ತವಕ-ತಲ್ಲಣ-ಆತಂಕ-ನಿರಾಸೆಗಳು | ಬದುಕಿರುವುದೇ ಒಂದು ಸಾಧನೆಯಾದ 2020-21………| ಹೊಸ ಆಶಾಕಿರಣ ಮೂಡುವ ಭರವಸೆಯಲ್ಲಿ 2022 …… ವಿವೇಕಾನಂದ ಎಚ್‌ ಕೆ ಬರೆಯುತ್ತಾರೆ |

December 27, 2021
11:19 AM

ಸುಮಾರು 22 ತಿಂಗಳು ಬದುಕಿನ ದಿನಗಳು ಸರಿದು ಹೋದವು….! 

Advertisement
Advertisement

ವೈರಸ್‌ಗಳೆಂಬ ಜೀವಿಗಳು ರೂಪಾಂತರ ಹೊಂದುತ್ತಾ ಮನುಷ್ಯನ ಜೀವನೋತ್ಸಾಹವನ್ನೇ ಕುಗ್ಗಿಸುತ್ತಿದೆ…. ಎರಡು ವರ್ಷದ ಎಳೆಯ ಮಕ್ಕಳು ಹೊರತುಪಡಿಸಿ ಬಹುತೇಕ ಎಲ್ಲರೂ ಭಯದ ನೆರಳಲ್ಲೇ ಬದುಕುತ್ತಿದ್ದಾರೆ…. ಶಾಲೆಗೆ ಹೋಗಬೇಕಾದ ಪುಟ್ಟ ಮಕ್ಕಳಿಗೆ ಶಾಲೆ ಎಂದರೆ ಮೊಬೈಲ್ ಒಳಗಿನ ಕಲಿಕೆ ಎಂಬಂತಾಗಿದೆ…. ಮಾಧ್ಯಮಿಕ ಮತ್ತು ಪ್ರೌಡ ಶಾಲೆಯ ಮಕ್ಕಳಿಗೆ ಒಂದಷ್ಟು ನಿರುತ್ಸಾಹ ಮತ್ತು ಓದಿನ ಬಗೆಗಿನ ಗೊಂದಲ… ಕಾಲೇಜು ಪದವಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಭವಿಷ್ಯದ ಚಿಂತೆ… ಈ ನಡುವೆ ಕೆಲವು ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ಬಾಲ್ಯವಿವಾಹಕ್ಕೆ ಬಲಿಯಾದರೆ ಇನ್ನೊಂದಿಷ್ಟು ಗಂಡು ಹುಡುಗರು ಶಾಲೆ ತೊರೆದು ಕೆಲಸಕ್ಕೆ ಸೇರಿದರು……

ಕೇವಲ ಎರಡು ವರ್ಷಗಳ ಹಿಂದೆ ಆರ್ಥಿಕವಾಗಿ ಮೇಲ್ ಮಧ್ಯಮ ವರ್ಗದಲ್ಲಿದ್ದವರು ಮಧ್ಯಮ ವರ್ಗಕ್ಕೂ, ಮಧ್ಯಮ ವರ್ಗದವರು ಕೆಳ ಮಧ್ಯಮವರ್ಗಕ್ಕೂ ರೂಪಾಂತರ ಹೊಂದಿದ ಅನೇಕ ಘಟನೆಗಳನ್ನು ನೋಡಬಹುದು.

ವೃತ್ತಿ ಬದಲಾಯಿಸಿಕೊಂಡವರೆಷ್ಟೋ, ವಲಸೆ ಹೋದವರೆಷ್ಟೋ, ನಿರುದ್ಯೋಗಿಗಳಾದವರೆಷ್ಟೋ ಲೆಕ್ಕಕ್ಕೆ ಸಿಗುತ್ತಿಲ್ಲ…..

ಅನಾಥರಾದವರು, ವಿದುವೆ ವಿಧುರರಾದವರು, ಒಂಟಿಯಾದವರು, ಆತ್ಮಹತ್ಯೆಗೆ ಶರಣಾದವರು, ಸಾಕಷ್ಟು ನಮ್ಮ ಅರಿವಿಗೆ ಬರುತ್ತಿದೆ……

Advertisement

ವ್ಯಾವಹಾರಿಕ ನಷ್ಟಗಳು, ಅವಮಾನದ ಸನ್ನಿವೇಶಗಳು, ಸಂಬಂಧಗಳ ಬಿರುಕುಗಳು, ಪ್ರೀತಿಯ ನೆನಪುಗಳು, ಕಾಡುವ ನೋವುಗಳು ಎಷ್ಟೋ…..

ಹೊಸ ವ್ಯಾಪಾರ ಉದ್ಯಮದ ಆಸೆಗಳು, ಮದುವೆಗಳ‌ ಕನಸುಗಳು,  ಸಾಧನೆಯ ಭರವಸೆಗಳು, ಕಣ್ಣ ಮುಂದೆಯೇ ದೂರ ಸರಿಯುತ್ತಿರುವ ವೇದನೆಗಳಿಗೆ ಲೆಕ್ಕವೇ ಇಲ್ಲ….

ಆಧುನಿಕತೆ ತಂತ್ರಜ್ಞಾನ ಸ್ಪರ್ಧೆ ವೇಗ ಇವುಗಳ ನಡುವೆ ಕಳೆದು ಹೋಗಿದ್ದ ಮನುಷ್ಯನನ್ನು ಮನೆಯೊಳಗೆ ಬಂಧಿಸಿ ಆತನ ನಿಜ ಯೋಗ್ಯತೆಯನ್ನು ತೋರಿಸುತ್ತಿದೆ ಈ ವೈರಸ್ ಗಳು…

ಇಲ್ಲಿಂದ ಮುಂದೆ ವೈರಸ್ ಗಳ ಕಥೆ ಏನು ? ಬದುಕು ಸಹಜತೆಯೆಡೆಗೆ ಸಾಗುತ್ತಿದೆ ಎಂದು ಭಾವಿಸಬೇಕೆ ? ಇನ್ನೂ ಹೆಚ್ಚಾಗುತ್ತಿದೆ ಎಂದು ಆತಂಕ ಪಡಬೇಕೆ ? ಎಚ್ಚರಿಕೆಯಿಂದ ಧೈರ್ಯವಾಗಿ ಮುನ್ನುಗ್ಗಬೇಕೆ ? ಇದ್ದಷ್ಟೇ ಅದೃಷ್ಟ ಎಂಬ ವೈರಾಗ್ಯ ತಳೆಯಬೇಕೆ ?………

ನಮ್ಮನ್ನೆಲ್ಲ ಈ ಪ್ರಶ್ನೆಗಳು ಕಾಡುತ್ತಿವೆ. ಒಂದೊಂದು ದಿನ ಒಂದೊಂದು ಸುದ್ದಿ ಕೇಳಿದಾಗಲು ನಮ್ಮ ಮನಸ್ಸು ಆ ಕಡೆ ಈ ಕಡೆ ಓಲಾಡುವಂತೆ ಮಾಡುತ್ತಿದೆ. ಹತ್ತಿರದವರು, ಗಣ್ಯರು ಸತ್ತಾಗ ಆತಂಕವು, ಇಲ್ಲದಿದ್ದರೆ ನಿರ್ಲಕ್ಷ್ಯವು ನಮಗೆ ಉಂಟಾಗುತ್ತಿದೆ. ಮಾಸ್ಕ್, ಸ್ಯಾನಿಟೈಸೇಷನ್, ಆಕ್ಸಿಜನ್, ಟೆಂಪರೇಚರ್ ಚೆಕಿಂಗ್ ಗೆ ಮನಸ್ಸು ಒಗ್ಗಿಕೊಳ್ಳುತ್ತಿದೆ. ಅನಿವಾರ್ಯ ಇರುವವರಿಗೆ ಆಯ್ಕೆಗಳೇ ಇಲ್ಲ. ಮತ್ತೆ ಕೆಲವರಿಗೆ ಮನಸ್ಸು ಡೋಲಾಯಮಾನ.

Advertisement

22 ತಿಂಗಳ ನಂತರ ದೇಹ, ಮನಸ್ಸು, ಸಂಬಂಧಗಳು, ಆರ್ಥಿಕ ಪರಿಸ್ಥಿತಿ ನಮಗರಿವಿಲ್ಲದೆ ಏನೋ ತಳಮಳಿಸುತ್ತಿದೆ. ಸ್ಪಷ್ಟವಾಗಿ ಗೋಚರಿಸುತ್ತಿಲ್ಲ. ಸಂಪೂರ್ಣ ಎಂದಿನಂತೆ ತೊಡಗಿಸಿಕೊಳ್ಳಲು ಆಗುತ್ತಿಲ್ಲ.

ಈಗ ನಾವು ಮಾಡಬಹುದಾದದ್ದು ಏನು ?

ಇದಕ್ಕೆ ಸಾಮಾನ್ಯ ಮತ್ತು ಸಹಜ ಉತ್ತರ ಒಂದೇ ರೀತಿಯಲ್ಲಿ ಕೊಡಲಾಗುವುದಿಲ್ಲ. ಯಾವುದೇ ತೀರ್ಮಾನ ಕೈಗೊಳ್ಳುವ ಮೊದಲು ನಾವು ಮಾಡಬೇಕಾದ ಕೆಲಸ ವೈಯಕ್ತಿಕವಾಗಿ ನಮ್ಮ ದೇಹ, ಮನಸ್ಸು ಮತ್ತು ಆರ್ಥಿಕ ಪರಿಸ್ಥಿತಿ ಯಾವ ಹಂತದಲ್ಲಿ ಇದೆ ಮತ್ತು ಅದು ಎಷ್ಟು ದಿನ ಅಸಹಜ ಪರಿಸ್ಥಿತಿಯನ್ನು ತಡೆದುಕೊಳ್ಳಬಹುದು ಎಂಬುದನ್ನು ಸ್ವತಃ ನಾವೇ ಅವಲೋಕನ ಮಾಡಿಕೊಳ್ಳಬೇಕು. ಸಹಜ ಪರಿಸ್ಥಿತಿ ಬರುವವರೆಗೂ ಕಾಯುವುದು ಉತ್ತಮವೇ ಅಥವಾ ಅದರಿಂದ ನಮ್ಮ ಪರಿಸ್ಥಿತಿ ಇನ್ನೂ ಹದಗೆಡಬಹುದೆ ಅಥವಾ ಏನಾದರಾಗಲಿ ಮೊದಲಿನಂತೆ ಎಲ್ಲಕ್ಕೂ ಸಿದ್ದರಾಗಿ ಹೊರಡುವುದೆ ಎಂಬುದೆಲ್ಲವು ನಮ್ಮ ಮಾನಸಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ.

ಬೇರೆಯವರನ್ನು ನೋಡಿ ನಾವು ಹೆದರಬೇಕಿಲ್ಲ ಅಥವಾ ಮುನ್ನುಗ್ಗಬೇಕಿಲ್ಲ. ಇದರ ಫಲಿತಾಂಶ ಹೇಗೆ ಬೇಕಾದರೂ ಆಗಬಹುದು. ಅದನ್ನು ಸ್ವೀಕರಿಸುವ ನಮ್ಮ ಮನೋಬಲದ ಮೇಲೆ ಎಲ್ಲವೂ ನಿರ್ಧಾರವಾಗುತ್ತದೆ. ಒಳ್ಳೆಯದಾದರೆ ಸಂತೋಷ ಪಡಿ. ಇಲ್ಲದಿದ್ದರೆ ಪಶ್ಚಾತ್ತಾಪ ಪಡಬೇಡಿ. ಒಮ್ಮೆ ನಿರ್ಧಾರ ತೆಗೆದುಕೊಂಡ ಮೇಲೆ ಫಲಿತಾಂಶ ನೋಡಿ ಹಾಗೆ ಮಾಡಬೇಕಿತ್ತು, ಹೀಗೆ ಮಾಡಬೇಕಾಗಿತ್ತು, ಅದು ಮಾಡಬಾರದಿತ್ತು ಎಂದು ಕೊರಗಬೇಡಿ. ಈ ಕ್ಷಣದ ನಮ್ಮ ನಿರ್ಧಾರ ನಮ್ಮದೇ ಅದು ಏನೇ ಆಗಿರಲಿ ಎದುರಿಸಲೇಬೇಕು. ಅಸ್ಪಷ್ಟತೆಯಲ್ಲಿ ಸ್ಪಷ್ಟತೆ ಎಂದರೆ ಇದೇ….

ಆಡಳಿತದಲ್ಲಾಗಲಿ, ವೈದ್ಯಕೀಯ ಸೇವೆಯಲ್ಲಾಗಲಿ ಅಂತಹ ಉತ್ತಮ ಗುಣಮಟ್ಟದ ಯಾವುದೇ ಬದಲಾವಣೆಗಳಾಗಿಲ್ಲ. ಭ್ರಷ್ಟಾಚಾರ, ನಿರ್ಲಕ್ಷ್ಯ, ಹಣ ಮಾಡುವ ದಂಧೆ, ಅವಕಾಶ ನೋಡಿ ವಂಚಿಸುವ ಗುಣಗಳು ಎಂದಿನಂತೆಯೇ ಇವೆ. ವೈರಸ್ ಕಾರಣದಿಂದ ಹೆಚ್ಚಾಗಿದೆಯೇ ಹೊರತು ಕಡಿಮೆಯಾಗಿಲ್ಲ.

Advertisement

ವಿಪರ್ಯಾಸವೆಂದರೆ, ಕೆಟ್ಟದ್ದೆಲ್ಲವೂ ನಿರಾತಂಕವಾಗಿ ಧೈರ್ಯದಿಂದ ತನ್ನ ಚಟುವಟಿಕೆಗಳನ್ನು ಆರಂಭಿಸಿದೆ. ಒಳ್ಳೆಯದು ಮಾತ್ರ ಈಗಲೂ ಆತಂಕದಿಂದ ಬಚ್ಚಿಟ್ಟುಕೊಂಡಿದೆ. ಕಿಟಕಿಯ ಸರಳುಗಳೊಳಗಿಂದ ಇಣುಕಿ ನೋಡುತ್ತಿದೆ.

ಆಧುನಿಕ ಮನುಷ್ಯ ಮತ್ತು ಸಮಾಜದ ಸ್ವಭಾವವೇ ಹಾಗೆ ಇರಬೇಕು. ಕೆಟ್ಟದ್ದಕ್ಕೆ ಧೈರ್ಯ ಜಾಸ್ತಿ. ಒಳ್ಳೆಯದು ಹೆದರುತ್ತದೆ. ವಾಸ್ತವವಾಗಿ ನಾಗರಿಕ ಸಮಾಜದಲ್ಲಿ ಇದು ಅದಲು ಬದಲಾಗಿರಬೇಕಿತ್ತು.

ಕೆಲವರು ಇನ್ನು 5 ದಿನಗಳು ಕಳೆದರೆ 2021 ಮುಗಿದು 2022 ಹೊಸ ವರ್ಷ ಬರುತ್ತದೆ. ಆಗ ವಾತಾವರಣ ಬದಲಾಗಿ ಒಳ್ಳೆಯದಾಗಬಹುದು ಎಂಬ ನಿರೀಕ್ಷೆಯಲ್ಲಿ ಇದ್ದಾರೆ. ಕಳೆದುಕೊಂಡಿದ್ದು ಪಡೆದುಕೊಂಡಿದ್ದರ ಲೆಕ್ಕ ಹಾಕುವ ಸಮಯ ಇದಲ್ಲ.

ನಮ್ಮ ನಿಜವಾದ ವ್ಯಕ್ತಿತ್ವದ ಬೆಳವಣಿಗೆ ಹೇಗಿರಬೇಕೆಂದರೆ, ಕಷ್ಟಗಳು ಬರಬಾರದು ಎಂದು ನಿರೀಕ್ಷಿಸಬಾರದು, ಬಂದಾಗ ಅದನ್ನು ಹೇಗೆ ಎದುರಿಸಬೇಕು ಎಂಬುದನ್ನು ನಾವು ಅರ್ಥಮಾಡಿಕೊಂಡಿರಬೇಕು ಮತ್ತು ಸಮಯ ಕಳೆದಂತೆ ಅದು ತನ್ನ ಪ್ರಭಾವ ಕಳೆದುಕೊಳ್ಳುತ್ತದೆ ಎಂಬ ಭರವಸೆ ಹೊಂದಿರಬೇಕು.

ಒಟ್ಟು ಇಲ್ಲಿಯವರೆಗಿನ ಅನುಭವದಲ್ಲಿ ಹೇಳುವುದಾದರೆ ವೈರಸ್ ಗಳು ಹರಡುವಿಕೆಯ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದ್ದರು ತನ್ನ ತೀವ್ರತೆಯನ್ನು ಕಳೆದುಕೊಳ್ಳುತ್ತಿದೆ ಅಥವಾ ನಮ್ಮ ಮನಸ್ಸುಗಳ ಅದಕ್ಕೆ ಸ್ವಲ್ಪ ಒಗ್ಗಿಕೊಳ್ಳುತ್ತಿವೆ. ತುಂಬಾ ದಿನ ಅಡಗಿ ಕುಳಿತುಕೊಳ್ಳುವುದು ಇತರೆ ದುಷ್ಪರಿಣಾಮಗಳಿಗೆ ಕಾರಣವಾಗಬಹುದು.

Advertisement

ಈ 22 ತಿಂಗಳು ವೈರಸ್ ನಮ್ಮನ್ನು ನಿಯಂತ್ರಿಸಿದೆ. ಇನ್ನು ಮುಂದೆ ನಾವು ಅದನ್ನು ನಿಯಂತ್ರಿಸುವ ಮಾನಸಿಕ ಮತ್ತು ದೈಹಿಕ ದೃಢತೆ ಬೆಳೆಸಿಕೊಳ್ಳೋಣ………..

# ವಿವೇಕಾನಂದ ಎಚ್‌ ಕೆ

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹೊಸರುಚಿ | ಹಲಸಿನ ಹಣ್ಣಿನ ಗುಳಿ ಅಪ್ಪ
May 31, 2025
8:00 AM
by: ದಿವ್ಯ ಮಹೇಶ್
ಪ್ರಾದೇಶಿಕ ಒಪ್ಪಂದಕ್ಕೆ ಬಲಿಯಾಯಿತೇ ಕಾಳು ಮೆಣಸು..?
May 31, 2025
6:30 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಇದೆಲ್ಲಾ ಹೇಗಾಗ್ತದೆ? ಇದು ನಮ್ಗೆಲ್ಲಿ ಗೊತ್ತಾಗ್ತದೆ!?
May 29, 2025
6:55 AM
by: ಡಾ.ಚಂದ್ರಶೇಖರ ದಾಮ್ಲೆ
ಭಾರತದಲ್ಲಿ ಅಡಿಕೆಯ ಬಳಕೆ ಹೇಗೆ..? ಯಾವುದೆಲ್ಲಾ ವಿಭಾಗಗಳು ಇವೆ..? ಮಾರುಕಟ್ಟೆ ಹೇಗೆ..?
May 27, 2025
12:28 PM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

You cannot copy content of this page - Copyright -The Rural Mirror

Join Our Group