ಅಕ್ಷರಗಳ ಸಂಶೋಧನೆ – ಬರವಣಿಗೆ – ಸಾಹಿತ್ಯ – ಕುವೆಂಪು – ಕನ್ನಡ ಭಾಷೆ………. | ವಿವೇಕಾನಂದ ಎಚ್‌ ಕೆ ಬರೆಯುತ್ತಾರೆ… |

December 28, 2021
10:23 AM

ಕನ್ನಡ ಸಾಹಿತ್ಯ ಲೋಕದ ಸಾಮ್ರಾಟ ಕುವೆಂಪು ಅವರ ಜನ್ಮದಿನದ ಸಂದರ್ಭದಲ್ಲಿ ಬರವಣಿಗೆ – ಸಾಹಿತ್ಯ – ಕನ್ನಡ ಭಾಷೆ ಕುರಿತ ಒಂದಷ್ಟು ಮಾತುಕತೆ…… ( ಡಿಸೆಂಬರ್ 29 ) ( ಭಾಗ-1)

ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಎಂಬ ಮಲೆನಾಡಿನ ವ್ಯಕ್ತಿಯೊಬ್ಬರು ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಎಂಬ ಭಾಷೆಯನ್ನು – ಸಂಸ್ಕೃತಿಯನ್ನು – ಕನ್ನಡ ಮಣ್ಣಿನ ಸಾಂಸ್ಕೃತಿಕ ಪ್ರಜ್ಞೆಯನ್ನು ಮುಗಿಲೆತ್ತರಕ್ಕೆ ಏರಿಸಿ ಅದರ ಗಡಿಯನ್ನು ವಿಸ್ತರಿಸಿ ಭಾಷೆಯ ಮಹತ್ವ ಸಾರಿದವರು. ಅಕ್ಷರಗಳಲ್ಲಿ ಕೇವಲ ಭಾವನೆಗಳನ್ನು ಮಾತ್ರ ತುಂಬದೆ ಒಂದು ನಾಡಿನ ಮನುಷ್ಯ ಪ್ರಜ್ಞೆಯನ್ನು ಚಿಂತನೆಯಾಗಿಸಿ ವಿಶ್ವ ಮಾನವತೆಗೆ ದಾರಿ ತೋರಿದ ಅದ್ಬುತ ಚಿಂತಕ.

ಅವರ ನೆನಪಿನ ನೆಪದಲ್ಲಿ ಒಂದಷ್ಟು ಅಕ್ಷರಗಳ ಆತ್ಮಾವಲೋಕನ…… ಬರವಣಿಗೆ…..

ಅಕ್ಷರಗಳ ಸಂಶೋಧನೆಯೊಂದಿಗೆ ಉಗಮವಾದ ಅದ್ಭುತ ಸೃಷ್ಟಿ ಈ ಬರವಣಿಗೆ. ಅಕ್ಷರಗಳಿಗಿಂತ ಮೊದಲು ಸಹ ಬರವಣಿಗೆ ಅಸ್ತಿತ್ವದಲ್ಲಿತ್ತು. ಆದರೆ ಚಿತ್ರ, ಸಂಜ್ಞೆ ಮುಂತಾದ ವಿಚಿತ್ರ ವೈಶಿಷ್ಟ್ಯ ರೂಪದಲ್ಲಿ ಅದು ಬಳಕೆಯಲ್ಲಿತ್ತು.

ಬರವಣಿಗೆ ಅದೊಂದು ಬರೆಯುವ ಕ್ರಿಯೆ ಅಥವಾ ಅಭಿಪ್ರಾಯ ವ್ಯಕ್ತಪಡಿಸುವ ಮಾರ್ಗ ಅಥವಾ ಭಾವನೆಗಳ ದಾಖಲೀಕರಣ ಅಥವಾ ಅಕ್ಷರಗಳ ಜೋಡಣಾ ಸ್ವಾತಂತ್ರ್ಯ ಅಥವಾ ಭಾಷೆಯ ಕ್ರಮಬದ್ಧ ಉಪಯೋಗ ಅಥವಾ ಸಂಪರ್ಕ ಮಾಧ್ಯಮ ಅಥವಾ
ಮನುಷ್ಯನ ಒಂದು ಕಲಾ ಪ್ರಕಾರ ಹೀಗೆ ನಾನಾ ರೀತಿಯ ಉತ್ತರಗಳನ್ನು ಹುಡುಕಿ ಹೇಳಬಹುದು.

ಯಾವಾಗ ಬರಹ ಒಂದು ಕ್ರಮಬದ್ಧತೆಯನ್ನು ಪಡೆಯಿತೋ ನಂತರದಲ್ಲಿ ವಿವಿಧ ಭಾಷೆಗಳು ಬೆಳವಣಿಗೆ ಹೊಂದಿದವು. ಅಕ್ಷರ ಸಂಶೋಧನೆಗು ಮೊದಲು ಭಾಷೆಗಳು ಅಸ್ತಿತ್ವದಲ್ಲಿದ್ದವು. ಆದರೆ ಲಿಪಿ ಇರಲಿಲ್ಲ. ಲಿಪಿಯ ಉಗಮದ ನಂತರ ಭಾಷೆಗಳು ಮಹತ್ವ ಪಡೆದುಕೊಂಡವು.

ಲ್ಯಾಟಿನ್, ಪ್ರಾಕೃತ, ಪಾಲಿ, ಪಾರ್ಸಿ, ಸ್ಪಾನಿಷ್, ಚೀನೀ, ಅರಬ್ಬೀ, ಪರ್ಷಿಯನ್, ಸಂಸ್ಕೃತ ಭಾಷೆಗಳು ಅತ್ಯಂತ ಪ್ರಾಚೀನ ಎಂದು ಹೇಳಲಾಗುತ್ತದೆ. ನನಗೆ ಈ ವಿಷಯದಲ್ಲಿ ತುಂಬಾ ಸ್ಪಷ್ಟವಾಗಿ ಮತ್ತು ಆಳವಾಗಿ ತಿಳಿದಿಲ್ಲ. ಸಾಮಾನ್ಯ ಜ್ಞಾನ ಮಾತ್ರ ಇದೆ. ಖಚಿತವಾಗಿ ತಿಳಿದ ಭಾಷಾ ತಜ್ಞರು ಇನ್ನಷ್ಟು ಮಾಹಿತಿ ಹಂಚಿಕೊಳ್ಳಬಹುದು.

ಇತಿಹಾಸ ಏನೇ ಇರಲಿ ಬರವಣಿಗೆ ಎಂಬುದು ಮಾನವ ನಾಗರಿಕತೆಯ ಎಲ್ಲವನ್ನೂ ಅಡಗಿಸಿಕೊಂಡು ಅದನ್ನು ಇಲ್ಲಿಯವರೆಗೂ ಮುನ್ನಡೆಸಿಕೊಂಡು ಬಂದ ಅತ್ಯುತ್ತಮ ವಾಹಕ.

ಬರಹಗಳ ಮೂಲಗಳು, ರೀತಿಗಳು, ಉಪಕರಣಗಳು, ಪ್ರಕಾರಗಳು, ರೂಪಗಳು, ಉದ್ದೇಶಗಳು, ಲಿಪಿಗಳು, ಭಾಷೆಗಳು ಎಷ್ಟೇ ಇರಬಹುದು ಆದರೆ ಬರಹ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಬರಹವಿಲ್ಲದೆಯೂ ಮನುಷ್ಯ ಬದುಕಬಹುದು ಮತ್ತು ಈಗಲೂ ಬಹಳಷ್ಟು ಜನ ಬದುಕುತ್ತಿದ್ದಾರೆ ಅದು ಅನಿವಾರ್ಯವಲ್ಲ. ಆದರೆ ಬರಹವಿಲ್ಲದಿದ್ದರೆ ಮನುಷ್ಯ ಕಳೆದುಕೊಳ್ಳುತ್ತಿದ್ದುದು ಏನು ಎಂದು ಯೋಚಿಸಿದಾಗ ಬರಹದ ಮಹತ್ವ ಅರ್ಥವಾಗುತ್ತದೆ.

