ಬದುಕು ಪುರಾಣ | ಶ್ರೀಮಂತಿಕೆ ‘ಪಾಸ್ ಬುಕ್ಕಿನಲ್ಲಿ’ ಇರುವುದಲ್ಲ!

June 1, 2025
6:16 AM
ಜಗತ್ತಿನಲ್ಲಿ ಎಲ್ಲವನ್ನೂ ಹಣದಿಂದಲೇ ಖರೀದಿ ಮಾಡಲು ಸಾಧ್ಯವಿಲ್ಲ. ನೀತಿ, ನಡತೆ, ಬದ್ಧತೆಗಳು  ಹಣ ಕೊಟ್ಟರೂ ಸಿಗದು. ಹಾಗಾಗಿ ಹಣವೇ ಮುಖ್ಯ, ಹಣವಿದ್ದರೆ ಏನು ಬೇಕಾದರೂ  ಮಾಡಬಹುದು ಎನ್ನುವುದು ಭ್ರಮೆ.
‘ಸ್ವರ್ಗ’ ಅಂದರೆ ಸಂಪತ್ತಿನ ಅನುಭವ ಎನ್ನೋಣ. ಇದರ ಸವಿಯನ್ನುಂಡವ ‘ಸ್ವರ್ಗಸುಖಿ’. ಆಡುಮಾತಿನಲ್ಲಿ ‘ಉಳ್ಳವರು’. ಸಂಪತ್ತು ಅಂದರೆ ಲಕ್ಷ್ಮೀಯ ಆವಾಸ ಸ್ಥಾನ. ಲಕ್ಷ್ಮಿಯನ್ನು ಆರಾಧಿಸದೆ ಅದೃಷ್ಟ ಬಾರದು. ಆರಾಧನೆ ಅಂದರೆ ಪೂಜೆ, ಹೋಮ, ಹವನಾದಿಗಳು ಅಲ್ಲ. ಅವಳ ಕುರಿತಾದ ಗೌರವ. ‘ಹಣ ಚೆಲ್ಲುವುದು’, ‘ನನ್ನಲ್ಲಿ ಹಣವಿದೆ’ ಎಂದು ಫೋಸ್ ಕೊಡುವುದು ಶ್ರೀಮಂತಿಕೆಯಲ್ಲ. ಹತ್ತು ಮಂದಿಯ ಕಣ್ಣೀರು ಒರೆಸಿದರೆ, ಹತ್ತಾರು ಮಂದಿಯ ಹೊಟ್ಟೆ ತಂಪು ಮಾಡಿದರೆ ಇದಕ್ಕೆ ಮಿಗಿಲಾದ ಶ್ರೀಮಂತಿಕೆ ಯಾವುದಿದೆ?
ಪಾಸ್ ಬುಕ್ಕಿನಲ್ಲಿ ಹಣವಿದ್ದ ಮಾತ್ರಕ್ಕೆ ಆತ ಶ್ರೀಮಂತನಾಗಲಾರ. ಪಾಸ್‍ಬುಕ್ ಎಲ್ಲರಲ್ಲೂ ಇದೆ. ಅಲ್ಲಿರುವ ಠೇವಣಿಯ ಲೆಕ್ಕಣಿಕೆಯಲ್ಲಿ ವ್ಯತ್ಯಾಸವಿರಬಹುದಷ್ಟೇ. ಈಚೆಗೊಬ್ಬರು ಹೇಳಿದುದನ್ನು ಕೇಳಿದೆ. “ಅವರು ಭಯಂಕರ ಮಾರಾಯ್ರೆ. ಅವರ ಪಾಸ್ ಬುಕ್ ಗಟ್ಟಿ ಇದೆ.” ಸರಿ, ಭಯಂಕರ ಅಂದ್ರೆ ಏನು? ಎಷ್ಟೋ ಘಟನೆಗಳಿಗೆ ಹೊಂದದ ಪದಗಳನ್ನು ಟಂಕಿಸುತ್ತೇವೆ. ಅದು ವಾಹಿನಿಗಳ ಕೊಡುಗೆ! ಅವರವರ ಪಾಸ್ ಬುಕ್ ಅವರವರ ತಿಜೋರಿಯಲ್ಲಿರಲಿ.
ಬದುಕಿನಲ್ಲಿ ಬಳಸುವ ‘ಸ್ವರ್ಗ’ ಪದವು ಶ್ರೀಮಂತಿಕೆಯ ದ್ಯೋತಕ. ಆದರೆ ಅದು ಯಾವ ತರಹದ ಶ್ರೀಮಂತಿಕೆ? ಆರ್ಥಿಕ ಶ್ರೀಮಂತಿಕೆ, ಹೃದಯ ಶ್ರೀಮಂತಿಕೆ, ಸಜ್ಜನಿಕೆಯ ಶ್ರೀಮಂತಿಕೆ.. ಹೀಗೆ. ಕೋಟಿಗಟ್ಟಲೆ ಹಣವಿದ್ದರೆ ಏನಂತೆ? ಸಜ್ಜನಿಕೆ ಇಲ್ಲದಿದ್ದರೆ? ಹಿಂದೊಮ್ಮೆ ಶೇರ್ ವ್ಯವಹಾರದ ಹಿನ್ನೆಲೆಯಲ್ಲಿ ಹಿರಿಯರೊಬ್ಬರ ಮಾತು ನೆನಪಾಗುತ್ತದೆ. “ರಾಶಿ ರಾಶಿ ಹಣ ಬರ್ತದೆ. ಗೋಣಿಯಲ್ಲಿ ಕಟ್ಟಿಟ್ಟರೂ ಮುಗಿಯುವುದಿಲ್ಲ.”! ಇದು ಉತ್ಪ್ರೇಕ್ಷೆಯಾಗಿರಲೂ ಬಹುದು. ಗೋಣಿಯಲ್ಲಿ ಕಟ್ಟಿಡುವುದು ನೋಟಿನ ಕಂತೆಗಳನ್ನು ಅಲ್ವಾ. ಅಲ್ಲಿ ಸಜ್ಜನಿಕೆಯ ಕಂತೆ ಇದೆಯಾ? ಲಕ್ಷ್ಮಿಯ ಕುರಿತಾದ ಗೌರವ ಭಾವ ಇದೆಯಾ? ಈ ಪ್ರಶ್ನೆಗಳಿಗೆ ಉತ್ತರವಿಲ್ಲ. ಇವರಲ್ಲಿ ‘ಸ್ವರ್ಗ ಕಾಣಿಸುವಷ್ಟು’ ಸಂಪತ್ತಿತ್ತು. ಆದರೆ ‘ಸ್ವರ್ಗ’ ಕಾಣಿಸುತ್ತಿಲ್ಲ. ಕೊನೆಗೆ ಸ್ವರ್ಗಸ್ಥರಾದರು ಬಿಡಿ.
ಇನ್ನೊಂದು ಪದ ‘ಸ್ವರ್ಗಕ್ಕೆ ಸೋಪಾನ’. ಅಂದರೆ ಶ್ರೀಮಂತಿಕೆಯೆಡೆಗೆ ಸಾಗುತ್ತಿದ್ದಾನೆ ಎಂದು ಊಹಿಸೋಣ. ಬದುಕಿನಲ್ಲಿ ಕಷ್ಟಪಟ್ಟು ದುಡಿದು, ಸಂಪಾದಿಸಿ ಸಂಪತ್ತಿನ ಒಂದೊಂದೇ ಮೆಟ್ಟಿಲನ್ನು ಏರಿ, ಯಶ ಕಾಣುತ್ತಾನೆ. ಹೀಗೆ ಬಡತನದಿಂದ ಮೇಲೆದ್ದು ಬಂದವನಲ್ಲಿ ಸಜ್ಜನಿಕೆಯಿರುತ್ತದೆ, ಹೃದಯ ಶ್ರೀಮಂತಿಕೆಯಿರುತ್ತದೆ, ಪಾಪ-ಪುಣ್ಯಗಳ ಸಂಪತ್ತಿರುತ್ತದೆ. ಏರಿ ಬಂದ ಬದುಕಿನ ಏಣಿಯ ಮೆಟ್ಟಿಲನ್ನು ನೆನಪಿಟ್ಟುಕೊಂಡಿರುತ್ತಾನೆ. ಈ ಯಾನದಲ್ಲಿ ಆತ ಪ್ರತಿ ಹಂತದಲ್ಲಿ ‘ಸ್ವರ್ಗ’ ಅಂದರೆ ತೃಪ್ತಿಯನ್ನು ಅನುಭವಿಸುತ್ತಿರುತ್ತಾನೆ. ಒಂದರ್ಥದಲ್ಲಿ ‘ತೃಪ್ತಿ’ಯೇ ಶ್ರೀಮಂತಿಕೆ. ಕೋಟಿಗಟ್ಟಲೆ ಹಣವಿದ್ದೂ ತೃಪ್ತಿಯ ಭಾವದ ಇಲ್ಲದಿದ್ದರೆ?
ಶ್ರೀಮಂತಿಕೆಯು ಬದುಕಿಗೆ ‘ಅಮಲು’ ಆಗಕೂಡದು! ಅದು ಸಂಪತ್ತಿನ ಅಮಲು. ಬುದ್ಧಿಯ ಅಮಲು. ತಾನೇನು ಮಾಡುತ್ತಿದ್ದೇನೆ ಎಂದು ಊಹಿಸಲು ಕೂಡಾ ಕಷ್ಟವಾಗುವಂತಹ ಅಮಲು. ಮದ್ಯಪಾನದಿಂದ ಮಾತ್ರ ಅಮಲುಂಟಾಗುವುದಿಲ್ಲ. ಒಮ್ಮೆ ಹೀಗಾಯಿತು. ಮಂಗಳೂರಿಗೆ ಹೊರಟಿದ್ದೆ. ಪರಿಚಿತರೊಬ್ಬರ ಕಾರು ನಿಂತಿತು. ‘ಬನ್ನಿ, ಬಸ್‍ಸ್ಟಾಂಡ್ ತನಕ ಡ್ರಾಪ್ ಕೊಡ್ತೇನೆ’ ಎಂದರು. ಹಲವು ಲಕ್ಷ ರೂಪಾಯಿಗಳ ಐಷರಾಮಿ ಕಾರು! ‘ನಾನು ಮಂಗಳೂರಿಗೆ’ ಎಂದಾಗ, ‘ನಾನೂ ಮಂಗಳೂರಿಗೆ. ಮಾತನಾಡುತ್ತಾ ಹೋಗೋಣ’ ಎಂದರು. ಸರಿ, ಲೋಕದ ಸುದ್ದಿ, ರಾಜಕೀಯ, ಬಡತನ.. ಹೀಗೆ ಹತ್ತಾರು ವಿಷಯಗಳ ಪೋಸ್ಟ್‍ಮಾರ್ಟ್‍ಂ ಮಾಡುತ್ತಿದ್ದರು.. ಅವರಲ್ಲಿ ಬಡತನದ ಕುರಿತು ಅನಾದರವಿತ್ತು. “ನೋಡಿ, ಈ ಕಾರಿಗೆ ಇಪ್ಪತ್ತಾರು ಲಕ್ಷ ರೂಪಾಯಿ ನೀಡಿದ್ದೇನೆ. ಇದರಲ್ಲಿ ಕುಳಿತುಕೊಳ್ಳುವುದಕ್ಕೆ ಯೋಗ ಬೇಡ್ವಾ. ಬಡವರಿಗೆ ಸಾಧ್ಯವಾ” ಅಂದಾಗ ಅಂತರಾತ್ಮ ಚುಚ್ಚಿತು.
ಹೌದಲ್ವಾ.. ಇಷ್ಟು ದೊಡ್ಡ ಮೊತ್ತದ ಕಾರು ಖರೀದಿಸಲು ಬಡವರಿಗೆ ಸಾಧ್ಯವಿಲ್ಲ. ಅದರ ಅಗತ್ಯವೂ ಇಲ್ಲ. ಖರೀದಿಸುವುದು ಬಿಡಿ, ಕುಳಿತುಕೊಳ್ಳಲು ಯೋಗ, ಯೋಗ್ಯತೆ ಬೇಡವೇ? ಅಂತರಾತ್ಮ ಹೇಳಿತು, ‘ಕಾರಿನಿಂದ ಇಳಿ’! ಇಷ್ಟೆಲ್ಲಾ ಮಾತುಕತೆ ಆಗುವಾಗ ಕಲ್ಮಡ್ಕ ದಾಟಿ ಮೇಲ್ಕಾರು ಸನಿಹ ಬಂದಿದ್ದೆವು. ‘ನಾನು ಇಳಿಯುತ್ತೇನೆ. ಸ್ವಲ್ಪ ಕೆಲಸವಿದೆ’ ಎಂದು ಸಬೂಬು ಹೇಳಿ ಅವರಿಂದ ಕಳಚಿಕೊಂಡೆ. ಅವರ ಮಾತುಕತೆಯಲ್ಲಿ ಹೇಳುವಂತಹ ತೀಕ್ಷ್ಮತೆ ಕಾಣದಿದ್ದರೂ, ಶ್ರೀಮಂತಿಕೆಯ ಅಮಲು ಪ್ರಕಟವಾಗುತ್ತಿತ್ತು. ಆದರೆ ಅಮಲಿನ ಪರಾಕಾಷ್ಠೆಯ ಮತ್ತೊಂದು ರೂಪ ‘ಧಿಮಾಕು’ ಕಾಣಲಿಲ್ಲ!
