ಚುನಾವಣಾ ಕಣ | ಸುಳ್ಯದಲ್ಲಿ ಏನೇನಾಗ್ತಿದೆ ? | ನೋಟಾ ಅಭಿಯಾನ ಒಂದು ಕಡೆ | ಮತದಾನ ಬಹಿಷ್ಕಾರ ಮತ್ತೊಂದು ಕಡೆ |

April 11, 2023
4:19 PM

ವಿಧಾನಸಭಾ ಚುನಾವಣಾ ಕಣ ಸಿದ್ಧವಾಗುತ್ತಿದೆ. ಸುಳ್ಯ ವಿಧಾನಸಭಾ ಕ್ಷೇತ್ರವು ಈ ಬಾರಿ ಗಮನ ಸೆಳೆಯುತ್ತಿದೆ. ಈಗಾಗಲೇ ಕಾಂಗ್ರೆಸ್‌ ಅಭ್ಯರ್ಥಿ ಘೋಷಣೆ ಮಾಡಿದೆ, ಆಮ್‌ ಆದ್ಮಿ ಪಕ್ಷವು ಕೂಡಾ ಅಭ್ಯರ್ಥಿ ಘೋಷಣೆ ಮಾಡಿ ಪ್ರಚಾರ ಆರಂಭಿಸಿದ್ದಾರೆ. ಬಿಜೆಪಿ ತನ್ನ ಅಭ್ಯರ್ಥಿ ಇನ್ನಷ್ಟೇ ಘೋಷಣೆ ಮಾಡಲು ಬಾಕಿ ಉಳಿದಿದೆ. ಈ ನಡುವೆ ಮತದಾನ ಬಹಿಷ್ಕಾರ, ನೋಟಾ ಅಭಿಯಾನಗಳೂ ಜೋರಾಗಿದೆ.

ಸುಳ್ಯ ವಿಧಾನಸಭಾ ಕ್ಷೇತ್ರವು ಮೀಸಲು ಕ್ಷೇತ್ರ. ಕಳೆದ 30 ವರ್ಷಗಳಿಂದ ಸುಳ್ಯದಲ್ಲಿ ಬಿಜೆಪಿ ಅಭ್ಯರ್ಥಿ ಎಸ್‌ ಅಂಗಾರ ಅವರು  ಗೆಲುವು ಸಾಧಿಸುತ್ತಿದ್ದಾರೆ. ಈ ಬಾರಿ ಅಂಗಾರ ಅವರ ವಿರುದ್ಧ ಅಸಮಾಧಾನದ ಅಲೆಗಳು ಕಂಡುಬಂದಿದೆ. ಇದೀಗ ಮತದಾನ ಬಹಿಷ್ಕಾರ, ನೋಟಾ ಅಭಿಯಾನಗಳೂ ಆರಂಭವಾಗಿವೆ.

ಸುಳ್ಯ ಕ್ಷೇತ್ರವು ದಕ್ಷಿಣ ಭಾರತದ ಬಿಜೆಪಿ ಹೆಬ್ಬಾಗಿಲು ಎಂದು ಬಿಜೆಪಿ ಹಿರಿಯ ನಾಯಕ ಅಡ್ವಾಣಿ ಅವರಿಂದ ಕರೆಯಿಸಿಕೊಂಡಿರುವ ಕೇತ್ರ. ಇದಕ್ಕೆ ಸರಿಯಾಗಿ ಕಳೆದ 30 ವರ್ಷಗಳಿಂದ ಬಿಜೆಪಿ ಅಭ್ಯರ್ಥಿ ಎಸ್‌ ಅಂಗಾರ ಅವರು ಗೆಲವು ಸಾಧಿಸಿಕೊಂಡು ಬರುತ್ತಿದ್ದಾರೆ. ಈಚೆಗೆ ಕೆಲವು ಸಮಯಗಳಿಂದ ಅಭಿವೃದ್ಧಿ ಕಾರಣದಿಂದ, ಉದ್ದಟತನದ ಕಾರಣದಿಂದ  ಅಸಮಾಧಾನಗಳು ಹೆಚ್ಚಾಗಿವೆ. ಅವರ ಜೊತೆಗಾರರೇ ಇದಕ್ಕೆ ಕಾರಣ ಎಂಬುದು  ಪಕ್ಷದ ಒಳಗೆ ಈಗ ಚರ್ಚೆಯಾಗುತ್ತಿರುವ ವಿಷಯ. ಹೀಗಾಗಿ ಈ ಬಾರಿ ನೋಟಾ ಹಾಗೂ ಕೆಲವು ಕಡೆ ಮತದಾನ ಬಹಿಷ್ಕಾರದ ಮಾತುಗಳೇ ಹೆಚ್ಚಾಗಿ ಕೇಳಿಬಂದಿದೆ. ಕಳೆದ ಬಾರಿಯೂ ಇದೇ ಮಾದರಿಯ ಅಸಮಾಧಾನಗಳು ಇದ್ದವು. ಆದರೆ ಚುನಾವಣೆ ಘೋಷಣೆಗೂ ಮುನ್ನವೇ ಈ ಅಸಮಾಧಾನಗಳನ್ನು ಸರಿಪಡಿಸಲು ಸಂಘ ಪರಿವಾರದ ಎಲ್ಲಾ ಸಂಘಟನೆಗಳೂ ಕಣಕ್ಕೆ ಇಳಿದಿದ್ದವು. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಂಘ ಪರಿವಾರ ಮನೆಮನೆಗೆ ತೆರಳಿ ಈ ಬಾರಿ ಅಸಮಾಧಾನ ಬದಿಗಿಡಿ ಎಂದು ಮನ ಒಲಿಸಿತ್ತು. ಈ ಬಾರಿ ಅಂತಹ ಯಾವ ಪ್ರಯತ್ನಗಳೂ ಇದುವರೆಗೆ ನಡೆದಿಲ್ಲ.

ಎರಡು ವರ್ಷದ ಹಿಂದೆ ಸುಳ್ಯದ ಘಟನೆಗಳು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದವು. ಇಲ್ಲಿನ ಗುತ್ತಿಗಾರು ಗ್ರಾಮದ ಮೊಗ್ರದ ಸೇತುವೆ, ನೆಟ್ವರ್ಕ್‌ ಸಮಸ್ಯೆ , ಅದಾದ ಬಳಿಕ ಜಾಲ್ಸೂರಿನ ಮರಸಂಕ ಸೇತುವೆ, ಕೊಲ್ಲಮೊಗ್ರದ ಸೇತುವೆ ಸಮಸ್ಯೆ, ಅರಂತೋಡನ ರಸ್ತೆ ಸಮಸ್ಯೆ, ದುಗಲಡ್ಕ-ನೀರಬಿದರೆ ರಸ್ತೆ, ಕಡಬದ ರಸ್ತೆ ಸಮಸ್ಯೆ, ಬಾಳುಗೋಡು ಸೇತುವೆ, ಕರಿಕಳ-ಪಂಬೆತ್ತಾಡಿ ರಸ್ತೆ  ಸೇರಿದಂತೆ ಹಲವು ಅಭಿವೃದ್ಧಿ ಪರವಾದ ಬೇಡಿಕೆಗಳೆಲ್ಲವೂ ನಿರ್ಲಕ್ಷ್ಯ ಒಳಗಾದವು ಹಾಗೂ ಉದ್ದಟತನದ ಕಾರಣದಿಂದ ಅಲ್ಲಿನ ಬಹುತೇಕ ಮತದಾರರು, ಕಾರ್ಯಕರ್ತರು ಅಸಮಾಧಾನಗೊಂಡರು. ಗುತ್ತಿಗಾರಿನ ಮೊಗ್ರದಲ್ಲಂತೂ ಗ್ರಾಪಂ ಚುನಾವಣೆಯ ಸಂದರ್ಭ ಅಲ್ಲಿನ 4 ಸ್ಥಾನಗಳು ಪಕ್ಷೇತರ ಪಾಲಾದವು. ಅನೇಕ ವರ್ಷಗಳಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಗೆಲವು ಕಾಣುತ್ತಿದ್ದರು. ಆದರೆ ಅಭಿವೃದ್ಧಿ ನಿರ್ಲಕ್ಷ್ಯದ ಕಾರಣದಿಂದ ಮತದಾರರು ಬದಲಾವಣೆ ಬಯಸಿದ್ದರು. ಇದೀಗ ಎಲ್ಲೆಡೆಯೂ ಅಸಮಾಧಾನದ ಅಲೆ ಕಂಡುಬರುತ್ತಿದೆ.

