‘ಏಕಲವ್ಯ ಪ್ರತಿಭೆ’ – ಎರಡು ಪದಗಳು ಹೊಸೆದ ಪದಗುಚ್ಛ. ಅದರೊಳಗೆ ಸಾಧನೆಗಳ ಜೀವದ್ರವ ತುಂಬಿದೆ. ಬದುಕನ್ನು ಕಟ್ಟಿಕೊಳ್ಳಲು ಬೇಕಾದ ಕಾಂತತ್ವದ ತರಂಗಗಳಿವೆ. ಕನಸುಗಳನ್ನು ನನಸು ಮಾಡಬಲ್ಲ ಶಕ್ತಿಯಿವೆ. ಭವಿಷ್ಯದ ಲೆಕ್ಕಣಿಕೆಯಿದೆ. ಬೌದ್ಧಿಕ ಸಾಮಥ್ರ್ಯಗಳ ರಸಘಟ್ಟಿಗಳಿವೆ. ಇದು ಉತ್ಪ್ರೇಕ್ಷೆಯಲ್ಲ. ಸಾಧನೆಯಿಲ್ಲದೆ ಬದುಕನ್ನು ಕಟ್ಟಿಕೊಳ್ಳಲು ಹೇಗೆ ಸಾಧ್ಯ. ಸಾಧನೆಯ ಹಾದಿ ಎಲ್ಲರದೂ ಒಂದೇ ಅಲ್ಲ.
‘ಏಕಲವ್ಯ ಪ್ರತಿಭೆ’ – ವೇದಿಕೆಯ ಭಾಷಣಗಳಲ್ಲಿ, ಪರಿಚಯ ಲೇಖನಗಳಲ್ಲಿ, ಅಭಿನಂದನಾ ನುಡಿಗಳಲ್ಲಿ, ಪತ್ರಿಕೆ ವರದಿಗಳಲ್ಲಿ ಇಣುಕುವ ಪದಗಳು. ಅವು ಯಾಕೆ ಇಣುಕುತ್ತವೆ? ಸಾಧನೆ ಮಾಡಿದವರನ್ನು ಉಲ್ಲೇಖಿಸುವಾಗ ಪರ್ಯಾಯ ಪದವಾಗಿ, ಗೌರವ ಸೂಚಕ ಪದವಾಗಿ ಬಳಕೆಯಾದಾಗ ಖುಷಿಯಿಂದ ಇಣುಕುತ್ತವೆ!
‘ಏಕಲವ್ಯ ಪ್ರತಿಭೆ’ ಏನಿದು? ಆತ ಏಕಪಾಠಿ. ಸ್ವ-ಪರಿಶ್ರಮ, ಕ್ಷಿಪ್ರ ಗ್ರಹಿಕೆ, ಓದುವಿಕೆ, ನೆನಪು ಶಕ್ತಿ, ಜತೆಗೆ ಛಲ. ಈ ಒಳಸುರಿಗಳ ಮೂಲಕ ಆತನ ‘ಸಾಧನೆ’ ಸಾಕಾರವಾಗುತ್ತದೆ. ಸಾಧಕನ ಸೃಷ್ಟಿಯಾಗುತ್ತದೆ. ವಿದ್ಯೆಯನ್ನು ಗುರುಮುಖೇನ ಕಲಿಯುವುದು ಪದ್ಧತಿ. ಹೀಗೆ ಕಲಿಯುವ ಶಾಸ್ತ್ರೀಯ ಕಲಿಕೆಯಲ್ಲಿ ಪೂರ್ಣತೆಯಿದೆ. ಗುರುಕುಲಗಳು ವಿದ್ಯಾರ್ಥಿಯ ವಿದ್ಯಾಪೂರ್ಣತೆಯನ್ನು ಪೂರೈಸುತ್ತವೆ. ಈ ಕಾಲಘಟ್ಟದಲ್ಲಿ ಗುರುಕುಲಗಳು ಅಪರೂಪ. ಶಾಲಾ ಕಾಲೇಜುಗಳ ಅಧ್ಯಾಪಕರು/ಉಪನ್ಯಾಸಕರು ‘ಗುರು’ವಾಗಿ ಒದಗಿದ್ದಾರೆ. ಅವರೊಂದಿಗೆ ಕಲಿತ ವಿದ್ಯೆಗೆ ಪೂರ್ಣತೆಯಿದೆ.
ಅಪರೂಪಕ್ಕೆ ಅಲ್ಲೋ ಇಲ್ಲೋ ಜನ್ಮದತ್ತವಾಗಿ ‘ಕ್ಷಿಪ್ರ ಪ್ರತಿಭೆ’ಗಳು ರೂಪುಗೊಂಡಿರುತ್ತಾರೆ. ಅವರು ಯಾವುದೇ ಕ್ಷೇತ್ರವನ್ನು ಪ್ರವೇಶಿಸಲಿ, ಕ್ಷಿಪ್ರವಾಗಿ ಆರ್ಜಿಸಿಕೊಳ್ಳುವ ಸಾಮಥ್ರ್ಯವನ್ನು ಹೊಂದಿರುತ್ತಾರೆ. ವಿದ್ಯಾರ್ಥಿಗಳಿಗೆ ಗುರುಗಳು ಪಾಠ ಮಾಡುವುದನ್ನು ನೋಡಿ, ಕೇಳಿ ಕಲಿತವರಿದ್ದಾರೆ. ನಾಟ್ಯದ ಹೆಜ್ಜೆಗಾರಿಕೆಯನ್ನು ನೋಡಿ, ತಿಳಿದವರಿದ್ದಾರೆ. ಇವರಿಗೆ ಕಲೆಯೇ ಗುರು. ಅರಿವೇ ಮೇರು. ಇಂತಹ ಪ್ರತಿಭೆಗಳನ್ನು ‘ಏಕಲವ್ಯ ಪ್ರತಿಭೆ’ ಎನ್ನುತ್ತೇವೆ. ಅಂದರೆ ಸ್ವಯಾರ್ಜಿತವಾಗಿ ಮೇಲೆದ್ದು ಬಂದವರು. ಎಲ್ಲರೂ ಏಕಲವ್ಯರಾಗಲು ಸಾಧ್ಯವಿಲ್ಲ. ಅದು ಯೋಗ, ಯೋಗ್ಯತೆಗಳ ಮಿಳಿತ.
‘ಮೂವತ್ತು ದಿವಸಗಳಲ್ಲಿ ಇಂಗ್ಲಿಷ್ ಭಾಷೆ ಕಲಿಯಿರಿ’ – ಸೊಗಸಾದ ಪದಪುಂಜಗಳ ವಾಕ್ಯ. ‘ಮೂವತ್ತೇ ದಿವಸದಲ್ಲಿ ಇಂಗ್ಲಿಷ್ ಮಾತನಾಡಿ. ಇಲ್ಲವೆಂದಾದರೆ ಪುಸ್ತಕದ ಹಣ ವಾಪಾಸ್’ – ಜಾಹೀರಾತುಗಳ ಮೋಡಿ ನೋಡಿ. ಬೆಲೆ ನೋಡದೆ ಪುಸ್ತಕ ಖರೀದಿಸುತ್ತೇವೆ. ಪುಸ್ತಕ ಬದುಕಿನ ಸ್ನೇಹಿತ ಹೌದು. ವಿಚಾರಗಳ ಗ್ರಹಿಕೆಗಳಿಗೆ ಪುಸ್ತಕಗಳು ಉಪಾಧಿ. ಆದರೆ ಭಾಷೆಯ ಪರಿಚಯಕ್ಕೆ ಪುಸ್ತಕಗಳು ಕೈತಾಂಗು ಆದಾವಷ್ಟೇ. ಸಾಧಕನು ಕಷ್ಟಪಟ್ಟು ಛಲದಿಂದ ಪುಸ್ತಕವನ್ನೋದಿ ಬರೆಯಲು ಕಲಿಯಬಹುದು. ಮಾತನಾಡಬೇಕಾದರೆ ಭಾಷೆಯನ್ನು ಬಲ್ಲ ಜನರ ಮಧ್ಯೆ ಬೆರೆಯಬೇಕು.
ಈಗ ನವಮಾಧ್ಯಮಗಳ ಯುಗ. ಜಾಲತಾಣಗಳನ್ನು ಜಾಲಾಡಿದರೆ ನಂನಮ್ಮ ಆಸಕ್ತಿಗೆ ಬೇಕಾದಷ್ಟು ಕಲಿಕಾ ಟೂಲ್ಸ್ ಗಳು ಸಿಗುತ್ತವೆ. ಸಿದ್ಧ ಮಾದರಿಯ ಅವುಗಳಿಗೆ ‘ಗುರು’ವಿನ ಸ್ಥಾನ. ಈ ಜಾಡಿನಲ್ಲಿ ಕಲಿಕೆಯು ಮುಂದುವರಿದರೆ ಮೇಲ್ನೋಟದ ಸ್ಪರ್ಶವನ್ನಷ್ಟೇ ನೇವರಿಸಿದಂತಾಗುತ್ತದೆ. ಕಲಿಯಬೇಕೆನ್ನುವ ಸಾಧಕನಿಗೆ ಇದು ಮೊದಲ ಮೆಟ್ಟಿಲು. ಅಪರೂಪದಲ್ಲಿ ಪರಿಶ್ರಮವಹಿಸಿ ಸಾಧಿಸಿದವರು ಯಶಸ್ಸಿನ ಮೆಟ್ಟಲನ್ನು ಏರುತ್ತಾರೆ.
ಕನ್ನಾಡಿನ ಅನ್ಯಾನ್ಯ ವಿಶ್ವವಿದ್ಯಾನಿಲಯಗಳು ಅಂಚೆ ತೆರಪಿನ ಶಿಕ್ಷಣವನ್ನು ನಡೆಸುತ್ತಿದೆ. ಅಲ್ಲಿ ಕಲಿತು ಪದವೀಧರರಾಗುತ್ತಾರೆ. ವಿಶ್ವವಿದ್ಯಾಲಯಗಳು ನೀಡಿದ ಪಠ್ಯವನ್ನೋದಿ ರ್ಯಾಂಕ್ ಪಡೆಯುತ್ತಾರೆ. ಚಿನ್ನದ ಪದಕ ಗೆಲ್ಲುತ್ತಾರೆ. ಇದಕ್ಕಾಗಿ ವಯಸ್ಸಿನ ಹಂಗಿಲ್ಲದ ವಿಶೇಷ ತರಬೇತಿಯನ್ನೂ ಪಡೆಯುತ್ತಾರೆ. ಇವೆಲ್ಲವೂ ಏಕಪಾಠಿಗೆ ಸಲೀಸು. ಹಿಂದೆ ಓದಿದ ಸಂಗತಿಗಳು ನೆನಪಿನ ಕೋಶದಲ್ಲಿರುತ್ತವೆ. ಕ್ಷಿಪ್ರಗ್ರಹಿಕೆಗಳಿಂದ ಪಠ್ಯಗಳು ಸುಲಭಸಾಧ್ಯವಾಗಿ ಪರೀಕ್ಷೆಯನ್ನು ಹತ್ತಿಯಷ್ಟು ಹಗುರವಾಗಿ ಸ್ವೀಕರಿಸುತ್ತಾರೆ. ಇದು ‘ಏಕಲವ್ಯ ಪ್ರತಿಭೆ’ಗಳ ತಾಕತ್ತು.
ಪತ್ರಿಕೆಗಳಲ್ಲಿ ಪ್ರಕಟವಾಗುವ ಸಾಧಕರ ಲೇಖನಗಳಲ್ಲಿ ‘ಇವರು ಏಕಲವ್ಯ ಪ್ರತಿಭೆ’ಯೆಂದು ಪರಿಚಯಿಸುತ್ತಾರೆ. ಶೈಕ್ಷಣಿಕ ಕಲಿಕೆಯ ಹೊರತಾದ ಕಲೆ, ಸಾಹಿತ್ಯ, ಕ್ರೀಡೆಗಳಲ್ಲಿ ಸ್ವ-ಆಸಕ್ತಿಯಿಂದ ತೊಡಗಿಸಿಕೊಂಡು ಸಾಧನೆ ಮಾಡುತ್ತಾರೆ. ಸಂತೋಷಕ್ಕಾಗಿ ಆರಂಭವಾದ ಅಭ್ಯಾಸಗಳು, ನಿಧಾನಕ್ಕೆ ಪ್ರವೃತ್ತಿಯಾಗಿ, ಮತ್ತೆ ವೃತ್ತಿಯಾಗಿ ಬದಲಾಗುತ್ತದೆ. ಹಿರಿಯರೊಂದಿಗೆ ಬೆರೆತು, ಅನುಭವಿಗಳಿಂದ ಕೇಳಿ, ತಿಳಿದು ಕಲಿಯುವ ಜ್ಞಾನವಂತ ನಿಜವಾದ ಏಕಲವ್ಯ ಸಾಧಕ.
ಕ್ರೀಡಾ ಕ್ಷೇತ್ರದಲ್ಲಿ ಸಾಧಕರ ಸಂಖ್ಯೆ ಗಣನೀಯ ಮತ್ತು ಗಮನೀಯ. ಎಷ್ಟೋ ಸಲ ಪ್ರೋತ್ಸಾಹದ ಕೊರತೆಯಿಂದ ಪ್ರತಿಭೆ ಮುದುಡಿರುತ್ತದೆ. ಶಾಲೆ, ಕಾಲೇಜು, ಸರಕಾರಗಳ ಬೆಂಬಲವಿದ್ದರೆ ರಾಷ್ಟ್ರ ಯಾಕೆ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಿಂಚುವ, ಮಿಂಚಿದ ಕ್ರೀಡಾಳುಗಳಿಲ್ವಾ. ಸಾಧನೆ ಮಾಡಿದವರಿಲ್ವಾ. ಏಕಲವ್ಯನಂತೆ ಕಲಿಯುವ ಛಲಕ್ಕೆ ಬೆಂಬಲಗಳು ಸಾಥ್ ಆದರೆ ಗುರಿ ಮುಟ್ಟಲು ಹತ್ತು ಹೆಜ್ಜೆ.
ಸುಮಾರು 1988-90ರ ಕಾಲಘಟ್ಟ. ಧ್ವನಿಸುರುಳಿ ಲೋಕದಲ್ಲಿ ‘ಸಂಗೀತಾ ಕಂಪನಿ’ಯು ಜನಮಾನ್ಯತೆಯನ್ನು ಪಡೆದಿತ್ತು. ಇವರ ತಯಾರಿಗಳು ಗುಣಮಟ್ಟದಲ್ಲಿ ಮೇಲ್ಮೆಯನ್ನು ಪಡೆದಿತ್ತು. ಈ ಕಂಪನಿಯು ‘ಪಾದುಕಾ ಪ್ರದಾನ, ಮಾಗಧೆ ವಧೆ, ಸುಧನ್ವಾರ್ಜುನ’ ಪ್ರಸಂಗಗಳ ಯಕ್ಷಗಾನ ತಾಳಮದ್ದಳೆಯ ಧ್ವನಿಸುರುಳಿಯನ್ನು ನಿರ್ಮಿಸಿತ್ತು. ಕಲಾವಿದರಾಗಿ ಕಡತೋಕ ಮಂಜುನಾಥ ಭಾಗವತರು, ಶೇಣಿ ಗೋಪಾಲಕೃಷ್ಣ ಭಟ್, ಡಾ.ಎಂ.ಪ್ರಭಾಕರ ಜೋಷಿ, ಕುಂಬಳೆ ಸುಂದರ ರಾವ್, ಕೆ. ಗೋವಿಂದ ಭಟ್.. ಹೀಗೆ ಖ್ಯಾತರು. ಯಕ್ಷಪ್ರಿಯರರನ್ನು ಆಕರ್ಷಿಸಿದ ಧ್ವನಿಸುರುಳಿಗಳು.
ನನ್ನ ಹುಟ್ಟೂರು ಪೆರಾಜೆಯಲ್ಲಿ ಮಾರ್ಚ್ 26 ರಿಂದ ಎಪ್ರಿಲ್ 10ರ ತನಕ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತದೆ. ದೈವಾರಾಧನೆ ಪ್ರಾಧಾನ್ಯ. ಪ್ರತಿದಿನ ದೈವಗಳ ನರ್ತನ ಸೇವೆ. ಒಂದು ದೈವ ಮುಗಿದು ಮತ್ತೊಂದು ದೈವದ ಪ್ರವೇಶಕ್ಕೆ ಕನಿಷ್ಠ ಒಂದು ಗಂಟೆಯ ಮಧ್ಯಂತರ. ಈ ಅವಧಿಯಲ್ಲಿ ‘ಪಾದುಕಾ ಪ್ರದಾನ, ಮಾಗಧ ವಧೆ’ ಧ್ವನಿಸುರುಗಳನ್ನು ಧ್ವನಿವರ್ಧಕದಲ್ಲಿ ಬಿತ್ತರಿಸುತ್ತಿದ್ದರು. ಅದೂ ದಿನಕ್ಕೆ ಹತ್ತಾರು ಬಾರಿ. ಧ್ವನಿಸುರುಳಿಯ ಕಥಾನಕವನ್ನು ಕೇಳಿದ ಬಹುತೇಕ ಮಂದಿಗೆ ಅದು ಕಂಠಸ್ಥವಾಗಿ, ನಿತ್ಯದ ಮಾತುಕತೆಯಲ್ಲೂ ಭರತ, ರಾಮ, ಮಾಗಧರು ಗೋಚರವಾಗುತ್ತಿದ್ದರು. ಯಕ್ಷಗಾನದ ಸಂಪರ್ಕವಿಲ್ಲದವರೂ ಅರ್ಥವನ್ನು ಕೇಳಿ ಕೇಳಿ ಅರ್ಥದಾರಿಗಳಾದವರು. ಕೇವಲ ಧ್ವನಿಸುರುಳಿ ಮಾಧ್ಯಮವಾಗಿ ‘ಏಕಲವ್ಯ ಪ್ರತಿಭೆ’ಯಾಗಿ ಹೊರಹೊಮ್ಮಿದವರ ಸಂಖ್ಯೆ ದೊಡ್ಡದು. ಆದರೆ ಜಾತ್ರೆ ಮುಗಿದ ನಂತರ ಇವರೆಲ್ಲಾ ಅಜ್ಞಾತ! ಒಂದೆರಡು ಧ್ವನಿಸುರುಳಿಗಳು ಮನಸ್ಸನ್ನು ಹೇಗೆ ಕಾಡಬಹುದು, ನಿತ್ಯದ ಆಡು ಭಾಷೆಯನ್ನು ಸುಭಗತನದತ್ತ ಹೇಗೆ ಒಯ್ಯಬಹುದು ಎನ್ನುವುದಕ್ಕೆ ಇದೊಂದು ಉದಾಹರಣೆ ಅಷ್ಟೇ. ಮೂರುವರೆ ದಶಕದ ಹಿಂದಿನ ಚಿತ್ರಣವಿದು. ಈಗಿನದು ಅರಿವಿಲ್ಲ.
ಸದಾ ಆಕಳಿಸುತ್ತಿರುವ, ಅಕ್ಷರಗಳು ಮಯಮಯವಾಗಿ ಕಾಣುತ್ತಿರುವವರಿಗೆ ‘ಏಕಲವ್ಯ’ ಅಗೋಚರ. ಪ್ರತಿಯೊಬ್ಬನಲ್ಲೂ ಒಬ್ಬ ‘ಏಕಲವ್ಯ’ನಿದ್ದಾನೆ. ವ್ಯಕ್ತವಾಗಲು ವೈಚಾರಿಕ ಪಕ್ವತೆಯ ಒಳಸುರಿಗಳ ಸಂಪನ್ಮೂಲತೆಯ ಕೊರತೆ. ಉದಾ: ಚಿಕ್ಕ ಮಕ್ಕಳಿಂದ ತೊಡಗಿ ಹಿರಿಯರ ವರೆಗೆ ಸುಶ್ರಾವ್ಯವಾಗಿ ಹಾಡುವ ಹಾಡುಗಾರರು ಎಷ್ಟಿಲ್ಲ. ಡಾ.ರಾಜಕುಮಾರ್, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ, ಜೇಸುದಾಸ್.. ಇವರ ಹಾಡುಗಳನ್ನು ಯಥಾವತ್ ‘ನಾದೀಕರಿಸುವ’ ಪ್ರತಿಭೆಗಳನ್ನು ನೋಡಿದರೆ ವಿಸ್ಮಯವಾಗುತ್ತದೆ. ಪದ್ಯಗಳನ್ನು ಕೇಳಿ ಕೇಳಿ, ಮನಸ್ಸಿನಲ್ಲಿ ಗುಣುಗುಣುಸಿ, ಅಭ್ಯಾಸದಲ್ಲಿ ಅದನ್ನು ಮಂತ್ರವನ್ನಾಗಿಸಿದ ಸಾಧಕರನ್ನು ಸಾಧನೆಯು ಹುಡುಕಿ ಬರುತ್ತದೆ.
ಯಕ್ಷಗಾನ ರಂಗದ ಹಿರಿಯರನ್ನು ಮಾತನಾಡಿಸಿ. ಎರಡನೇ, ಮೂರನೇ, ಐದನೇ ತರಗತಿ ಓದಿದವರ ಸಾಧನೆ ಹಿರಿದು. ರಾಜ್ಯ, ಕೇಂದ್ರದ ಪ್ರಶಸ್ತಿ ಪುರಸ್ಕøತರಾದವರು. ಏಕಲವ್ಯ ಪ್ರತಿಭೆಯಿಂದ ಮೇಲೆದ್ದು ಬಂದವರು. ಒಂದು, ಎರಡು ವರುಷ ಗುರುಕುಲದಲ್ಲಿ ಕಲಿತ ವಿದ್ಯಾರ್ಥಿ ಮೇಳವನ್ನು ಸೇರಿ, ಅನುಭವದ ಮೂಸೆಯಿಂದ ರಂಗದಲ್ಲಿ ಬೆಳವಣಿಗೆಯನ್ನು ಸ್ಥಾಪಿಸುತ್ತಾ ಬರುತ್ತಾನೆ. ಹಿರಿಯರ ಅಭಿವ್ಯಕ್ತಿ, ನಾಟ್ಯ, ಮಾತುಗಾರಿಕೆ, ಅಭಿನಯಗಳನ್ನು ನೋಡುತ್ತಾ ‘ತಾನು ಅವರಂತೆ’ ಆಗುವ ಕನಸು ಮೊಳಕೆಯೊಡೆಯುತ್ತದೆ. ಅವನವನ ಕಲಿಕೆಯ ಪಾತ್ರೆಗನುಸಾರವಾಗಿ ಜ್ಞಾನಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಏಕಲವ್ಯ ಪ್ರತಿಭೆಯಿಂದ ಬೆಳಗಿ ರಂಗಕ್ಕೆ ಗೌರವ ತಂದ ಪ್ರಾತಃಸ್ಮರಣಿಯರ ಸಾಧನೆ ಅಲ್ಲೋ ಇಲ್ಲೋ ದಾಖಲಾಗಿವೆಯಷ್ಟೇ.
ಹಿಂದೆಲ್ಲಾ ಮನೆಗಳಲ್ಲಿ ಅಪ್ಪನ ಜ್ಞಾನದ ಉತ್ತರಾಧಿಕಾರಿ ಮಗ. ಈಗ ಮಗನಿಗೆ ಬೇಕಾಗಿರುವುದು ಅಪ್ಪನ ‘ಪಾಸ್ ಬುಕ್’! ಹಳ್ಳಿಯ ಅಲಿಖಿತ ಜ್ಞಾನದ ಪ್ರತಿಭೆಗಳು ಮೂಡುತ್ತಿಲ್ಲ.
ಅಂದು ಏಕಲವ್ಯನು ಗುರುವಾಗಿ ದ್ರೋಣಾಚಾರ್ಯರನ್ನು ಸ್ವೀಕರಿಸಿದ ಬಗೆ ಹೇಗೆ?
ಏಕಲವ್ಯ :ನಿಷಾಧ ರಾಜ ಹಿರಣ್ಯಧನುಷನ ಮಗ ಏಕಲವ್ಯ. ಧನುರ್ವೇದವನ್ನು ಕಲಿಯುವ ಆಸಕ್ತ. ಹಸ್ತಿನಾವತಿಯಲ್ಲಿ ರಾಜಕುಮಾರರು ಅಸ್ತ್ರ-ಶಸ್ತ್ರಗಳ ತರಬೇತಿಯನ್ನು ಪಡೆಯುತ್ತಿರುವಾಗ ಕನಸನ್ನು ಕಟ್ಟಿಕೊಂಡಿದ್ದ. ಶಿಷ್ಯನನ್ನಾಗಿ ಪರಿಗ್ರಹಿಸಲು ದ್ರೋಣಾಚಾರ್ಯರು ಸಮ್ಮತಿಸಲಿಲ್ಲ. ಅವರ ಮಣ್ಣಿನ ಬಿಂಬವನ್ನು ಪೂಜಿಸಿದ. ಮೂರ್ತಿಯನ್ನು ಗುರುಗಳೆಂದೇ ನಂಬಿದ. ಪೂಜೆಯ ಬಳಿಕ ಧನುರ್ವಿದ್ಯಾಭ್ಯಾಸ ಮಾಡಿದ. ನಿರಂತರ ಸಾಧನೆಯಿಂದ ಬಾಣಗಳ ಪ್ರಯೋಗ, ಉಪಸಂಹಾರಗಳಲ್ಲಿ ಪರಿಪೂರ್ಣತೆ ಸಾಧಿಸಿದ.
ಕುರುವಂಶದ ರಾಜಕುಮಾರರು ಮೃಗ ಬೇಟೆಯಾಡಲು ಕಾನನಕ್ಕೆ ಬಂದಾಗ ಧ್ಯಾನಸ್ಥನಾಗಿದ್ದ. ಸನಿಹದಲ್ಲಿ ಶ್ವಾನ ಬೊಗಳಿದ್ದರಿಂದ ಏಕಾಗ್ರತೆಗೆ ಭಂಗವಾಯಿತು. ದನಿಯತ್ತ ‘ಶಬ್ದವೇಧಿ’ ಶರಗಳನ್ನು ಪ್ರಯೋಗಿಸಿದನು. ಅವುಗಳು ನಾಯಿಯ ಬಾಯಿಯೊಳಗೆ ನೆಟ್ಟವು, ನಾಯಿಗೆ ಪ್ರಾಣಾಪಾಯವಾಗಲಿಲ್ಲ.
‘ನಾನು ದ್ರೋಣರ ಶಿಷ್ಯ’ ಎಂದಾಗ ಅರ್ಜುನನಿಗೆ ಸರಿಬರಲಿಲ್ಲ. ಏಕಾಂತದಲ್ಲಿ ಗುರುಗಳನ್ನು ಸಂಧಿಸಿದ. ‘ನನ್ನನ್ನು ಧನುರ್ವೇದ ವಿದ್ಯೆಯಲ್ಲಿ ಅದ್ವಿತೀಯನನ್ನಾಗಿ ಮಾಡುವೆನೆಂದು ಹೇಳಿದಿರಿ. ನನಗಿಂತ ಮುಂಚಿತವಾಗಿ ಏಕಲವ್ಯನು ಪರಿಣತನಾಗಿ ಬಿಟ್ಟನಲ್ಲಾ,”! ಅರ್ಜುನನ ಕೊರಗಿನ ದನಿಯನ್ನು ಆಲಿಸಿದ ದ್ರೋಣರು ಯೋಚಿಸಿ, ಅರ್ಜುನನೊಂದಿಗೆ ಏಕಲವ್ಯನ ಬಳಿಗೆ ತೆರಳಿದರು.
ಅವನ ಸಾಧನೆಗೆ ದ್ರೋಣರು ಮನಸ್ಸಿನಲ್ಲಿ ಖುಷಿಪಟ್ಟು ಹರಸಿದರು. ‘ನನ್ನ ಶಿಷ್ಯನೇ ಆಗಿದ್ದರೆ ಗುರುದಕ್ಷಿಣೆ ಕೊಡು’ ಎಂದರು. ‘ಏನು ಕೊಡಲಿ ಗುರುಗಳೇ’? ದ್ರೋಣರು, ‘ನಿನ್ನ ಬಲಗೈಯ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ನೀಡು’ ಎಂದರು. ಗುರುವಾಜ್ಞೆಯನ್ನು ಪಾಲಿಸಿದ. ಹೆಬ್ಬೆರಳನ್ನು ಕತ್ತರಿಸಿ ಗುರುದಕ್ಷಿಣೆಯಾಗಿ ನೀಡಿದ. ದ್ರೋಣಾಚಾರ್ಯರು ಮುಂದೆ ಅರ್ಜುನನಿಗೆ ಧನುರ್ವಿದ್ಯೆಯನ್ನು ಬೋಧಿಸಿ ಆತನನ್ನು ಸಮರ್ಥ ಬಿಲ್ಗಾರನನ್ನಾಗಿ ಮಾಡಿದರು.
ಗುರುಭಕ್ತಿಯ ಆದರ್ಶ, ಏಕಾಗ್ರತೆ, ಸಾಧನೆಗಳು ಪ್ರಶಂಸೆಗೆ ಕಾರಣವಾದುವು. ಅವನದು ‘ಏಕಲವ್ಯ ಸಾಧನೆ,’ ಜನಮನದಲ್ಲಿ ನಲಿದಾಡಿತು.

Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel