ದಾವಣಗೆರೆಯಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನವನ್ನು ರಾಷ್ಟ್ರೀಯ ಕೃಷಿ ಕೀಟಬಾಧೆ, ಸಂಶೋಧನಾ ಮಂಡಳಿಯ ಅಧಿಕಾರಿ ಡಾ. ಸಾಗರ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಡಾ. ಸಾಗರ್, ಕೃಷಿ ಅಭಿವೃದ್ಧಿ ಮತ್ತು ರೈತರ ಆದಾಯ ದ್ವಿಗುಣಗೊಳಿಸುವ ಮಹತ್ವಾಕಾಂಕ್ಷೆಯಿಂದ ಕೇಂದ್ರ ಸರ್ಕಾರ ಈ ಅಭಿಯಾನವನ್ನು ಹಮ್ಮಿಕೊಂಡಿದೆ. ಇದರ ಅಡಿಯಲ್ಲಿ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆಯಬೇಕಾದ ಬೆಳೆಗಳ ಮಾಹಿತಿ, ಕೀಟನಾಶಕಗಳ ಬಳಕೆ ಕುರಿತು ಜಾಗೃತಿ ಹಾಗೂ ರೈತರಿಗಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಿಧ ಯೋಜನೆಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.
ಡಾ. ಅವಿನಾಶ್, ಮುಂಗಾರು ಹಂಗಾಮಿನಲ್ಲಿ ಯಾವ ಯಾವ ಬೆಳೆಗಳನ್ನು ಬೆಳೆದರೆ ಹೆಚ್ಚಿನ ಇಳುವರಿ ಬರಲಿದೆ. ಆ ಮೂಲಕ ರೈತರ ಆದಾಯವನ್ನು ಹೆಚ್ಚಿಸಿಕೊಳ್ಳುವ ಕುರಿತು ಅಭಿಯಾನದಡಿ ಮಾಹಿತಿ ನೀಡಲಾಗುವುದು ಎಂದು ಹೇಳಿದರು.
ಡಾ. ತಿಮ್ಮಣ್ಣ, ಕೇವಲ ಇಳುವರಿ ಹೆಚ್ಚಾದರೆ ಸಾಲದು, ಮಣ್ಣಿನ ಆರೋಗ್ಯ ರಕ್ಷಣೆಯತ್ತ ರೈತರು ಗಮನ ಹರಿಸಬೇಕು. ಈ ಕುರಿತಂತೆಯೂ ರೈತರಿಗೆ ಅರಿವು ಮೂಡಿಸಲಾಗುವುದು. ಬೆಳೆಗಳಿಗೆ ಎಷ್ಟು ಪ್ರಮಾಣದಲ್ಲಿ ಪೋಷಕಾಂಶಗಳನ್ನು ಬಳಕೆ ಮಾಡಬೇಕೆಂಬ ಬಗ್ಗೆಯೂ ಮಾಹಿತಿ ನೀಡಲಾಗುವುದು ಎಂದರು.
ಕೃಷಿಕ ದ್ಯಾಮಣ್ಣ, ಮೀನುಗಾರಿಕೆ ಇಲಾಖೆಯ ಅಧಿಕಾರಿಗಳ ಸಲಹೆ, ಸೂಚನೆಯಂತೆ ಕೃಷಿ ಹೊಂಡದಲ್ಲಿ ಮೀನುಗಳನ್ನು ಸಾಕಾಣಿಕೆ ಮಾಡಿ, ಹೆಚ್ಚಿನ ಆದಾಯ ಗಳಿಸಿರುವುದಾಗಿ ತಿಳಿಸಿದರು. ಮತ್ತೋರ್ವ ಕೃಷಿಕ ಪರಮೇಶ್ವರಪ್ಪ, ಸಮಗ್ರ ಕೃಷಿ ಯೋಜನೆಯಡಿಯಲ್ಲಿ ಕೃಷಿ ಅಧಿಕಾರಿಗಳು ನೀಡಿದ ಮಾಹಿತಿಯಿಂದ ಎರೆಹುಳು ಗೊಬ್ಬರದ ಘಟಕ ಮತ್ತು ಜೇನು ಸಾಕಾಣಿಕೆಯಲ್ಲಿ ತೊಡಗಿಕೊಂಡಿದ್ದು, ಮಿಶ್ರ ಬೆಳೆ ಬೆಳೆಯುವ ಮೂಲಕವೂ ಆದಾಯ ಹೆಚ್ಚಿಸಿಕೊಂಡಿರುವುದಾಗಿ ತಿಳಿಸಿದರು.
ಕೃಷಿ, ತೋಟಗಾರಿಕೆ ಹಾಗೂ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು, ತಜ್ಞರು ಮತ್ತಿತರರು ಉಪಸ್ಥಿತರಿದ್ದರು.