ಮಹಿಳೆಯ ಮಾತೃತ್ವವನ್ನು ಗೌರವಿಸುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯ ಎಂದು ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.
ಗೋಕರ್ಣದ ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಭಾನುವಾರ ನಡೆದ ಮಾತೃ ಸಮಾವೇಶದಲ್ಲಿ ಆಶೀರ್ವಚನ ನೀಡಿದ ಅವರು, ಮಹಿಳೆಯಾಗಿ ಹುಟ್ಟುವಾಗಲೇ ಆಕೆ ದೇವಿಯ ಸ್ವರೂಪವಾಗಿ ಹುಟ್ಟುತ್ತಾಳೆ. ಹೆಣ್ಣನ್ನು ನೋಯಿಸುವ ಹಕ್ಕು ಯಾರಿಗೂ ಇಲ್ಲ. ಅದು ಅತ್ಯಂತ ಪಾಪದ ಕಾರ್ಯ. ಆಕೆ ಕಣ್ಣೀರು ಇಟ್ಟರೆ ಅದು ಶಾಪ. ಮಹಿಳೆ ಸಂತೋಷವಾಗಿದ್ದರೆ ಮಾತ್ರ ಶ್ರೇಯಸ್ಸು ಎಂದು ಬಣ್ಣಿಸಿದರು.
ಜಗತ್ತಿನಲ್ಲಿ ಪುರುಷ ಏನು ಬೇಕಾದರೂ ಆಗಬಹುದು; ಆದರೆ ಮಾತೆ ಆಗಲಾರ. ಆದ್ದರಿಂದ ಪುರುಷ ಸಾಧಿಸುವ ಯಾವುದೇ ಯಶಸ್ಸಿನ ಕೀರ್ತಿ ಆತನನ್ನು ಹೊತ್ತು ಹೆತ್ತು ಸಲಹಿದ ಮಾತೆಗೆ ಸಲ್ಲಬೇಕು ಎಂದು ಹೇಳಿದರು. ಆದರೆ ಮಾತೃಶಕ್ತಿಯ ಸ್ವರೂಪ ಅಡಿಗಲ್ಲಿನಂತೆ. ತಾಯಿಯ ಋಣ ಯಾರೂ ತೀರಿಸಲಾಗದು. ಅದು ಅಗೋಚರವಾಗಿರುತ್ತದೆ. ತಾಯಿ ಎಲೆಮರೆಯ ಕಾಯಿ. ಆದಿಶಂಕರರು ಮಾತೆಯರಿಗೆ ನೀಡಿದ ಮಹತ್ವವನ್ನು ಮಾತೃಪಂಚಕದಲ್ಲಿ ಬಣ್ಣಿಸಿದ್ದಾರೆ. ತಾಯಿಯ ಹಾರೈಕೆಯ ಫಲವಾಗಿ ಮನುಷ್ಯ ಎತ್ತರಕ್ಕೆ ಬೆಳೆಯುತ್ತಾನೆ. ಆದರೆ ಪ್ರತಿಯಾಗಿ ಒಣಗಿದ ಅಕ್ಕಿಕಾಳು ಹಾಕುವ ಸ್ಥಿತಿ ನನ್ನದು ಎಂದು ಶಂಕರರು ವೇದನೆಯಿಂದ ಹೇಳಿದ್ದಾರೆ ಎಂದು ವಿವರಿಸಿದರು.ಸ್ತ್ರೀಯರಿಗೆ ಬಾಹುಬಲ ಇಲ್ಲದಿದ್ದರೂ ಭಾವ ಬಲ ಇದೆ. ಸ್ತ್ರೀಯರಿಗೆ ಕೋಮಲತ್ವ ಇದೆ. ಅದಕ್ಕೆ ಧಕ್ಕೆ ಬರಬಾರದು. ಯಾವುದೇ ವಯೋಮಾನದ ಮಹಿಳೆಯರನ್ನು ಗೌರವಿಸುವುದು ಸಮಾಜದ ಕರ್ತವ್ಯ ಎಂದರು.ಯಾವ ಮಕ್ಕಳೂ ಮಾತೆಯ ಬಗ್ಗೆ ಅವಜ್ಞೆ ಮಾಡಬಾರದು. ಮಾತೆಯರಿಗೆ ಕ್ಲೇಶ ಕೊಡಬಾರದು ಎಂದು ಸೂಚಿಸಿದರು.
ಹೊಸನಗರ ಶ್ರೀ ರಾಮಚಂದ್ರಾಪುರ ಮಠದಲ್ಲಿ ಚಾತುರ್ಮಾಸ್ಯ ಸಂದರ್ಭ ಗೋಕರ್ಣದ ಅಶೋಕೆಯಲ್ಲಿ ಮಾತೃ ಸಮಾವೇಶ ನಡೆಯಿತು. pic.twitter.com/iylBhocSO3
— theruralmirror (@ruralmirror) July 31, 2022
ಮಾತೃ ಸಮಾವೇಶ ಅಂಗವಾಗಿ ಛಾತ್ರಭಿಕ್ಷೆ ಎಂಬ ವಿಶೇಷ ಕಾರ್ಯಕ್ರಮ ನಡೆಯಿತು. ಇಲ್ಲಿ ಕಲಿಯುವ ವಟುಗಳಿಗೆ ಮಾತೆಯನ್ನು ಭಿಕ್ಷಾಸೇವೆ ನೆರವೇರಿಸಿದರು. ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಕಾರ್ಯದರ್ಶಿ ದೇವಿಕಾ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.

