ಹಳೆಗನ್ನಡ ಮತ್ತು ನಡುಗನ್ನಡ ಸಾಹಿತ್ಯದ ಅಭ್ಯಾಸಕ್ಕೆ ಪಾಂಡಿತ್ಯದ ನೆರವು ಅಗತ್ಯವಾಗಿ ಬೇಕಾಗುತ್ತದೆ. ಅಂತಹ ಪಾಂಡಿತ್ಯದೊಂದಿಗೆ ವಿಪುಲವಾದ ಆಕರಗಳನ್ನು ಬಳಸಿಕೊಂಡು ರಸದಾಳಿ ಕೃತಿ ರೂಪುಗೊಂಡಿದೆ. ಈ ಕೃತಿಯಲ್ಲಿನ ಪ್ರತಿಯೊಂದು ಲೇಖನದಲ್ಲಿಯೂ ಸೂಕ್ಷ್ಮ ಸಂವೇದನೆ ಗಮನಕ್ಕೆ ಬರುತ್ತದೆ ಎಂದು ಮುಂಬೈ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾಪಕ, ಸಾಹಿತಿ ಡಾ.ತಾಳ್ತಜೆ ವಸಂತ ಕುಮಾರ್ ಹೇಳಿದರು.
ಅವರು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಪುತ್ತೂರು ತಾಲೂಕು ಘಟಕ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ.ಶ್ರೀಧರ ಎಚ್.ಜಿ ರಚಿಸಿರುವ ‘ರಸದಾಳಿ’ ಎಂಬ ಸಂಶೋಧನಾ ಕೃತಿಯನ್ನು ಟೌನ್ ಬ್ಯಾಂಕ್ ಹಾಲ್ ನಲ್ಲಿ ಬಿಡುಗಡೆಗೊಳಿಸಿ ಭಾನುವಾರ ಮಾತನಾಡಿದರು.
ರಸದಾಳಿ ಎನ್ನುವ ಪದವೂ ರಸದಾಳಿ ಕಬ್ಬಿನಂತೆ ಸೊಗಸಾಗಿದೆ. ಈ ಕೃತಿಯಲ್ಲಿರುವ ಲೇಖನಗಳು ಸಾಹಿತ್ಯಿಕ ಮಹತ್ವವನ್ನು ಒಳಗೊಂಡಿವೆ. ವೈರಾಗ್ಯ ವಿಜಯದ ಪರಾಕಾಷ್ಟೆ ಮತ್ತು ಸೌಂದರ್ಯದ ಪರಾಕಾಷ್ಟೆಯಲ್ಲೂ ಉಂಟಾಗುತ್ತದೆ ಎನ್ನುವುದನ್ನು ಕೃತಿಯಲ್ಲಿ ಸುಂದರವಾಗಿ ಚಿತ್ರಿಸುವಲ್ಲಿ ಲೇಖಕ ಯಶಸ್ವಿಯಾಗಿದ್ದಾರೆ. ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಕ್ರೀಡೆಯ ವೈವಿಧ್ಯಗಳ ಬಗ್ಗೆ ತಿಳಿಸುವುದರಲ್ಲಿ ಶ್ರೀಧರ್ ಅವರ ಶ್ರಮ ಮೆಚ್ಚುವಂತದ್ದು. ರಸದಾಳಿ ಎಂಬ ಕಬ್ಬಿನ ಕುರಿತು ಕನ್ನಡ ಸಾಹಿತ್ಯದಲ್ಲಿ ಕಡಿಮೆ ಕೆಲಸವಾದ ವಿಷಯದ ಕುರಿತು ತಿಳಿಸುವ ಲೇಖಕರ ಪ್ರಯತ್ನ ಗಮನಾರ್ಹ. ಈ ಪುಸ್ತಕದಲ್ಲಿರುವ ಎಲ್ಲಾ ಲೇಖನಗಳು ಸ್ವಾರಸ್ಯಕರವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕೃತಿಕಾರ ಡಾ.ಶ್ರೀಧರ್ ಎಚ್.ಜಿ ಮಾತನಾಡಿ ತಾಳ್ಮೆ, ವಿವೇಚನೆ ಮತ್ತು ಪರಿಶ್ರಮವಿದ್ದರೆ ಸಂಶೋಧನಾ ಲೇಖನಗಳನ್ನು ಬರೆಯುವುದಕ್ಕೆ ಸಾಧ್ಯ. ಅಗಾಧವಾದ ಸಾಹಿತ್ಯ ಸಂಪತ್ತು ನಮ್ಮಲ್ಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಚಾರ್ಯ ಪ್ರೊ.ಎ.ವಿ ನಾರಾಯಣ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಶೇಷ ಪ್ರತಿಭೆ ನೇಹಾ ರೈ ಅವರನ್ನು ಅಭಿನಂದಿಸಲಾಯಿತು. ಬೆಳ್ಳಿಪ್ಪಾಡಿಯ ನಿವೃತ್ತ ಶಿಕ್ಷಣ ಸಂಯೋಜಕ ಪದ್ಮನಾಭ ಆಳ್ವ.ಕೆ ಕನ್ನಡ ಮಾಧ್ಯಮದಲ್ಲಿ ಹತ್ತನೇ ತರಗತಿಯಲ್ಲಿ ತಾಲೂಕಿನ ಇಬ್ಬರು ಸಾಧಕ ವಿದ್ಯಾರ್ಥಿಗಳಾದ ಸನತ್ ಕುಮಾರ್ ಮತ್ತು ಆಯಿಷತ್ ಶಮಾ ಇವರಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಿದರು. ಸಾಹಿತ್ಯ ಸಿಂಚನ – ಪುಸ್ತಕ ಹಬ್ಬದ ರುವಾರಿ ಪ್ರಕಾಶ್ ಕೊಡಂಕಿರಿ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಘಟಕದ ಅಧ್ಯಕ್ಷ ಐತ್ತಪ್ಪ ನಾಯಕ್ ಸ್ವಾಗತಿಸಿ, ಪ್ರೊ.ಹರಿನಾರಾಯಣ ಮಾಡಾವು ವಂದಿಸಿದರು. ವಿವೇಕಾನಂದ ಬಿ.ಎಡ್ ಕಾಲೇಜಿನ ಪ್ರಾಂಶುಪಾಲೆ ಶೋಭಿತಾ ಸತೀಶ್ ಕಾರ್ಯಕ್ರವನ್ನು ನಿರೂಪಿಸಿದರು.
ಜಗತ್ತು ಸದಾ ನಮ್ಮ ಜೊತೆಗಿರುತ್ತದೆ ಎಂಬ ನಿರೀಕ್ಷೆಗಿಂತ, ಪರಿಸ್ಥಿತಿ ಬದಲಾದರೂ ನಮ್ಮ ದಾರಿಯಲ್ಲಿ…
ಮಾರುಕಟ್ಟೆಗೆ ಯೋಗ್ಯವಲ್ಲದ ತೆಂಗಿನಕಾಯಿಯಿಂದ ಪಡೆದ ತೆಂಗಿನ ಎಣ್ಣೆಯನ್ನು ಬಳಸಿ ಸುಸ್ಥಿರ ವಿಮಾನ ಇಂಧನ…
ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು ಯುವ ಉದ್ಯಮಶೀಲತೆಗೆ ಮುಂದಿನ ದೊಡ್ಡ ಅವಕಾಶಗಳಾಗಿದ್ದು,…
ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಕಡಿತದ ಅವಧಿಯನ್ನು…
ಕರ್ನಾಟಕದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ…
ಮಂಗಳೂರಿನ ಅಶ್ಮಿತ್ ಎ.ಜೆ. ಅವರು ಝೀ ಕನ್ನಡದ ‘ಸರಿಗಮಪ 2026’ರ ವಿಜೇತರಾಗಿ ₹20…