ಈ ವರ್ಷ ದೇಶದ ಹಲವೆಡೆ ವಿಚಿತ್ರ ಹವಾಮಾನ ಬದಲಾವಣೆಗಳು ಕಂಡುಬರುತ್ತಿವೆ. ಋತುಚಕ್ರಗಳಲ್ಲಿ ಏರುಪೇರು ಉಂಟಾಗುತ್ತಿದ್ದು, ನಿರೀಕ್ಷಿತ ಸಮಯದಲ್ಲಿ ಮಳೆ ಬರದಿರುವುದು ರೈತ ಸಮುದಾಯವನ್ನು ಆತಂಕಕ್ಕೀಡು ಮಾಡಿದೆ. ಕೆಲವೆಡೆ ಅತಿವೃಷ್ಟಿ, ಮತ್ತೆ ಕೆಲವೆಡೆ ಮಳೆಯ ಕೊರತೆ ಎಂಬ ಪರಿಸ್ಥಿತಿ ಎದುರಾಗುತ್ತಿದೆ.
ತಜ್ಞರ ಪ್ರಕಾರ ಈ ಬಾರಿಯ ಹವಾಮಾನ ಅನಿಶ್ಚಿತತೆಗೆ ಪ್ರಮುಖ ಕಾರಣಗಳಲ್ಲಿ ಒಂದಾದ ‘ಎಲ್ ನೀನೋ’ ಪ್ರಭಾವ ಜಾಗತಿಕ ಮಟ್ಟದಲ್ಲಿ ಪರಿಣಾಮ ಬೀರುತ್ತಿದೆ. ಸ್ಪ್ಯಾನಿಷ್ ಭಾಷೆಯಲ್ಲಿ “ದಿ ಕ್ರೈಸ್ಟ್ ಚೈಲ್ಡ್” ಎಂಬ ಅರ್ಥ ಹೊಂದಿರುವ ಎಲ್ ನೀನೋ, ಪೆಸಿಫಿಕ್ ಮಹಾಸಾಗರದ ಮಧ್ಯ ಮತ್ತು ಪೂರ್ವ ಭಾಗದಲ್ಲಿ ಸಮುದ್ರದ ಮೇಲ್ಮೈ ನೀರು ಸಾಮಾನ್ಯಕ್ಕಿಂತ ಹೆಚ್ಚು ಬಿಸಿಯಾಗುವ ಸ್ಥಿತಿಯಾಗಿದೆ. ಈ ಸಂದರ್ಭ ಭಾರತದಲ್ಲಿ ಮುಂಗಾರು ದುರ್ಬಲಗೊಳ್ಳುವ ಸಾಧ್ಯತೆ ಹೆಚ್ಚಿದ್ದು, ಮಳೆ ಕೊರತೆ, ಅಧಿಕ ಉಷ್ಣಾಂಶ ಮತ್ತು ಬರದಂತಹ ಪರಿಸ್ಥಿತಿಗಳು ನಿರ್ಮಾಣವಾಗುತ್ತವೆ.
ಇದಕ್ಕೆ ವಿರುದ್ಧವಾಗಿ ‘ಲಾ ನೀನಾ’ ಎಂಬ ಹವಾಮಾನ ಚಕ್ರ ಕಾರ್ಯನಿರ್ವಹಿಸುತ್ತದೆ. ಸ್ಪ್ಯಾನಿಷ್ ಭಾಷೆಯಲ್ಲಿ “ಪುಟ್ಟ ಹುಡುಗಿ” ಎಂಬ ಅರ್ಥ ಹೊಂದಿರುವ ಲಾ ನೀನಾ ಸಂದರ್ಭದಲ್ಲಿ ಪೆಸಿಫಿಕ್ ಮಹಾಸಾಗರದ ಮೇಲ್ಮೈ ನೀರು ಸಾಮಾನ್ಯಕ್ಕಿಂತ ತಂಪಾಗಿರುತ್ತದೆ. ಈ ಪ್ರಕ್ರಿಯೆ ಸಾಮಾನ್ಯವಾಗಿ ಭಾರತದಲ್ಲಿ ಉತ್ತಮ ಮುಂಗಾರು ಹಾಗೂ ಹೆಚ್ಚಿನ ಮಳೆಗೆ ಪೂರಕವಾಗುತ್ತದೆ.
ಈ ರೀತಿಯ ಹವಾಮಾನ ವೈಪರೀತ್ಯಗಳು ಮಾನವ ಸೇರಿದಂತೆ ಎಲ್ಲಾ ಜೀವಿಗಳ ಬದುಕಿನ ಮೇಲೆ ಪರಿಣಾಮ ಬೀರುತ್ತಿವೆ. ವಿಜ್ಞಾನಿಗಳು ಮತ್ತು ಪರಿಸರ ತಜ್ಞರ ವರದಿಗಳ ಪ್ರಕಾರ, ವೃಕ್ಷನಾಶ, ಸಂಪನ್ಮೂಲಗಳ ಅತಿಯಾದ ದುರ್ಬಳಕೆ, ಪರಿಸರದ ಕಡೆಗಣನೆ ಹಾಗೂ ಅತಿಯಾದ ಉಪಭೋಗದ ಜೀವನಶೈಲಿಯೂ ಈ ಬದಲಾವಣೆಗಳಿಗೆ ಕಾರಣವಾಗಿವೆ.
ನಮಗೆ ದೊರೆಯುವ ಮಳೆನೀರು ಪ್ರಕೃತಿಯ ಅಪರೂಪದ ವರದಾನವಾಗಿದೆ. ಸಾಗರದ ಉಪ್ಪುನೀರು ಆವಿಯಾಗಿ ಮೋಡಗಳಾಗಿ ರೂಪುಗೊಂಡು, ನಂತರ ಸಿಹಿನೀರಾಗಿ ಭೂಮಿಗೆ ಮಳೆಯ ರೂಪದಲ್ಲಿ ಮರಳುತ್ತದೆ. ಈ ಜಲಚಕ್ರವೇ ಭೂಮಿಯ ಮೇಲಿನ ಜೀವಜಗತ್ತಿನ ಅಸ್ತಿತ್ವಕ್ಕೆ ಆಧಾರವಾಗಿದೆ.
ಆದರೆ ಇಂದು ಸುರಿಯುವ ಮಳೆಯ ಬಹುಪಾಲು ನೀರು ಯಾವುದೇ ಸಂಗ್ರಹಣೆಯಿಲ್ಲದೆ ಹರಿದು ಹೋಗುತ್ತಿದೆ. ಮಳೆಯ ನೀರನ್ನು ಭೂಮಿಯೊಳಗೆ ಇಂಗಿಸುವ ಪ್ರಯತ್ನಗಳು ಈಗ ಕಾಲದ ಅಗತ್ಯವಾಗಿವೆ. ಖಾಲಿ ಜಾಗಗಳಲ್ಲಿ 2x2x2 ಅಡಿ ಗಾತ್ರದ ಗುಂಡಿಗಳನ್ನು ತೋಡಿದರೆ ಸುಮಾರು 227 ಲೀಟರ್ ನೀರು ಸಂಗ್ರಹವಾಗಿ ಭೂಮಿಯೊಳಗೆ ಇಂಗಬಹುದು. ಸಾವಿರ ಇಂತಹ ಗುಂಡಿಗಳಲ್ಲಿ ಒಂದೇ ಮಳೆಯಲ್ಲಿ ಸುಮಾರು 2.27 ಲಕ್ಷ ಲೀಟರ್ ನೀರನ್ನು ಭೂಮಿಯೊಳಗೆ ಇಂಗಿಸಲು ಸಾಧ್ಯವಾಗುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಅದೇ ರೀತಿ ರಸ್ತೆ ಬದಿಯ ಚರಂಡಿಗಳು, ಖಾಲಿ ಜಾಗಗಳು, ಪಾಳು ಬಿದ್ದ ಭೂಮಿಗಳು ಹಾಗೂ ಮನೆಗಳ ಮೇಲ್ಛಾವಣಿಯಿಂದ ಹರಿದುಬರುವ ಮಳೆನೀರನ್ನು ಡ್ರಮ್ಗಳು ಅಥವಾ ಟ್ಯಾಂಕ್ಗಳಲ್ಲಿ ಸಂಗ್ರಹಿಸಿ ವಿವಿಧ ಉದ್ದೇಶಗಳಿಗೆ ಬಳಸಬಹುದು. ಇದರಿಂದ ಅಂತರ್ಜಲ ಮಟ್ಟ ಹೆಚ್ಚುವುದರ ಜೊತೆಗೆ ಭವಿಷ್ಯದ ನೀರಿನ ಬಿಕ್ಕಟ್ಟನ್ನು ತಗ್ಗಿಸಲು ಸಹಕಾರಿಯಾಗುತ್ತದೆ.
ಹವಾಮಾನ ಬದಲಾವಣೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಮಳೆನೀರು ಸಂರಕ್ಷಣೆ, ಜಲಮೂಲಗಳ ರಕ್ಷಣೆ ಹಾಗೂ ಪರಿಸರ ಸಂರಕ್ಷಣೆಯತ್ತ ಹೆಚ್ಚಿನ ಗಮನ ಹರಿಸಬೇಕಾಗಿದೆ. ಇಂದಿನ ನಮ್ಮ ಸಣ್ಣ ಪ್ರಯತ್ನಗಳು ಮುಂದಿನ ಪೀಳಿಗೆಗೆ ದೊಡ್ಡ ಆಶಾಕಿರಣವಾಗಬಹುದು.
ನಿವೃತ್ತ ಕೇಂದ್ರ ಸರ್ಕಾರಿ ಅಧಿಕಾರಿ (CAG ಕಚೇರಿ)
ವಿಶ್ವ ಬ್ಯಾಂಕ್ ಪುರಸ್ಕೃತ ಪರಿಸರವಾದಿ
‘ವಸಂತ್ ಮಹಲ್’, ನಂ. 3835/3, 2ನೇ ಅಡ್ಡ ರಸ್ತೆ,
ಉಮರ್ ಖಾಯಂ ರಸ್ತೆ, ತಿಲಕ್ ನಗರ,
ಮೈಸೂರು – 570001
ಮಳೆ ನೀರು ಕೊಯ್ಲು (Rain Water Harvesting) ಕುರಿತು ಯಾವುದೇ ಸಲಹೆ, ಮಾರ್ಗದರ್ಶನ ಅಥವಾ ಸಮಸ್ಯೆಗಳಿದ್ದಲ್ಲಿ ಸಂಪರ್ಕಿಸಿ:
📞 ವಸಂತಕುಮಾರ್ ಮೈಸೂರುಮಠ, ವಿಶ್ವ ಬ್ಯಾಂಕ್ ಪುರಸ್ಕೃತ ಪರಿಸರವಾದಿ , ಮೊಬೈಲ್: 98459 50440


