ಒಂದು ಕ್ರೀಡಾ ಗೆಲುವಿಗೆ ಅಷ್ಟು ಅತಿರೇಕದ ಪ್ರತಿಕ್ರಿಯೆ ಒಳ್ಳೆಯ ಲಕ್ಷಣವಲ್ಲ……

June 4, 2025
7:21 AM
ಕ್ರೀಡೆಯನ್ನು ಅಸಹಜ ಶಕ್ತಿಯ ರೂಪದಲ್ಲಿ ನೋಡಿದರೆ ಅದು ತನ್ನ ಮೂಲ‌ ಆಶಯವನ್ನೇ ಕಳೆದುಕೊಳ್ಳುತ್ತದೆ. ಕ್ರೀಡೆ ಎಂಬುದು ಮಾನವ ಪ್ರತಿಭಾ ಪ್ರದರ್ಶನದ ಒಂದು ಆರೋಗ್ಯಕರ ಸ್ಪರ್ಧೆ. ದೈಹಿಕ ಮತ್ತು ಮಾನಸಿಕ ಶ್ರಮ ಹಾಗು ಸಾಮರ್ಥ್ಯ, ಕಲೆ ಮತ್ತು ಚಾಕಚಕ್ಯತೆಯ ತಂತ್ರ, ಸನ್ನಿವೇಶಗಳ ಸರಿಯಾದ ಉಪಯೋಗ ಮುಂತಾದ ಅಂಶಗಳನ್ನು ಒಳಗೊಂಡಿರುತ್ತದೆ.

ಮುಗಿಲು ಮುಟ್ಟಿದ ಕ್ರಿಕೆಟ್ ಪ್ರೇಮಿಗಳ ಸಂಭ್ರಮ……. ಎಲ್ಲರಿಗೂ ಅಭಿನಂದನೆಗಳು, ಆದರೆ……….

Advertisement

ಕ್ರೀಡಾ ಘನತೆಯನ್ನು – ಭಾರತದ ನಾಗರಿಕ ಪ್ರಜ್ಞೆಯನ್ನು ಉಳಿಸೋಣ ಮತ್ತು ವಿಶ್ವಕ್ಕೆ ಪ್ರಚರಿಸೋಣ……….

ಕ್ರಿಕೆಟ್ ಒಂದು ಜೂಜಾಟವಲ್ಲ,
ಮೋಜಿನಾಟವೂ ಅಲ್ಲ,
ಮನರಂಜನೆಯೂ ಅಲ್ಲ,
ವ್ಯಾಪಾರವು ಅಲ್ಲ,
ದೇಶದ ಸ್ವಾಭಿಮಾನದ ಪ್ರಶ್ನೆಯೂ ಅಲ್ಲ,,
ಅದೊಂದು ಕ್ರೀಡೆ, ಕೇವಲ ಕ್ರೀಡೆ ಮಾತ್ರ……..

ಅಂತಹ ಒಂದು ಸ್ಪರ್ದೆಯಲ್ಲಿ ನಿನ್ನೆ RCB ಗೆದ್ದಿದೆ. ಅದಕ್ಕೆ ನಮಗೂ ಸಂತೋಷವಾಯಿತು. ಅದು ಅಷ್ಟಕ್ಕೆ ಮಾತ್ರ ಸೀಮಿತವಾಗಿರಬೇಕಿತ್ತು. ಆದರೆ……

ಭಾರತದ ಒಟ್ಟು ಜನಸಂಖ್ಯೆಯಲ್ಲಿ ಕನಿಷ್ಠ ಶೇಕಡಾ 30/40% ಜನರಿಗೆ ಕ್ರಿಕೆಟ್ ಬಗ್ಗೆ ಮಾಹಿತಿ ಇದೆ. ಅದನ್ನು ಇಷ್ಟಪಟ್ಟು ನೋಡುತ್ತಾರೆ. ಆ ಕಾರಣದಿಂದಲೇ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ವಿಶ್ವದ ಶ್ರೀಮಂತ ಕ್ರೀಡಾ ಸಂಸ್ಥೆ ಎಂದು ಹೆಸರು ಗಳಿಸಿದೆ….

Advertisement

ಕ್ರಿಕೆಟ್ ನೆರಳಲ್ಲಿ ಭಾರತದ ಇತರ ಕ್ರೀಡೆಗಳು ಸೊರಗಿವೆ ಎಂಬ ಆರೋಪವೂ ಇದೆ. ಅಷ್ಟು ವ್ಯಾಪಕವಾಗಿ ಕ್ರಿಕೆಟ್ ಆವರಿಸಿದೆ.

ದುರಾದೃಷ್ಟವಶಾತ್ ಭಾರತದಲ್ಲಿ ಕ್ರಿಕೆಟ್ ಒಂದು ಕ್ರೀಡೆ ಎಂಬುದನ್ನು ಮೀರಿ ತೀರಾ ಅತಿರೇಕದ ಭಾವನೆಗಳನ್ನು ಮಾಧ್ಯಮಗಳು ಕೆರಳಿಸುತ್ತಿವೆ. ಅದೊಂದು ದೇಶದ ಪ್ರತಿಷ್ಠೆಯ ಪ್ರಶ್ನೆ ಎಂಬುದಾಗಿ ಬಿಂಬಿಸುತ್ತಿವೆ. ಚೆನ್ನಾಗಿ ಆಡಿದವರನ್ನು ದೇವರಂತೆ ಹಾಡಿ ಹೊಗಳಲಾಗುತ್ತಿದೆ. ಕೆಲವರು ಆರ್ಸಿಬಿ ಗೆಲ್ಲಲು ದೇವಾಲಯಗಳಲ್ಲಿ ಹೋಮ, ಹವನ, ಪೂಜೆಗಳನ್ನು ಮಾಡಿಸುತ್ತಾರೆ ಮತ್ತು ಮಾಧ್ಯಮಗಳು ಅದಕ್ಕೆ ಪ್ರಚಾರವನ್ನು ನೀಡುತ್ತವೆ….

ವಿವೇಚನಾ ಶಕ್ತಿಯ ಕೊರತೆ ಕಾಡುವುದೇ ಇಲ್ಲಿ. ಕ್ರೀಡೆಯನ್ನು ಅಸಹಜ ಶಕ್ತಿಯ ರೂಪದಲ್ಲಿ ನೋಡಿದರೆ ಅದು ತನ್ನ ಮೂಲ‌ ಆಶಯವನ್ನೇ ಕಳೆದುಕೊಳ್ಳುತ್ತದೆ. ಕ್ರೀಡೆ ಎಂಬುದು ಮಾನವ ಪ್ರತಿಭಾ ಪ್ರದರ್ಶನದ ಒಂದು ಆರೋಗ್ಯಕರ ಸ್ಪರ್ಧೆ. ದೈಹಿಕ ಮತ್ತು ಮಾನಸಿಕ ಶ್ರಮ ಹಾಗು ಸಾಮರ್ಥ್ಯ, ಕಲೆ ಮತ್ತು ಚಾಕಚಕ್ಯತೆಯ ತಂತ್ರ, ಸನ್ನಿವೇಶಗಳ ಸರಿಯಾದ ಉಪಯೋಗ ಮುಂತಾದ ಅಂಶಗಳನ್ನು ಒಳಗೊಂಡಿರುತ್ತದೆ. ಇದು ವೈಯಕ್ತಿಕ ಕ್ರೀಡೆಯೇ ಆಗಿರಲಿ, ತಂಡ ಕ್ರೀಡೆಯೇ ಆಗಿರಲಿ ಒಟ್ಟು ಪ್ರಕ್ರಿಯೆ ಹೀಗೆಯೇ ಇರುತ್ತದೆ. ಕೆಲವೊಮ್ಮೆ ಸ್ವಲ್ಪ ಸಣ್ಣಪುಟ್ಟ ವ್ಯತ್ಯಾಸಗಳು ಇರಬಹುದು. ಇದರ ಜೊತೆಗೆ ಒಂದು ಪ್ರದೇಶದ ಪ್ರಾಕೃತಿಕ ಅಂಶಗಳು, ಟಾಸ್, ಜನ ಬೆಂಬಲ, ತೀರ್ಪುಗಾರರ ತಪ್ಪುಗಳು ಮುಂತಾದ ಅಂಶಗಳು ಪರೋಕ್ಷವಾಗಿ ಸ್ವಲ್ಪಮಟ್ಟಿಗೆ ಪ್ರಭಾವ ಬೀರಬಹುದು. ಇದು ಎಲ್ಲಾ ವ್ಯಕ್ತಿ ಮತ್ತು ತಂಡಗಳಿಗೆ ಆಟದ ನಿಯಮಗಳಿಗೆ ಅನುಗುಣವಾಗಿ ಸ್ವಲ್ಪ ಅದೃಷ್ಟ – ದುರಾದೃಷ್ಟದ ಜೊತೆ ಏಕಪ್ರಕಾರವಾಗಿ ಅನ್ವಯಿಸುತ್ತದೆ……

ಆಯಾ ದೇಶದ, ರಾಜ್ಯದ, ಪ್ರದೇಶದ, ಊರಿನ ಅಥವಾ ಆ ವ್ಯಕ್ತಿಯ ಕುಟುಂಬದವರು, ಅಭಿಮಾನಿಗಳು ಮತ್ತು ಬೆಂಬಲಿಗರು ತಮ್ಮ ತಮ್ಮ ತಂಡಗಳ ವಿಜಯವನ್ನು ಬಯಸುವುದು, ನಿರೀಕ್ಷಿಸುವುದು, ಆತಂಕದಿಂದ ಕಾಯುವುದು ಮತ್ತು ತಮ್ಮ ನಂಬುಗೆಯ ದೈವದ ಪ್ರಾರ್ಥನೆ ಒಂದು ಸಹಜ ವರ್ತನೆ……

ಅದನ್ನು ಮೀರಿ ಅತಿಯಾಗಿ ಏನೇ ಮಾಡಿದರು ಅದು ಅತಿರೇಕ ಮತ್ತು ದುರ್ವರ್ತನೆ. ಯಾವುದೇ ದೇಶ ಅಥವಾ ಧರ್ಮದವರೇ ಆಗಲಿ ಪೂಜೆ ಪುನಸ್ಕಾರಗಳು, ದೇಶದ ಒಟ್ಟು ಸಾಮರ್ಥ್ಯದ ಪ್ರದರ್ಶನ ಎಂಬಂತೆ ವರ್ತಿಸುವುದು ಕ್ರೀಡಾ ಧರ್ಮಕ್ಕೆ ವಿರುದ್ಧ ಮತ್ತು ಮೌಡ್ಯ. ಏಕೆಂದರೆ ಆ ಕ್ರಿಯೆಗಳು ಆಟಗಾರರು ಮತ್ತು ಕ್ರೀಡೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಮತ್ತು ಕ್ರೀಡೆಯಲ್ಲಿ ಇಡೀ ದೇಶದ ಎಲ್ಲರೂ ಭಾಗವಹಿಸುವುದಿಲ್ಲ. ಹಾಗೆಯೇ ಕ್ರೀಡಾ ಫಲಿತಾಂಶ ಶಾಶ್ವತವೇನು ಅಲ್ಲ. ಆ ಕ್ಷಣದ ಸೋಲು ಗೆಲುವು ಮಾತ್ರ. ಅದು ಮತ್ತೆ ಆಡಿದಾಗ ಯಾವುದೇ ಸಮಯದಲ್ಲಿ ಫಲಿತಾಂಶ ಬದಲಾಗಬಹುದು…..

Advertisement

ಇದು ಒಂದು ದೇಶದ ನಾಗರಿಕ ಪ್ರಜ್ಞೆಯ ಸಂಕೇತ. ಒಂದು ಹಂತದ ಕೂಗಾಟ, ಕಿರುಚಾಟ, ಚಪ್ಪಾಳೆ, ನೃತ್ಯ ಎಲ್ಲವೂ ವೈಯಕ್ತಿಕ ಮತ್ತು ಸಾಮೂಹಿಕ ಮಟ್ಟದಲ್ಲಿ ಸಹನೀಯ. ಆದರೆ ಅದನ್ನು ಮೀರಿ ಹಿಂಸೆ, ಅಸೂಯೆ, ಕೋಪ, ದ್ವೇಷ, ಅನಾಗರಿಕ ವರ್ತನೆ, ಪ್ರತಿಸ್ಪರ್ಧಿಯ ನಿಂದನೆ, ಫಲಿತಾಂಶ ಒಪ್ಪಿಕೊಳ್ಳದಿರುವುದು ಎಲ್ಲವೂ ವ್ಯಕ್ತಿಯ ಮತ್ತು ದೇಶದ ನಾಗರಿಕ ಪ್ರಜ್ಞೆಯನ್ನೇ ಪ್ರಶ್ನಿಸುವಂತಾಗುತ್ತದೆ.

ಆದ್ದರಿಂದ ಆರ್ಸಿಬಿ ಗೆಲುವನ್ನು ಒಂದು ಸಜಹ ಕ್ರೀಡಾ ಸ್ಪೂರ್ತಿಯಿಂದ ಆಸ್ವಾಧಿಸೋಣ. ಸೋಲು ಗೆಲುವನ್ನು ಸಹ ಸಹಜವಾಗಿ ಸ್ವೀಕರಿಸೋಣ. ಈ ಟೆಲಿವಿಷನ್ ಸುದ್ದಿ ಮಾಧ್ಯಮಗಳ ಹುಚ್ಚು ಮತ್ತು ವಿಕೃತ ಸ್ವಭಾವದ ನಡವಳಿಕೆಗಳ ಸುದ್ದಿ ಪ್ರಸಾರದ ಅನಾಗರಿಕ ನಡವಳಿಕೆಗೆ ಬಲಿಯಾಗದೆ ದೇಶದ ಸಾಂಸ್ಕೃತಿಕ ವ್ಯಕ್ತಿತ್ವದ ಘನತೆಯನ್ನು ಎತ್ತಿ ಹಿಡಿಯೋಣ…..

ಕ್ರಿಕೆಟ್ ಆಟಗಾರರು ದೇವರುಗಳು ಅಲ್ಲ, ಅತಿ ಮಾನುಷ ಶಕ್ತಿಗಳು ಅಲ್ಲ, ಕೇವಲ ಪ್ರತಿಭಾವಂತ ಕ್ರೀಡಾ ಪಟುಗಳು ಮಾತ್ರ. ಅದನ್ನು ಗೌರವಿಸುತ್ತಾ,….

ಪೆಪ್ಸಿ, ಕೋಕಾ ಕೋಲಾ ಮುಂತಾದ ವಿಷಕಾರಿ ಪಾನೀಯಗಳಿಗೆ ರೂಪದರ್ಶಿಗಳಾಗಿ, ಹಣಕ್ಕಾಗಿ ದೇಶದ ಯುವ ಜನತೆಯ ಅನಾರೋಗ್ಯಕ್ಕೆ ಕಾರಣವಾಗುತ್ತಿರುವ, ಸ್ಥಳೀಯ ಎಳನೀರು, ನಿಂಬೆರಸ, ಕಬ್ಬಿನ ರಸ, ಹಾಲು, ಸಿರಿ ಧಾ,ನ್ಯ ಗಂಜಿ ಮುಂತಾದ ಪಾನೀಯಗಳಿಗೆ ಪ್ರೋತ್ಸಾಹ ನೀಡದ, ಅತ್ಯಂತ ಅಪಾಯಕಾರಿ ಜೂಜಾಟವಾದ ಡ್ರೀಮ್ ಇಲೆವೆನ್, ರಮ್ಮಿ ಮುಂತಾದ ಆಟಗಳಿಗೆ ಮಾಡಲ್ ಆಗಿ ತಮ್ಮ ಮಾತು ಮತ್ತು ಉಡುಪುಗಳ ಮೂಲಕ ನಮ್ಮ ದೇಶದ ಅಂತಃ ಸತ್ವವಾದ ಯುವ ಜನತೆಯ ದಾರಿ ತಪ್ಪಿಸುತ್ತಿರುವ ಆ ಜಾಹೀರಾತುಗಳಲ್ಲಿ ಭಾಗವಹಿಸುತ್ತಿರುವ ಎಲ್ಲಾ ಕ್ರೀಡಾ ಪಟುಗಳು ಸ್ವಾರ್ಥಿಗಳು ಮತ್ತು ಹಣದಾಸೆಯ ದ್ರೋಹಿಗಳು ಎಂಬ ಜಾಗೃತಿಯ ಎಚ್ಚರಿಕೆಯೊಂದಿಗೆ……

ವಿವೇಕಾನಂದ. ಎಚ್. ಕೆ,

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

ಇದನ್ನೂ ಓದಿ

ಭಾರತದಿಂದ ಅಡಿಕೆಯ ರಫ್ತು ಎಷ್ಟಾಗುತ್ತದೆ…? ಹೇಗಾಗುತ್ತದೆ…?
July 8, 2025
7:27 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಬದುಕು ಪುರಾಣ | ದಾನಕ್ಕೆ ಬಂದ ಮಾನ 
July 6, 2025
8:00 AM
by: ನಾ.ಕಾರಂತ ಪೆರಾಜೆ
ಮಕ್ಕಳ ಪುಟ | ನಿಮ್ಮ ಚಿತ್ರ -ನಮ್ಮ ಬೆಳಕು | ಚಂದನ್‌ ಕೆ ಪಿ
July 5, 2025
11:10 PM
by: ದ ರೂರಲ್ ಮಿರರ್.ಕಾಂ
ಹಲಸಿನ ಬೀಜದ ಚನ್ನ ಬೋಂಡಾ
July 5, 2025
7:00 AM
by: ದಿವ್ಯ ಮಹೇಶ್

You cannot copy content of this page - Copyright -The Rural Mirror