ಗ್ರಾಮೀಣ ಆರ್ಥಿಕತೆಯ “ಸಹಕಾರಿ” ಸಂಘದ “ಮಾದರಿ” ಗುಟ್ಟು…!

August 15, 2025
7:07 AM

ಗ್ರಾಮೀಣ ಮಟ್ಟದ ಆರ್ಥಿಕ‌ ಸಹಕಾರ ಸಂಘಗಳ ಪ್ರಮುಖ ಚಟುವಟಿಕೆ ಎಂದರೆ ಸದಸ್ಯರಿಂದ ಠೇವಣಾತಿ ಸಂಗ್ರಹ ಮತ್ತು ಸದಸ್ಯರಿಗೆ ಸಾಲ ವಿತರಣೆ. ಸಹಕಾರ ಸಂಘದ ವ್ಯವಹಾರ ಸದಸ್ಯರೊಳಗೆ ಮಾತ್ರ ಇರಬೇಕು ಎಂಬುದು ತಾತ್ವಿಕ‌ ನಿಯಮ. ಸಂಘದ ಸದಸ್ಯರಾಗಬೇಕಾದರೆ ಸಂಘದ ಶೇರು ಪತ್ರ ಪಡೆಯುವುದೂ ಕಡ್ಡಾಯ. ಪ್ರತಿಯೋರ್ವ ಸದಸ್ಯನೂ ಕನಿಷ್ಟ ಒಂದು ಶೇರು ( ಪಾಲು ಬಂಡವಾಳ ಪತ್ರ) ಹೊಂದಿರಬೇಕಾದ್ದು ಅಪೇಕ್ಷಣೀಯ.
ಪಾಲು ಬಂಡವಾಳ ಎಂಬುದು ಸಂಘದ ಮೂಲಧನ. ಸಂಘ ಗಳಿಸಿದ ಲಾಭದಲ್ಲಿ ಪ್ರತಿಯೋರ್ವ ಸದಸ್ಯನಿಗೂ ಅವರವರು ಹೊಂದಿರುವ ಪಾಲು ಬಂಡವಾಳದ ಮೇಲೆ ನಿಯಮಗಳ ಅನುಸಾರ ಲಾಭಾಂಶ ಕೊಡಬೇಕಾಗ್ತದೆ. ಸಂಘ ನಷ್ಟದಲ್ಲಿ ಇದ್ದರೆ ಅಥವಾ ಕನಿಷ್ಟ ಲಾಭದಲ್ಲಿ ಇದ್ದರೆ ಲಾಭಾಂಶ ಘೋಷಣೆ ಇಲ್ಲ.

ಸಂಘ ನಷ್ಟದಲ್ಲಿ ಇದ್ದಾಗ ಅಥವಾ ಕನಿಷ್ಟ ಲಾಭದಲ್ಲಿ ಇರುವಾಗ ಹೆಚ್ಚು ಪಾಲುಬಂಡವಾಳ ಇದ್ದಷ್ಟೂ ಸಂಘಕ್ಕೆ ಲಾಭ. ಯಾಕೆಂದರೆ ಆ ಹಣಕ್ಕೆ ಪ್ರತಿಫಲ‌ ಕೊಡುವುದು ಕಡ್ಡಾಯವಲ್ಲ. ನಿರಖು ಠೇವಣಿಗಾದರೆ ಕಡ್ಡಾಯವಾಗಿ ಬಡ್ಡಿ ಹಣ ಕೊಡಲೇ ಬೇಕು. ಅದೇ ಸಂಘ ಗರಿಷ್ಟ ಲಾಭ ಗಳಿಸುವ ಸ್ಥಿತಿಯಲ್ಲಿ ಇದ್ದಾಗ ಪಾಲು ಬಂಡವಾಳದ ಪ್ರಮಾಣ ಕಡಿಮೆ ಮಾಡಿ , ನಿರಖು ಠೇವಣಿಯ ಪ್ರಮಾಣ ಹೆಚ್ಚಿರುವಂತೆ ನೋಡಿಕೊಳ್ಳುವುದು ಲಾಭ.

ನಿರಖು ಠೇವಣಿ ಮತ್ತು ಪಾಲು ಬಂಡವಾಳದ ಮೇಲೆ ಸದಸ್ಯರಿಗೆ ಇರುವ ವ್ಯತ್ಯಾಸ ಇದು. ನಿರಖು ಠೇವಣಿಯಲ್ಲಿ ನಿರ್ಧರಿತ ಬಡ್ಡಿದರ ಸಂಘ ಕೊಡಲೇ ಬೇಕು. ಸಂಘದ ಲಾಭಾಲಾಭದ ಪ್ರಶ್ನೆ ಇಲ್ಲ. ಪಾಲುಬಂಡವಾಳದ ಮೇಲೆ ಸಂಘ ಲಾಭದಲ್ಲಿ ಇದ್ದರೆ ಮಾತ್ರ ಲಾಭಾಂಶ ಕೊಟ್ಟರೆ ಸಾಕು.  ನಿರಖು ಠೇವಣಿಯ ಮೇಲೆ ಸಂಘ ಯಾವ ಬಡ್ಡಿದರ ಕೊಡುತ್ತದೆಯೋ ಅದಕ್ಕಿಂತಲೂ ಹೆಚ್ಚು ಲಾಭಾಂಶ ಪಾಲು ಬಂಡವಾಳದ ಮೇಲೆ ಘೋಷಿಸಿದರೆ ಸಂಘ ಸಧೃಢ ಅಂತಲೇ ಪರಿಗಣಿಸುವುದು. ಸದಸ್ಯರಿಗೂ ಅಂತಹ ಸಂದರ್ಭದಲ್ಲಿ ನಿರಖು ಠೇವಣಿ ಇಡುವುದಕ್ಕಿಂತಲೂ ಪಾಲು ಬಂಡವಾಳದ ಮೇಲೆ ಹಣ ಹೂಡುವುದು ಲಾಭದಾಯಕ. ಆದ್ದರಿಂದ ಗರಿಷ್ಟ ಲಾಭಾಂಶ ಘೋಷಣೆ ಸಂಘದ ಆಡಳಿತ ಮಂಡಳಿಯ ಪ್ರತಿಷ್ಟೆಯ ವಿಷಯವಾಗಿ ಬಿಡ್ತದೆ.

ವಾಸ್ತವದಲ್ಲಿ ಸಹಕಾರ ಸಂಘದಲ್ಲಿ ಸದಸ್ಯರು ಒಂದಕ್ಕಿಂತಲೂ ಹೆಚ್ಚು ಪಾಲು ಬಂಡವಾಳ ಪತ್ರ ಹೊಂದುವುದು ಸಾಲ ಪಡೆದುಕೊಂಡಾಗ ಮಾತ್ರ. ಸಂಘದ ಆರಂಭದ ಕಾಲದಲ್ಲಿ ಸಂಘ ದುರ್ಬಲವಾಗಿರುವುದು ಸಹಜ. ಆದ್ದರಿಂದ ಸಂಘ ಸದಸ್ಯರಿಂದ ಕಡ್ಡಾಯವಾಗಿ ಹೆಚ್ಚುವರಿ ಪಾಲು ಬಂಡವಾಳ ಪಡೆದುಕೊಳ್ತದೆ. ಸದಸ್ಯರು ಸಾಲ ಪಡೆದುಕೊಳ್ಳ ಬೇಕಾದರೆ ಸಾಲದ ಮೊತ್ತದ ಮೇಲೆ ಕನಿಷ್ಟ ಪಾಲು ಬಂಡವಾಳ ಇರಲೇ ಬೇಕು ಅಂತ ನಿಯಮ ,ಈ ಕಾರಣಕ್ಕಾಗಿ, ಸಂಘ ಮಾಡುತ್ತದೆ.

ಸಂಘದ ಆಡಳಿತ ಮಂಡಳಿಗೆ ಸ್ವಪ್ರತಿಷ್ಟೆಯೇ ಮುಖ್ಯವಾದಾಗ ಕೃತಕವಾಗಿ ವಾಸ್ತವ ಸಾಮರ್ಥ್ಯಕ್ಕಿಂತಲೂ ಹೆಚ್ಚು ಲಾಭಾಂಶ ಘೋಷಣೆಯ ಪ್ರಯತ್ನಕ್ಕಿಳಿಯುತ್ತದೆ. ಇದಕ್ಕಾಗಿ ಅದು ಸಂಘದ ಪಾಲು ಬಂಡವಾಳದ ಪ್ರಮಾಣವನ್ನು ಇಳಿಸುವ ಯತ್ನ ಮಾಡುತ್ತದೆ. ಇದರಲ್ಲಿ ಅನೇಕಾನೇಕ ವಿಧಾನಗಳು ಇವೆ. ಒಬ್ಬೊಬ್ವರದ್ದು ಒಂದೊಂದು ತಂತ್ರ. ಸಾಲಕ್ಕಾಗಿ ಹೊಂದಿರಬೇಕಾದ ಪಾಲು ಬಂಡವಾಳ ಪತ್ರದ ಪ್ರಮಾಣ ಇಳಿಸುವುದು,ಸದಸ್ಯರು ಹೊಂದುವ ಪಾಲು ಪತ್ರದ ಒಟ್ಟು ಮೊತ್ತದ ಮೇಲೆ ಮಿತಿ ಹೇರುವುದು,ಸದಸ್ಯರು ಹೊಂದಿರುವ ಪಾಲು ಪತ್ರದ ಸಂಪೂರ್ಣ ಮೊತ್ತಕ್ಕೆ ಲಾಭಾಂಶ ಕೊಡದೇ ಇರುವುದು…….., ಹೀಗೇ ಅನೇಕಾನೇಕ ತಂತ್ರಗಳಿವೆ. ಈ ದಾರಿ ಆಡಳಿತ ಮಂಡಳಿ ಹಿಡಿದಾಗ ಲಾಭಾಂಶ ಘೋಷಣೆಯನ್ನು ತೀವ್ರವಾಗಿ ಏರಿಸಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ( ಪಕ್ಷದಲ್ಲಿ…?) ಪ್ರತಿಷ್ಟಿತ ಅಂತ ಅನಿಸಿಕೊಳ್ತದೆ.

ಕೆಲವೊಮ್ಮೆ ಸಹಕಾರ ಕ್ಷೇತ್ರದ ನಾಯಕರುಗಳೂ ಈ ತಂತ್ರಕ್ಕೆ ಬಲಿ ಬೀಳ್ತಾರೆ. ಈ ಮಾದರಿ ಕೃತಕವಾಗಿ ಹೆಚ್ಚಿಸಿದ ಲಾಭಾಂಶ ಘೋಷಣೆಯನ್ನು ” ಮಾದರಿ” ಅಂತ ಇತರರಿಗೆ ಬಣ್ಣಿಸುವುದೂ ಉಂಟು. ಈ ತಂತ್ರಗಳ ಅರಿವು ಇಲ್ಲದ ಇತರ ಸಹಕಾರಿಗಳು ತಾವು ಹಿನ್ನಡೆಯಲ್ಲಿದ್ದೇವೇನೋ ಅಂತ ನಿರಾಶರಾಗುವುದೂ ಉಂಟು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ರಮೇಶ್‌ ದೇಲಂಪಾಡಿ

ರಮೇಶ್‌ ದೇಲಂಪಾಡಿ ಅವರು ಕೃಷಿಕರು. ಪ್ರಯೋಗಶೀಲ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ. ಅಡಿಕೆ, ತೆಂಗು, ತಾಳೆ, ರಬ್ಬರ್‌ ಇವರ ಪ್ರಮುಖ ಕೃಷಿ. ಅಡಿಕೆ ಬೇರುಹುಳ, ಅಡಿಕೆ ಹಳದಿ ಎಲೆರೋಗ ಸೇರಿದಂತೆ ಕೃಷಿ ಸಂಬಂಧಿತ ವಿಚಾರಗಳಲ್ಲಿ ಹೆಚ್ಚು ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ

ಕರಾವಳಿಗೆ ವಾಡಿಕೆ ಮಳೆ, ಮಲೆನಾಡು ದಾಟದ ಮುಂಗಾರು ಮೋಡ..!
August 25, 2026
12:13 PM
by: ದ ರೂರಲ್ ಮಿರರ್.ಕಾಂ
ಅಡಿಕೆಯ ಭವಿಷ್ಯ ಈ ತೀರ್ಪಿನಲ್ಲಿದೆಯೇ..? ಗುಟ್ಕಾ ಬೇರೆ, ಅಡಿಕೆ ಬೇರೆ ? ಸುಪ್ರೀಂ ಕೋರ್ಟ್ ಮುಂದೆ ಇರುವ ದೊಡ್ಡ ಪ್ರಶ್ನೆಗಳು..
August 20, 2026
3:57 PM
by: ದ ರೂರಲ್ ಮಿರರ್.ಕಾಂ
ಕಾಡು ಪ್ರಾಣಿಗಳ ಹಾವಳಿ: ಕೃಷಿಕರು ಪಾಠ ಕಲಿಯದಿದ್ದರೆ ಕೃಷಿ ಭೂಮಿಯೇ ಉಳಿಯದು
August 17, 2026
8:07 PM
by: ದ ರೂರಲ್ ಮಿರರ್.ಕಾಂ
ಪುತ್ತೂರಿಗೆ ಪುತ್ತಿಲ? ಪುತ್ತೂರಿನ ರಾಜಕೀಯದ ಹೊಸ ವ್ಯಾಕರಣ
July 19, 2026
9:41 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror