ತರಕಾರಿ ಕೃಷಿ ಮಾಡುತ್ತೀರಾ ? ಯಶಸ್ವಿಯಾಗಲು ಈ ಪಟ್ಟಿ ನೋಡಿ…

September 28, 2020
9:02 AM
ಮ್ಮ ಮನೆಗೆ ನಮ್ಮದೇ ತರಕಾರಿ – ಈ ಮೂಲಕ ಆರೋಗ್ಯವಂತ ಬದುಕು. ಹೀಗಾಗಿ ಸ್ವತ: ತರಕಾರಿ ಕೃಷಿ ಮಾಡಿ ಅನ್ನದ ಬಟ್ಟಲಲ್ಲಿ  ಸಮೃದ್ಧತೆಯನ್ನು  ಕಾಣುವವರ ಸಂಖ್ಯೆ ಈಗ ಹೆಚ್ಚಾಗಿದೆ. ಹಾಗಿದ್ದರೆ ತರಕಾರಿ ಕೃಷಿ ಯಾವಾಗ, ಯಾವುದು  ಮಾಡಬೇಕು ಎನ್ನುವುದು  ಪ್ರಶ್ನೆ. ಇದಕ್ಕಾಗಿಯೇ ಕೃಷಿಕ ಶಿವಪ್ರಸಾದ್‌ ವರ್ಮುಡಿಯವರು ತರಕಾರಿ ಪಂಚಾಂಗ ಮಾಡಿದ್ದಾರೆ. ತರಕಾರಿ ಬೀಜ ಬಿತ್ತನೆಗೆ ಯಾವಾಗ ಸಕಾಲ ಎಂದು ತಿಳಿಸಿದ್ದಾರೆ.
ಶಿವಪ್ರಸಾದ್‌ ವರ್ಮುಡಿ
ಮನೆಯಲ್ಲಿ  ಬೆಳೆದ ತರಕಾರಿಯಿಂದ ಆರೋಗ್ಯ ವೃದ್ದಿಸುವುದು  ಖಚಿತ. ಆದರೆ ತರಕಾರಿ ಕೃಷಿಯಲ್ಲಿ ಯಶಸ್ಸು ಗಳಿಸುವುದಕ್ಕೂ ಕೆಲವೊಂದು ವಿಧಾನಗಳನ್ನು  ಅಳವಡಿಸಿಕೊಂಡರೆ ಯಶಸ್ಸು ಸಾಧ್ಯವಿದೆ ಎನ್ನುತ್ತಾರೆ ಶಿವಪ್ರಸಾದ್‌ ವರ್ಮುಡಿ.
ಎಪ್ರಿಲ್‌ ತಿಂಗಳ 20ನೇ ತಾರೀಕಿನ ನಂತರ ಬರುವ ಅಮವಾಸ್ಯೆಯ ಹಿಂದೆ ಮುಂದಾಗಿ ಶನಿವಾರ ಬುಧವಾರ (ಮಿ/ತಿಥಿ ಬಿಟ್ಟು) ಗೊಬ್ಬರಗಳಿಂದ ಮಣ್ಣು ಹದಮಾಡಿದ ಏರು ಮಡಿಗಳಲ್ಲಿ ಎರಡರಿಂದ ಮೂರು ಇಂಚು ಆಳದಲ್ಲಿ ಈ ಕೆಳಗಿನ ತರಕಾರಿ ಬೀಜಗಳನ್ನು ಬಿತ್ತುವುದು. ನೀರು ಖಂಡಿತಾ ಹಾಕಲೇಬಾರದು. ಮಳೆ ಬಂದು ಅದರಷ್ಟಕ್ಕೆ ಸ್ವಾಭಾವಿಕವಾಗಿ ಹುಟ್ಟಬೇಕು.

ತರಕಾರಿ ಬೀಜ ಸೋರೆ , ಪಡುವಲ, ದಾರಳೆ, ಋಷಿಕೇಶ ದಾರಳೆ, ಹಾಗಲ, ಅಲಸಂಡೆ, ಕುಂಬಳ, ಚೀನಿಕಾಯಿ. (ಬೆಂಡೆ ಹಾಕಬೇಡಿ)

ಮೇ ತಿಂಗಳ ಕೊನೆಗೆ ಬರುವ ಅಮವಾಸ್ಯೆಯ ಅಕ್ಕಪಕ್ಕ ಮಿ/ತಿಥಿ ಬಿಟ್ಟು ಶನಿವಾರ/ಬುಧವಾರದಂದು ಬೆಂಡೆ ಬೀಜ ಬಿತ್ತಿ.

ಮಳೆಗಾಲ ಬಂದ ತಕ್ಷಣ ಬೇಸಿಗೆಯ ಬದನೆ ಗಿಡಗಳ ಗೆಲ್ಲುಗಳನ್ನು ಸವರಿ, ಬುಡ ಬಿಡಿಸಿ ಗೊಬ್ಬರ ಕೊಡಿ. ಸಮೃದ್ಧ ಬೆಳೆ ಖಚಿತ.

ಜೂನ್‌ ಕೊನೆಯ ವಾರ/ ಜುಲೈ ಮೊದಲನೇ ವಾರ ಬರುವ ಅಮವಾಸ್ಯೆ (ಆರ್ದ್ರಾ ನಕ್ಷತ್ರ) ಮುಳ್ಳು ಸೌತೆ ಬೀಜ ಬಿತ್ತುವುದು.

ಜುಲೈ ಕೊನೆಯ ವಾರ/ ಆಗಸ್ಟ್‌ ಮೊದಲವಾರ ಬರುವ ಆಟಿ ಅಮವಾಸ್ಯೆ ಹತ್ತಿರ ಸೌತೆ, ಕುಂಬಳ ಚೀನಿಕಾಯಿ ಬೀಜ ಬಿತ್ತುವುದು.ಬಸಳೆ ನೆಡುವುದು.

ಮೇಲಿನ ದಿನವೇ ಬದನೆ ಬೀಜ ಬಿತ್ತುವುದು. ಅಕ್ಟೋಬರ್ ನಲ್ಲಿ ನೆಡಲು ತಯಾರಿಗಾಗಿ.

ಆಗಸ್ಟ್‌ ಕೊನೆಗೆ ತೊಂಡೆ ಬಳ್ಳಿ ನೆಡುವುದು/ ಬಳ್ಳಿ ಕತ್ತರಿಸುವುದು.

ಅಕ್ಟೋಬರ್‌ 20ರಿಂದ 30ರ ಅಂದಾಜು ಬದನೆ ಗಿಡ ನೆಡುವುದು.

ನವೆಂಬರ್‌ ಕೊನೆಯ ವಾರ ಬೆಂಡೆ ಬೀಜ ಬಿತ್ತುವುದು.

ನವೆಂಬರ್‌ ಕೊನೆಯ ವಾರ/ ಡಿಸೆಂಬರ್‌ ಮೊದಲ ವಾರ ಆಟಿ ಸೌತೆ ಮಾಡಿದ ಸಾಲನ್ನು ಹರಡಿ, ಕೊಚ್ಚಿ ಹರಿವೆ ಬೀಜ ಬಿತ್ತುವುದು.

ಡಿಸೆಂಬರ್‌ ಕೊನೆಯ ವಾರ ಅಲಸಂಡೆ, ಪಡುವಲ, ಹಾಗಲ, ದಾರಳೆ, ಸಾಲು ಕಣಿ ಮಾಡಿದ ಬೀಜ ಬಿತ್ತುವುದು.

ಫೆಬ್ರವರಿ 25/30 ಅಂದಾಜು ಸೌತೆಕಾಯಿ, ಕುಂಬಳ, ಸೋರೆ, ಚೀನಿಕಾಯಿ, ಮುಳ್ಳುಸೌತೆ, ಬೆಂಡೆ ಬೀಜ ಬಿತ್ತುವುದು.

ಎಪ್ರಿಲ್‌ ಕೊನೆಯ ವಾರ ಮೇ ಮೊದಲವಾರ ಅಲಸಂಡೆ, ಮುಳ್ಳುಸೌತೆ, ಸೌತೆ, ಬೆಂಡೆ ಬೀಜ ಬಿತ್ತುವುದು.

 

ವಿಶೇಷ ಸೂಚನೆ
ಎಲ್ಲಾ ಬೀಜ ಬಿತ್ತುವ ದಿನ “ಮಿ”ಯಿಂದ ಅಂತ್ಯಗೊಳ್ಳುವ ದಿನ ಬಿಡಿ. (ಸಪ್ತಮಿ, ಅಷ್ಟಮಿ, ನವಮಿ…) ವಾರ : ಶನಿವಾರ, ಬುಧವಾರ ಬೀಜ ಬಿತ್ತನೆಗೆ ಅತ್ಯಂತ ಯೋಗ್ಯ. ಇವಿಷ್ಟು ಅನುಸರಿಸಿದರೆ ಬೆಳೆ ಸಮೃದ್ಧ, ರೋಗ ಬಾಧೆ ಕಡಿಮೆ. ನೆಲಬಸಳೆ, ಗೆಡ್ಡೆ, ತರಕಾರಿ ಜೊತೆಯಲ್ಲಿರಲಿ.

 

ವರ್ಮುಡಿ ಶಿವಪ್ರಸಾದರ  ತರಕಾರಿ ಗೈಡ್ :
ನಾಲ್ಕು ಮಂದಿ ಸದಸ್ಯರ ಕುಟುಂಬದ ಅಗತ್ಯಕ್ಕೆ  ತರಕಾರಿ ಗಿಡ / ಬಳ್ಳಿ ಎಷ್ಟು ನೆಡಬೇಕು ?
1. ಬೆಂಡೆ – 10
2. ಅಲಸಂಡೆ – 4
3. ಬದನೆ – ಗುಳ್ಳ 2 ; ಉದ್ದ- 2
4. ತೊಂಡೆ – 2
5. ಬಸಳೆ – 1
6. ನೆಲ ಬಸಳೆ – 4′ ×1′
7. ಸೌತೆ – 4 ( 6′ ×1′)
8. ಚೀನಿಕಾಯಿ – 2 ( hand polination reqd)
9. ಹಾಗಲ – 1
10. ಕುಂಬಳ – 1
11. ಹೀರೆಕಾಯಿ – 2
12. ಪಡುವಲ – 1
13. ಸೊರೆಕಾಯಿ – 1
14. ಟೊಮೆಟೊ – 2
15. ಗಾಂಧಾರಿ ಮೆಣಸು – 2
 ಗೊಬ್ಬರ ತಯಾರಿ ಹೇಗೆ ?
ಗೊಬ್ಬರ ತಯಾರಿ ವಿಧಾನ : ( ಜಾನುವಾರು ಇಲ್ಲದವರಿಗೆ )
ಒಂದು ಕಿಲೋ ನೆಲಗಡಲೆ ಹಿಂಡಿಗೆ 8 ಲೀಟರ್ ನೀರು ಬೆರೆಸಿ ಕದಡಬೇಕು. ಕನಿಷ್ಠ 12 ದಿನ ಅದನ್ನು ಹಾಗೇ ಬಿಟ್ಟು ಕೊಳೆಸಬೇಕು. ಅನಂತರ ಅದರಿಂದ 2-3 ಲೀಟರ್ ಗೊಬ್ಬರ ನೀರು ತೆಗೆದು ಬಳಸಬಹುದು. ಅಷ್ಟೇ ನೀರನ್ನು ತುಂಬಿಸಿಡಿ. ಹೀಗೆ 3-4 ಬಾರಿ ಮಾಡಬಹುದು. ಅನಂತರ ಹೊಸ ಪಾಕ ಬಳಸಿ. ಚಿಕ್ಕ ಗಿಡಕ್ಕೆ ಕಾಲು ಲೀಟರ್ ಗೊಬ್ಬರ ನೀರು ಮೂರು ದಿನಕ್ಕೊಮ್ಮೆ. ಫಲ ಕೊಡುವುದಕ್ಕೆ ಒಂದು ಲೀಟರ್ ಬೇಕು.  ಜಾನುವಾರು ಇದ್ದವರು ಸೆಗಣಿಯನ್ನು 12 ದಿನ ಇದೇ ರೀತಿ ಕೊಳೆಸಿ ಗೊಬ್ಬರ ನೀರನ್ನು ಗಿಡಕ್ಕೆ ಹಾಕಬೇಕು.
ಹೀಗೂ ಮಾಡಬಹುದು : 
ಎಪ್ರಿಲ್ 30 ರಿಂದ  ಮೇ 8 ; ಮೇ 15 ರಿಂದ 17 – ಈ ದಿನಗಳಲ್ಲಿ ಸೋರೆಕಾಯಿ , ಪಡುವಲಕಾಯಿ , ಹೀರೆಕಾಯಿ , ಹಾಗಲ ,  ಅಲಸಂಡೆ ಮುಂತಾದ ಬಳ್ಳಿ ತರಕಾರಿ ಒಣ ಬೀಜಗಳನ್ನು ಮಣ್ಣಿನ ದಿಬ್ಬದಲ್ಲಿ ಮೂರು ಇಂಚಿನಷ್ಟು ಒಳಗೆ ಬಿತ್ತಿಬಿಡಿ. ನೀರು ಹಾಕಬೇಡಿ. ಬೇಸಗೆ ಮಳೆ ಬಿದ್ದಾಗ ಮೊಳಕೆ ಬರುತ್ತದೆ.
 ಮೂರು ಎಲೆಗಳು ಮೂಡಿದಾಗ ಗೊಬ್ಬರ ನೀರು ಮೂರು ದಿನಕ್ಕೊಮ್ಮೆ ಕೊಡಲು ಸುರು ಮಾಡಿ. ಬಳ್ಳಿಯಲ್ಲಿ ಹೂ ಬಿಡಲು ಸುರುವಾದಾಗ ಗೊಬ್ಬರ ಜಾಸ್ತಿ ಕೊಡುತ್ತಿರಿ.
ಜೂನ್ 29 ರಿಂದ ಜುಲೈ 5  – ಅವಧಿಯಲ್ಲಿ ಮುಳ್ಳು ಸೌತೆ ,  ಬದನೆ  ಬೀಜ ಬಿತ್ತಿ. ಮಳೆಗಾಲ ಪ್ರಾರಂಭದಲ್ಲಿ ಬದನೆ ಗಿಡಗಳಿದ್ದರೆ ಅದರ ಸವರುವಿಕೆಯನ್ನು ಮಾಡಿ.
ಆಗಸ್ಟ್ 1 ರಂದು ಸೌತೆ , ಕುಂಬಳ , ಚೀನಿಕಾಯಿ ಮುಂತಾದ ದೀರ್ಘಾವಧಿ ತರಕಾರಿ ಬೀಜ ಬಿತ್ತಿ.
ಆಗಸ್ಟ್ 27 ರಿಂದ ಸೆಪ್ಟೆಂಬರ್ 2 : ಅವಧಿಯಲ್ಲಿ ಬಸಳೆ , ತೊಂಡೆ ಬಳ್ಳಿ ಗಳನ್ನು ನೆಡಬೇಕು
ನವೆಂಬರ್ ತಿಂಗಳಲ್ಲಿ :– ಈ ಮೊದಲು ಸೌತೆ ಸಾಲು ಮಾಡಿದ್ದರೆ ಅದು ಈಗ ಒಣಗಿರುತ್ತದೆ. ಅದೇ ಜಾಗದಲ್ಲಿ  ಹರಿವೆ ಸೊಪ್ಪಿಗೆ ಬೀಜ ಬಿತ್ತಿ. ಬಿತ್ತುವಾಗ ಒಂದು ಚಮಚ ಹರಿವೆ ಬೀಜಕ್ಕೆ ಒಂದು ಚಮಚ ಸಜ್ಜಿಗೆ ಸೇರಿಸಿ ಬಿತ್ತಿ. ಇರುವೆ ಕಾಟ ತಪ್ಪುತ್ತದೆ.
ನವಂಬರ್ 8 ರಿಂದ 16 ; 23 ರಿಂದ 30 –  ಅವಧಿಯಲ್ಲಿ ಬೆಂಡೆ ಬೀಜ ಬಿತ್ತಿ.
ಡಿಸೆಂಬರ್ 22 ರಿಂದ 30 ಅವಧಿಯಲ್ಲಿ ಅಲಸಂಡೆ , ಪಡುವಲ,  ಹೀರೆ,  ಹಾಗಲ ಇತ್ಯಾದಿ ಚಪ್ಪರ ತರಕಾರಿ ಎರಡನೇ ಬೆಳೆಗೆ ಸಕಾಲ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಸದ ತೆಂಗಿನಕಾಯಿಯೂ ಈಗ ರೈತರ ಸಂಪತ್ತು…! ಭುವನೇಶ್ವರದ ‘ವೇಸ್ಟ್ ಟು ವೆಲ್ತ್’ ಮಾದರಿ
July 14, 2026
7:12 AM
by: ದ ರೂರಲ್ ಮಿರರ್.ಕಾಂ
ಮುಂಗಾರು ದುರ್ಬಲ: ಯಾದಗಿರಿ ರೈತರಿಗೆ ಕೃಷಿ ಇಲಾಖೆಯ ಮಹತ್ವದ ಸಲಹೆ
July 14, 2026
6:47 AM
by: ದ ರೂರಲ್ ಮಿರರ್.ಕಾಂ
ಬ್ರಿಟನ್‌ನಲ್ಲಿ ಉರಿ ಬಿಸಿಲು – ಎರಡು ತಿಂಗಳಲ್ಲಿ 2,700ಕ್ಕೂ ಹೆಚ್ಚು ಸಾವು..! ಹವಾಮಾನ ಬದಲಾವಣೆಯಿಂದ ಶೇ.40ಕ್ಕೂ ಹೆಚ್ಚು ಜೀವಹಾನಿ ಎಂದ ಅಧ್ಯಯನ
July 14, 2026
6:41 AM
by: ದ ರೂರಲ್ ಮಿರರ್.ಕಾಂ
ಅಮರನಾಥದ ಹಿಮ ಶಿವಲಿಂಗ 90% ಕರಗಿತು…! ಹವಾಮಾನ ಬದಲಾವಣೆಯೇ ಕಾರಣವೇ?
July 13, 2026
7:17 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror