ಮಳೆಗಾಲ ಆರಂಭ | ಭತ್ತ ಬೆಳೆಯುವ ರೈತರಿಗೆ ಉಪಯುಕ್ತ ಸಲಹೆಗಳು

June 21, 2024
12:36 PM

ಕರಾವಳಿ(Coastal), ಮಲೆನಾಡು(Malenadu) ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು(Rain), ರೈತ(Farmer) ಮಂದಹಾಸ ಮೂಡಿದೆ. ಮಳೆ ಬಿರುಸು ಪಡೆಯುತ್ತಿದ್ದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೃಷಿ ಚಟುವಟಿಕೆಗಳು (Agricultural Activities) ಚುರುಕುಗೊಂಡಿವೆ. ಭತ್ತದ ಕೃಷಿಗಾಗಿ(Paddy Cultivation) ಗದ್ದೆ ಉಳುಮೆ, ಬೀಜ ಬಿತ್ತನೆ(Seeding), ಹಟ್ಟಿಗೊಬ್ಬರ(Cow Manure) ಇತ್ಯಾದಿ ಕೆಲಸ ಹರಡುವುದು ಕಾರ್ಯಗಳು ಆರಂಭಗೊಂಡಿವೆ. ಈ ಮಧ್ಯೆ ಕೃಷಿ ವಿಜ್ಞಾನ ಕೇಂದ್ರ ಭತ್ತದ ಬೆಳೆಗಳಲ್ಲಿ ಕೈಗೊಳ್ಳಬೇಕಾದ ಮುಂಜಾಗರೂಕತೆ ಕ್ರಮಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದೆ. ರೈತರು ಸಲಹೆಗಳನ್ನು ಪಾಲಿಸುವ ಮೂಲಕ ಬೇಸಾಯ ಕೈಗೊಳ್ಳಬಹುದು.

ಬೆಳೆ ರಕ್ಷಣೆ ಮಾಡಿಕೊಳ್ಳಬಹುದಾಗಿದೆ. ಕೇಂದ್ರ ರೈತರಿಗೆ ಶಿಫಾರಸು ಮಾಡಿರುವ ಕ್ರಮಗಳನ್ನು ಅನುಸರಿಸಿ ಬೆಳೆಯಲ್ಲಿ ಬರುವ ಅನೇಕ ಕೀಟ ಮತ್ತು ರೋಗಗಳನ್ನು ಕಡಿಮೆ ಮಾಡಿ ಇಳುವರಿಯನ್ನು ಹೆಚ್ಚಿಸಿಕೊಳ್ಳಬಹುದು ಎಂದು ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ಡಾ. ವೀರೇಂದ್ರ ಕುಮಾರ್ ಹೇಳಿದ್ದಾರೆ. ಆಸಕ್ತ ರೈತರು ಹೆಚ್ಚಿನ ಮಾಹಿತಿಗೆ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥರು, ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು, ಕೊಡಗು ಜಿಲ್ಲೆ ಇವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 08274-247274 ಅನ್ನು ಸಂಪರ್ಕಿಸಬಹುದು.

ಬೀಜೋಪಚಾರದ ವಿಧಾನ: ಪ್ರತಿ ಎಕರೆಗೆ ಶಿಫಾರಸು ಮಾಡಿದ 25-30 ಕೆಜಿ ಭತ್ತದ ಬೀಜವನ್ನು ತೆಗೆದುಕೊಂಡು 1:4 ಪ್ರಮಾಣದ ಉಪ್ಪಿನ ದ್ರಾವಣದಲ್ಲಿ (4 ಲೀ. ನೀರಿಗೆ 1 ಕೆ.ಜಿ ಉಪ್ಪು) ಅದ್ದಿ ಗಟ್ಟಿ ಮತ್ತು ಜೊಳ್ಳು ಬೀಜಗಳನ್ನು ಬೇರ್ಪಡಿಸಬೇಕು. ಗಟ್ಟಿಯಾದ ಬೀಜಗಳನ್ನು ಬೇರ್ಪಡಿಸಿದ ನಂತರ 2-3 ಬಾರಿ ತಣ್ಣೀರಿನಲ್ಲಿ ತೊಳೆದು ಸುಮಾರು 8-12 ಗಂಟೆಗಳ ಕಾಲ ಬಿತ್ತನೆ ಬೀಜವನ್ನು ನೀರಿನಲ್ಲಿ ನೆನಸಬೇಕು. ನೆನೆಸಿದ ಬೀಜಗಳನ್ನು ನೀರಿನಿಂದ ತೆಗೆದು ಎಕರೆಗೆ ಬೇಕಾದ 25-30 ಕೆಜಿ ಬಿತ್ತನೆ ಬೀಜಕ್ಕೆ 50-60 ಗ್ರಾಂ ಕಾರ್ಬೆಂಡೆಜಿಮ್ + ಮ್ಯಾಂಕೋಜೆಬ್ ಅಥವಾ ಟ್ರೈಸೈಕ್ಲೋಜೋಲ್( 2 ಗ್ರಾಂ) ಎಂಬ ಶಿಲೀಂದ್ರನಾಶಕವನ್ನು ಚೆನ್ನಾಗಿ ಮಿಶ್ರಣ ಮಾಡಿ ನೆರಳಿನಲ್ಲಿ ಒಣಗಿಸಬೇಕು. ಈ ರೀತಿ ಬೀಜೋಪಚಾರ ಮಾಡಿದ ಬಿತ್ತನೆ ಬೀಜವನ್ನು ಒಂದು ಚೀಲದಲ್ಲಿ ಗಟ್ಟಿಯಾಗಿ ಕಟ್ಟಿ ಮೊಳಕೆಯೊಡೆಯಲು ಇಟ್ಟು ನಂತರ ಸಸಿಮಡಿಗೆ ಉಪಯೋಗಿಸಬೇಕು.

ಬೆಳೆಗಳಿಗೆ ಬೆಂಕಿ ರೋಗ ಬಾಧೆ: ದೀರ್ಘಾವಧಿ ತಳಿಗಳ ನಾಟಿಯನ್ನು ಜುಲೈ ತಿಂಗಳ 2ನೇ ವಾರದೊಳಗೆ ಕಡ್ಡಾಯವಾಗಿ ಮಾಡಲೇಬೇಕು. ದೀರ್ಘಾವಧಿ ತಳಿಗಳನ್ನು ತಡವಾಗಿ ನಾಟಿ ಮಾಡಿದರೆ ಬೆಂಕಿ ರೋಗದ ಭಾದೆ ತೀವ್ರವಾಗುತ್ತದೆ. ಸಸಿಯನ್ನು ನಾಟಿ ಮಾಡುವುದಕ್ಕಿಂತ ಮುಂಚಿತವಾಗಿ ಸಸಿ ಮಡಿಯ ಪೈರುಗಳ ತುದಿ ಭಾಗವನ್ನು ಕತ್ತರಿಸಿ ನಂತರ ನಾಟಿಗೆ ಉಪಯೋಗಿಸಬೇಕು. ಇದರಿಂದ ಕಾಂಡಕೊರೆಯುವ ಹುಳುವಿನ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಶಿಫಾರಸು ಮಾಡಿದ ಪ್ರಮಾಣದ ರಸಗೊಬ್ಬರವನ್ನು ಮಾತ್ರ ಕೊಡಬೇಕು. ಪ್ರತಿ ಎಕರೆಗೆ 65 ಕೆಜಿ ಯೂರಿಯ, 150 ಕೆಜಿ ಶಿಲಾರಂಜಕ ಮತ್ತು 60 ಕೆಜಿ ಮ್ಯೂರೇಟ್ ಆಪ್ ಪೋಟ್ಯಾಷ್ ಮಾತ್ರ ಕೊಡಬೇಕು. ಶಿಫಾರಸ್ಸಿಗಿಂತ ಹೆಚ್ಚಿನ ಪ್ರಮಾಣದ ಯೂರಿಯವನ್ನು ಕೊಡಬಾರದು.ಹೆಚ್ಚಿನ ಪ್ರಮಾಣದ ಯೂರಿಯವನ್ನು ಕೊಟ್ಟರೆ ಬೆಂಕಿ ರೋಗ ಬರುವ ಸಂಭವವುಂಟು.

ಯಾವಾಗ ಗೊಬ್ಬರ ಕೊಡಬೇಕು: ಶಿಫಾರಸ್ಸಿನ 1/3 ಭಾಗ ಯೂರಿಯ, ಪೂರ್ತಿ ಶಿಲಾರಂಜಕ ಮತ್ತು ಅರ್ಧ ಭಾಗ ಪೋಟ್ಯಾಷ ಅನ್ನು ನಾಟಿ ಸಮಯದಲ್ಲಿ ಭೂಮಿಗೆ ಸೇರಿಸಬೇಕು. ನಾಟಿ ಮಾಡಿದ 30 ದಿನಗಳ ಮತ್ತೊಮ್ಮೆ ಯೂರಿಯ ಹಾಗೂ ಪೋಟ್ಯಾಷ್ ಗೊಬ್ಬರವನ್ನು ಕೊಡಬೇಕು. ನಾಟಿಗೆ 21 ರಿಂದ 28 ದಿನಗಳ ಸಸಿಗಳನ್ನು ಉಪಯೋಗಿಸಬೇಕು. ಪ್ರತಿ ಮೂರು ಬೆಳೆಗೆ ಒಂದು ಸಾರಿಯಂತೆ ಎಕರೆಗೆ 8 ಕೆಜಿ ಸತುವಿನ ಸಲ್ಫೇಟ ಅನ್ನು 25 ಕೆಜಿ ಮರಳಿನ ಜೊತೆಯಲ್ಲಿ ಮಿಶ್ರಣ ಮಾಡಿ ನಾಟಿ ಮಾಡುವ ಸಂದರ್ಭದಲ್ಲಿ ಮಣ್ಣಿಗೆ ಸೇರಿಸಬೇಕು ಮತ್ತು 2.0 ಕೆಜಿ ಬೋರಾಕ್ಸ್‍ ಅನ್ನು 5 ಕೆಜಿ ಕೊಟ್ಟಿಗೆ ಗೊಬ್ಬರದ ಜೊತೆಯಲ್ಲಿ ಮಿಶ್ರಣಮಾಡಿ ನಾಟಿಗೆ ಮುನ್ನ, ಇತರೆ ರಸಗೊಬ್ಬರಗಳ ಜೊತೆ ಬೆರೆಸದಂತೆ ಪ್ರತ್ಯೇಕವಾಗಿ ಮಣ್ಣಿಗೆ ಸೇರಿಸಿ. ಇದರಿಂದ ಭತ್ತದಲ್ಲಿ ಜಳ್ಳಿನ ಪ್ರಮಾಣ ಕಡಿಮೆಯಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ.

Advertisement

– ಅಂತರ್ಜಾಲ ಮಾಹಿತಿ

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಬಾಯಿಯ ಕ್ಯಾನ್ಸರ್ ಭೀತಿ ಕಡಿಮೆ ಮಾಡಲಿದೆಯೇ ‘ಇ-ಬೀಮ್’ ತಂತ್ರಜ್ಞಾನ? ಅಡಿಕೆ ಸಂಸ್ಕರಣೆಯಲ್ಲಿ ಹೊಸ ಮನ್ವಂತರ!
January 11, 2026
7:36 AM
by: ದ ರೂರಲ್ ಮಿರರ್.ಕಾಂ
ಅರಣ್ಯ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತನೆ : ಸಚಿವ ಕೃಷ್ಣ ಬೈರೇಗೌಡ
January 10, 2026
10:35 PM
by: ರೂರಲ್‌ ಮಿರರ್ ಸುದ್ದಿಜಾಲ
ದೇಹವು ಆರೋಗ್ಯವಾಗಿದೆ ಎನ್ನಲು ಈ ಸಂಕೇತವೇ ಸಾಕು..
January 10, 2026
10:33 PM
by: ರೂರಲ್‌ ಮಿರರ್ ಸುದ್ದಿಜಾಲ
ಹೊಸ ರೇಷನ್ ಕಾರ್ಡ್ ಅನುಮೋದನೆ ಪ್ರಾರಂಭ | 2026 ಮಾರ್ಚ್ ವರೆಗೆ ಅವಕಾಶ
January 10, 2026
10:30 PM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror