MIRROR FOCUS

ಸಾಮಾಜಿಕ ಸೇವೆಯಲ್ಲಿ ಶಿಸ್ತುಬದ್ಧ ಮತ್ತು ಪಾರದರ್ಶಕ ವ್ಯವಸ್ಥೆ ಇದ್ದರೆ ನೆರವು ಹುಡುಕಿಕೊಂಡು ಬರುತ್ತವೆ….! | ಉಡುಪಿಯ ಯಕ್ಷಗಾನ ಕಲಾರಂಗದ ಬಗ್ಗೆ ಮನೋಹರ ಉಪಾಧ್ಯ ಅವರು ಬರೆದಿದ್ದಾರೆ.. |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸಮಾಜ ಸೇವೆ ಎನ್ನುವುದು ನಿಜವಾದ ಸೇವೆ. ಅಲ್ಲಿ ಸಂಪೂರ್ಣ ಶಿಸ್ತುಬದ್ಧ ಮತ್ತು ಪಾರದರ್ಶಕ ವ್ಯವಸ್ಥೆ , ಪ್ರಚಾರ ಬಯಸದ ಮೌನ ಕೆಲಸಗಳು ನಡೆಯುತ್ತಿದ್ದರೆ ದಾನಿಗಳು ಹುಡುಕಿಕೊಂಡು ಬರುತ್ತಾರೆ. ಸೇವೆಯ ಯಜ್ಞಕ್ಕೆ ಯಾವುದೇ ಸಂಕಷ್ಟವಾಗುವುದಿಲ್ಲ. ಉಡುಪಿಯ ಯಕ್ಷಗಾನ ಕಲಾರಂಗ  ಎಂಬ ಸಮಾಜ ಸೇವಾ ಸಂಸ್ಥೆ 48 ವರ್ಷಗಳ ಸುದೀರ್ಘ ಪಯಣದ ಬಗ್ಗೆ ಹಾಗೂ ಅಲ್ಲೊಂದು ಸೇವೆ ನೀಡಲು ಅವಕಾಶವಾದ ಬಗ್ಗೆ  ಹಾಗೂ ಸಂಸ್ಥೆಯ ದಾನ ಮಾಡಿರುವ ಉದ್ದೇಶ ಮತ್ತು ಕುಟುಂಬವೊಂದು ಹೇಗೆ ಸಾಮಾಜಿಕವಾಗಿಯೂ ತೊಡಗಿಸಿಕೊಳ್ಳಬಹುದು  ಪಶುವೈದ್ಯ ಡಾ.ಮನೋಹರ ಉಪಾಧ್ಯ ಅವರು ತಮ್ಮ ಪೇಸ್‌ಬುಕ್‌ನಲ್ಲಿ ಬರೆದಿದ್ದಾರೆ. ಈ ಸಂಸ್ಥೆಯ ಯಶಸ್ಸಿನ ಹೆಜ್ಜೆ ಇರುವುದೇ ಶಿಸ್ತುಬದ್ಧ ಮತ್ತು ಪಾರದರ್ಶಕ ವ್ಯವಸ್ಥೆಯಲ್ಲಿ ಹೀಗಾಗಿಯೇ ಅಲ್ಲಿಗೆ ದಾನಿಗಳು ಹುಡುಕಿಕೊಂಡು ಬರುತ್ತಾರೆ.ಮುಂದೆ ಓದಿ

Advertisement
Advertisement

ಉಡುಪಿಯ ಯಕ್ಷಗಾನ ಕಲಾರಂಗ (ರಿ) ಎಂಬ ಸಮಾಜ ಸೇವಾ ಸಂಸ್ಥೆಯ ಬಗ್ಗೆ ನೀವು ಕೇಳಿರಬಹುದು. ಯಕ್ಷಗಾನ ಕಲೆ – ಕಲಾವಿದರಿಗಾಗಿ, ಸಮಾಜಕ್ಕಾಗಿ ಸಮರ್ಪಿಸಿ ಕೊಂಡ ಸಂಸ್ಥೆ. 1975 ರಲ್ಲಿ ಪ್ರಾರಂಭವಾದ ಕಲಾರಂಗವು 3 ಅಂಗಗಳನ್ನು ವರ್ಷವಿಡೀ ಏಕಕಾಲಕ್ಕೆ ನಿಭಾಯಿಸುತ್ತದೆ. ಕಲಾರಂಗದ ಈ ವರೆಗಿನ ಒಟ್ಟು 48 ವರ್ಷಗಳ ಯಶಸ್ಸಿನ ಸುಧೀರ್ಘ ಪಯಣ ಸಾಧ್ಯವಾದದ್ದು ಸಂಪೂರ್ಣ ಶಿಸ್ತುಬದ್ಧ ಮತ್ತು ಪಾರದರ್ಶಕ ವ್ಯವಸ್ಥೆ , ಪ್ರಚಾರ ಬಯಸದ ಮೌನ ಕೆಲಸಗಳು, ಒಂದೇ ತರಗತಿಯ ಸಹಪಾಠಿಗಳಂತೆ ಇರುವ ಆಡಳಿತ ಮಂಡಳಿ ಮತ್ತು ಸದಸ್ಯರು, ಸಹಸ್ರಾರು ಅಭಿಮಾನಿ ದಾನಿಗಳು. ಇಡೀ ಯಕ್ಷಗಾನ ಕಲಾರಂಗದ ಈವರೆಗಿನ ಕೆಲಸಗಳೆಲ್ಲವೂ ಅವರ ವಾರ್ಷಿಕ ವಿಶೇಷಾಂಕ ಕಲಾಂತರಂಗದಲ್ಲಿ ದಾಖಲಾಗುತ್ತದೆ. ನ1975 ರಲ್ಲಿ ಪ್ರಾರಂಭವಾದ ಕಲಾರಂಗವು 3 ಅಂಗಗಳನ್ನು ವರ್ಷವಿಡೀ ಏಕಕಾಲಕ್ಕೆ ನಿಭಾಯಿಸುತ್ತದೆ.ಮುಂದೆ ಓದಿ

1. ಯಕ್ಷನಿಧಿ – 6 ಜಿಲ್ಲೆಗಳ 1144 ಯಕ್ಷಗಾನ ಕಲಾವಿದರ ಆರೋಗ್ಯ ವಿಮೆ, ಬಸ್ ಪಾಸ್, ಆಸ್ಪತ್ರೆ ಖರ್ಚು, ಮನೆಕಟ್ಟಲು ಸಹಾಯ, ಹಿರಿಯ ಕಲಾವಿದರುಗಳಿಗೆ ಸನ್ಮಾನ, ಯಕ್ಷಗಾನ ಪ್ರದರ್ಶನ, ಅವರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಇತ್ಯಾದಿ ಕೆಲಸಗಳು.ಮುಂದೆ ಓದಿ

2. ವಿದ್ಯಾ ಪೋಷಕ್ – ಉಡುಪಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ನಂತರದ ಮತ್ತು ಪದವಿವರೆಗಿನ ಆಯ್ದ ಮಕ್ಕಳಿಗೆ ಆರ್ಥಿಕ ನೆರವು, ಪಠ್ಯಪುಸ್ತಕ, ಲ್ಯಾಪ್ ಟಾಪ್, ಮನೆಗಳಿಗೆ ಸೌರ ವಿದ್ಯುತ್, ಸನಿವಾಸ ಶಿಬಿರ. ಈವರೆಗೆ 12,000 ಮಕ್ಕಳಿಗೆ ಒದಗಿಸಿದ ಆರ್ಥಿಕ ನೆರವಿನ ಮೊತ್ತ 9 ಕೋಟಿಗೂ ಮಿಕ್ಕಿ. 2023 ರಲ್ಲಿ 1114 ವಿಧ್ಯಾರ್ಥಿಗಳಿಗೆ 96 ಲಕ್ಷ 18 ಸಾವಿರ ರೂಪಾಯಿಯ ವಿದ್ಯಾರ್ಥಿ ವೇತನ ನೀಡಿದೆ. ಈವರೆಗೆ ತೀವ್ರ ಸಂಕಷ್ಟದಲ್ಲಿರುವ 6 ಕಲಾವಿದರಿಗೆ ಮತ್ತು 41 ವಿಧ್ಯಾರ್ಥಿಗಳಿಗೆ ದಾನಿಗಳ ನೆರವಿನಿಂದ ಸ್ವಂತ ಮನೆ ಕಟ್ಟಿಸಲಾಗಿದೆ.ಮುಂದೆ ಓದಿ

3. ಯಕ್ಷ ಶಿಕ್ಷಣ – ಉಡುಪಿ ಜಿಲ್ಲೆಯ 69 ಪ್ರೌಢ ಶಾಲೆಗಳ ಆಸಕ್ತ ಮಕ್ಕಳಿಗೆ ಯಕ್ಷಗಾನ ಶಿಕ್ಷಣ ಕೊಡಿಸಿ, ಪ್ರದರ್ಶನ ಏರ್ಪಡಿಸುವುದು. ಜೊತೆಗೆ ಪಠ್ಯ ತಯಾರಿ, ಕಾರ್ಯಾಗಾರ, ಶಿಬಿರಗಳ ಒಟ್ಟೂ ಕೆಲಸಗಳು ಯಕ್ಷ ಶಿಕ್ಷಣ ಟ್ರಸ್ಟ್ ಮೂಲಕವೇ .ಮುಂದೆ ಓದಿ

Advertisement

ಇಡೀ ಯಕ್ಷಗಾನ ಕಲಾರಂಗದ ಈವರೆಗಿನ ಕೆಲಸಗಳೆಲ್ಲವೂ ಅವರ ವಾರ್ಷಿಕ ವಿಶೇಷಾಂಕ ಕಲಾಂತರಂಗದಲ್ಲಿ ದಾಖಲಾಗುತ್ತದೆ.

ನನ್ನ ತಾಯಿಯ ತಾಯಿ ಅಂದರೆ ನಮ್ಮ ಅಜ್ಜಿ ಗತಿಸಿ ಈ ವರ್ಷದ ನವೆಂಬರ್ 9ಕ್ಕೆ 50 ಸಂವತ್ಸರಗಳಾಗುತ್ತದೆ. ಅವರ ಹೆಸರು ಶಾರದಾ. ಅಜ್ಜನ ಹೆಸರು ರಾಮರಾಯರು ( ಪಾಂಡೇಶ್ವರ ರಾಮ ಕಾರಂತರು). ಅಜ್ಜ ಸರಕಾರಿ ಶಾಲೆಯಲ್ಲಿ ಮೇಸ್ಟ್ರು. ತಿರುಗಾಟದ ಬದುಕು. ಸ್ವಂತ ಮನೆ ಮಾಡಿಕೊಳ್ಳುವ ಅನುಕೂಲವೇ ಇಲ್ಲದ ಕಾಲ. ಬಹಳ ಕಾಲ ಉಡುಪಿಯಲ್ಲಿ ಉದ್ಯೋಗದಲ್ಲಿ ಇದ್ದರೂ ಅಲ್ಲಿಯ ಖರ್ಚು ವೆಚ್ಚುಗಳು ಸಂಸಾರ ನಡೆಸಲು ಕಷ್ಟವಾಗುತ್ತಿತ್ತು. ಮೊದಲಿದ್ದ ಮನೆ ಬಾಡಿಗೆ ಜಾಸ್ತಿ ಆದಂತೆ ಉಡುಪಿಯಲ್ಲೇ 3 ಕಡೆ ಮನೆ ಬದಲಾಯಿಸುವ ಪರಿಸ್ಥಿತಿ ಆಯ್ತು. ಕಡಿಮೆ ಮನೆ ಖರ್ಚಿಗೆ ಸೂಕ್ತ ಇರುವ ಊರು ಯಾವುದೆಂದು ಹುಡುಕುವಾಗ ಕೋಟೇಶ್ವರ ಆಯ್ಕೆಯಾಗಿ, 1950ರಲ್ಲಿ ದೊಡ್ಡೋಣಿ ರಸ್ತೆಯಲ್ಲಿ ಬಾಡಿಗೆ ಮನೆಗೆ ಬಂದರು .ಮುಂದೆ ಓದಿ

1965ರಲ್ಲಿ ಮನೆ ಮಾಲೀಕರು ಮನೆ ಬಿಡಬೇಕು ಎಂದು ಕೇಳಿಕೊಂಡಾಗ ರಥಬೀದಿಯ ಭಂಡಾರಕೇರಿ ಮಠಕ್ಕೆ ಸೇರಿದ ಮನೆಗೆ ವಾರ್ಷಿಕ 8 ರೂಪಾಯಿ ಮೂಲಗೇಣಿ ಬಾಡಿಗೆಗೆ ಬಂದರು. ಭೂಸುಧಾರಣೆ ಕಾನೂನಿನಂತೆ ಮನೆ ಮತ್ತು ಸುತ್ತಲಿನ 70 ಸೆಂಟ್ಸ್ ಜಾಗ ಖರ್ಚಿಲ್ಲದೆ ಸ್ವಂತಕ್ಕೆ ಮಾಡಿಕೊಳ್ಳುವ ಅನುಕೂಲ ಇದ್ದರೂ ಮಾಲೀಕರಿಗೆ ಬಿಟ್ಟು ಕೊಟ್ಟು , 1971 ರಲ್ಲಿ ಅದೇ ಕೋಟೇಶ್ವರದ ಪೆಟ್ರೋಲ್ ಪಂಪ್ ಗೆ ಅನತಿ ದೂರದಲ್ಲಿ ಪುರುಶೋತ್ತಮ ಶೇಟ್ ಅವರ ಮನೆಗೆ ಬಾಡಿಗೆಗೆ ಬಂದು, ಅಜ್ಜ 1983ರಲ್ಲಿ ತಮ್ಮ ಅಂತ್ಯದ ಕಾಲದವರೆಗೂ ಅಲ್ಲಿಯೇ ನೆಲೆಸಿದರು.ಮುಂದೆ ಓದಿ

ಅದೇ ಭೂಸುಧಾರಣೆ ಕಾನೂನಿನಲ್ಲಿ ಪಾಂಡೇಶ್ವರದಲ್ಲಿ ಇದ್ದ ಸ್ವಲ್ಪ ಗದ್ದೆ ಜಾಗ ಗೇಣಿಯವರ ಪಾಲಾಯ್ತು. ಅದರಲ್ಲಿ ಒಬ್ಬ ಪರಿಶಿಷ್ಟ ವರ್ಗದವರು ಗೇಣಿದಾರರಾಗಿದ್ದರೂ ಸ್ವಂತ ಮಾಡಿಕೊಳ್ಳಲು ಅರ್ಜಿ ಹಾಕಿರಲಿಲ್ಲ. ಅಜ್ಜನೇ ಖುದ್ದಾಗಿ ಅರ್ಜಿ ತುಂಬಿಸಿ ಗೇಣಿದಾರರಿಗೆ ಗದ್ದೆ ಒಪ್ಪಿಸಿ ಬಿಟ್ಟರು‌. ಅಜ್ಜನಿಗೆ 12 ಜನ ಮಕ್ಕಳು. 1956ರಲ್ಲಿ ನಿವೃತ್ತಿ ಯಾಗುವಾಗ ಸಂಬಳ ರೂಪಾಯಿ 99 ದಾಟಿರಲಿಲ್ಲ. ನಿವೃತ್ತಿ ಆದ ನಂತರದ 14 ವರ್ಷ ಪಿಂಚಣಿಯೂ ಇರಲಿಲ್ಲ. 1970 ರಲ್ಲಿ ಅಡ್ಹಾಕ್ ಪಿಂಚಣಿ ಎಂದು ತಿಂಗಳಿಗೆ ನೂರು ರುಪಾಯಿ ಅಂತೆ ಪ್ರಾರಂಭವಾದ ನಿವೃತ್ತಿ ವೇತನ 1983 ಜುಲೈನಲ್ಲಿ ಅವರ ನಿಧನದ ವರೆಗೆ ರೂಪಾಯಿ 430 ವರೆಗೆ ಏರಿಕೆಯಾಗಿ ಅದೇ ದೊಡ್ಡ ಸಂತಸದ ದಿನಗಳಾಗಿದ್ದವು. ಬಂದ ಪಿಂಚಣಿಯಲ್ಲೂ ಮೈಸೂರಿನಲ್ಲಿ ಮೆಡಿಕಲ್ ಓದುತ್ತಿದ್ದ ಮೊಮ್ಮಗ, ನನ್ನಣ್ಣನಿಗೆ ತಿಂಗಳಿಗೆ 25 ರೂಪಾಯಿ ತಪ್ಪದೇ ಕಳುಹಿಸುತ್ತಿದ್ದರು.ಮುಂದೆ ಓದಿ

1980ರ ತನಕ ಅಜ್ಜನು ತನ್ನ ಕೊನೆಯ ಮಗ ವಾಸುದೇವ ಕಾರಂತರ ಮದುವೆ ತನಕ ಮನೆಯ ಸಕಲ ಖರ್ಚು ವೆಚ್ಚದ ಜವಾಬ್ದಾರಿಯನ್ನು ನಿರ್ವಹಿಸಿ ಕುಟುಂಬ ರಕ್ಷಣೆ ಮಾಡಿದ ಕ್ರಮ ಬೆರಗು ಹುಟ್ಟಿಸುತ್ತದೆ. ಅಂತೂ ಸ್ವಂತ ಮನೆ ಮಾಡುವ ಕನಸು ನನಸಾಗಲೇ ಇಲ್ಲ. ಎಷ್ಟೇ ಕಷ್ಟಗಳಿದ್ದರೂ ಸ್ವಂತ ಸೂರು ಎಂಬಷ್ಟೇ ಚಂದದ ಬದುಕಿನಲ್ಲಿ ನೆಲಸಿದ ಅಜ್ಜಿಗೆ ಕೋಟೇಶ್ವರದ ಎರಡನೇ ಮನೆ ಬಿಡುವಾಗ ಬಹಳ ದುಃಖವಾಗಿತ್ತು ಎಂದು ನೋಡಿದ ಕುಟುಂಬದವರಿಗೆ ಈಗಲೂ ನೆನಪಿದೆ. ಮಕ್ಕಳು ದೊಡ್ಡವರಾದಂತೆ ಶಾಲಾ ರಜೆದಿನಗಳಲ್ಲಿ ಮೊಮ್ಮಕ್ಕಳು ಸೇರಿ ಒಮ್ಮೆಲೆ ಊಟಕ್ಕೆ ಕೋರಂ 25 ದಾಟಿದ್ದೂ ಇದೆ. ರುಚಿ ರುಚಿ , ಬಿಸಿ ಬಿಸಿ ಅಡುಗೆ ಎಷ್ಟು ಮಾಡಿದರೂ ಖಾಲಿಯಾಗುವ ಸಂಸಾರದಲ್ಲಿ ಎಷ್ಟೋ ರಾತ್ರಿಗಳಲ್ಲಿ ಅಜ್ಜಿ ಊಟವನ್ನೇ ಮಾಡುತ್ತಿರಲಿಲ್ಲ. ಅಡುಗೆ ಮನೆಯಲ್ಲಿ ಒಲೆಗೆ ಮುಖಮಾಡಿ ಊಟಕ್ಕೆ ಕೂತು ಪಾತ್ರೆಗಳನ್ನು ಎಲ್ಲ ಖಾಲಿಮಾಡಿ ಊಟಮಾಡಿದೆ ಎಂಬಂತೆ ಬಿಂಬಿಸಲು ಪಾತ್ರೆ ಶಬ್ದ ಕೆಲವರಿಗೆ ಕೇಳಿಸುತ್ತಿತ್ತು. ಅನ್ನ ಬಸಿದ ನಂತರ ಉಳಿವ ತಿಳಿನೀರನ್ನು ಕುಡಿದು ಮಲಗಿದ ರಾತ್ರಿಗಳಿಗೆ ಲೆಕ್ಕವಿಲ್ಲ. ಸಣ್ಣ ಅನಾರೋಗ್ಯವನ್ನು ಯಾರಿಗೂ ತೊಂದರೆಯಾಗಬಾರದೆಂದು ಹೇಳದ ಕಾರಣ, ಸಮಸ್ಯೆ ಗೊತ್ತಾಗುವಾಗ ಕೈಮೀರಿ, ಅಜ್ಜಿ ತಮ್ಮ 64ನೆಯ ವಯಸ್ಸಿನಲ್ಲಿ ಜೀವನಯಾತ್ರೆ ಮುಗಿಸಿದರು. ಅವರು ದಾಟಿಸಿದ ಸಂಸ್ಕಾರ ಪಾಠವೇ ಕುಟುಂಬದ ಇಂದಿನ ಮರಿಮಕ್ಕಳಲ್ಲೂ ಕಾಣುವಂತಾಗಿದೆ. ಮಕ್ಕಳೆಲ್ಲ ಸುಮಾರಿಗೆ ಸ್ವಂತ ಕಾಲಿನ ಮೇಲೆ ನಿಲ್ಲುವ ಕಾಲ ಬಂದರೂ ಅಜ್ಜನಲ್ಲಿ ಅಜ್ಜಿಯ ಅನುಪಸ್ಥಿತಿಯ ಖಿನ್ನತೆ ಎದ್ದು ಕಾಣಲಾರಂಬಿಸಿತು‌. ವಯೋಸಹಜ ಅಜ್ಜನ ಅಂತ್ಯಕ್ಕೆ ಅವರಿಗಾಗ 83 ವರ್ಷ.ಮುಂದೆ ಓದಿ

Advertisement

ನಮ್ಮ ಅಜ್ಜಿ ಗತಿಸಿ 50 ವರ್ಷವಾದರೂ ಅವರು ದಾಟಿಸಿದ ಸಂಸ್ಕಾರದ ಕಾರಣ ಅವರ ನೆನಪು ಸದಾ ಹಸಿರು. ಅಜ್ಜಿ ಅಜ್ಜರಿಗೆ ಅವರ ಜೀವಿತ ಕಾಲದಲ್ಲಿ ಅವರಿಗೆ ಸ್ವಂತ ಸೂರು ಇಲ್ಲದಿದ್ದರೂ, ಆ ಕೊರಗಿನ ನೆನಪು ಮಾಸುವಂತೆ ಅವರ ನೆನಪಿನಲ್ಲಿ ಅಶಕ್ತರಿಗೆ ಮನೆ ಕಟ್ಟಿಸುವ ಯೋಜನೆಗೆ ಕುಟುಂಬದಲ್ಲಿ ಯೋಚನೆ ಮೂಡಿತು. ಹೆಚ್ಚಾಗಿ ಕುಟುಂಬದ ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯುವ ಮುತ್ಸದ್ದಿ ವ್ಯಕ್ತಿಯೊಬ್ಬರು ಇದ್ದೇ ಇರುತ್ತಾರೆ. ನಮಗೆ ಅಜ್ಜನ ಕಾಲಾನಂತರ ಒದಗಿದವರು ಪಿ. ವಾಸುದೇವ ಕಾರಂತರು. ಅಜ್ಜನ ಗಂಡು ಮಕ್ಕಳ ಕುಟುಂಬಕ್ಕೆ ಅವರು ವಾಸ್ಚಿಕ್ಕಪ್ಪ, ಹೆಣ್ಣು ಮಕ್ಕಳ ಕುಟುಂಬಕ್ಕೆ ವಾಸ್ಮಾವಯ್ಯ, ಮೊಮ್ಮಕ್ಕಳಿಗೆಲ್ಲ ಅವರು ವಾಸಜ್ಜ. ಅವರು ಸಿಂಡಿಕೇಟ್ ಬ್ಯಾಂಕಿನ ನಿಷ್ಟಾವಂತ, ನಿವೃತ್ತ ಅಧಿಕಾರಿ. ಸಮಾಜ ಸೇವೆಯು ಅವರದು ನಿರಂತರ ಹವ್ಯಾಸ‌. ನನಗೆ ಅವರು ತಾಯಿಯ ತಮ್ಮ. ನಾವು ಅಣ್ಣ ತಮ್ಮಂದಿರೈವರು ಚಿಕ್ಕವರಿದ್ದಾಗ ಈ ವಾಸ್ಮಾವಯ್ಯನ ಹಳೆ ಪ್ಯಾಂಟ್, ಅಂಗಿಗಳನ್ನು ನಮ್ಮ ಗಾತ್ರಕ್ಕೆ ಬದಲಾಯಿಸಿ ಒಬ್ಬರಾದ ಮೇಲೆ ಒಬ್ಬರಂತೆ ಬಳಸುತ್ತಿದ್ದದ್ದು, ಆ ಬೆಚ್ಚಗಿನ ಅನುಭವದ ನೆನಪು ಬಂದಾಗೆಲ್ಲ ಬದುಕು 1970-75ರ ಸಮಯಕ್ಕೆ ಓಡುತ್ತದೆ.ಮುಂದೆ ಓದಿ

ಈಗ 72 ವರ್ಷ ವಯಸ್ಸಿನ ಮಾವನ ನೇತೃತ್ವದಲ್ಲಿ ಅಜ್ಜಿ ಅಜ್ಜನ ನೆನಪಿಗೆ ಮನೆ ನಿರ್ಮಾಣದ ಧನ ಸಂಗ್ರಹಕ್ಕೆ ವಾಟ್ಸಾಪ್ ಗುಂಪು 2023 ನವೆಂಬರ್ 23 ಕ್ಕೆ ತಯಾರಾಯ್ತು. ಎಲ್ಲ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು, ಸೊಸೆಯಂದಿರು, ಅಳಿಯಂದಿರು, ಅಜ್ಜ ಅಜ್ಜಿಯ ಸಹೋದರ ಸಹೋದರಿಯರ ಬಂಧುಗಳು ಇರುವ ಸಮಗ್ರ ಕುಟುಂಬದ ವಾಟ್ಸಾಪ್ ಗುಂಪು ರಾಮರಾಯರ ಕುಟುಂಬ ದಲ್ಲಿ ಈ ಯೋಜನೆಯ ವಿವರವನ್ನು ಪ್ರಸ್ತಾಪಿಸಿದಾಗ ಸ್ಪಂದಿಸಿದ 28 ಬಂಧುಗಳನ್ನು ಆಯ್ದು , ಯೋಜನೆಗಾಗಿರುವ ಹೊಸ ವಾಟ್ಸಾಪ್ ಗುಂಪು ಶಾರದಾರಾಮ ಮನೆ ರಚಿಸಲಾಯ್ತು.ಮುಂದೆ ಓದಿ

ಎಲ್ಲರಿಗೂ ಕಲಾರಂಗದ ಅಕೌಂಟ್ ವಿವರ ಕಳುಹಿಸಿ, ನೇರ ಹಣ ವರ್ಗಾವಣೆ ಜೊತೆಗೆ ವಿಳಾಸ, ಫೋನ್ನಂಬ್ರ, ಪಾನ್ ನಂಬರ್ ಕಳುಹಿಸಬೇಕೆಂದು ವಿನಂತಿಯನ್ನು ಡಿಸೆಂಬರ್ 18ಕ್ಕೆ ಮಾಡಲಾಯ್ತು, ಇನ್ನು ಒಂದು ತಿಂಗಳಲ್ಲಿ ನಾವು ಕಲಾರಂಗಕ್ಕೆ ದೇಣಿಗೆಯ ಸಿದ್ಧತೆಗೆ. ಯಾರಿಗೂ ಇಷ್ಟೇ ಕೊಡಿ ಎಂದು ತಿಳಿಸಿರಲಿಲ್ಲ. ಕೊಡಲೇಬೇಕು ಎಂಬ ಒತ್ತಡಕ್ಕೆ ಅವಕಾಶವಿರಲಿಲ್ಲ. ನಿಮ್ಮ ಯಥಾನುಶಕ್ತಿ ಎಂಬುದು ಮಾತ್ರ ಒಕ್ಕಣೆಯಾಗಿತ್ತು.ಮುಂದೆ ಓದಿ

ಜನವರಿ 17 ರ ಒಳಗೇ 7 ಲಕ್ಷ 2 ಸಾವಿರ ರೂಪಾಯಿ ಕಲಾರಂಗದ ಅಕೌಂಟ್ ಗೆ ಜಮೆ ಆಯ್ತು‌‌ . ಮಾವನ ನಿರ್ಧಾರಗಳು ಎಷ್ಟು ಸೂತ್ರಬದ್ಧವೆಂದರೆ ಯಾರ್ಯಾರು ಎಷ್ಟು ಕೊಟ್ಟರೆಂದು ಮಾವ ಮತ್ತು ಕಲಾರಂಗದ ಕಾರ್ಯದರ್ಶಿ  ಮುರಳಿ ಕಡೇಕಾರ್ ಬಿಟ್ರೆ ಕುಟುಂಬದ ಯಾರಿಗೂ ಗೊತ್ತಾಗಲೇ ಇಲ್ಲ. ಮುಂದೆಯೂ ಗೊತ್ತಾಗದು. ಆಗಾಗ ಗುಂಪಿನಲ್ಲಿ ಇಂತವರು ಹಣ ಸಂದಾಯ ಮಾಡಿದ್ದಾರೆ, ಒಟ್ಟು ಸಂಗ್ರಹ ಇಷ್ಟಾಗಿದೆ ಎಂದು ಸುದ್ದಿ ಬರುತ್ತಿತ್ತು. ಲಕ್ಷ ಕೊಟ್ಟವರೂ ಇರಬಹುದು, ಕೆಲವು ಸಾವಿರ ಕೊಟ್ಟವರೂ ಇರಬಹುದು. ಅಂದರೆ ಯೋಜನೆಯಲ್ಲಿ ಎಲ್ಲರಿಗೂ ಸಮಪಾಲಿನ ಖುಷಿ. ಅದು ಅಜ್ಜಿಯ ಪಾಠವೂ ಆಗಿತ್ತು. 6 ಜನ ಗಂಡು ಮಕ್ಕಳು ಮತ್ತು 6 ಜನ ಹೆಣ್ಣು ಮಕ್ಕಳನ್ನೂ, ಅವರ ಮುಂದಿನ ಪೀಳಿಗೆಯನ್ನೂ ಎಂದೂ ಮೋಹದ ತಕ್ಕಡಿಯಲ್ಲಿ ತೂಗಲೇ ಇಲ್ಲ.ಮುಂದೆ ಓದಿ

ಕುಟುಂಬದಲ್ಲಿ ಆಗುವ ಸಮಾರಂಭಗಳಿಗೆ, ಬರುವ ಆಸ್ಪತ್ರೆ ಖರ್ಚುಗಳಿಗೆಲ್ಲ ಕುಟುಂಬವು ಸಣ್ಣ ಮಟ್ಟಿನ ಧನಸಂಗ್ರಹ ಮಾಡಿದ್ದಿದೆ‌. ತೊಂದರೆ ಆಗದಿರಲೆಂದು ಎಷ್ಟೋ ಬಾರಿ ಕೆಲವು ಸದಸ್ಯರಿಗೆ ಗೊತ್ತಾಗದೇ ಹಾಗೇ ಯಶಸ್ವಿಯಾಗಿ ಯೋಜನೆಗಳು ಮುಗಿಯುತ್ತಿದ್ದವು. ಈ ಶಾರದಾರಾಮ ಮನೆಯ ಯೋಜನೆಯು ಕುಟುಂಬದ ಒಗ್ಗಟ್ಟಿನ ಸಂತಸಕ್ಕೆ ಇನ್ನಷ್ಟು ಬಲ ಕೊಟ್ಟಿತು. ಸೂರಿಲ್ಲದ ಕುಟುಂಬಕ್ಕೆ ಮತ್ತೊಂದು ಕುಟುಂಬದ 3 ತಲೆಮಾರುಗಳು ಒಟ್ಟಿಗೆ ನಿಂತು ಬೆಂಬಲಿಸುವ ಈ ಪ್ರಕ್ರಿಯೆ ಕಲಾರಂಗಕ್ಕೂ ಹೊಸ ಅನುಭವ.ಮುಂದೆ ಓದಿ

Advertisement

ಕಲಾರಂಗದವರೇ ಅರ್ಹ ವಿದ್ಯಾರ್ಥಿ/ವಿದ್ಯಾರ್ಥಿನಿಯನ್ನು ಆಯ್ಕೆ ಮಾಡಿ ಮನೆ ನಿರ್ಮಾಣವನ್ನು ಅವರೇ ಸಂಪೂರ್ಣ ಜವಾಬ್ದಾರಿ ವಹಿಸಿ ಮನೆಯನ್ನು ಹಸ್ತಾಂತರಿಸುವರು. ದಾನಿಗಳ , ಕಲಾರಂಗದ ಸದಸ್ಯರ ಸಮ್ಮುಖದಲ್ಲೇ ಹೊಸ ಮನೆಯಲ್ಲಿ ದೀಪ ಹಚ್ಚಿ ಹರಸುವುದೇ ಮನೆ ಒಕ್ಕಲಿನ ಸಂಭ್ರಮ. ಮನೆ ನಿರ್ಮಾಣದಲ್ಲಿ ಸಹಕರಿಸಿದ ಸಿಬ್ಬಂದಿಗಳನ್ನು ಮತ್ತು ಬಂದ ಅತಿಥಿಗಳನ್ನು ಗೌರವಿಸುವ ಕೆಲಸದ ಜೊತೆ ಮನೆ ಒಕ್ಕಲಿನ ಒಟ್ಟೂ ಖರ್ಚು ಕಲಾರಂಗವೇ ಭರಿಸುತ್ತದೆ.ಮುಂದೆ ಓದಿ

ಬರಿ ನೆಲದಲ್ಲಿ ಮಲಗಿದವನಿಗೆ ಸಣ್ಣ ತಲೆದಿಂಬು ಕೊಡುವಂತೆ ನೆರವು (ಕುಷನ್ ಕೆಲಸ) ಮಾತ್ರ ದಾನಿಯದ್ದು. ಮತ್ತೆಲ್ಲ ಕೆಲಸಗಳು ಮತ್ತು ಅವುಗಳ ನಿರಂತರತೆ ಕಲಾರಂಗದಂತಹ ಸಂಸ್ಥೆಯದ್ದು. ಅದು ಬಹಳ ಗುರುತರವಾದದ್ದು ಮತ್ತು ಬೆಲೆ ಕಟ್ಟಲಾಗದ್ದು. ಇಂತಹ ಅನೇಕ ವಿಷಯಗಳು ನಮ್ಮ ಪರಿಸರದಲ್ಲಿವೆ. ಊರಲ್ಲಿ ಹೂಳೆತ್ತದೇ ಹಾಳುಬಿದ್ದ ಬಾವಿ ಅಥವಾ ಕೆರೆಯ ಪುನರುಜ್ಜೀವನಕ್ಕೆ ಮನಸ್ಸು ಮಾಡುವ ಒಂದು ಕುಷನ್ ಕೆಲಸಕ್ಕೆ ಒಂದು ಕುಟುಂಬ ಅಥವಾ ಕುಟುಂಬದಂತೆ ಒಟ್ಟಿಗೆ ಸೇರುವ ಕೆಲ ಮಿತ್ರರು ಸಾಕು. ವಾಸು ಮಾವನಂತೆ, ಕಲಾರಂಗದ ಮುರಳಿ ಕಡೆಕಾರ್ ರಂತೆ ಕೆಲಸವನ್ನು ದಡಮುಟ್ಟಿಸುವ ಶಕ್ತಿಗಳು ಜೊತೆಗೇ, ಸಿಕ್ಕಿಯೇ ಸಿಗುತ್ತಾರೆ. ಅಡಿಕೆ ಪತ್ರಿಕೆಯ ಸಂಪಾದಕ ಶ್ರೀಪಡ್ರೆಯವರು ಒಮ್ಮೆ ಮಾತನಾಡುವಾಗ ಹೇಳಿದ್ದು ” ಹೀಗೊಬ್ಬರು ಮನೆ ಬಳಿ ಇದ್ದ ಹಲಸಿನ ಮರದ ಕಾಯಿಯ ಚಿಪ್ಸ್ – ಹಪ್ಪಳ ಮಾಡಿ, ಮಾರಿ ಮಗನ ಆ ವರ್ಷದ ಇಂಜಿನಿಯರಿಂಗ್ ಫೀಸು ಸರಿ ತೂಗಿಸಿದರು” ಸದಾ ನೆನಪಿಗೆ ಬರುತ್ತದೆ. ಇಲ್ಲಿ ಮನೆ ಒಡೆಯನ ಸ್ವಾವಲಂಬಿ ಮನಸ್ಸೇ ಕುಷನ್ ಕೆಲಸ ಮಾಡಿತು. ಜನರಲ್ಲಿನ ಕುಷನ್ ಕೆಲಸದ ಜಾಗ್ರತಿಯನ್ನು ಎತ್ತಿ ತೋರಿಸುವ ಕಲಾರಂಗದಂತಹ ಸಂಸ್ಥೆಗಳು ಶಕ್ತಿಸ್ಥಾನವೂ ಹೌದು, ನಿತ್ಯ ಸ್ಮರಣೀಯವೂ.

ಬರಹ :
– ಮನೋಹರ ಉಪಾಧ್ಯ
, ಮಂಗಳೂರು, +91 93433 45603
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

ಕೇರಳಕ್ಕೆ ನೈಋತ್ಯ ಮಾನ್ಸೂನ್ ಪ್ರವೇಶ | ಇಂದಿನಿಂದಲೇ ಮುಂಗಾರು ಆರಂಭ | 8 ದಿನ ಮುಂಚಿತವಾಗಿ ಆರಂಭವಾದ ಮಳೆಗಾಲ |

ಕಳೆದ 16 ವರ್ಷಗಳ ದಾಖಲೆಗಳ ಪ್ರಕಾರ ನಿಗದಿತ ದಿನಕ್ಕಿಂತ ಮೊದಲೇ ಈ ಬಾರಿ…

1 hour ago

ಉತ್ತಮ ಮಳೆಯಿಂದ ಹಸಿರಾದ ವನ್ಯಜೀವಿ ತಾಣ | ಚಾಮರಾಜನಗರ ಜಿಲ್ಲೆಯ ಹಲವೆಡೆ ಹಸಿರು ಸಂಭ್ರಮ

ಉತ್ತಮ ಮಳೆಗೆ ಅರಣ್ಯ ಪ್ರದೇಶವೆಲ್ಲ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ, ಮಳೆ ಹನಿಗಳಿಗೆ ಮೈಯೊಡ್ಡಿದ…

7 hours ago

50 ಕೋಟಿಗೂ ಹೆಚ್ಚು ಜನರು ಕೃಷಿ ಕ್ಷೇತ್ರದಲ್ಲಿದ್ದಾರೆ , ಜಿಡಿಪಿಗೆ ಕೃಷಿಯ ಕೊಡುಗೆ ಶೇಕಡಾ 18

ರಾಜ್ಯದ ಅಡಿಕೆ ಬೆಳೆ ಅತ್ಯಂತ ಉತ್ಕೃಷ್ಟ ಗುಣಮಟ್ಟದ್ದಾಗಿದ್ದು, ಇದರಲ್ಲಿ ಯಾವುದೇ ರಾಸಾಯನಿಕ ಇಲ್ಲ.…

7 hours ago

ಅಡಿಕೆ ಹಾಳೆ ರಫ್ತು ನಿರ್ಬಂಧದ ಸಂಕಷ್ಟದಿಂದ ಪಾರಾಗಲು ಕೈಗೊಳ್ಳಬಹುದಾದ ಪರಿಹಾರೋಪಾಯಗಳು

ನಿಷೇಧವು ಶಾಶ್ವತವಲ್ಲ, ಮತ್ತು ವೈಜ್ಞಾನಿಕ, ತಾಂತ್ರಿಕ, ಮತ್ತು ವಾಣಿಜ್ಯ ರಾಜತಾಂತ್ರಿಕ ಮಾರ್ಗದಿಂದ ಈ…

8 hours ago

ಅಡಿಕೆ ಎನ್ನುವ ಚಿನ್ನದ ಮೊಟ್ಟೆ ಇಡುವ ಕೋಳಿ | ವರವೋ ಶಾಪವೋ?

ಆಹಾರ ಧಾನ್ಯಗಳನ್ನು ಬೆಳೆಸುತ್ತಿದ್ದ ಕೃಷಿಕರು ಅಡಿಕೆ ಕೃಷಿಗೆ ಪರಿವರ್ತನೆ ಆಗಿ ಆಹಾರಕ್ಕಾಗಿ ಪರಾವಲಂಬಿಗಳು…

9 hours ago

ಹೊಸರುಚಿ | ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ರೊಟ್ಟಿ

ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ರೊಟ್ಟಿಗೆ ಬೇಕಾಗುವ ಸಾಮಗ್ರಿಗಳು: ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ…

10 hours ago