ದೇಶದ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಕ್ಷೇತ್ರಗಳಲ್ಲಿ ಭಾರತ ಅಪೂರ್ವ ಪ್ರಗತಿ ಸಾಧಿಸಿದೆ ಎಂದು ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾನ್ ಹೇಳಿದ್ದಾರೆ.
ಆರ್ಥಿಕ ಸಮೀಕ್ಷೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಸಮೀಕ್ಷೆಯ ಅಂಕಿಅಂಶಗಳು ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಭಾರತ ಇತ್ತೀಚಿನ ವರ್ಷಗಳಲ್ಲಿ ದಾಖಲೆಯ ಬೆಳವಣಿಗೆ ಕಂಡಿದೆ ಎಂಬುದನ್ನು ಸ್ಪಷ್ಟಪಡಿಸುತ್ತವೆ ಎಂದರು. ಕಳೆದ ಐದು ವರ್ಷಗಳ ಅವಧಿಯಲ್ಲಿ ಕೃಷಿ ಮತ್ತು ಸಹಾಯಕ ವಲಯಗಳು ಸ್ಥಿರ ಬೆಲೆಯಲ್ಲಿ ಸರಾಸರಿ ವಾರ್ಷಿಕ 4.4 ಶೇಕಡಾ ಬೆಳವಣಿಗೆ ದಾಖಲಿಸಿವೆ. ಇದು ಜಾಗತಿಕ ಸರಾಸರಿಗಿಂತ ಹೆಚ್ಚಾಗಿದೆ ಎಂದು ಸಚಿವರು ತಿಳಿಸಿದರು. 2024-25 ಆರ್ಥಿಕ ವರ್ಷದಲ್ಲಿ ದೇಶದ ಆಹಾರಧಾನ್ಯ ಉತ್ಪಾದನೆ 357.73 ಮಿಲಿಯನ್ ಟನ್ ಎಂಬ ದಾಖಲೆಯ ಮಟ್ಟ ತಲುಪಿದೆ ಎಂದು ಚೌಹಾನ್ ಹೇಳಿದರು. ಈ ಬೆಳವಣಿಗೆಗೆ ಮುಖ್ಯ ಕಾರಣಗಳು ಅಕ್ಕಿ, ಗೋಧಿ, ಜೋಳ, ಸಣ್ಣ ಧಾನ್ಯಗಳು ‘ಶ್ರೀ ಅಣ್ಣ’ ಎಂದೇ ಕರೆಸಿಕೊಳ್ಳುವ ಸಿರಿಧಾನ್ಯಗಳು ಉತ್ಪಾದನೆಯಲ್ಲಿ ಹೆಚ್ಚಳವಾಗಿರುವುದು ಸಹಾಯ ಮಾಡಿದೆ ಎಂದು ಅವರು ವಿವರಿಸಿದರು.
ಭಾರತ ಇಂದು ಕೇವಲ ಆಹಾರಧಾನ್ಯದಲ್ಲಿ ಸ್ವಾವಲಂಬಿಯಾಗಿರುವುದಲ್ಲದೆ, ಅನೇಕ ಬೆಳೆಗಳಲ್ಲಿ ಜಾಗತಿಕ ಮಟ್ಟದಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಸಚಿವರು ಹೇಳಿದರು. ಭಾರತದ ಕೃಷಿಯಲ್ಲಿ ತೋಟಗಾರಿಕೆ ವಲಯವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರವಾಗಿದೆ ಎಂದು ಅವರು ಒತ್ತಿ ಹೇಳಿದರು. 11 ವರ್ಷಗಳಲ್ಲಿ ತೋಟಗಾರಿಕೆ ಉತ್ಪಾದನೆ ಭಾರೀ ಏರಿಕೆ ಕಂಡಿದ್ದು, ಕಳೆದ 11 ವರ್ಷಗಳಲ್ಲಿ ದೇಶದ ತೋಟಗಾರಿಕೆ ಉತ್ಪಾದನೆ 280.70 ಮಿಲಿಯನ್ ಟನ್ನಿಂದ 367.72 ಮಿಲಿಯನ್ ಟನ್ಗೆ ಏರಿಕೆಯಾಗಿದೆ ಎಂದು ಚೌಹಾನ್ ಮಾಹಿತಿ ನೀಡಿದರು.
ಆರ್ಥಿಕ ಸಮೀಕ್ಷೆಯ ಅಂಕಿಅಂಶಗಳು ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿಯಲ್ಲಿ ಭಾರತ ನಿರಂತರವಾಗಿ ದಾಖಲೆಯ ಸಾಧನೆ ಮಾಡುತ್ತಿದೆ ಎಂಬುದನ್ನು ತೋರಿಸುತ್ತವೆ. ಆಹಾರಧಾನ್ಯ ಉತ್ಪಾದನೆ ಮತ್ತು ತೋಟಗಾರಿಕೆ ಕ್ಷೇತ್ರದ ವೇಗದ ಬೆಳವಣಿಗೆ ದೇಶದ ಕೃಷಿ ಶಕ್ತಿಯನ್ನು ಮತ್ತಷ್ಟು ಬಲಪಡಿಸುತ್ತಿದೆ ಎಂದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ




