#GreenRevolution | ಡಾ. ಎಂ. ಎಸ್.  ಸ್ವಾಮಿನಾಥನ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಾ.. : ಹಸಿವು ನಿವಾರಿಸುವ ಹೆಸರಲ್ಲಿ  ಉಸಿರು ತೆಗೆವ “ಪರಿಹಾರಗಳ ”  ಕುರಿತು.. ಭಾಗ – 1

October 1, 2023
6:28 PM
ಗ್ರಾಮೀಣ ಪ್ರದೇಶದ ಹಸಿವು - ಬಡತನಗಳಿಗೆ ಕಾರಣವಾಗಿದ್ದ  ಭೂಮಾಲೀಕತ್ವ ಹಾಗೂ ಊಳಿಗಮಾನ್ಯ ಪಾಳೇಗಾರಿ ವ್ಯವಸ್ಥಯ ವಿರುದ್ಧ ರೈತಕೂಲಿಗಳ ಬಂಡಾಯದ ಕೆಂಪುಕ್ರಾಂತಿಯನ್ನು ಬಗ್ಗುಬಡಿಯಲು  ಕೂಡ  ಸ್ಥಳೀಯ ಆಳುವವರ್ಗಗಳು ಪಾಶ್ಚಿಮಾತ್ಯ ದೇಶಗಳ ಸಂಪೂರ್ಣ ಕುಮ್ಮಕ್ಕಿನೊಂದಿಗೆ ಹಸಿರುಕ್ರಾಂತಿಯನ್ನು ಬಳಸಿಕೊಂಡರು. ಈ ಹಸಿರುಕ್ರಾಂತಿ ಪವಾಡ ಸದೃಶವೆಂಬಂತೆ ಬೆಳೆಯನ್ನು ಹೆಚ್ಚಿಸಿತು. ಜನರ ಹಸಿವನ್ನು ನೀಗಿಸದಿದ್ದರೂ ದೇಶದ ಆಹಾರ ಉತ್ಪಾದನೆಯನ್ನು ಹೆಚ್ಚಿಸಿತು.

ಡಾ. ಎಂ. ಎಸ್. ಸ್ವಾಮಿನಾಥನ್  ಎಂಬ ಹೆಸರು ಇತ್ತೀಚಿನ ದಿನಗಳಲ್ಲಿ ಈ ದೇಶದ ರೈತ ಹೋರಾಟದ ಜೊತೆ ಆಳವಾಗಿ ಬೆಸುಗೆಯಾಗಿತ್ತು. ಸ್ವಾಮಿನಾಥನ್ ಅವರು  ತಮ್ಮನೇತೃತ್ವದ ಕೃಷಿ ಆಯೋಗದ ಮೂಲಕ ರೈತರ ಬೆಳೆಗಳ ಬೆಲೆಯನ್ನು ಅಂದಾಜು ಮಾಡಲು ಮುಂದಿಟ್ಟ  C2+50% (ರೈತರ ಒಳಸುರಿ ವೆಚ್ಚ+ರೈತ ಕುಟುಂಬದ ಶ್ರಮ+ಭೂಮಿಯ ಬಾಡಿಗೆ+ ಭೂಮಿಯ ಸವಕಳಿ..ಇತ್ಯಾದಿ ಒಟ್ಟು ಸೇರಿಸುವ ರೈತರ ಕೃಷಿ ವೆಚ್ಚದ ಲೆಕ್ಕಾಚಾರ ಮಾಡುವ )  ಸೂತ್ರ ಅತ್ಯಂತ ವೈಜ್ಞಾನಿಕವಾಗಿತ್ತು ಮತ್ತು ರೈತರ ಬದುಕನ್ನು ಸಹನೀಯಗೊಳಿಸುವಂತಿತ್ತು.

Advertisement
Advertisement

ಈ ಸೂತ್ರವನ್ನು 2008 ರಲ್ಲೇ UPA  ಸರ್ಕಾರದ ಮುಂದಿಟ್ಟರೂ UPA-1, UPA-2  ಸರ್ಕಾರಗಳು ಅದರ ಬಗ್ಗೆ ಸ್ಮಶಾನ ಮೌನ ಅನುಸರಿಸಿದವು . ಇನ್ನು ಮೋದಿ ಸರ್ಕಾರವಂತೂ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದರೂ ಅಧಿಕಾರಕ್ಕೆ ಬಂದ ಮೇಲೆ ಸುಪ್ರೀಂ ಕೋರ್ಟಿನಲ್ಲೇ ಯಾವ ಕಾರಣಕ್ಕೂ ಸ್ವಾಮಿನಾಥನ್ ಸೂತ್ರ ಪಾಲಿಸಲು ಸಾಧ್ಯ ಇಲ್ಲ ಎಂದು ಘೋಷಿಸಿಬಿಟ್ಟಿತು.. ಅದೇನೇ ಇರಲಿ.. ರೈತರ ಒಟ್ಟಾರೆ ಕಷ್ಟವನ್ನು ಸಮಗ್ರವಾಗಿ ಪರಿಗಣಿಸಿ ಪರಿಣಾಮಕಾರಿಯಾಗಿ ಸರ್ಕಾರ ಹಾಗೂ ಜಗತ್ತಿನ ಮುಂದಿಟ್ಟಿದ್ದಕ್ಕೆ ರೈತ ಸಮುದಾಯ ಸ್ವಾಮಿನಾಥನ್ ಅವರಿಗೆ ಋಣಿಯಾಗಿದೆ.  ಇದಲ್ಲದೆ ಸದ್ಯ ಇರುವ ಮಾರುಕಟ್ಟೆ ಅವಲಂಬಿತ ಕೃಷಿ ವ್ಯವಸ್ಥೆಯ ಚೌಕಟ್ಟಿನೊಳಗೆ ಸ್ವಾಮಿನಾಥನ್ ಅವರು ಕೃಷಿ ಬದುಕು ಹಾಗೂ ಸಣ್ಣ ರೈತಾಪಿಯ ಹಿತಾಸಕ್ತಿಯ ಬಗ್ಗೆ  ಹಲವು ರೈತ ಪರ ಸಲಹೆಗಳನ್ನು ಕೊಟ್ಟಿದ್ದರು.

ವಿಪರ್ಯಾಸವೆಂದರೆ, ರೈತಾಪಿಯನ್ನು ಅದರಲ್ಲೂ ಸಣ್ಣ ರೈತಾಪಿಯನ್ನು ಇಂಥಾ ಮಾರುಕಟ್ಟೆ ಚಕ್ರದೊಳಗೆ ತಂದದ್ದೂ ಸಹ ಸ್ವಾಮಿನಾಥನ್  ಅವರ ತಾಂತ್ರಿಕ ನೇತೃತ್ವದ ಹಾಗೂ ಅಂದಿನ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಅಮೇರಿಕ ನಿರ್ದೇಶಿತ ಹಸಿರು ಕ್ರಾಂತಿಯೇ .. ವಾಸ್ತವವಾಗಿ ಹಸಿರು ಕ್ರಾಂತಿಯು ಭಾರತದ ಹಸಿವನ್ನು ನೀಗಿದರೂ ಭಾರತದ ಕೃಷಿ ವ್ಯವಸ್ಥೆಯನ್ನು ಕೃಷಿ ಬಹುರಾಷ್ಟ್ರೀಯ ಕಂಪನಿಗಳ  ಮತ್ತು ಅಮೇರಿಕ ನೇತೃತ್ವದ ಶ್ರೀಮಂತ ದೇಶಗಳ ಅವಲಂಬಿತ ವಸಾಹತುವಾಗಿಸಿಬಿಟ್ಟಿತು..  ಹಾಗೂ ನಿಧಾನವಾಗಿ ರೈತರನ್ನು ದಿವಾಳಿಯಾಗಿಸಿ , ಪರಿಸರವನ್ನು ವಿನಾಶದತ್ತ ತಳ್ಳಿತು .. ಹೀಗಾಗಿ ಹಸಿರು ಕ್ರಾಂತಿ ಎಂಬುದು ಆಗ ವರವಂತೆ ಭಾಸವಾಗಿದ್ದರೂ ಈಗ ಶಾಪದಂತೆ ಕಾಡುತ್ತಿದೆ. ಆಗ ವರ ಎಂದು ಭಾವಿಸಿದ ಹಲವರು ಈಗ ಅದರ ಹಿಂದಿನ ಘೋರವನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ.

ಆದರೆ ಡಾ. ಸ್ವಾಮಿನಾಥನ್ ಅದರ ಬಗ್ಗೆ ಆಗಾಗ ಕೆಲವು ಮರುಯೋಚನೆಗಳ ಉದ್ಗಾರವನ್ನು ಮಾಡಿದ್ದರೂ ಸಮಗ್ರವಾಗಿ ಪುನರಾವಲೋಕನ ದಲ್ಲಿ ತೊಡಗಿಕೊಂಡಂತೆ ಕಾಣುವುದಿಲ್ಲ… ಆಗ ದೇಶ ಹಸಿವಿನಿಂದ  ಬಳಲುತ್ತಿತ್ತು. ಆಹಾರ ಉತ್ಪಾದನೆಯಲ್ಲಿ ಸಾರ್ವಭೌಮತೆಯನ್ನು ಸಾಧಿಸಬೇಕೆಂದರೇ ಉತ್ಪಾದನೆಯಲ್ಲಿ ಹೆಚ್ಚಳ ಸಾಧಿಸಲೇ ಬೇಕಾದ ತುರ್ತಿನಲ್ಲಿದ್ದ ಭಾರತದಂಥ ಹಲವಾರು ದೇಶಗಳ ಕೃಷಿ ವ್ಯವಸ್ಥೆಯನ್ನು  ಅಮೇರಿಕ ಕೃಷಿ ಕಾರ್ಪೊರೇಟು  ಕಂಪೆನಿಗಳು ಮತ್ತು ಅದರ ಬೆಂಬಲಕ್ಕಿದ್ದ  ಅಮೇರಿಕ ಸರ್ಕಾರ ತಮ್ಮ ವಸಾಹತುವನ್ನಾಗಿ ಮಾಡಿಕೊಂಡರು.

ಮತ್ತೊಂದು ಕಡೆ ಗ್ರಾಮೀಣ ಪ್ರದೇಶದ ಹಸಿವು – ಬಡತನಗಳಿಗೆ ಕಾರಣವಾಗಿದ್ದ  ಭೂಮಾಲೀಕತ್ವ ಹಾಗೂ ಊಳಿಗಮಾನ್ಯ ಪಾಳೇಗಾರಿ ವ್ಯವಸ್ಥಯ ವಿರುದ್ಧ ರೈತಕೂಲಿಗಳ ಬಂಡಾಯದ ಕೆಂಪುಕ್ರಾಂತಿಯನ್ನು ಬಗ್ಗುಬಡಿಯಲು  ಕೂಡ  ಸ್ಥಳೀಯ ಆಳುವವರ್ಗಗಳು ಪಾಶ್ಚಿಮಾತ್ಯ ದೇಶಗಳ ಸಂಪೂರ್ಣ ಕುಮ್ಮಕ್ಕಿನೊಂದಿಗೆ ಹಸಿರುಕ್ರಾಂತಿಯನ್ನು ಬಳಸಿಕೊಂಡರು. ಈ ಹಸಿರುಕ್ರಾಂತಿ ಪವಾಡ ಸದೃಶವೆಂಬಂತೆ ಬೆಳೆಯನ್ನು ಹೆಚ್ಚಿಸಿತು. ಜನರ ಹಸಿವನ್ನು ನೀಗಿಸದಿದ್ದರೂ ದೇಶದ ಆಹಾರ ಉತ್ಪಾದನೆಯನ್ನು ಹೆಚ್ಚಿಸಿತು.  ಉತ್ಪಾದನೆಯ ಹೆಚ್ಚಳದಲ್ಲಿ ತೊಡಗಿದ್ದ ವರ್ಗಗಳು  ಗ್ರಾಮೀಣ ಪ್ರದೇಶದಲ್ಲಿ ಹೊಸ ನವ ಶ್ರೀಮಂತ ರೈತಾಪಿ ವರ್ಗಾವಾಗಿ ವಿಕಸನಗೊಂಡರು

Advertisement

ನಿಧಾನವಾಗಿ ಈ ರೈತ ವರ್ಗಕ್ಕೆ ತಳಹಂತದ ರಾಜಕೀಯ ಅಧಿಕಾರವೂ ದೊರೆತು ತಳಮಟ್ಟದ ಆಳುವ ವರ್ಗಗಳಾದರು . ನಂತರ ಇದರ ಮೇಲ ಸ್ಥರ  80-90ರ ದಶಕದಲ್ಲಿ ಪ್ರಾದೇಶಿಕ ಹಾಗೂ ರಾಷ್ಟೀಯ ಅಧಿಕಾರದಲ್ಲೂ ಪಾಲು ಪಡೆದರು.  ಮತ್ತೊಂದು ಕಡೆ ಗ್ರಾಮೀಣ ಸಮಾಜದ ಬಡ- ಹಾಗೂ ರೈತ ಕೂಲಿ ವರ್ಗಗಳು- (ಇವರು  ಸಾಮಾನ್ಯವಾಗಿ ದಲಿತ ಹಾಗೂ ಅತಿಹಿಂದುಳಿದ ಶೂದ್ರ ಜಾತಿಗಳಿಗೆ ಸೇರಿರುತ್ತಾರೆ )- ಈ ಅಭಿವೃದ್ಧಿ ಕಥನದಲ್ಲಿ ಯಾವುದೇ ಪಾಲು ಪಡೆಯದೇ ನಿತ್ರಾಣಗೊಳ್ಳುತ್ತಾ ಹೋದರು.

ಹಾಗೆಯೇ ಅತಿ ಉತ್ಪಾದನೆಯ ಮೋಹದಲ್ಲಿ ರಾಸಾಯನಿಕಗಳ ಒಳಸುರಿಯ ಹೆಚ್ಚಳದಿಂದ ಮಣ್ಣು ಕ್ಷಾರ ವಾಗುತ್ತಾ ಹೋಯಿತು. ಉತ್ಪಾದನೆಯೂ ಇಳಿಮುಖವಾಗುತ್ತಾ ಹೋಯಿತು. ಹಳೆಯ ಕೃಷಿ ವ್ಯವಸ್ಥೆ ಯ ಏಕೋ ಸಿಸ್ಟಮ್ ಸಂಪೂರ್ಣವಾಗಿ ಧ್ವಸ್ತವಾಯಿತು. ಅದೇ ವೇಳೆ ಜಾಗತೀಕರಣದ ಒಪ್ಪಂದಗಳಿಂದಾಗಿ ಸರ್ಕಾರ ತನ್ನ ಬೆಂಬಲವನ್ನೂ ಹಿಂತೆಗೆದುಕೊಂಡಿತು. ಮತ್ತು  ಅಗ್ಗದ ವಿದೇಶಿ ಕೃಷಿ ಸರಕುಗಳು ಭಾರತರ ಮಾರುಕಟ್ಟೆಯಲ್ಲಿ ಸುರಿಯಲಾರಂಭಿಸಿ ಭಾರತದ ರೈತರು  ಆತ್ಮಹತ್ಯೆ ಮಾಡಿಕೊಳ್ಳಲಾರಂಭಿಸಿದರು.

ಹೀಗೆ ಹಸಿರು ಕ್ರಾಂತಿ ಕೇವಲ ಉತ್ಪಾದನೆಯನ್ನು ಮಾತ್ರ ಹೆಚ್ಚಿಸಿದ ಒಂದು ತಾಂತ್ರಿಕ ವಿದ್ಯಮಾನವಾಗಿರಲಿಲ್ಲ. ಅದು ಭಾರತದ ರೈತ ವರ್ಗ, ಅದರಲ್ಲೂ ಸಣ್ಣ ಹಾಗೂ ಅತಿ ಸಣ್ಣ ರೈತಾಪಿಯನ್ನು ದಿವಾಳಿಯೆಬ್ಬಿಸಿದೆ.  ಅದರ ಜೊತೆಗೆ  ಭಾರತದ ಕೃಷಿ, ಗ್ರಾಮೀಣ ಆರ್ಥಿಕತೆ , ಈ ದೇಶದ ನೆಲ-ಜಲ ಎಲ್ಲವೂ ಕೊನೆಯರಿಯದ ಖಾಯಿಲೆಗೆ ದೂಡಿದ ವಿದ್ಯಮಾನವಾಯಿತು. ಹೀಗಾಗಿ  ಹಸಿರು ಕ್ರಾಂತಿ ಭಾರತದ ಅಂದಿನ ಹಸಿವು ನೀಗಿಸಿದರೂ ಭವಿಷ್ಯದ  ಉಸಿರು ತೆಗೆಯಿತು.

ಮುಂದುವರೆಯುವುದು

ಬರಹಗಾರರು – ಶಿವಸುಂದರ್, 9448659774

Advertisement

Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಹಮದಾಬಾದ್​ನಲ್ಲಿ 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಪತನ
June 12, 2025
3:28 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 12-06-2025 | ಮುಂದೂಡಿದ ಭಾರೀ ಮಳೆ..! | ಜೂ.13 ರಿಂದ ಮುಂದುವರಿಯುವ ಮಳೆ |
June 12, 2025
2:21 PM
by: ಸಾಯಿಶೇಖರ್ ಕರಿಕಳ
ತೆಂಗಿನ ಗೆರಟೆ ಮೌಲ್ಯವರ್ಧನೆ | ಇದು ಬರೀ “ಚಿಪ್ಪಿ”ಯಲ್ಲ ಇದರೊಳಗಿದೆ ಹಲವು ಬಗೆ..!
June 12, 2025
11:07 AM
by: ಮಹೇಶ್ ಪುಚ್ಚಪ್ಪಾಡಿ
ಮಳೆ ಹಿನ್ನೆಲೆ | ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಶಾಲೆಗಳಿಗೆ ರಜೆ
June 12, 2025
7:06 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group