ಉತ್ತಮವಾಗಿ ಮಳೆಯಾಗುತ್ತಿರುವ ಕಾರಣ ಚಾಮರಾಜನಗರ ಜಿಲ್ಲೆಯ ಅರಣ್ಯ ಪ್ರದೇಶವೆಲ್ಲ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ, ಮಳೆ ಹನಿಗಳಿಗೆ ಮೈಯೊಡ್ಡಿದ ಕಾನನ ಹೊಸ ಚಿಗುರಿನಿಂದ ಸಿಂಗಾರಗೊಂಡಂತಿದೆ, ಉಕ್ಕಿ ಹರಿಯುತ್ತಿರುವ ನದಿ-ತೊರೆಗಳು ಪರಿಸರದಲ್ಲಿ ಜೀವಂತಿಕೆ ವಾತಾವರಣ ಸೃಷ್ಠಿಸಿವೆ. ಪ್ರವಾಸಿಗರಿಗೆ ಹಸಿರುವ ಸ್ವರ್ಗ ಕಾಣುವಂತಾಗಿದೆ.…..ಮುಂದೆ ಓದಿ….
ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗಿರುವ ಕಾರಣ ಚಾಮರಾಜನಗರ ಜಿಲ್ಲೆಯ ವನ್ಯ ಜೀವಿಧಾಮಗಳಲ್ಲಿ ಹಚ್ಚ ಹಸಿರಿನ ವಾತಾವರಣ ನಿರ್ಮಾಣವಾಗಿದ್ದು, ಮಲೆ ಮಹದೇಶ್ವರ ವನ್ಯ ಜೀವಿಧಾಮ, ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ, ಬಂಡೀಪುರ ಮತ್ತು ಕಾವೇರಿ ವನ್ಯ ಜೀವಿಧಾಮ ಸೇರಿದಂತೆ ವಿವಿಧೆಡೆ ಹಸಿರ ಹಬ್ಬದ ಸಂಭ್ರಮ ಮನೆ ಮಾಡಿದೆ, ಎಲ್ಲಿ ನೋಡಿದರು ಹಚ್ಚ ಹಸಿರಿನ ರಂಗು ತುಂಬಿದ್ದು, ಬನವೆಲ್ಲ ನೋಡುಗರ ಮನಗಳಿಗೆ ಮುದ ನೀಡುತ್ತಿವೆ. ಮರದ ಎಲೆಗಳ ತುಂಬೆಲ್ಲ ತುಂತುರು ಹನಿಗಳೆ ತುಂಬಿರಲು, ಆನೆಗಳು, ಜಿಂಕೆ – ಸಾರಂಗಳು, ಮರ ಹತ್ತಿ ನಲಿಯುತ್ತಿರುವ ಕೋತಿಗಳು, ಬನದ ಸಿರಿಗೆ ಕುಣಿದಾಡುತ್ತಿರುವ ನವಿಲುಗಳು ಹಸಿರ ಬನದ ತುಂಬೆಲ್ಲಾ ಕಲರವ ಉಂಟು ಮಾಡಿವೆ, ಮೇವನ್ನರಸಿ ನಾಡಿಗೆ ಬಂದಿದ್ದ ಪ್ರಾಣಿ –ಪಕ್ಷಿಗಳೆಲ್ಲ ಕಾಡಿಗೆ ಸಂಭ್ರಮದಿಂದ ಹಿಂತಿರುತ್ತಿವೆ, ತುಂತುರು ಮಳೆಗೆ ತಂಪಾದ ಭೂಮಿ, ಮಂಜುವಿನಿಂದ ಮಸುಕಾದ ಬಾನು, ಬೆಟ್ಟಕ್ಕೆ ತಾಗಿದ ಮೋಡ ಮೈನವಿರೇಳಿಸುವಂತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಬಿಳಿಗಿರಿ ರಂಗಸ್ವಾಮಿ ದೇವಾಲಯ ಹಾಗೂ ಗೋಪಾಲಸ್ವಾಮಿ ದೇವಾಲಯಗಳು ಮಂಜಿನಿಂದ ವ್ಯಾಪಿಸಿದ್ದು, ಪ್ರವಾಸಿಗರು ಈ ಸೊಬಗನ್ನು ಕಂಡು ಕಣ್ತುಂಬಿಕೊಳ್ಳುತ್ತಿರುವುದು ವಿಶೇಷವಾಗಿದೆ.
ಪ್ರತಿ ವರ್ಷವು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಬರುತ್ತಿದ್ದೆವು, ಈ ಬಾರಿ ಉತ್ತಮ ಮಳೆಯಾಗಿರುವ ಕಾರಣ ಎಲ್ಲೆಡೆ ಹಚ್ಚ ಹಸಿರಿನ ವಾತಾವರಣ ನಿರ್ಮಾಣವಾಗಿದ್ದು, ಮನಸ್ಸಿಗೆ ಮುದ ನೀಡಿದೆ ಎಂದು ಪ್ರವಾಸಿಗರಾದ ಗೀತಾ ಶ್ರೀನಾಥ್ ಸಂತಸ ವ್ಯಕ್ತ ಪಡಿಸಿದರು.
ಮಳೆಯ ನಡುವೆ ಹಸಿರಿನ ಗಿರಿ ಬನಗಳನ್ನು ಕಾಣುವುದೇ ಕಣ್ಣಿಗೆ ಹಬ್ಬವಾಗಿದ್ದು, ವನ್ಯ ಜೀವಿಧಾಮಗಳೆಲ್ಲ ಜೀವ ಬಂದಂತೆ ಕಂಗೊಳಿಸುತ್ತಿವೆ, ಮಳೆಯಿಂದಾಗಿ ಜಿಲ್ಲೆಯ ಕಾಡಿನ ತುಂಬೆಲ್ಲಾ ಹಸಿರ ಹಬ್ಬದ ಸಡಗರ ಮನೆ ಮಾಡಿದೆ, ಸಫಾರಿ ಮಾಡುವ ಪ್ರವಾಸಿರಿಗೆ ಮೈನವಿರೇಳಿಸುವ ಅನುಭವವನ್ನು ಅರಣ್ಯ ಪ್ರದೇಶಗಳು ನೀಡುತ್ತಿವೆ ಎಂದು ಪ್ರವಾಸಿಗರಾದ ತ್ರಿಪುರಾಂತಕ ಹಾಗೂ ರುದ್ರೇಶ್ ಅಭಿಪ್ರಾಯಪಟ್ಟರು. …..ಮುಂದೆ ಓದಿ….
ಇತ್ತೀಚಿಗೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಕಾಡೆಲ್ಲ ಹಚ್ಚ ಹಸಿರಿನಿಂದ ಕೂಡಿದೆ, ವನ್ಯ ಜೀವಿಗಳಿಗೆ ಬೇಕಾದಂತಹ ಆಹಾರ ಲಭಿಸಿದ್ದು, ಕೆರೆ-ತೊರೆಗಳೆಲ್ಲ ತುಂಬಿ ಹರಿಯುತ್ತಿವೆ, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ವನ್ಯಜೀವಿಧಾಮಗಳಿಗೆ ಭೇಟಿ ನೀಡಿ, ಪ್ರಕೃತಿ ಸೊಬಗನ್ನು ಅನುಭವಿಸುತ್ತಿದ್ದಾರೆ ಎಂದು ಹುಲಿ ಸಂರಕ್ಷಿತ ಪ್ರದೇಶದ ಹುಲಿ ಯೋಜನೆಯ ನಿರ್ದೇಶಕ ಶ್ರೀಪತಿ ತಿಳಿಸಿದರು.
ಒಟ್ಟಾರೆಯಾಗಿ ಪ್ರಕೃತಿ ಸೊಬಗಿನಿಂದ ಕಂಗೊಳಿಸುತ್ತಿರುವ ವನ್ಯ ಜೀವಿಧಾಮಗಳು ನಗರ ಜೀವನದಿಂದ ಬೇಸತ್ತ ಮನಗಳಿಗೆ ಕಿಂಚಿತ್ತು ನೆಮ್ಮದಿ ನೀಡಿ, ಪ್ರಕೃತಿಯ ಮಡಿಲಲ್ಲಿ ಒಂದಷ್ಟು ಆನಂದದ ಕ್ಷಣಗಳನ್ನು ಕಳೆಯಲು ಅನುವು ಮಾಡಿಕೊಡುತ್ತಿರುವುದು ಸಂತಸದ ವಿಚಾರವಾಗಿದೆ.