ಅರಂತೋಡು ರಸ್ತೆ ಸಮಸ್ಯೆ ಬಗ್ಗೆಯೂ ನಿರ್ಲಕ್ಷ್ಯ, ಉದ್ದಟತನದ ಕಾರಣದಿಂದ ಅಲ್ಲಿ ನೋಟಾ ಅಭಿಯಾನ ಆರಂಭಗೊಂಡಿತ್ತು. ಇಂದಿಗೂ ರಸ್ತೆ ಸಮಸ್ಯೆ ಸರಿಪಡಿಸುವ ಭರವಸೆ ದೊರೆತಿಲ್ಲ.

ದುಗಲಡ್ಕ- ಕೊಡಿಯಾಲ-ಸುಳ್ಯ ರಸ್ತೆ ಬೇಡಿಕೆಯೂ ಇದೇ ಮಾದರಿಯ ಅವ್ಯವಸ್ಥೆ ಕಂಡಿತು. ಇಲ್ಲಿನ ಹೋರಾಟವನ್ನು ಕಾಂಗ್ರೆಸ್‌ ಬೆಂಬಲಿತ ಎಂದು ಕರೆಯುವ ಮೂಲಕ ಅಲ್ಲಿನ  ಹೋರಾಟಗಾರನ್ನು ಮತ್ತಷ್ಟು ಕೆರಳಿಸಿತು. ಇದೀಗ ಈ ಪ್ರದೇಶದಲ್ಲಿ  ಮತದಾನ ಬಹಿಷ್ಕಾರ ನಿರ್ಧರಿಸಿದ್ದು ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತಕ್ಕೆ ಪತ್ರ ಹಾಗೂ ಇ ಮೈಲ್‌ ಮೂಲಕ ಮಾಹಿತಿ ನೀಡುವ ಕೆಲಸ ಆರಂಭವಾಗಿದೆ.

ಅಭಿವೃದ್ಧಿಯ ಬೇಡಿಕೆ ವ್ಯಕ್ತಪಡಿಸಿದ ಎಲ್ಲೆಡೆಯೂ ಉದ್ದಟತನ ಹಾಗೂ ನಿರ್ಲಕ್ಷ್ಯ ಕಂಡುಬಂದಿರುವ ಕಾರಣದಿಂದ ಎಲ್ಲಾ ಕಡೆಯೂ ಮತದಾನ ಬಹಿಷ್ಕಾರದ ಬ್ಯಾನರ್‌ ಕಂಡುಬಂದಿದೆ.

ಇದೀಗ ಬಿಜೆಪಿ ಅಭ್ಯರ್ಥಿ ಘೋಷಣೆ ವಿಳಂಬವಾಗಿದೆ. ಕಾಂಗ್ರೆಸ್‌ ಅಭ್ಯರ್ಥಿ ಘೋಷಣೆ ಮಾಡಿದೆ.ಅಭ್ಯರ್ಥಿಯಾಗಿ ಕೃಷ್ಣಪ್ಪ ಅವರನ್ನು ಘೋಷಣೆ ಮಾಡಿದೆ, ಟಿಕೆ ಆಕಾಂಕ್ಷಿಯಾಗಿದ್ದ ನಂದಕುಮಾರ್‌ ಬೆಂಬಲಿಗರು ಸಮಾವೇಶದ ಮೂಲಕ ಎಚ್ಚರಿಕೆ ನೀಡಿದ್ದಾರೆ. ಪಕ್ಷೇತರ ಸ್ಫರ್ಧೆಯ ಬಗ್ಗೆಯೂ ಹೇಳಿದ್ದಾರೆ. ಹೀಗಾಗಿ ಈ ಬಾರಿ ಕಾಂಗ್ರೆಸ್‌ ಗೆಲುವಿನ ಕಡೆಗೆ ಸುಲಭ ಸಾಧ್ಯವಾಗಿದ್ದರೂ ಈ ಅವಕಾಶದಿಂದ ವಂಚಿತವಾಗುತ್ತಿದೆ.

ಆಮ್‌ ಆದ್ಮಿ ಪಕ್ಷದಿಂದ ಮಾಜಿ ಶಾಸಕ ಕುಶಲ ಅವರ ಪುತ್ರಿ ಎಂಬಿಎ ಪದವೀಧರೆ ಸುಮನಾ ಬೆಳ್ಳಾರ್ಕರ್‌ ಸ್ಫರ್ದೆಯಲ್ಲಿದ್ದಾರೆ. ಈಗಾಗಲೇ ಮತದಾರರನ್ನು ನೇರ ಸಂಪರ್ಕಿಸುವ ಮೂಲಕ ಗಮನ ಸೆಳೆದಿದ್ದಾರೆ. ಸುಳ್ಯದ ಸಮಸ್ಯೆಗೆ ಪರಿಹಾರ ಒದಗಿಸುವ ಬಗ್ಗೆ ಭರವಸೆ ನೀಡುತ್ತಿದ್ದಾರೆ. ಆದರೆ ಹೊಸ ಪಕ್ಷಕ್ಕೆ ಮತದಾರರು ಬೆಂಬಲಿಸುತ್ತಾರಾ ಎನ್ನುವುದು  ಇರುವ ಪ್ರಶ್ನೆ.

ಉಳಿದಂತೆ ಜೆಡಿಎಸ್‌ ಹಾಗೂ ಎಸ್‌ಡಿಪಿಐ ಕೂಡಾ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಬಗ್ಗೆ ಹೇಳಿದೆ. ಕೆಆರ್‌ಎಕ್‌ ಪಕ್ಷವು ಕೂಡಾ ಸೂಕ್ತ ಅಭ್ಯರ್ಥಿ ಸಿಕ್ಕಿದರೆ ಕಣಕ್ಕೆ ಇಳಿಸುವುದಾಗಿ ಹೇಳಿದೆ.

ಒಟ್ಟಿನಲ್ಲಿ ಈ ಬಾರಿ ಸುಳ್ಯದಲ್ಲಿ ಮತದಾರರು ಪ್ರಶ್ನೆ ಮಾಡಲು ಆರಂಭಿಸಿದ್ದಾರೆ. ಅಭಿವೃದ್ಧಿ ರಾಜಕಾರಣದ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. ನೋಟಾ, ಮತದಾನ ಬಹಿಷ್ಕಾರ ಈ ಬಾರಿ ಪಕ್ಷಗಳಿಗೆ ಸವಾಲಾಗಿದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ವಿಶ್ಲೇಷಣೆ

ಸಮಾಜದ ಚರ್ಚೆಯ ಪ್ರತಿಬಿಂಬ

ಇದನ್ನೂ ಓದಿ

ಹವಾಮಾನ ವರದಿ | 28-07-2026 | ಮುಂದಿನ 10 ದಿನ ಸಾಮಾನ್ಯ ಮಳೆ – ಆಗಸ್ಟ್ ಆರಂಭದಲ್ಲಿ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು ಸಾಧ್ಯತೆ
July 27, 2026
11:36 AM
by: ದ ರೂರಲ್ ಮಿರರ್.ಕಾಂ
200 ಹಸುಗಳಿಂದ ₹2 ಕೋಟಿ ವಾರ್ಷಿಕ ಆದಾಯ…! ಗಮನ ಸೆಳೆದ ಉತ್ತರ ಪ್ರದೇಶದ ಮಾದರಿ
July 27, 2026
11:27 AM
by: ದ ರೂರಲ್ ಮಿರರ್.ಕಾಂ
ರಬ್ಬರ್ ತೋಟ ಹಸಿರಾಗಿರಬಹುದು… ಆದರೆ ಕಾಡಿಗೆ ಪರ್ಯಾಯವಲ್ಲ…! ಮಲೇಷ್ಯಾ ಅಧ್ಯಯನ ವರದಿ
July 27, 2026
6:55 AM
by: ದ ರೂರಲ್ ಮಿರರ್.ಕಾಂ
ಅಡುಗೆ ಎಣ್ಣೆ ಆಮದು 7% ಏರಿಕೆ – ಭಾರತ ಇನ್ನೂ ಆಮದು ಅವಲಂಬಿತ
July 27, 2026
6:47 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror