ಚುನಾವಣೆಯ ಸಮಯ ಬಂದಾಗ ಕೃಷಿಕರಿಗೆ ಕೋವಿ ಠೇವಣಾತಿಯ ಶಿಕ್ಷೆ. ಪ್ರತೀ ಬಾರಿಯೂ ಚುನಾವಣೆಯ ಬಂದಾಗ ಕೋವಿ ಠೇವಣಾತಿ ಇರಿಸುವುದು ನಿಲ್ಲಬೇಕು ಎಂದು ರೈತರು ಮನವಿ ಮಾಡುತ್ತಿದ್ದರೂ ಪರಿಹಾರ ಸಿಕ್ಕಿರಲಿಲ್ಲ. ಇದೀಗ ನ್ಯಾಯಾಲಯದಿಂದ ಮಹತ್ವದ ತೀರ್ಪು ಪ್ರಕಟವಾಗಿದ್ದು, ಇನ್ನು ಮುಂದೆ ಚುನಾವಣೆಯ ಸಮಯದಲ್ಲಿ ಕೋವಿ ಡಿಪಾಸಿಟ್ ಸಾರ್ವತ್ರಿಕವಾಗಿ ಇರುವುದಿಲ್ಲ.
ಪ್ರತಿ ಚುನಾವಣೆಗೂ ಕೋವಿ ಡಿಸಾಸಿಟ್ ಇಡುವ ಪ್ರಕ್ರಿಯೆಯ ವಿರುದ್ಧ ರೋಸಿ ಹೋಗಿದ್ದ ಕೃಷಿಕರು ಹಾಗೂ ಪರವಾನಿಗೆದಾರರು ಅಲ್ಲಲ್ಲಿ ಪ್ರತಿಭಟನೆ, ನ್ಯಾಯಾಲಯದ ಮೊರೆ ಹೋಗುವುದು ನಡೆಸುತ್ತಲೇ ಇದ್ದರು. ಆದರೆ ಎಲ್ಲವೂ ಚುನಾವಣೆಯ ಆ ಕ್ಷಣದಲ್ಲಿ ಪುನಾರಾವರ್ತನೆಯಾಗುತ್ತಿತ್ತು.2024ರ ಚುನಾವಣೆಗೂ ಅದೇ ಪುನಾರರ್ತನೆ ಆದಾಗ ಪ್ರಶ್ನಿಸಿ ಮೊದಲಿನ ಹಂತದಲ್ಲಿ ಎ.1 ರಂದು ಜಯಪ್ರಸಾದ್ ಜೋಶಿ ಬೆಳ್ಳಾರೆ, ಪುರುಷೋತ್ತಮ ಗೌಡ ಮಲ್ಕಜೆ, ಸುದರ್ಶನ ಕುಮಾರ್, ಎಂ. ಗೋವಿಂದ ಭಟ್ ಮಾಣಿಮೂಲೆ ಹಾಗೂ ಗಿರಿಜಾ ಶಂಕರ್ ಅವರ ರಿಟ್ ಅರ್ಜಿಗಳು ಸಲ್ಲಿಕೆಯಾಗಿತ್ತು.
ಪ್ರಥಮ ಹಂತದಲ್ಲಿ ಸಲ್ಲಿಕೆಯಾದ 5 ರಿಟ್ ಅರ್ಜಿಗಳು ಗೌರವಾನ್ವಿತ ನ್ಯಾಯಾಧೀಶ ಸಚಿನ್ ಶಂಕರ್ ಮುಗದಮ್
ಅವರ ನ್ಯಾಯ ಪೀಠದ ಮುಂದೆ ಬಂದಿದ್ದು ಅವುಗಳನ್ನು ಜಂಟಿಯಾಗಿ ತನಿಖೆ ನಡೆಸಿದ್ದರು. ಆಗ ಜಿಲ್ಲಾಡಳಿತ ಈ 5
ರಿಟ್ ಅರ್ಜಿಗಳ 9 ಅರ್ಜಿದಾರರುಗಳಿಗೆ ವಿನಾಯಿತಿ ನೀಡಿದ್ದಲ್ಲದೆ ಠೇವಣಿ ಇಟ್ಟ ಆಯುಧಗಳನ್ನು ಹಿಂದೆ ಕೊಡುವರೇ
ನ್ಯಾಯಾಲಯದ ಮುಂದೆ ಒಪ್ಪಿಕೊಂಡಿತ್ತು.
ಸರಕಾರಿ ವಕೀಲರು ಪ್ರಕರಣದಲ್ಲಿ ಅರ್ಜಿ ಸಲ್ಲಿಸಿದವರಿಗೆ ವಿನಾಯಿತಿ ಆದೇಶ ನೀಡಿದ ಕಾರಣ ಪ್ರಕರಣವನ್ನು ಅಷ್ಟಕ್ಕೇ ವಿಲೆವಾರಿ ಆದೇಶವಾಗುವಂತೆ ಕೋರಿದ್ದರೂ ಅರ್ಜಿದಾರರುಗಳ ವಕೀಲರುಗಳು ಹಲವಾರು ಕಾನೂನಿನ ಅಂಶಗಳನ್ನು ಉಲ್ಲೇಖಿಸಿ ವಿನಾಯಿತಿ ನೀಡಿದ ಮಾತ್ರಕ್ಕೆ ಪ್ರಕರಣವನ್ನು ಅಂತಿಮಗೊಳಿಸಬಾರದು ಎಂದು ವಾದ ಮಂಡಿಸಿದ್ದರು. ಇದನ್ನು ಮಾನ್ಯ ಮಾಡಿದ ನ್ಯಾಯಾಧೀಶರು ಆದೇಶಕ್ಕೆ ಕಾದಿರಿಸಿದ್ದರು. ಆ ಪ್ರಕಾರ ಎ.25 ರಂದು ಗೌರವಾನ್ವಿತ ನ್ಯಾಯಾಧೀಶ ಸಚಿನ್ ಶಂಕರ್ ಮುಗದಮ್ ಅವರ ನ್ಯಾಯ ಪೀಠ 5 ರಿಟ್ ಅರ್ಜಿದಾರರ ವಾದವನ್ನು ಪುರಸ್ಕರಿಸಿ ಆದೇಶ ಮಾಡಿದೆ.
ಪರವಾನಿಗೆ ನೀಡುವಾಗಲೇ ಸೂಕ್ತ ತೀವ್ರ ತನಿಖೆ ನಡೆಸಿ ಯೋಗ್ಯರಿಗೆ ಮಾತ್ರ ನೀಡುವುದಾಗಿದೆ. ಪರವಾನಿಗೆ ನೀಡುವಾಗಲೇ
ಅರ್ಹತೆ ಮತ್ತು ಅವಶ್ಯಕತೆ ಪರಿಗಣಿಸಲ್ಪಡುತ್ತದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಎಲ್ಲರೂ ಡೆಪಾಸಿಟ್ ಇಡಬೇಕೆಂದು ಮಾಡಿದ
ಆದೇಶ ತಪ್ಪು, ಅಂತಹ ಆದೇಶ ಚುನಾವಣಾ ಆಯೋಗದ ಮಾರ್ಗಸೂಚಿಗಳಿಗೂ ಪರವಾನಿಗೆ ನೀಡುವ ಉದ್ದೇಶಗಳಿಗೂ
ವ್ಯತಿರಿಕ್ತವಾಗಿದೆ. ಚುನಾವಣಾ ಆಯೋಗ ಮಾರ್ಗಸೂಚಿಗಳ ಪ್ರಕಾರ ಕ್ರಿಮಿನಲ್ ಹಿನ್ನಲೆಯವರನ್ನು ಗುರುತಿಸಿ ಅವರಿಗೆ
ಮಾತ್ರ ಡೆಪಾಸಿಟ್ ಇಡುವ ಆದೇಶ ಮಾಡುವುದು ಬಿಟ್ಟು ವ್ಯಾಪಕ ಆದೇಶ ಮಾಡಲಾಗಿದೆ. ಅಧಿಕಾರಿಗಳು ಕೋರ್ಟ್
ಆದೇಶಗಳ ಪ್ರಕಾರ ನಡಕೊಂಡಿಲ್ಲ. ಅಧಿಕಾರಿಗಳು ಸರಿಯಾದ ಕ್ರಮಗಳನ್ನು ಕೈ ಬಿಟ್ಟು ಸುಲಭ ದಾರಿಯನ್ನು ಅನುಸರಿಸಿದ್ದಾರೆ. ಈ ರೀತಿ ನಡಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಡೆಪಾಸಿಟ್ ಮಾಡಿಸಿ ಸಂಖ್ಯಾ ದೃಷ್ಟಿಯಲ್ಲಿ ತೋಪಿಯ ಮೇಲೆ ಗರಿಯಂತೆ ಪರಿಗಣಿಸುತ್ತಿದ್ದಾರೆ ಎಂದು ನ್ಯಾಯ ಪೀಠ ಅಭಿಪ್ರಾಯ ಪಟ್ಟಿದೆ. ಹೀಗಾಗಿ ಇನ್ನು ಮುಂದಕ್ಕೆ ಅನುಸರಿಸಬೇಕಾದ ವಿಧಾನಗಳ ಬಗ್ಗೆ ಈ ರೀತಿಯಾಗಿ ನಿರ್ದೇಶನ ನೀಡಿದೆ. ನಿರ್ದೇಶನಗಳು ಹೀಗಿದೆ….
- ಅಧಿಕಾರಿಗಳು ಎಲ್ಲರಿಂದ ಬಂದೂಕುಗಳನ್ನು ಠೇವಣಿ ಮಾಡುವಂತೆ ಒತ್ತಾಯಿಸುವ ಸಾಮಾನ್ಯ ವ್ಯಾಪಕ ಆದೇಶಗಳನ್ನು ನೀಡುವುದನ್ನು ಕಟ್ಟು ನಿಟ್ಟಾಗಿ ನಿಷೇಧಿಸಲಾಗಿದೆ. ಅಂತಹ ಸಾಮಾನ್ಯ ವ್ಯಾಪಕ ಆದೇಶಗಳು ಚುನಾವಣಾ ಆಯೋಗ ಹೊರಡಿಸಿದ ನಿರ್ದಿಷ್ಟ ನಿರ್ದೇಶನಗಳಿಗೆ ವ್ಯತಿರಿಕ್ತ ಆಗುವುದಲ್ಲದೆ ವೈಯಕ್ತಿಕ ಪರವಾನಿಗೆ ಹೊಂದಿದವರ ಸೂಕ್ಷ್ಮವಾದ ಅಪಾಯಗಳಿಗೆ ಸ್ಪಂದಿಸುವಲ್ಲಿ ವಿಫಲವಾಗುತ್ತದೆ.
- ಅಧಿಕಾರಿಗಳು ಸಾಮಾನ್ಯವಾಗಿ ವನ್ಯಜೀವಿಗಳನ್ನು ಎದುರಿಸುತ್ತಿರುವ ದುರ್ಬಲ ಸಮುದಾಯಗಳು ಮತ್ತು ಅವರ ಬೆಳೆಗಳು ಮತ್ತು ಜಾನುವಾರುಗಳಿಗೆ ಆಗಾಗ್ಗೆ ಪ್ರೇರಿತ ಹಾನಿ ಗಮನದಲ್ಲಿ ಇರಿಸಿಕೊಳ್ಳಬೇಕು ಆದ್ದರಿಂದ ಇದರ ಪರಿಹಾರಕ್ಕೆ ಸ್ಕ್ರೀನಿಂಗ್ ಕಮಿಟಿ ಅರಣ್ಯ ಸಮೀಪದ ರೈತರು ಹೊಂದಿರುವ ಶಸ್ತ್ರಾಸ್ತ್ರಗಳ ಬಗ್ಗೆ ಸೂಕ್ಷ್ಮವಾದ ಅನುಸಂಧಾನ ಕ್ರಮಗಳನ್ನು ಕೈಗೊಳ್ಳಬೇಕು ಅಧಿಕಾರಿಗಳು ಚುನಾವಣಾ ಸಮಯ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಜೊತೆ ಜೊತೆಗೆ ಅರಣ್ಯ ಸಮೀಪದ ರೈತರು, ದುರ್ಬಲ ಸಮುದಾಯಗಳು, ಮತ್ತು ವನ್ಯ ಮೃಗಗಳ ಮಧ್ಯೆ ನಡೆಯುವ ತಿಕ್ಕಾಟ ಪರಿಗಣಿಸಿ ಈ ಎರಡರ ಮಧ್ಯೆ ಸಮತೋಲನ ಸಾಧಿಸಿಕೊಳ್ಳಬೇಕು.
- ಸಾಮಾನ್ಯವಾಗಿ ಆಗಾಗ್ಗೆ ಸಂಭಾವ್ಯ ಜೀವ ಅಪಾಯಕ್ಕೆ ಒಡ್ಡಿಕೊಳ್ಳುವ ವಕೀಲರು, ಕಾರ್ಯಕರ್ತರು ಇದ್ದಾರೆ. ಆದ್ದರಿಂದ ಪ್ರತಿ ಚುನಾವಣೆಯಲ್ಲಿ ಇಂತಹ ವೈಯಕ್ತಿಕ/ ಕಾರ್ಯಕರ್ತ/ ವೃತ್ತಿದಾರರಿಗೆ ಬಂದೂಕುಗಳನ್ನು ಒಪ್ಪಿಸಲು ಸಾಮಾನ್ಯ ವ್ಯಾಪಕ ಆದೇಶ ಮಾಡಬಾರದು. ವೈಯಕ್ತಿಕ/ ಕಾರ್ಯಕರ್ತ/ವೃತ್ತಿ ಪರರು ತಮ್ಮ ವೈಯಕ್ತಿಕ ಸುರಕ್ಷತೆ ಭದ್ರತೆಗಾಗಿ ಶಸ್ತಾಸ್ತ್ರಗಳು ನಿರ್ಣಾಯಕವಾಗಿದೆ. ಆದ್ದರಿಂದ ಅಧಿಕಾರಿಗಳು ಸಾಮಾನ್ಯ ವ್ಯಾಪಕ ಆದೇಶವನ್ನು ಹೊರಡಿಸುವ ಮೂಲಕ ಇಂತಹವರ ಜೀವವನ್ನು ಅಪಾಯಕ್ಕೆ ಒಡ್ಡಬಾರದು. ಇದು ಚುನಾವಣಾ ಸಮಯ ಕೂಡಾ ಅವಶ್ಯವಾಗಿದ್ದು, ಇಂತಹವರು ಚುನಾವಣಾ ಕಾರ್ಯಗಳಲ್ಲಿ ಯಾವುದೇ ಸಂಬಂಧ ಇಲ್ಲದವರಾಗಿದ್ದರೂ ಆ ಸಮಯ ಶಸ್ತಾಸ್ತ್ರಗಳ ಹೆಚ್ಚಿನ ಅವಶ್ಯಕತೆ ಹೊಂದಿರಬಹುದು.
- ಶಸ್ತಾಸ್ತ್ರಗಳ ಬಗ್ಗೆ ಎಲ್ಲಾ ನಿರ್ದೇಶನಗಳು, ಮಾಹಿತಿಗಳು ಅಥವಾ ಇತರ ಯಾವುದೇ ಕ್ರಮಗಳು ಬರಹದ ರೂಪದಲ್ಲಿಯೇ ಇರಬೇಕು. ಇದು ಬದ್ಧತೆ, ಪಾರದರ್ಶಕತೆಯನ್ನು ಖಚಿತ ಪಡಿಸುವುದಲ್ಲದೆ ಮತ್ತು ಆದೇಶಗಳ ಒಂದು ಸ್ಪಷ್ಟ ದಾಖಲೆ ಇರುತ್ತದೆ. ಬಾಯ್ದೆರೆ ನಿರ್ದೇಶನಗಳು ವೈಯಕ್ತಿಕ ಯಾ ಪೋನಿನಲ್ಲಿ ನೀಡಿದ್ದು ಸಂಶಯಾತ್ಮಕ ಮತ್ತು ತಿರುಚಬಲ್ಲದ್ದು ಆದ್ದರಿಂದ ಪ್ರಕ್ರಿಯಯೆಲ್ಲಿ ಸಮಗ್ರತೆ ಕಾಪಾಡಲು ಅಂತಹ ಕ್ರಮವನ್ನು ಅನುಸರಿಸಬಾರದು.
- ಯಾವುದೇ ಚುನಾವಣೆ ಆರಂಭಿಸುವ ಮೊದಲೇ ಅಧಿಕಾರಿಗಳು ಆಯುಧ ಪರವಾನಿಗೆ ಹೊಂದಿದವರ ವ್ಯಾಪಕ ಮೌಲ್ಯ ಮಾಪನ ಮಾಡಬೇಕು. ಈ ಪ್ರಕ್ರಿಯೆ ಕ್ರಿಮಿನಲ್ ಹಿನ್ನಲೆ, ಅದರಲ್ಲೂ ಆ ಹಿಂದೆ ಚುನಾವಣಾ ಅವಧಿಯಲ್ಲಿ ಗಲಭೆ ನಡೆಸಿದವರನ್ನು ಆದ್ಯತೆ ನೀಡಿ ಇರಬೇಕು. ಈ ಕ್ರಮಗಳು ಸಂಭಾವ್ಯ ಅಪಾಯ ಗುರುತಿಸಲು ಮತ್ತು ಅಗತ್ಯ ಮುಂಜಾಗರೂಕ ಕ್ರಮಗಳನ್ನು ಕೈಗೊಂಡು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶಿತವಾಗಿರಬೇಕು.
- ಚುನಾವಣಾ ಅಯೋಗ ಚುನಾವಣಾ ಪೂರ್ವ ಮೌಲ್ಯ ಮಾಪನ ಮಾಡುವರೇ ಸಂಬಂಧಿತ ಪೊಲೀಸ್ ಅಧಿಕಾರಿಗಳಿಗೆ ಸ್ಪಷ್ಟ ಮತ್ತು ಸಮಗ್ರವಾದ ಮಾರ್ಗಸೂಚಿಗಳನ್ನು ಒದಗಿಸಬೇಕು. ಈ ಮಾರ್ಗ ಸೂಚಿಗಳು ವಿವರಣಾತ್ಮಕವಾಗಿದ್ದು ಅಪಾಯಗಳನ್ನು ತುಲನೆ ಮಾಡಲು ಮತ್ತು ಚುನಾವಣಾ ಆಯೋಗ ನೀಡಿರುವ ಸಮಗ್ರ ಕ್ರಮ ದಾಖಲಿಸುವಂತೆ ಮತ್ತು ವರದಿ ನೀಡುವಂತಿರಬೇಕು. ಒಂದು ಸಂಕ್ಷಿಪ್ತ ಸುಲಭ ಮಾರ್ಗಸೂಚಿಯ ಅವಶ್ಯವಿದೆ. ಆದ್ದರಿಂದ ಚುನಾವಣಾ ಆಯೋಗ ಪ್ರತಿ ಚುನಾವಣೆಗೆ ಮುನ್ನ ಚುನಾವಣೆಯಲ್ಲಿ ತೊಡಗಿಸಿದ ಅಧಿಕಾರಿಗಳು ಅನುಸರಿಸಬೇಕಾದ ಕ್ರಮಗಳು, ಸಂಕ್ಷಿಪ್ತವಾದ ಸೂಚನೆಗಳು ಬಗ್ಗೆ ಉಪಯೋಗ ಸ್ನೇಹಿ ಮಾರ್ಗಸೂಚಿಗಳನ್ನು ಪ್ರಸ್ತುತ ಪಡಿಸಬೇಕು.
- ಪೊಲೀಸ್ ಠಾಣೆಗಳು ಸಾಮಾನ್ಯವಾಗಿ ಜಾಮೀನಿನ ಮೇಲಿರುವ ವ್ಯಕ್ತಿಗಳ ಪಟ್ಟಿಯನ್ನು ಇಟ್ಟುಕೊಳ್ಳದಿದ್ದರೂ ಚುನಾವಣಾ ಸಮಯ ಗಲಭೆ ನಡೆಸಿದ ಆರೋಪಕ್ಕೊಳಗಾದವರ ದಾಖಲೆಯನ್ನು ಕಡ್ಡಾಯವಾಗಿ ಇಡಬೇಕು. ಈ ಮಾಹಿತಿಗಳು ಆಯುಧ ಪರವಾನಿಗೆದಾರರ ಅರ್ಹತೆಯನ್ನು ಮತ್ತು ಚುನಾವಣಾ ಅಯೋಗದ ಮಾರ್ಗಸೂಚಿಗಳನ್ನು ಅನುಸರಿಸುವಲ್ಲಿ ನಿರ್ಣಾಯಕ.
- ಚುನಾವಣಾ ಅಯೋಗ ಸಕ್ರಿಯವಾಗಿ ನೋಡಿಕೊಳ್ಳುತ್ತಾ ಮಾರ್ಗಸೂಚಿಗಳು ಜ್ಯಾರಿ ಆಗುತ್ತಿರುವುದನ್ನು ಎಲ್ಲಾ ಜಿಲ್ಲಾ ದಂಡಾಧಿಕಾರಿಗಳಿಂದ ವರದಿಗಳನ್ನು ಪಡೆಯುತ್ತಿರಬೇಕು. ಇದು ಮೌಲ್ಯ ಮಾಪನದ ಒಳ ಪರಿಣಾಮ ಮತ್ತು ಯಾವುದಾದರೂ ಸವಾಲುಗಳ ಬಗ್ಗೆ ಅಭಿವೃದ್ಧಿಗೆ ಅವಕಾಶವಿರುವ ಬಗ್ಗೆ ಬೆಳಕು ಚೆಲ್ಲಬೇಕು.
- ಪ್ರತಿ ಚುನಾವಣೆ ನಂತರ ಚುನಾವಣಾ ಆಯೋಗದ ಮಾರ್ಗಸೂಚಿಗಳು ಜಾರಿಯಾದ ಕುರಿತು ಮೌಲ್ಯ ಮಾಪನ ಮಾಡಲು ಸಮಗ್ರ ಸಮೀಕ್ಷೆ ನಡೆಸಬೇಕು. ಈ ಸಮೀಕ್ಷೆ ನಡೆದ ಕ್ರಮಗಳಲ್ಲಿ ತಪ್ಪುಗಳು, ಮೌಲ್ಯ ಮಾಪನ ಕ್ರಮದ ಒಟ್ಟಾರೆ ಪರಿಣಾಮಗಳನ್ನು ಗುರಿಯಾಗಿ ಇಟ್ಟು ಮುಂದೆ ಅಂತಹ ತಪ್ಪುಗಳು ಮರುಕಳಿಸದಂತೆ ಅಗತ್ಯ ವ್ಯತ್ಯಾಸಗಳನ್ನು ಕೈಗೊಳ್ಳುವಂತಿರಬೇಕು.
- ಇದಲ್ಲದೆ ಚುನಾವಣಾ ಪೂರ್ವ ಮೌಲ್ಯ ಮಾಪನದಲ್ಲಿ ಚುನಾವಣೆಗೆ ನೇರ ಸಂಬಂಧ ಪಟ್ಟು ನಡೆದ ಶಸ್ತ್ರಾಸ್ತ್ರ ಅಪರಾಧಗಳ ಬಗ್ಗೆ ಆಳ ವಿಮರ್ಶೆ ನಡೆಸಬೇಕು. ಈ ವಿಮರ್ಶೆ ಹಿಂದಿನ ಅಂಕಿ ಸಂಖ್ಯೆ, ದುರುಪಯೋಗದ ಮಾದರಿಗಳು, ಚುನಾವಣಾ ಪ್ರಕ್ರಿಯೆಯಲ್ಲಿ ಸಂಭಾವ್ಯ ಬೆದರಿಕೆ ಇತ್ಯಾದಿ ವಿಶ್ಲೇಷಿಸಬೇಕು, ಈ ಮಾಹಿತಿ ಆಯುಧ ಪರವಾನಿಗೆದಾರರ ಅರ್ಹತೆ ಮತ್ತು ಚುನಾವಣಾ ಆಯೋಗದ ಮಾರ್ಗಸೂಚಿಗಳ ಅನುಸರಣೇ ತುಲನೆ ಮಾಡುವರೇ ನಿರ್ಣಾಯಕ.
- ಅಧಿಕಾರಿಗಳು ಎಲ್ಲಾ ಆಯುಧಗಳನ್ನು ಮರಳಿ ಪಡೆಯುವುದನ್ನು ಅವಲಂಬಿಸದೆ ವೈಯಕ್ತಿಕ ಅಪಾಯಗಳನ್ನು ಆಧಾರವಾಗಿಟ್ಟುಕೊಂಡು ಒಂದು ಗುರಿಯನ್ನು ಆಯ್ದುಕೊಳ್ಳಬೇಕು. ಇದು ಸಂಭಾವ್ಯ ಹಿಂಸೆಯ ಬೆದರಿಕೆ ಮತ್ತು ಪರವಾನಿಗೆದಾರರಿಂದ ಆಯುಧಗಳ ದುರುಪಯೋಗವನ್ನು ವ್ಯಕ್ತಿಯಿಂದ ವ್ಯಕ್ತಿಗೆ ಆಧಾರದಲ್ಲಿ ಮೌಲ್ಯ ಮಾಪನವನ್ನು ಒಳಗೊಂಡಿರುತ್ತದೆ,
- ಈ ಮಾರ್ಗಸೂಚಿಗಳು ವೈಯಕ್ತಿಕ ಹಕ್ಕುಗಳು ಮತ್ತು ಸಾರ್ವಜನಿಕ ಸುರಕ್ಷತೆ ರಕ್ಷಣೇ ಮಧ್ಯೆ ಸಮತೋಲನ ಕಾಪಾಡುವರೇ ರೂಪಿಸಲಾಗಿದೆ. ಈ ಮಾರ್ಗಸೂಚಿಗಳನ್ನು ಅನುಸರಿಸಿ ಅಧಿಕಾರಿಗಳು ಮುಕ್ತ, ಪಾರದರ್ಶಕ ಹೊಣೆಗಾರಿಕೆ ಬದ್ಧತೆ ಚುನಾವಣಾ ವ್ಯವಸ್ಥೆಯ ಬದ್ಧತೆ ಕಾಪಾಡುವುದಲ್ಲದೆ ಆಯುಧ ಪರವಾನಿಗೆದಾರರ ಹಕ್ಕುಗಳನ್ನೂ ಗೌರವಿಸಬಹುದು.
ಜಯಪ್ರಸಾದ್ ಜೋಶಿಯವರ ಪರವಾಗಿ ಶ್ರೀಹರಿ. ಕೆ ಲೆಕ್ಸ್ ಜಸ್ಟಿಸಿಯಾ, ಪುರುಷೋತ್ತಮ ಗೌಡ ಮಲ್ಕಜೆ ಪರ
ಕೆ. ರವಿಶಂಕರ್, ಎಂ. ಸುದರ್ಶನ ಕುಮಾರ್ ಪರ ರವಿಶಂಕರ್ ಶಾಸ್ತ್ರಿ ,ಎಂ. ಗೋವಿಂದ ಭಟ್ ಮಾಣಿಮೂಲೆ ಪರ ಸುಬ್ರಹ್ಮಣ್ಯ ಭಟ್ ಹಾಗೂ ಗಿರಿಜಾ ಶಂಕರ್ ಕೆ ಪರ ಶ್ರೀಹರಿ. ಕೆ ನ್ಯಾಯವಾದಿಗಳಾಗಿ ವಾದಿಸಿದ್ದರು.