ಬರಹವನ್ನು ಆಕಾಶದ ಅನಂತತೆಗೆ ಹೋಲಿಸಬಹುದು. ಅಕ್ಷರಗಳೇ ಬರಹದ ಮೂಲವಾದರು ಇಂದು ಅದೇ ಅಕ್ಷರಗಳಲ್ಲಿ ಬರಹದ ಸರಿಯಾದ ಮತ್ತು ಸ್ಪಷ್ಟವಾದ ಅರ್ಥವನ್ನು ಹಿಡಿದಿಡುವುದು ಸಾಧ್ಯವಿಲ್ಲ. ಅದು ಅಕ್ಷರವನ್ನು ಮೀರಿ ಬೆಳೆದಿದೆ. ಮನುಷ್ಯನ ಭಾವನೆ ಮತ್ತು ಬುದ್ದಿಶಕ್ತಿ ಬೆಳವಣಿಯಲ್ಲಿ ಅಕ್ಷರ ಮತ್ತು ಭಾಷೆ ಕೇವಲ ಮೆಟ್ಟಿಲಿನಂತೆ ಕೆಲಸ ಮಾಡುತ್ತಿದೆ. ಆತನ ಮನಸ್ಸೇ ಆತನ ತಲೆಯ ಮೇಲೆ ಕಿರೀಟದಂತೆ ಬಂದು ಕುಳಿತಿದೆ.

ಎಲ್ಲಾ ಪರಿವರ್ತನೆಗಳ ಬಳಿಕ ಬರವಣಿಗೆ ” ಸಾಹಿತ್ಯ ” ಎಂಬ ಪ್ರಕಾರದಲ್ಲಿ ಹೆಚ್ಚು ಪ್ರಕಾಶಮಾನವಾಗಿ, ಜನಪ್ರಿಯವಾಗಿ ರಾರಾಜಿಸುತ್ತಿದೆ.

” ಖಡ್ಗಕ್ಕಿಂತ ಲೇಖನ ಹರಿತ “ ಎಂಬುದು ಹಳೆಯ ಮಾತು. ಈಗ ಬರಹಗಳು ಬಾಂಬು ಬಂದೂಕುಗಳಿಗಿಂತ ಪ್ರಬಲವಾಗಿ ಕೆಲಸ ಮಾಡುತ್ತಿದೆ. ಕ್ರಾಂತಿಯ ಮೂಲದ್ರವ್ಯವಾಗಿಯೂ ಉಪಯೋಗಿಸಲಾಗುತ್ತಿದೆ.

ಬರಹ ನಮ್ಮನ್ನು ನಗಿಸುತ್ತದೆ, ಅಳಿಸುತ್ತದೆ, ಕೋಪವೂ ಸೇರಿ ನವ ರಸಗಳನ್ನು ಉತ್ಪತ್ತಿಮಾಡುತ್ತದೆ. ಹಾಗೆಯೇ ಬರಹ ಮೋಸ ವಂಚನೆ ದ್ರೋಹಗಳನ್ನು ಎಸಗುತ್ತದೆ.

ಕೆಲವು ಉತ್ಕೃಷ್ಟ ಬರಹಗಳು, ಕೆಲವು ಸಾಧಾರಣ ಬರಹಗಳು ಮತ್ತೆ ಕೆಲವನ್ನು ಕಳಪೆ ಬರಹಗಳು ಎಂಬುದಾಗಿಯೂ ವಿಂಗಡಿಸಲಾಗುತ್ತದೆ. ಇಲ್ಲಿ ಬರವಣಿಗೆಯ ಸಾಮರ್ಥ್ಯ ಮತ್ತು ಓದುಗರ ಸಾಮರ್ಥ್ಯ ಎರಡೂ ಪರೀಕ್ಷೆ ಒಳಪಡುತ್ತದೆ.

ಒಬ್ಬ ವ್ಯಕ್ತಿ ಬರಹಗಾರನಾಗಲು ಅರ್ಹತೆ ಮತ್ತು ಮಾನದಂಡಗಳೇನು ಎಂಬುದು ನಿರ್ದಿಷ್ಟವಾಗಿ ಇಲ್ಲ. ಆಸಕ್ತಿಯೇ ಮುಖ್ಯ. ಆ ಆಸಕ್ತಿ ಆತನ ಬರಹ ಶಕ್ತಿಯ ಮುಖಾಂತರ ಅರ್ಹತೆಯಾಗಿ ಪರಿವರ್ತನೆ ಹೊಂದುತ್ತದೆ.

ಆದರೆ ಬರಹ ಇಷ್ಟೊಂದು ಸರಳವಾಗಿಲ್ಲ. ಕೋಟಿ ಕೋಟಿ ಬರಹಗಾರರಿದ್ದಾರೆ. ವಿಶ್ವಮಟ್ಟದಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಮತ್ತು ಭಾರತದಲ್ಲಿ ಜ್ಞಾನಪೀಠ ಎಂಬ ಅತ್ಯುನ್ನತ ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ. ಅಲ್ಲದೆ ಇನ್ನೂ ಹಲವಾರು ಪ್ರಶಸ್ತಿ ಬಿರುದುಗಳು ಇವೆ.

ಬರವಣಿಗೆ ಹವ್ಯಾಸವು ಹೌದು, ವೃತ್ತಿಯೂ ಹೌದು, ಸಾಧನೆಯಾಗಿಯೂ ಗುರುತಿಸಲಾಗುತ್ತದೆ. ಬರಹಗಳಿಂದಲೇ ಬದುಕನ್ನು ಕಟ್ಟಿಕೊಂಡವರು ಇದ್ದಾರೆ, ಬರಹದಿಂದ ಹಣ ಅಧಿಕಾರ ಜನಪ್ರಿಯತೆ ಪಡೆದವರು ಇದ್ದಾರೆ, ಬರಹವನ್ನೇ ನಂಬಿ ಅನೇಕ ಕಷ್ಟ ನಷ್ಟಗಳಿಗೆ ಒಳಗಾದವರು ಸಹ ಸಾಕಷ್ಟು ಇದ್ದಾರೆ.

ಓದು ಬರಹಗಳು ಮನುಷ್ಯರನ್ನು ಹೆಚ್ಚು ನಾಗರಿಕವಾಗಿ ಮತ್ತು ಮಾನವೀಯವಾಗಿ ವರ್ತಿಸುವಂತೆ ಪ್ರೇರೇಪಿಸುತ್ತದೆ ಎಂಬ ಅಭಿಪ್ರಾಯವಿತ್ತು. ಆದರೆ ಅದು ಇತ್ತೀಚಿನ ಆಧುನಿಕ ಸಂದರ್ಭದಲ್ಲಿ ಅಷ್ಟೇನು ನಿಜವಲ್ಲ, ಬದಲಾಗಿ ಅವು ಆತನ ವ್ಯಕ್ತಿತ್ವವನ್ನು ಸಂಕುಚಿತ ಗೊಳಿಸುತ್ತಿದೆ ಎಂಬ ಆರೋಪಗಳು ಬಲವಾಗಿ ಕೇಳಿ ಬರುತ್ತಿದೆ. ಓದು ಬರಹಗಳೇ ಬೇರೆ, ವಾಸ್ತವ ಬದುಕೇ ಬೇರೆ ಎಂದು ಕೆಲವರು ಹಾಸ್ಯ ಮಾಡುತ್ತಾರೆ.

ಮೊದಲಿಗೆ ಬರವಣಿಗೆ ಎಂಬುದು ಕೆಲವೇ ಕೆಲವು ಜನರ ಸ್ವತ್ತಾಗಿತ್ತು. ಮಾಧ್ಯಮಗಳ ಉಗಮದೊಂದಿಗೆ ಇನ್ನೂ ಹೆಚ್ಚು ಜನ ಬರಹಗಾರರಿಗೆ ವೇದಿಕೆ ದೊರೆಯಿತು. ಆದರೆ ಸಾಮಾಜಿಕ ಜಾಲತಾಣಗಳ ಅಭಿವೃದ್ಧಿಯೊಂದಿಗೆ ಬರವಣಿಗೆ ಸಾಮಾನ್ಯ ಜನರಿಗೂ ಬಾಗಿಲು ತೆರೆಯಿತು.

ಈಗ ಅಕ್ಷರ ಬಲ್ಲ, ಮೊಬೈಲ್ ಕಂಪ್ಯೂಟರ್ ಲ್ಯಾಪ್ ಟಾಪ್ ಮುಂತಾದ ವಸ್ತುಗಳನ್ನು ಹೊಂದಿರುವ ಎಲ್ಲರೂ ಏನಾದರೂ ಬರೆಯಲು ಪ್ರಾರಂಭಿಸಿದ್ದಾರೆ ಅಥವಾ ಕನಿಷ್ಠ ಕೆಲವು ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನಾದರು ವ್ಯಕ್ತಪಡಿಸುತ್ತಾರೆ. ಇದೊಂದು ಕ್ರಾಂತಿಕಾರಕ ಬದಲಾವಣೆ.

ಆದರೆ ಬರೆಯುವ ರೀತಿ, ವಿಷಯಗಳು, ಉದ್ದೇಶಗಳು ಅನೇಕ ಒಳ್ಳೆಯ ಮೌಲ್ಯಗಳನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸುತ್ತಿದೆ. ಬರವಣಿಗೆ ವ್ಯಾಪಾರವಾಗಿದೆ, ಅಷ್ಟೇ ಅಲ್ಲ ಬರವಣಿಗೆ ವಿಷಯುಕ್ತ ಕತ್ತಿಯಾಗಿದೆ. ಬರಹಗಾರ ವಿಷ ಉಗುಳುವ ಹಾವಿನಂತಾಗಿದ್ದಾನೆ. ಬರಹಗಳು ನಿಯಂತ್ರಣ ಕಳೆದುಕೊಳ್ಳುತ್ತಿವೆ. ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದೆ.

ಸಾಹಿತ್ಯವಾಗಿ ಬರಹ ಒಂದು ಅತ್ಯದ್ಭುತ ಪ್ರಯೋಗ. ಅದೇ ಪ್ರಯೋಗ ಮಾನವ ಜನಾಂಗದ ವಿನಾಶಕ್ಕೂ ಕಾರಣವಾಗುತ್ತಿದೆ. ಅದರ ಬಗ್ಗೆ ಎಚ್ಚರಿಕೆ ಅಗತ್ಯ ಎಂದು ಬರಹದ ಮುಖಾಂತರವೇ ಮನವಿ ಮಾಡಿಕೊಳ್ಳಬೇಕಾಗಿದೆ.

ಬರವಣಿಗೆ ಮತ್ತು ಬರಹಗಾರ, ಬದುಕು ಮತ್ತು ಸಮಾಜದ ಶುದ್ಧ ಚಾರಿತ್ರ್ಯ ಮತ್ತು ವ್ಯಕ್ತಿತ್ವದ ಪ್ರತಿಬಿಂಬವಾಗುವ ಭವಿಷ್ಯದ ಕನಸು ಕಾಣುತ್ತಾ…….

ಬರವಣಿಗೆ ಸಾಹಿತ್ಯವಾಗಿ ಬೆಳವಣಿಗೆ ಹೊಂದುವ ಪ್ರಕ್ರಿಯೆ ಕುರಿತು ನಾಳೆ ಮುಂದುವರಿಸಲಾಗುವುದು……

# ವಿವೇಕಾನಂದ ಎಚ್‌ ಕೆ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

ಇದನ್ನೂ ಓದಿ

ಬಯಕೆ, ಕಾಮ, ಆಕರ್ಷಣೆ, ಪ್ರೀತಿ ಮತ್ತು ಪ್ರೇಮ – ಜೀವನದ ಅಂತರಂಗದ ಹಂತಗಳು
February 28, 2026
7:00 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹೊಸರುಚಿ | ಮನೆಯಲ್ಲೇ ಸುಲಭವಾಗಿ ಮಾಡುವ ಎಳೆಯ ಹಲಸಿನ ಕಾಯಿ ಸುಕ್ಕ
February 28, 2026
7:00 AM
by: ದಿವ್ಯ ಮಹೇಶ್
ಹೊಸರುಚಿ | ಎಳೆಯ ಹಲಸಿನ ಕಾಯಿ 65 – ಕರಕರಾ, ರುಚಿಕರ ಸ್ನ್ಯಾಕ್ ರೆಸಿಪಿ
February 22, 2026
9:09 AM
by: ದಿವ್ಯ ಮಹೇಶ್
ಪರರನ್ನು ಮೆಟ್ಟಿಲಾಗಿಸಿದ ಸಾಧನೆ ಶಾಶ್ವತವಲ್ಲ: ಆತ್ಮವಂಚನೆಯ ಅಂಧಕಾರದತ್ತ ಕರೆದೊಯ್ಯುವ ಮಾರ್ಗ
February 20, 2026
7:30 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror