ವಿವೇಕಾನಂದ ಎಚ್‌ ಕೆ ಮನಸ್ಸಿನ ಕನ್ನಡಿಯಲ್ಲಿ ಬರೆಯುತ್ತಾರೆ….. | ತೀರಾ ಕೆಳ ಹಂತಕ್ಕೆ ಇಳಿದ ರಾಜಕೀಯ ನಾಯಕರ ಚುನಾವಣಾ ಮಾತುಗಳು….| ಅದಕ್ಕಿಂತ ಕೆಳ ಹಂತಕ್ಕೆ ಜಾರಿದ ಟಿವಿ ಮಾಧ್ಯಮಗಳ ” ವಿವೇಚನೆ “… |

October 21, 2021
11:03 AM

ಯಾರೋ ಕುಡುಕರು ತುಂಬಾ ಕುಡಿದು ನಿಯಂತ್ರಣ ಕಳೆದುಕೊಂಡಾಗ ಅಥವಾ ತೀರಾ ಮಾನಸಿಕ ಸ್ಥಿಮಿತ ಕಳೆದುಕೊಂಡು ಅರೆ ಹುಚ್ಚರಾದವರು ಅಥವಾ ಯಾರೋ ತುಂಬಾ ಅಸೂಯ ಪರರು ತುಂಬಾ ದ್ವೇಷದಿಂದ ಜಗಳವಾಡುವಾಗ ಆಡುವ ಅತ್ಯಂತ ಕೆಳ ಮಟ್ಟದ ಭಾಷೆ ರಾಜ್ಯದ ನಮ್ಮೆಲ್ಲಾ ಅಧಿಕಾರ ಸಂಪನ್ಮೂಲ ಎಲ್ಲದರ ನಿಯಂತ್ರಣ ಹೊಂದಿರುವ ರಾಜಕಾರಣಿಗಳು ಸಾರ್ವಜನಿಕವಾಗಿ ಮಾತನಾಡಿದರೆ ಅದರ ಪರಿಣಾಮ ಏನಾಗಬಹುದು…..

ಯಾವುದೋ ಒಂದು ಉಪ ಚುನಾವಣೆ ಗೆಲ್ಲಲು, ಜನರ ಮತ ಗಳಿಸಲು, ಮತದಾರರನ್ನು ಓಲೈಸಲು ಬಾಯಿಗೆ ಬಂದಂತೆ ಮಾತನಾಡುವ ದೊಡ್ಡ ದೊಡ್ಡ ರಾಜಕಾರಣಿಗಳು ಮತ್ತು ಅದಕ್ಕೆ ಸಾಕಷ್ಟು ಪ್ರಚಾರ ನೀಡುವ ಟಿವಿ ವಾಹಿನಿಗಳು……..

ಇದಕ್ಕಿಂತ ಅಧೋಗತಿ ಇನ್ನೇನಿದೆ. ಯಾವ ನೈತಿಕ ಮೌಲ್ಯಗಳ ಹಿನ್ನೆಲೆಯಲ್ಲಿ ನಾವು ಮಕ್ಕಳಿಗೆ ಬುದ್ದಿಮಾತು ಹೇಳಬೇಕು. ಯಾವ ಮಾನವೀಯ ಮೌಲ್ಯಗಳ ಹಿನ್ನೆಲೆಯಲ್ಲಿ ನಾವು ಸಂಸ್ಕಾರ ಕಲಿಸಬೇಕು………..

ಹೊಟ್ಟೆ ಪಾಡಿಗಾಗಿ ಕಳ್ಳತನ ಮಾಡುವವರು, ಬದುಕಿಗಾಗಿ ವೇಶ್ಯಾವಾಟಿಕೆ ಮಾಡುವವರು ಇವರಿಗಿಂತ ಎಷ್ಟೋ ಪಾಲು ಉತ್ತಮ ಎನಿಸುವುದಿಲ್ಲವೇ ? ಏಕೆಂದರೆ ಅವರು ಮಾಡುವುದು ತುತ್ತಿನ ಚೀಲ ತೀರಿಸಲು. ಆದರೆ ಇವರು ಮಾಡುವುದು ಪ್ರಜಾಪ್ರಭುತ್ವ ಅಥವಾ ಸಮಾಜದ ಮೌಲ್ಯಗಳನ್ನು ಧ್ವಂಸ ಮಾಡಲು…………

ಮಾತನಾಡಲು ಎಷ್ಟೊಂದು ಗಂಭೀರ ಕಾರಣಗಳು ಇವೇ, ಒಂದು ಕ್ಷೇತ್ರದ ಶಾಸಕನಾಗಿ ನಾನು ಏನೇನು ಮಾಡಬಲ್ಲೆ ಎಂದು ಜನರಿಗೆ ಮನವರಿಕೆ ಮಾಡಿಕೊಡಲು ಎಷ್ಟೊಂದು ವಿಧಾನಗಳಿವೆ. ಅವುಗಳ ಬಗ್ಗೆ ಎಂದಾದರೂ ಯೋಚಿಸಿದ್ದಾರೆಯೇ…..

ಉದಾಹರಣೆಗೆ……

ಒಂದು ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಣಾಳಿಕೆ ಹೀಗೂ ಹೇಳಬಹುದು…..

ಭಾರತದ ಪ್ರಜಾಪ್ರಭುತ್ವ ವಿಶ್ವದ ಅತ್ಯಂತ ದೊಡ್ಡ ಮತ್ತು ಮಹತ್ವದ ವ್ಯವಸ್ಥೆ. ಇಲ್ಲಿ ಪ್ರಜೆಗಳೇ ಪ್ರಭುಗಳು. ಆದರೆ ಸ್ವಾತಂತ್ರ್ಯ ಬಂದು ಸುಮಾರು ‌75 ವರ್ಷಗಳ ನಂತರ ಸಹ ಇದು ಸರಿಯಾದ ದಿಕ್ಕಿನಲ್ಲಿ ಚಲಿಸುತ್ತಿಲ್ಲ ಮತ್ತು ಅನೇಕ ಸಮಸ್ಯೆಗಳು ಈಗಲೂ ಹಾಗೆಯೇ ಉಳಿದುಕೊಂಡಿವೆ.

ಹಾಗಾದರೆ ಅದಕ್ಕೆ ಕಾರಣವೇನು ??

ಬಹುತೇಕ ಜನಸಾಮಾನ್ಯರು ನಮ್ಮನ್ನು ಆಳುವ ವರ್ಗದ ಕಡೆಯೇ ಬೆರಳು ತೋರಿಸುತ್ತಾರೆ. ಕಾರಣ ಜನಪ್ರತಿನಿಧಿಗಳ ಅದಕ್ಷತೆ ಮತ್ತು ವಿಫಲತೆ. ಜನರ ಬೇಡಿಕೆ ಮತ್ತು ಪೂರೈಕೆಗಾಗಿ ಸರ್ಕಾರ ಮತ್ತು ಜನರ ನಡುವೆ ಸಮನ್ವಯವೇ ಇನ್ನೂ ಸಾಧ್ಯವಾಗಿಲ್ಲ.

ಈ ಎಲ್ಲಾ ಅಂಶಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ಕ್ಷೇತ್ರದ ಮಹಾ ಜನತೆಯ ಸೇವೆಗಾಗಿ ಒಂದು ಅವಕಾಶ ಕೋರುತ್ತಾ ನನ್ನ ಕನಸುಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ……..

1) ದೇಶದ ಯುವಶಕ್ತಿಯನ್ನು ಮತ್ತೊಮ್ಮೆ ಕ್ರಿಯಾಶೀಲ ಗೊಳಿಸಲು ಕ್ಷೇತ್ರದ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಒಂದೊಂದು ಸುಸಜ್ಜಿತ ಸಾರ್ವಜನಿಕ ಗ್ರಂಥಾಲಯಗಳನ್ನು ನಿರ್ಮಿಸಿ ಅದನ್ನು ಚಟುವಟಿಕೆಯಿಂದ ನಡೆಸಲು ಉಚಿತ ಕಾಫಿ ಟೀ ವ್ಯವಸ್ಥೆ ಸೇರಿ ಅನೇಕ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುವುದು.

2) ಮನಸ್ಸಿನ ದೃಢತೆ ಅವಲಂಬಿಸಿರುವುದು ದೇಹದ ದೃಢತೆಯನ್ನು. ಆದ್ದರಿಂದ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಒಂದೊಂದು ಉತ್ತಮ ಗುಣಮಟ್ಟದ ಕ್ರೀಡಾ ಸಂಕೀರ್ಣ ನಿರ್ಮುಸಲಾಗುವುದು.

3) ಇಡೀ ಕ್ಷೇತ್ರದಲ್ಲಿ ಇರುವ ಎಲ್ಲಾ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳ ಸಂಪೂರ್ಣ ಮಾಹಿತಿ ಮತ್ತು ಅದರ ಕಾರ್ಯನಿರ್ವಹಣೆ ಬಗ್ಗೆ ಎಲ್ಲರಿಗೂ ಸುಲಭವಾಗಿ ಸಿಗುವಂತೆ ವ್ಯವಸ್ಥೆ ಮಾಡಲಾಗುತ್ತದೆ.

4) ಕ್ಷೇತ್ರದ ಎಲ್ಲಾ ಹೋಬಳಿ ಮಟ್ಟದಲ್ಲಿ ಲಲಿತ ಕಲೆಗಳ ಪ್ರತಿಭಾ ಶೋಧನೆ ಕಾರ್ಯಕ್ರಮವನ್ನು ಪ್ರತಿ ಆರು ತಿಂಗಳಿಗೊಮ್ಮೆ ಏರ್ಪಡಿಸಿ ಆ ಪ್ರತಿಭೆಗಳನ್ನು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಬೆಳೆಯಲು ವೇದಿಕೆ ಮತ್ತು ಪ್ರೋತ್ಸಾಹ ಕಲ್ಪಿಸಲಾಗುವುದು.

5) ನಿರುದ್ಯೋಗ ಸಮಸ್ಯೆಯ ನಿವಾರಣೆ ನಮ್ಮ ಮೊದಲ ಆದ್ಯತೆ. ಅದಕ್ಕಾಗಿ ಎಲ್ಲಾ ರೀತಿಯ ನಿರುದ್ಯೋಗಿಗಳ ತಾಲ್ಲೂಕು ಮಟ್ಟದ ಸಂಪೂರ್ಣ ಅಂಕಿ ಅಂಶಗಳನ್ನು ಅವರ Resume ಸಮೇತ ಸಂಗ್ರಹ ಮಾಡಲಾಗುವುದು. ನಂತರ ಅವರವರ ಅರ್ಹತೆ ತಕ್ಕುದಾದ ಆಯ್ಕೆಗಳು ಮತ್ತು ಅವಕಾಶಗಳ ಬಗ್ಗೆ ಮಾಹಿತಿ ನೀಡಲು ನಿರುದ್ಯೋಗ ಗಣತಿ ಮತ್ತು ಉದ್ಯೋಗಾವಕಾಶ ಎಂಬ ಕ್ಷೇತ್ರದ ಸಾಪ್ಟ್ ವೇರ್ ಅಭಿವೃದ್ಧಿ ಪಡಿಸಲಾಗುವುದು.

6) ಕ್ಷೇತ್ರದ ಎಲ್ಲಾ ಸಂಗೀತ ಸಾಹಿತ್ಯ ಕ್ರೀಡೆ ವಿಜ್ಞಾನ ಮುಂತಾದ ಅಕಾಡೆಮಿಗಳನ್ನು ನಿರಂತರವಾಗಿ ಸಂಪರ್ಕಿಸುತ್ತಾ ಅವು ಸದಾ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ನಿರ್ವಹಿಸಲು ವೈಯಕ್ತಿಕ ಆಸಕ್ತಿ ವಹಿಸಿ ಅದಕ್ಕೆ ಸರ್ಕಾರದ ಯಾವುದೇ ಆರ್ಥಿಕ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು.

7) ಈ ದೇಶದ ಬೆನ್ನೆಲುಬು ರೈತ. ಇಂದು ರೈತ ಸಮುದಾಯ ಅನೇಕ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ಬಂದಿದೆ. ನಮ್ಮ ಅತಿ ಪ್ರಮುಖ ಕೆಲಸ ಕ್ಷೇತ್ರದಲ್ಲಿ ರೈತರ ಜೀವ ಉಳಿಸುವ ಕೆಲಸ ಮಾಡುವುದು. ಕಾರಣಗಳು ಪರಿಸ್ಥಿತಿಗಳು ಏನೇ ಇರಲಿ ಜೀವ ಮುಖ್ಯ. ಪ್ರತಿ ಗ್ರಾಮ ಪಂಚಾಯತಿಗೂ ಭೇಟಿ ನೀಡಿ ಅವರ ಕಷ್ಟಗಳಿಗೆ ಸ್ಪಂದಿಸಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸಿ ಜೀವ ಉಳಿಸುವ ಕೆಲಸ ಮಾಡಲಾಗುವುದು.

8) ಅನೇಕ ನಿವೃತ್ತ ಅಧಿಕಾರಿಗಳು ಇನ್ನೂ ಆರೋಗ್ಯವಾಗಿದ್ದರೂ ಏನೂ ಕೆಲಸ ಮಾಡದೆ ಅವರ ಪ್ರತಿಭೆ ವ್ಯರ್ಥವಾಗುತ್ತಿರುವುದನ್ನು ಗಮನಿಸಿ ಕ್ಷೇತ್ರದಲ್ಲಿ ಅವರ ಸದುಪಯೋಗ ಪಡೆಯಲು ಯೋಜನೆ ರೂಪಿಸಲಾಗುವುದು. ಅವರಿಗೆ ಆದಾಯ ಯುವಜನರಿಗೆ ಅನುಭವದ ಮಾರ್ಗದರ್ಶನ ದೊರೆಯುವಂತೆ ಮಾಡಲಾಗುವುದು.

9) ಮನುಷ್ಯನ ಬಹುತೇಕ ನೆಮ್ಮದಿಗೆ ಭಂಗ ಬರುವುದು ಸಮಾಜದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾದಾಗ. ಆದ್ದರಿಂದ ಇದನ್ನು ಮನಗಂಡು ನಾವು ಕ್ಷೇತ್ರದಲ್ಲಿ ಅಪರಾಧಿಗಳನ್ನು ಹಿಡಿಯುವ ಕ್ರಿಯೆಗಿಂತ ಹೆಚ್ಚಾಗಿ ಅಪರಾಧ ಆಗದಂತೆ ತಡೆಯುವ ನಿಟ್ಟಿನಲ್ಲಿ ಪೋಲೀಸರು ಕಾರ್ಯನಿರ್ವಹಿಸುವಂತೆ ಕಾನೂನಿನ ವ್ಯಾಪ್ತಿಯಲ್ಲಿ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.

10) ಸಾಮಾನ್ಯವಾಗಿ ಶಾಸಕರು ಮತ್ತು ಜನ ಪ್ರತಿನಿಧಿಗಳ ಮೇಲೆ ಇರುವ ಆರೋಪ ಆ ಕ್ಷೇತ್ರದ ಶಾಸಕರು ಎಲ್ಲಾ ರೀತಿಯ ಅಭಿವೃದ್ಧಿ ಕೆಲಸಗಳಲ್ಲಿ ಮೂಗು ತೂರಿಸಿ ಕಮೀಷನ್ ಪಡೆಯುತ್ತಾರೆ ಎಂದು. ಆದ್ದರಿಂದ ಕ್ಷೇತ್ರದ ಮಹಾ ಜನಗಳೇ ಆ ಕಮೀಷನ್ ದಂಧೆಗೆ ಮಂಗಳ ಹಾಡಿ ಸಂಪೂರ್ಣ ಹಣ ಸಾರ್ವಜನಿಕ ಕೆಲಸಕ್ಕೆ ಉಪಯೋಗವಾಗಬೇಕು ಎಂದು ಸಂಕಲ್ಪ ಮಾಡುತ್ತೇನೆ.

11) ಉದ್ಯೋಗ ಮೇಳ – ಮೊದಲೇ ತಿಳಿಸಿದಂತೆ ನಿರುದ್ಯೋಗಿಗಳ ಅರ್ಹತೆಯ ಪಟ್ಟಿ ಮಾಡಿ ‌ಆರು ತಿಂಗಳಿಗೊಮ್ಮೆ ಉದ್ಯೋಗ ಮೇಳ ಮಾಡಲಾಗುವುದು. ಇದನ್ನು ಕೇವಲ ಕಾಟಾಚಾರಕ್ಕಾಗಿ ಮಾಡದೆ
ಮನಃಪೂರ್ವಕವಾಗಿ ಆಸಕ್ತಿಯಿಂದ ಮಾಡಲಾಗುವುದು.

12) ಸಾಮಾನ್ಯವಾಗಿ ಸರ್ಕಾರದ ಅನೇಕ ಯೋಜನೆಗಳು ಹುಟ್ಟಿನಿಂದ ಸಾವಿನವರೆಗೂ ಬಡವರಿಗೆ ಉಪಯೋಗವಾಗುವಂತೆ ಇರುತ್ತದೆ. ಆದರೆ ಅದರ ಅರಿವು ಜನರಿಗೆ ಇರುವುದಿಲ್ಲ. ಆದ್ದರಿಂದ ಕ್ಷೇತ್ರದ ಜನತೆಗೆ ಎಲ್ಲಾ ಇಲಾಖೆಗಳಿಂದ ಸಿಗುವ ಸೌಲಭ್ಯಗಳ ಸಂಪೂರ್ಣ ಮಾಹಿತಿ ನಿರಂತರವಾಗಿ ದೊರಕುವ ವ್ಯವಸ್ಥೆ ಮಾಡಲಾಗುವುದು. ಅದಕ್ಕಾಗಿ ಒಂದು ಖಾಸಗಿ ಕಚೇರಿಯನ್ನು ಸಹ ತೆರೆಯಲಾಗುವುದು.

13) ಇಂದು ಆರೋಗ್ಯ ಕ್ಷೇತ್ರ ಅತ್ಯಂತ ದುಬಾರಿಯಾಗಿದೆ. ಬಡ ಮಧ್ಯಮ ವರ್ಗದ ಜನತೆಗೆ ಕೈಗೆ ಎಟುಕದಂತಾಗಿದೆ. ಅದನ್ನು ಮೊದಲ ಆಧ್ಯತೆ ಎಂದು ಪರಿಗಣಿಸಿ ಕ್ಷೇತ್ರದ ಜನತೆಗೆ ಸರ್ಕಾರಿ ಆರೋಗ್ಯ ಸೇವೆ ದೊರಕಿಸಿಕೊಡುವ ಸರ್ವ ಪ್ರಯತ್ನ ಮಾಡಿಕೊಡಲಾಗುವುದು.

14 ) ಬಹುಮುಖ್ಯವಾಗಿ ಸಾರ್ವಜನಿಕ ಸಂಪರ್ಕ ಕೇಂದ್ರ ಸ್ಥಾಪನೆ ಹಾಗೂ ಸಾರ್ವಜನಿಕರ ಕುಂದುಕೊರತೆಗಳಿಗೆ ನಿರಂತರ ಸ್ಪಂದನೆ. ಏಕೆಂದರೆ ಶಾಸಕಾಂಗದ ಚುನಾವಣೆಯ ಬಳಿಕ ಜನರನ್ನು ನಿರ್ಲಕ್ಷಿಸುತ್ತಾರೆ ಎಂಬ ಪ್ರಬಲ ಆರೋಪ ಬಹುತೇಕ ಎಲ್ಲಾ ಕ್ಷೇತ್ರದಲ್ಲಿ ಇದೆ. ಅದಕ್ಕಾಗಿಯೇ ಶಾಸಕರ ಅನುಪಸ್ಥಿತಿಯಲ್ಲಿ ಸಹ ಜನರ ಕೆಲಸ ಮಾಡಲು ಒಂದು ಕಚೇರಿ ತೆರೆಯಲಾಗುವುದು

15) ಮಾನ್ಯರೆ, ಸಾಮಾನ್ಯವಾಗಿ SSLC ಮತ್ತು PUC ವಿದ್ಯಾಭ್ಯಾಸದ ನಂತರ ಮುಂದಿನ ಓದಿನ ಬಗ್ಗೆ ಅನೇಕ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಸಾಕಷ್ಟು ಗೊಂದಲಗಳು ಇರುತ್ತವೆ. ಅದನ್ನು ಮನಗಂಡು ಜನರಿಗೆ ಆ ರೀತಿಯ ಗೊಂದಲ ನಿವಾರಿಸಲು ನಗರದಲ್ಲಿ ಒಂದು ” ವಿದ್ಯಾ ವಿಕಾಸ ಮಾರ್ಗದರ್ಶನ ” ಕೇಂದ್ರ ಸ್ಥಾಪಿಸಲಾಗುವುದು. ಇದು ಸಂಪೂರ್ಣ ಉಚಿತವಾಗಿರುತ್ತದೆ.

16) ಆತ್ಮೀಯರೆ, ಮುಂದಿನ ದಿನಗಳಲ್ಲಿ ಈ ಸಮಾಜದಲ್ಲಿ ಬಹುತೇಕ ಮಹಿಳೆಯರೇ ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಗೆ ಬರುವ ಸಾಧ್ಯತೆ ನಿಶ್ಚಿತವಾಗಿದೆ. ಆದ್ದರಿಂದ ಮಹಿಳೆಯರು ಮುಖ್ಯ ವಾಹಿನಿಯಲ್ಲಿ ಭಾಗವಹಿಸುವ ಮತ್ತು ಅವರಲ್ಲಿ ‌ಸ್ವಾಭಿಮಾನ ಸ್ವಾವಲಂಬನೆ ಆತ್ಮವಿಶ್ವಾಸ ತುಂಬುವ ” ಮಹಿಳಾ ಜಾಗೃತಿ ವೇದಿಕೆ ” ಯನ್ನು ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸ್ಥಾಪಿಸಲಾಗುವುದು………..

ಹೀಗೆ ಇನ್ನೂ ಅನೇಕ ರೀತಿಯಲ್ಲಿ……. ಅನೇಕ ಸಾಧ್ಯತೆಗಳು…….

# ವಿವೇಕಾನಂದ ಎಚ್‌ ಕೆ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

ಇದನ್ನೂ ಓದಿ

ಬಯಕೆ, ಕಾಮ, ಆಕರ್ಷಣೆ, ಪ್ರೀತಿ ಮತ್ತು ಪ್ರೇಮ – ಜೀವನದ ಅಂತರಂಗದ ಹಂತಗಳು
February 28, 2026
7:00 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹೊಸರುಚಿ | ಮನೆಯಲ್ಲೇ ಸುಲಭವಾಗಿ ಮಾಡುವ ಎಳೆಯ ಹಲಸಿನ ಕಾಯಿ ಸುಕ್ಕ
February 28, 2026
7:00 AM
by: ದಿವ್ಯ ಮಹೇಶ್
ಹೊಸರುಚಿ | ಎಳೆಯ ಹಲಸಿನ ಕಾಯಿ 65 – ಕರಕರಾ, ರುಚಿಕರ ಸ್ನ್ಯಾಕ್ ರೆಸಿಪಿ
February 22, 2026
9:09 AM
by: ದಿವ್ಯ ಮಹೇಶ್
ಪರರನ್ನು ಮೆಟ್ಟಿಲಾಗಿಸಿದ ಸಾಧನೆ ಶಾಶ್ವತವಲ್ಲ: ಆತ್ಮವಂಚನೆಯ ಅಂಧಕಾರದತ್ತ ಕರೆದೊಯ್ಯುವ ಮಾರ್ಗ
February 20, 2026
7:30 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror