ಒಂದು ಹಕ್ಕಿಯ ಫೋಟೋಗಾಗಿ 7 ತಿಂಗಳು ಕಾಯ್ದ ವ್ಯಕ್ತಿ..!, 60ನೇ ಹುಟ್ಟುಹಬ್ಬವನ್ನೂ ವಿಭಿನ್ನವಾಗಿ ಆಚರಿಸಿದರು..!

June 14, 2026
11:58 PM
ವಿಟ್ಲದ ಆರ್‌. ಕೆ. ಪೈ ಅವರು ತಮ್ಮ 60ನೇ ಹುಟ್ಟುಹಬ್ಬವನ್ನು ಮಕ್ಕಳಲ್ಲಿ ಪ್ರಕೃತಿ ಮತ್ತು ಪರಿಸರದ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯಕ್ರಮಗಳ ಮೂಲಕ ವಿಶಿಷ್ಟವಾಗಿ ಆಚರಿಸಿದರು. ಛಾಯಾಚಿತ್ರ ಪ್ರದರ್ಶನ, ಚಿತ್ರಕಲಾ ಸ್ಪರ್ಧೆ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮಗಳು ವಿಶೇಷ ಆಕರ್ಷಣೆಯಾಗಿದ್ದವು.

ಹುಟ್ಟುಹಬ್ಬ ಎಂದರೆ ಸಾಮಾನ್ಯವಾಗಿ ಕೇಕ್ ಕತ್ತರಿಸುವುದು, ಶುಭಾಶಯ ಸ್ವೀಕರಿಸುವುದು ಮತ್ತು ಕುಟುಂಬ-ಸ್ನೇಹಿತರೊಂದಿಗೆ ಸಂಭ್ರಮಿಸುವುದು ಸಾಮಾನ್ಯ. ಆದರೆ ವಿಟ್ಲದ ಉದ್ಯಮಿ ಹಾಗೂ ಖ್ಯಾತ ಪಕ್ಷಿ ಮತ್ತು ವನ್ಯಜೀವಿ ಛಾಯಾಗ್ರಾಹಕ ಆರ್‌. ಕೆ. ಪೈ (ಪಿ ರಾಧಾಕೃಷ್ಣ ಪೈ) ಅವರು ತಮ್ಮ 60ನೇ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸುವ ಮೂಲಕ ಗಮನ ಸೆಳೆದರು.

ತಮ್ಮ ಬದುಕಿನ ಮಹತ್ವದ ಮೈಲಿಗಲ್ಲಾದ 60ನೇ ವರ್ಷದ ಸಂಭ್ರಮವನ್ನು ಅವರು ಕೇವಲ ವೈಯಕ್ತಿಕ ಆಚರಣೆಯಾಗಿ ಸೀಮಿತಗೊಳಿಸದೆ, ಮಕ್ಕಳಲ್ಲಿ ಪ್ರಕೃತಿ, ಪಕ್ಷಿಗಳು ಮತ್ತು ಪರಿಸರದ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಂಡರು.

ಕಾರ್ಯಕ್ರಮದ ಅಂಗವಾಗಿ ಛಾಯಾಚಿತ್ರ ಪ್ರದರ್ಶನ, ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ, ಪರಿಸರ ಜಾಗೃತಿ ಕಾರ್ಯಕ್ರಮಗಳು ಹಾಗೂ ಪಕ್ಷಿಗಳ ಬಗ್ಗೆ ಅರಿವು ಮೂಡಿಸುವ ವಿಶೇಷ ಸಂವಾದಗಳು ಮಕ್ಕಳಿಗಾಗಿ ನಡೆಯಿತು. ಮಕ್ಕಳಲ್ಲಿ ಪ್ರಕೃತಿಯ ಬಗ್ಗೆ ಕುತೂಹಲ ಮತ್ತು ಪ್ರೀತಿಯನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆಯಿತು.

ಕಾರ್ಯಕ್ರಮದಲ್ಲಿ ಅರವಿಂದ ಕುಡ್ಲ ಅವರು ಮಕ್ಕಳಿಗೆ ಪಕ್ಷಿಗಳ ಜೀವನ, ಅವುಗಳ ಮಹತ್ವ ಮತ್ತು ಪರಿಸರ ಸಂರಕ್ಷಣೆಯ ಕುರಿತು ಸರಳ ಹಾಗೂ ಆಕರ್ಷಕ ರೀತಿಯಲ್ಲಿ ಮಾಹಿತಿ ನೀಡಿದರು. ಮಕ್ಕಳೊಂದಿಗೆ ನಡೆದ ಸಂವಾದ ಕಾರ್ಯಕ್ರಮ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು. ಇದೇ ವೇಳೆ ಪುಸ್ತಕ ಬಿಡುಗಡೆ ಕೂಡಾ ನಡೆಯಿತು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಬಾಲ್ಯದ ಆಸಕ್ತಿಯೇ ಇಂದಿನ ಸಾಧನೆ : ಆರ್‌. ಕೆ. ಪೈ ಅವರು ಬಾಲ್ಯದಿಂದಲೇ ಚಿತ್ರಕಲೆ, ಮೂರ್ತಿ ರಚನೆ ಮತ್ತು ಛಾಯಾಗ್ರಹಣದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರು. ನಂತರ ಉದ್ಯಮ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡರೂ, ಪ್ರಕೃತಿ ಮತ್ತು ಛಾಯಾಗ್ರಹಣದ ಮೇಲಿನ ಪ್ರೀತಿಯನ್ನು  ಕಳೆದುಕೊಳ್ಳಲಿಲ್ಲ. ಇಂದು ಪಕ್ಷಿ ಮತ್ತು ವನ್ಯಜೀವಿ ಛಾಯಾಗ್ರಹಣ ಕ್ಷೇತ್ರದಲ್ಲಿ ಅವರು ಗುರುತಿಸಿಕೊಂಡಿದ್ದಾರೆ. ವಿಶೇಷವಾಗಿ ಫೋಟೊ ಹಾಗೂ ವಿಡಿಯೋ ಆಕರ್ಷಿಸುತ್ತವೆ.

ಕರ್ನಾಟಕದ ವಿವಿಧ ಅರಣ್ಯ ಪ್ರದೇಶಗಳು, ಪಶ್ಚಿಮ ಘಟ್ಟ, ಕೂರ್ಗ್‌, ಕುದುರೆಮುಖ ಸೇರಿದಂತೆ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಅಪರೂಪದ ಪಕ್ಷಿಗಳು ಮತ್ತು ವನ್ಯಜೀವಿಗಳ ಚಿತ್ರಗಳನ್ನುಅವರು ಸೆರೆಹಿಡಿದಿದ್ದಾರೆ. ಸುಮಾರು 40 ದೇಶಗಳಿಗೂ ಸುತ್ತಾಡಿದ್ದಾರೆ.

ಒಂದು ಹಕ್ಕಿಯ ಚಿತ್ರಕ್ಕಾಗಿ 7 ತಿಂಗಳ ನಿರಂತರ ಪ್ರಯತ್ನ: ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಮಾತನಾಡುತ್ತಿದ್ದ ಅವರು, ಒಂದು ಅಪರೂಪದ ಹಕ್ಕಿಯ ಚಿತ್ರವನ್ನು ಸೆರೆಹಿಡಿಯಲು ಸತತ ಏಳು ತಿಂಗಳು ಪ್ರತೀ ಭಾನುವಾರ ನಿರ್ದಿಷ್ಟ ಸ್ಥಳಕ್ಕೆ ಪ್ರಯಾಣ ಬೆಳೆಸಿದ್ದ ಅನುಭವವನ್ನು ಹಂಚಿಕೊಂಡರು. ಕೊನೆಗೂ ಆ ಹಕ್ಕಿಯ ಚಿತ್ರ ಸೆರೆಹಿಡಿದ ಕ್ಷಣ ತಮ್ಮ ಛಾಯಾಗ್ರಹಣ ಜೀವನದ ಮರೆಯಲಾಗದ ಅನುಭವಗಳಲ್ಲಿ ಒಂದಾಗಿದೆ ಎಂದು ಹೇಳಿದರು. ಪ್ರತೀ ಫೋಟೊ ತೆಗೆದಿರುವ ಮಾಹಿತಿಯನ್ನು ಹೊಂದಿರುವ ಅವರು, ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದರು.

ಮೂರು ದಿನಗಳ ಛಾಯಾಚಿತ್ರ ಪ್ರದರ್ಶನ :  ಆರ್‌. ಕೆ. ಪೈ ಅವರ ಛಾಯಾಚಿತ್ರ ಪ್ರದರ್ಶನ ಮೂರು ದಿನಗಳ ಕಾಲ ನಡೆಯಲಿದ್ದು, ಪ್ರದರ್ಶನದಲ್ಲಿ ಪಕ್ಷಿಗಳು, ವನ್ಯಜೀವಿಗಳು ಮತ್ತು ಪ್ರಕೃತಿ ಸೌಂದರ್ಯವನ್ನು ಬಿಂಬಿಸುವ ಅನೇಕ ಆಕರ್ಷಕ ಚಿತ್ರಗಳು ಗಮನ ಸೆಳೆಯುತ್ತಿವೆ. ಪ್ರತಿಯೊಂದು ಚಿತ್ರವೂ ಪ್ರಕೃತಿಯೊಂದಿಗಿನ ಅವರ ಬಾಂಧವ್ಯ ಮತ್ತು ಸಹನೆಯ ಪ್ರತಿಬಿಂಬವಾಗಿದೆ. ವಿಟ್ಲದ ರಾಮಮಂದಿರದ ಸಭಾಭವನದಲ್ಲಿ ಈ ಪ್ರದರ್ಶನ ನಡೆಯುತ್ತಿದೆ. ಆಸಕ್ತರು ಭೇಟಿ ನೀಡಬಹುದು.

“ಪ್ರತಿಯೊಂದು ಛಾಯಾಚಿತ್ರವೂ ಪ್ರಕೃತಿ ಮತ್ತು ಆತ್ಮದ ನಡುವಿನ ಮೌನ ಸಂಭಾಷಣೆ” ಎಂಬ ಧೋರಣೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಆರ್‌. ಕೆ. ಪೈ ಅವರ ಈ ಹುಟ್ಟುಹಬ್ಬದ ಆಚರಣೆ, ಆಸಕ್ತಿಯನ್ನು ಮುಂದಿನ ತಲೆಮಾರಿಗೆ ಹಂಚುವ ಮಾದರಿ ಕಾರ್ಯಕ್ರಮವಾಗಿ ಮೂಡಿಬಂದಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Vittal-based entrepreneur and wildlife photographer P Radhakrishna Pai celebrated his 60th birthday in a unique way by organizing a photography exhibition, children’s drawing competition, and environmental awareness programs. The event aimed to inspire children to develop an interest in nature, birds, and conservation, making the celebration meaningful beyond personal festivities.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

₹1.11 ಕೋಟಿ ಮೌಲ್ಯದ ಕಳಪೆ ಗುಣಮಟ್ಟದ ಅಡಿಕೆ ವಶಕ್ಕೆ – ಮಹಾರಾಷ್ಟ್ರದ ಕೋಲ್ಡ್ ಸ್ಟೋರೇಜ್‌ನಲ್ಲೂ ಕಳಪೆ ಅಡಿಕೆ ದಾಸ್ತಾನು..!
June 14, 2026
10:34 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 14.06.2026 | ಜೂನ್ 20ರವರೆಗೆ ಕರಾವಳಿ-ಮಲೆನಾಡಿನಲ್ಲಿ ಇದೇ ವಾತಾವರಣ| ಎಲ್‌ನಿನೋ ಪ್ರಭಾವದ ನಡುವೆ ಮಳೆ ನೀರು ಸಂಗ್ರಹಕ್ಕೆ ರೈತರಿಗೆ ಸಲಹೆ
June 14, 2026
3:27 PM
by: ಸಾಯಿಶೇಖರ್ ಕರಿಕಳ
ತುಮಕೂರಿನಲ್ಲಿ ಅಡಿಕೆ ಕ್ರಾಂತಿ -ತೆಂಗಿನ ತೋಟಗಳ ಜಾಗದಲ್ಲಿ ಅಡಿಕೆ ಬೆಳೆ..! 94 ಸಾವಿರ ಹೆಕ್ಟೇರ್‌ ದಾಟಿದ ವಿಸ್ತೀರ್ಣ
June 14, 2026
12:52 PM
by: ದ ರೂರಲ್ ಮಿರರ್.ಕಾಂ
ಬ್ರಿಕ್ಸ್ ‘ಇಂದೋರ್ ಘೋಷಣೆ’ ಅಂಗೀಕಾರ – ಜಾಗತಿಕ ಕೃಷಿ ಸಹಕಾರಕ್ಕೆ ಹೊಸ ದಿಕ್ಕು
June 14, 2026
6:54 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror