ಹೋಗೋಣ ಬಾ… ಬಾ ಜಾತ್ರೆಗೆ | ಐತಿಹಾಸಿಕ ಪ್ರಸಿದ್ಧ ಪುತ್ತೂರು ಜಾತ್ರೆ ಆರಂಭ |

April 10, 2023
10:49 AM

ಐತಿಹಾಸಿಕ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ಜಾತ್ರೆ ಇಂದಿನಿಂದ ಆರಂಭಗೊಂಡಿದೆ. ಪುತ್ತೂರು ಜಾತ್ರೆ ಅಂದ್ರೆ ಅದರ ಸೆಳೆತವೇ ಬೇರೆ. ಯಾವುರಲ್ಲಿ ಇದ್ರೂ, ಪುತ್ತೂರು ಜಾತ್ರೆಗೆ ಬಂದು ದೇವರ ದರ್ಶನ ಪಡೆದು ಜಾತ್ರೆ ತಿರುಗದವರಿಲ್ಲ. ಈ ಬಗ್ಗೆ ಆದರ್ಶ್ ಶೆಟ್ಟಿ ಉಪ್ಪಿನಂಗಡಿ ಅವರು ಬರೆದ ಲೇಖನ ಇಲ್ಲಿದೆ. ಓದಿ..

ಹತ್ತೂರು ಬಿಟ್ಟರೂ ಪುತ್ತೂರು ಬಿಡೆನು ಎಂಬ ಮಾತಿದೆ.ಪುತ್ತೂರು ಅಂದಾಕ್ಷಣ ಹತ್ತೂರ ಒಡೆಯ ಪುತ್ತೂರ ಮುತ್ತು ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಾಲಯ ಮೊತ್ತಮೊದಲು ಕಣ್ಣಿಗೆ ಗೋಚರಿಸುವ ಶಕ್ತಿಯೆಂದೇ ಹೇಳಬಹುದು.ಇತಿಹಾಸ ಪ್ರಸಿದ್ಧ ಪುತ್ತೂರು ದೇವಳದ ದೇವರಮಾರು ಗದ್ದೆಯಲ್ಲಿ ನಡೆಯುವ ಜಾತ್ರೆಯೆಂದರೆ ಅದು ಶ್ರದ್ದಾಭಕ್ತಿಯ ಸಂಕೇತ. ಊರು ಪರವೂರುಗಳಿಂದ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಭಗವದ್ಭಕ್ತರು ಈಶ್ವರನ ದರ್ಶನ ಪಡೆದು ಕಣ್ತುಂಬಿಕೊಂಡು ಪಾವನರಾಗುವುದು ವರ್ಷಂಪ್ರತಿ ಸರ್ವೇಸಾಮಾನ್ಯ.ಜೊತೆಗೆ ನಂಬಿದ ಭಕ್ತರ ಇಷ್ಟಾರ್ಥವನ್ನು ಸಿದ್ದಿಸಿದ ಪುಣ್ಯದಾತ ಶ್ರೀ ಮಹಾಲಿಂಗೇಶ್ವರ ದೇವರು.

ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಹಲವಾರು ವಿಶೇಷ ವೈಶಿಷ್ಟ್ಯತೆಗಳೊಂದಿಗೆ ಎಪ್ರಿಲ್-10 ರಿಂದ ವೈಭವದ ವರ್ಷಾವಧಿ ಜಾತ್ರಾ ಸಂಭ್ರಮಕ್ಕೆ ಶ್ರೀ ಕ್ಷೇತ್ರ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ.ಈಗಾಗಲೇ ಪುತ್ತೂರು ಸೀಮೆಗೊಳಪಟ್ಟ ಗ್ರಾಮ, ನಗರಗಳಿಂದ ಹಸಿರುವಾಣಿ ಹೊರೆಕಾಣಿಕೆಯು ಅದ್ದೂರಿ ಮೆರವಣಿಗೆಯೊಂದಿಗೆ ದೇವಾಲಯಕ್ಕೆ ಸಮರ್ಪಣೆಯಾಗಿದೆ.

ಪ್ರತಿ ವರ್ಷದಂತೆ ಈ ಬಾರಿಯೂ ಕೂಡ 11 ದಿನಗಳ ಕಾಲ ಮಹಾರುದ್ರ ಯಾಗ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪುಷ್ಕರಣಿ ಮಂಟಪ ಪೂಜೆ,ವಾಸ್ತು ಹೋಮ, ಕಟ್ಟೆ ಪೂಜೆ,ಶ್ರೀ ದೇವರ ಪೇಟೆ ಸವಾರಿ, ಬಂಡಿ ಉತ್ಸವ,ತುಲಾಭಾರ ಸೇವೆ, ಸೀಮೆಯ ಬಲ್ನಾಡು ಉಳ್ಳಾಲ್ತಿ ದೇವಸ್ಥಾನದಿಂದ ದೈವಗಳ ಕೀರುವಾಲು ಆಗಮನ,ಕೆರೆ ಉತ್ಸವ ತೆಪ್ಪೊತ್ಸವ,ಸಣ್ಣ ರಥೋತ್ಸವ, ದರ್ಶನ ಬಲಿ,ದೈವಗಳಿಗೆ ನೇಮೋತ್ಸವ,ವೀರಮಂಗಲ ಅವಭೃತ ಸವಾರಿ,ಧ್ವಜಾರೋಹಣ ಶ್ರೀ ಕ್ಷೇತ್ರದಲ್ಲಿ ನಿತ್ಯ ಭಕ್ತರಿಗೆ ಪೂಜೆಯ ಬಳಿಕ ಅನ್ನಸಂತರ್ಪಣೆ ಕಾರ್ಯಕ್ರಮವು ಜರುಗಲಿದೆ.ಪುತ್ತೂರು ಜಾತ್ರೆಯ ವೈಶಿಷ್ಟ್ಯವೆಂದರೆ ಬ್ರಹ್ಮರಥೋತ್ಸವ ಸಂದರ್ಭದಲ್ಲಿ ನಡೆಯುವ ಆಕರ್ಷಕ ಸುಡುಮದ್ದು ಪುತ್ತೂರು ಬೆಡಿಯು ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿದೆ.

ಈ ಬಾರಿ ಜಾತ್ರಾ ಸಂದರ್ಭದಲ್ಲಿ ಆಡಳಿತ ಮಂಡಳಿಯು ಶೂನ್ಯ ತ್ಯಾಜ್ಯಕ್ಕೆ ಆಧ್ಯತೆ ನೀಡಿದ್ದು, ದೇವಳದ ಜಾತ್ರಾ ಅಂಗಳದಲ್ಲಿ ಸಂತೆ ವ್ಯಾಪಾರಸ್ಥರು ಸಂಗ್ರಹಿಸಿ ಕೊಟ್ಟಲ್ಲಿ ದೇವಳದ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಸಂಗ್ರಹಿಸಿ ಗೊಬ್ಬರ ತಯಾರಿಕೆ ಹಾಗೂ ಬ್ರಹ್ಮರಥ ಎಳೆಯುವ ಭಕ್ತಾದಿಗಳು ಸಾಂಪ್ರದಾಯಿಕ ಉಡುಗೆ ತೊಟ್ಟು ಭಾಗವಹಿಸುವ ಮೂಲಕ ವಸ್ತ್ರಸಂಹಿತೆಗೆ ವಿಶೇಷ ಒತ್ತು ನೀಡಲಾಗಿದೆ.ಶ್ರೀ ಕ್ಷೇತ್ರದಲ್ಲಿ ಧಾರ್ಮಿಕ ಶಿಕ್ಷಣ, ಪುಷ್ಕರಣಿ ಕಟ್ಟೆಯಲ್ಲಿ ವಾಸ್ತು ಹೋಮ ಸಂದರ್ಭ ವರುಣ ಪೂಜೆಗೆ ಭಕ್ತರಿಗೆ ಸೇವೆಗೆ ಅವಕಾಶ ಕಲ್ಪಿಸಲಾಗಿದ್ದು,ಬಲ್ನಾಡು ಉಳ್ಳಾಲ್ತಿ ದೈವಸ್ಥಾನಕ್ಕೆ ಶ್ರೀ ಕ್ಷೇತ್ರದ ಗೋಶಾಲೆಯಿಂದ ಬಸವನನ್ನು ಅರ್ಪಿಸುವ ಕಾರ್ಯಕ್ರಮ,ಬಟ್ಟಲು ಕಾಣಿಕೆ ಸಂದರ್ಭ ಪಾಠಕರ ಉದ್ಘೋಷ,ದೇವಳದ ಆಡಳಿತ ವರ್ಗ,ತಂತ್ರಿಗಳು,ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮಾಜಿ‌ ಆಡಳಿತ ಮೊಕ್ತೇಸರರುಗಳನ್ನು ಗೌರವಪೂರ್ವಕವಾಗಿ ಕರೆಯುವ ಕಾರ್ಯಕ್ರಮ ನಡೆಯಲಿದೆ.
ದೇವಳದ ನೂತನ ಆಡಳಿತ ಮಂಡಳಿಯ ಮುತುವರ್ಜಿಯಿಂದ ಅವಭೃತ ಸ್ನಾನಘಟ್ಟದಲ್ಲಿ ನೂತನ ಸುಸಜ್ಜಿತ ಶೌಚಾಲಯ ನಿರ್ಮಾಣ,ಇಲ್ಲಿನ ಕಟ್ಟೆಯ ಕಾಮಗಾರಿಯ ಜೊತೆಗೆ ಬಂಗಾರ್ ಕಾಯರ್ ಕಟ್ಟೆಯನ್ನು ನವೀಕರಣಗೊಳಿಸಲಾಗಿದೆ.

ವಿಷುಕಣಿಯ ಸಂದರ್ಭದಲ್ಲಿ ದೇವಾಲಯವನ್ನು ತರಕಾರಿಗಳಿಂದ ಅಲಂಕರಿಸುವುದು, ದೇವಾಲಯದ ಜಾತ್ರಾ ಸಂದರ್ಭದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸುವುದರಿಂದ ಸುಮಾರು 500 ಕ್ಕೂ ಮಿಕ್ಕಿ ಸ್ವಯಂಸೇವಕರು ಇವುಗಳ ಪೈಕಿ ವಿವಿಧ ಭಜನಾ ಮಂಡಳಿಯ ಸದಸ್ಯರು, ವಿವಿಧ ಜಾತಿಸಮುದಾಯ,ಸಂಘಸಂಸ್ಥೆಗಳ ಪಾಲ್ಗೊಳ್ಳುವಿಕೆಯ ಮೂಲಕ ಸೇವಾಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.ಜಾತ್ರಾ ಪ್ರತಿ ದಿನದಂದು ವೈಭವದ ಸಾಂಸ್ಕೃತಿಕ ಕಾರ್ಯಕ್ರಮಗಳು, ಭಜನಾ ಕಾರ್ಯಕ್ರಮಗಳು ತಾಲೂಕಿನ ವಿವಿಧ ಸಾಂಸ್ಕೃತಿಕ ತಂಡಗಳಿಂದ ಸಂಗೀತ, ಭರತನಾಟ್ಯ,ವೈವಿಧ್ಯ,ದಾಸರ ಪದ ಶಾಸ್ತ್ರೀಯ ಸಂಗೀತ,ಯಕ್ಷಗಾನ ಬಯಲಾಟ, ತಾಳಮದ್ದಳೆ,ಭಕ್ತಿ ಸಂಗೀತ, ಕುಣಿತ ಭಜನೆ ಹೀಗೆ ನಾನಾ ಕಾರ್ಯಕ್ರಮಗಳು ಜಾತ್ರಾ ಸಂದರ್ಭದಲ್ಲಿ ಮೇಳೈಸಲಿದೆ.

ನೋಡ ಬನ್ನಿ ಪುತ್ತೂರ ಜಾತ್ರೆ ಎಂದು ಕೈ ಬೀಸಿ ಕರೆಯುವ ಇಲ್ಲಿನ ಶಕ್ತಿ, ದೂರದ ಊರಿನಲ್ಲಿ ನೆಲೆಸಿರುವ ಕುಟುಂಬ, ಪರಿವಾರದ ಮಂದಿ ಪುತ್ತೂರು ಜಾತ್ರೆಗಾಗಿ ಕುಟುಂಬ ಸಮೇತರಾಗಿ ಭಾಗವಹಿಸಿ ಶ್ರೀ ದೇವರ ದರ್ಶನ ಪಡೆದು, ಜಾತ್ರಾ ಸಂತೆಯಲ್ಲಿ ಸುತ್ತಾಡಿ ತಮ್ಮ ಪರಿವಾರದೊಂದಿಗೆ ಸಂಭ್ರಮ ಪಡುವ ದಿನ ಪುತ್ತೂರು ಜಾತ್ರೆ.ಪುತ್ತೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರವಿರಲಿ ಅಥವಾ ದೇವರ ಮಾರು ಗದ್ದೆಯಿರಲಿ ಆ ಜಾಗಕ್ಕೊಂದು‌ ಶಕ್ತಿ ಅಗಾಧವಾದದ್ದು.ನಂಬಿದ ಭಕ್ತರ ಭಾವನೆಗೆ ತಕ್ಕ ಪ್ರತಿಫಲ ನೀಡಿ ಕೈ ಹಿಡಿದು ಸಲಹಿದ ಒಡೆಯ ಆ ಈಶ್ವರ. ಎಲ್ಲರಿಗೂ ಪುತ್ತೂರು ಜಾತ್ರೆಗೆ ಸ್ವಾಗತ.

ಬರಹ :
ಆದರ್ಶ್ ಶೆಟ್ಟಿ ಉಪ್ಪಿನಂಗಡಿ·
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 22-08-2026 | ಕರಾವಳಿಯಲ್ಲಿ ಮಳೆ ಇಳಿಕೆ, 26ರಿಂದ ಮತ್ತಷ್ಟು ದುರ್ಬಲವಾಗುವ ಸಾಧ್ಯತೆ
August 22, 2026
2:07 PM
by: ಸಾಯಿಶೇಖರ್ ಕರಿಕಳ
ಸೆಪ್ಟೆಂಬರ್‌ನಲ್ಲಿ ಪಿಎಂ ಕಿಸಾನ್ ಹಣ ಬರಬೇಕೇ? ರೈತರು ಈಗಲೇ e-KYC ಪೂರ್ಣಗೊಳಿಸಿ
August 22, 2026
6:47 AM
by: ದ ರೂರಲ್ ಮಿರರ್.ಕಾಂ
ಬೆಳೆ ವಿಮೆಗೆ ರೈತರಿಗೆ ಮತ್ತೊಂದು ಅವಕಾಶ : ಆಗಸ್ಟ್ 31ರವರೆಗೆ ನೋಂದಣಿ ಅವಧಿ ವಿಸ್ತರಣೆ
August 21, 2026
7:49 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 21-08-2026 | ಕರಾವಳಿಯಲ್ಲಿ ಆ.23–25 ರಂದು ಮಳೆ ಹೆಚ್ಚಳ ಸಾಧ್ಯತೆ – ಆ.26ರವರೆಗೆ ಮೋಡ–ಮಳೆ
August 21, 2026
4:04 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror