ಹೆಚ್ಚಿ ಭಯಪಡುತ್ತಾನೆ ಹಾಗೂ ಹೆಚ್ಚು ತಪ್ಪುಗಳನ್ನು ಮಾಡುತ್ತಾನೆ. ಇಂಥ ಸಂದರ್ಭದಲ್ಲಿ ಅಭಯ ನೀಡಲು ಸಂಘಟನೆ ಅಗತ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಹೊಣೆಗಾರಿಕೆ ಇಲ್ಲದಿದ್ದರೆ ನಾವೆಲ್ಲರೂ ಬೇಜವಾಬ್ದಾರಿಯುತ ನಡವಳಿಕೆ ಪ್ರದರ್ಶಿಸುತ್ತೇವೆ. ಆದ್ದರಿಂದ ಸಮಾಜ ಸ್ವಾಸ್ಥ್ಯದ ಹೊಣೆ ಹೊತ್ತು ಸೇವಾ ಮನೋಭಾವದಿಂದ ನಮ್ಮ ಕರ್ತವ್ಯ ನಿರ್ವಹಿಸಿ ಸಂಘಟನೆಯನ್ನು ಬಲಗೊಳಿಸಬೇಕು ಎಂದು ಸೂಚಿಸಿದರು. ಸಮಾಜದಲ್ಲಿ ಸಾಧನೆ- ಸೇವೆಗಳನ್ನು ಗುರುತಿಸದಿದ್ದರೆ, ಸಮಾಜದ ಸಂಕಷ್ಟಗಳಿಗೆ ಸ್ಪಂದಿಸದಿದ್ದರೆ ಅಂಥ ಸಂಘಟನೆ ನಿರರ್ಥಕ. ಸಮಾಜದ ಸಂಕಷ್ಟಗಳಿಗೆ ಶ್ರೀಪೀಠ ಸ್ಪಂದಿಸುವಂತೆ ಶ್ರೀಪೀಠದ ಕಾರ್ಯಗಳನ್ನೇ ಸಮಾಜದಲ್ಲಿ ಮಾಡುವ ಮೂಲಕ ನಮ್ಮ ಕಾರ್ಯಕರ್ತರು ಕೂಡಾ ಕಷ್ಟ ಸುಖಗಳಿಗೆ ಸ್ಪಂದಿಸಬೇಕು. ನೆಮ್ಮದಿ- ಶ್ರೇಯಸ್ಸು ಸಿಗುವುದು ಸೇವೆಯಿಂದ. ಕಷ್ಟದಲ್ಲಿರುವವರಿಗೆ ಪ್ರೀತಿ- ಕಾಳಜಿ ತೋರಿಸಬೇಕು ಎಂದು ಸಲಹೆ ನೀಡಿದರು.

ಇಂದು ಶಿಕ್ಷಕರ ದಿನ. ನಮಗೆ ಜೀವನ ಶಿಕ್ಷಣ ನೀಡುವ ಗುರುಗಳನ್ನು ಸ್ಮರಿಸುವ ದಿನವಾಗಿ ಆಚರಿಸಲಾಗುತ್ತದೆ. ಆದರೆ ವಾಸ್ತವವಾಗಿ ಭಾರತೀಯ ಸಂಸ್ಕೃತಿಯಲ್ಲಿ ನಮ್ಮ ದಿನ ಆರಂಭವಾಗುವುದೇ ಗುರುಸ್ಮರಣೆಯೊಂದಿಗೆ. ಪ್ರತಿದಿನವೂ ಗುರುಗಳನ್ನು ಪೂಜ್ಯಭಾವದಿಂದ ಕಾಣುವ ಸಂಸ್ಕೃತಿ ನಮ್ಮದು. ಒಂದರ್ಥದಲ್ಲಿ ಮಠ ಎನ್ನುವುದು ಇಡೀ ಸಮಾಜಕ್ಕೆ ಇರುವ ಶಾಲೆ. ಗಿಡವಾಗಿ ಬಗ್ಗದ್ದನ್ನು ಕೂಡಾ ಮಠವೆಂಬ ಶಾಲೆ ಬಗ್ಗಿಸುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ನಮ್ಮ ಗುರುಕುಲ ಪದ್ಧತಿಯನ್ನು ಮರೆತದ್ದೇ ಶಿಕ್ಷಣ ಕ್ಷೇತ್ರದಲ್ಲಿನ ತಳಮಳಗಳಿಗೆ ಕಾರಣ. ಇಂದಿನ ಶಿಕ್ಷಣ ಮಕ್ಕಳನ್ನು ಸರಿದಾರಿಯಲ್ಲಿ ಒಯ್ಯುವ ಬದಲು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಆದ್ದರಿಂದ ದೇಶದ ಭವಿಷ್ಯ ಉಜ್ವಲವಾಗಬೇಕಾದರೆ, ಮತ್ತೆ ಸಾಂಪ್ರದಾಯಿಕ ಶಿಕ್ಷಣದತ್ತ ನಾವು ಹೊರಳಬೇಕು. ಮಕ್ಕಳ ಸರ್ವಾಂಗೀಣ ವಿಕಾಸ ಶಿಕ್ಷಣದ ಗುರಿಯಾಗಬೇಕು ಎಂಬ ಉದ್ದೇಶದಿಂದಲೇ ಮಹತ್ವಾಕಾಂಕ್ಷಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಉದಯವಾಗಿದೆ ಎಂದು ಹೇಳಿದರು.

ಇಂದಿನ ಶಿಕ್ಷಣಕ್ಕೂ ವಾಸ್ತವ ಬದುಕಿಗೂ ಅಗಾಧ ಅಂತರ ಇದೆ. ಉದಾಹರಣೆಗೆ ರ್ಯಾಂಕ್ ಪಡೆದ ಎಲ್ಲ ವಿದ್ಯಾರ್ಥಿಗಳೂ ತಮ್ಮ ಜೀವನದ ಪರೀಕ್ಷೆಯಲ್ಲಿ ಜಯಶಾಲಿಗಳಾಗುತ್ತಾರೆ ಎಂಬ ಖಾತರಿ ಇಲ್ಲ. ಜೀವನಕ್ಕೆ ಉಪಯೋಗವಾಗದ ಇಂಥ ಶಿಕ್ಷಣದಿಂದ ಜೀವನ ಪರಿಪೂರ್ಣ ಎನಿಸುವುದಿಲ್ಲ ಎಂದು ವಿಶ್ಲೇಷಿಸಿದರು.

ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ನಿಕಟಪೂರ್ವ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಹೊನ್ನಾವರ ಮಂಡಲ ಅಧ್ಯಕ್ಷ ಆರ್.ಜಿ.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 15 ಮಂದಿಯನ್ನು ಸಾಧಕ ಸನ್ಮಾನದೊಂದಿಗೆ ಗೌರವಿಸಲಾಯಿತು. 10 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಗ್ರಾಮೀಣ ಭಾರತದ ಆದಾಯಕ್ಕೆ ಹಿನ್ನಡೆ – ಕಳೆದ ವರ್ಷ ಅರ್ಧದಷ್ಟು ಕುಟುಂಬಗಳ ಆದಾಯದಲ್ಲಿ ಏರಿಕೆಯಾಗಿಲ್ಲ

ನಬಾರ್ಡ್ ಸಮೀಕ್ಷೆಯ ಪ್ರಕಾರ, ಭಾರತದ ಗ್ರಾಮೀಣ ಕುಟುಂಬಗಳ ಪೈಕಿ ಶೇ.53ರಷ್ಟು ಕುಟುಂಬಗಳ ಆದಾಯ…

28 minutes ago

ಮುಂದುವರಿದ ಮಳೆ ಅಬ್ಬರ : ಆಗಸ್ಟ್‌ 4ರಂದು ದ ಕ -ಉಡುಪಿ-ಕಾಸರಗೋಡು ಜಿಲ್ಲೆಯ ಕೆಲವು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆಯ ಹಿನ್ನೆಲೆಯಲ್ಲಿ ಆಗಸ್ಟ್‌ 4ರಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು…

9 hours ago

ಯಡಕುಮೇರಿ ಹಳಿ ದುರಸ್ತಿ ಪೂರ್ಣ : ಮಂಗಳೂರು–ಬೆಂಗಳೂರು ರೈಲು ರೈಲು ಸಂಚಾರ ಪುನರಾರಂಭ

ಯಡಕುಮೇರಿ ಭೂಕುಸಿತ ಪ್ರದೇಶದಲ್ಲಿ ಮಣ್ಣು ತೆರವು ಹಾಗೂ ಹಳಿ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು,…

10 hours ago

ಹಗಲು ನಿದ್ರೆ ಅನೇಕ ರೋಗಗಳಿಗೆ ಆಹ್ವಾನ ; ಔಷಧಿಗಿಂತ ಉತ್ತಮ ಜೀವನಶೈಲಿಯೇ ಪರಿಹಾರ: ರಾಘವೇಶ್ವರ ಶ್ರೀ

ಹಗಲು ನಿದ್ರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ರಾಘವೇಶ್ವರ ಶ್ರೀ ಎಚ್ಚರಿಸಿದ್ದಾರೆ.…

11 hours ago

ಕೇರಳದಲ್ಲಿ ಭಾರಿ ಮಳೆ ಆರ್ಭಟ : ಮಲಪ್ಪುರಂನಲ್ಲಿ ಸರಣಿ ಭೂಕುಸಿತ , ಸಂಚಾರ ಸಂಪೂರ್ಣ ಸ್ಥಗಿತ

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ರಾಜ್ಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿ ವಾಹನ…

14 hours ago