ಇನ್ನೊಂದು ಪ್ರಕರಣ ಹೇಳಲೇ ಬೇಕು. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದೆ. ಜಿಟಿಜಿಟಿ ಮಳೆ. ಪ್ರತಿಷ್ಠಿತರೊಬ್ಬರ ಪಿತಾಶ್ರೀ “ಬನ್ನಿ, ನಾವು ಹೇಗೂ ಪುತ್ತೂರಿಗೆ ಹೋಗುವವರು. ಮಾತನಾಡುತ್ತಾ ಹೋಗೋಣ.” ಎಂದರು. ಒಂದೈದು ನಿಮಿಷ ಆಗಿತ್ತಷ್ಟೇ. ಚಾಲಕನ ಆಸನದಲ್ಲಿದ್ದ ಅವರ ಪುತ್ರ ಮಹಾಶಯರ ಅಸಹನೆ ಶುರುವಾಗಿತ್ತು. “ನಿಮಗೆ ಹೇಳಿಲ್ವಾ. ಯಾರನ್ನೂ ಹತ್ತಿಸಬಾರದು. ಮೊನ್ನೆಯಷ್ಟೇ ಸರ್ವೀಸ್ ಮಾಡಿದ್ದು. ಧೂಳು, ಕೆಸರು ಪುನಃ ಆಯಿತಾದರೆ ಕ್ಲೀನ್ ಮಾಡುವವರು ಯಾರು. ಈ ಕಾರಿಗೆ ಎಷ್ಟು ಬೆಲೆ ಗೊತ್ತುಂಟಾ.” ಹೀಗೆ ತನ್ನ ಜನ್ಮದಾತರಿಗೆ ಗೊಣಗಾಟಗಳ ಸುರಿಮಳೆ. ಪಾಪ, ಅವರು ಮಗನಿಂದಾದ ಅಪಮಾನದಿಂದ ಮುದ್ದೆಯಾಗಿದ್ದರು. ತಲೆ ಕೆಳಗೆ ಹಾಕಿ ಕುಳಿತರು. ಅವರ ಲಕ್ಷ ರೂಪಾಯಿ ಸುರಿದ ಕಾರು ಅಂದು ಪರಿಚಯ, ಸಂಬಂಧಗಳ ತೇವವನ್ನು ಆರಿಸಿತ್ತು! ಆ ಹಿರಿಯರ ಮೇಲಿನ ಗೌರವದಿಂದ ಹೇಗೋ ಸಹಿಸಿಕೊಂಡೆ. ನಂತರ ಒಂದೆರಡು ಬಾರಿ ಸಂದರ್ಭ ಬಂದರೂ ಅವರ ಕಾರಿನಲ್ಲಿ ಪ್ರಯಾಣಿಸಲಿಲ್ಲ. ಇದು ಶ್ರೀಮಂತಿಕೆಯ ಅಮಲಿನ ಚಿಕ್ಕ ಉದಾಹರಣೆ.
ಶಿರಸಿಯ ಹೈನು ಕೃಷಿಕರೊಬ್ಬರಲ್ಲಿಗೆ ಭೇಟಿ ನೀಡುವ ಸಂದರ್ಭ ಬಂದಿತ್ತು. ತುಂಡು ಬಟ್ಟೆ, ಬನಿಯನ್ ಧರಿಸಿದ ವ್ಯಕ್ತಿಯೊಬ್ಬರು ಬಂದು, ‘ಯಾರು ಬೇಕಿತ್ತು’ ಎಂದರು. ‘ಅವರಾ.. ಕುಳಿತುಕೊಳ್ಳಿ, ಈಗ ಬರ್ತಾರೆ’ ಎಂದು ಹೊರಟು ಹೋದರು. ಸುಮಾರು ತಾಸು ಕಳೆದಿರಬಹುದು.  ಶುಭ್ರ ಬಟ್ಟೆ ಧರಿಸಿದ ಅವರೇ ಬಂದು ‘ಆರಾಮವಾ’ ಎಂದು ಮಾತಿಗೆ ಇಳಿದರು. ‘ಆಕಳ ಕೆಲಸ ಕಾಲಕಾಲಕ್ಕೆ ಆಗಬೇಕು ನೋಡಿ’ ಎಂದು ತಮ್ಮ ಅನುಭವಗಳನ್ನು ತೆರೆದಿಟ್ಟರು. ಅವರಿಗೆ ಕಾಯಕವೇ ಸಂಪತ್ತು. ಆ ಕಾಯಕ ತಂದ ಶ್ರೀಮಂತಿಕೆ.
‘ಸ್ವರ್ಗ ಸುಖ’ವನ್ನು ಅನುಭವಿಸುವುದಕ್ಕೂ ಯೋಗ ಬೇಕು. ಸಂಪತ್ತು ಅರಸಿ ಬರಲು ಮತ್ತು ಅದನ್ನು ಅನುಭವಿಸಲು ಯೋಗ್ಯತೆ ಬೇಕು. ಹತ್ತು ಬೆರಳಿಗೆ ಇಪ್ಪತ್ತು ಉಂಗುರ, ಕತ್ತಿಗೆ ಸಂಕಲೆಯಂತಹ ಮಾಲೆ, ಎರಡೂ ಕಿವಿಗಳಿಗೆ ಲೋಲಕ್ (!), ಕೈಗೆ ದಪ್ಪನಾದ ಕಣ್ಣು ಕುಕ್ಕುವ ಬಳೆ.. ಧರಿಸಿದ ಮಾತ್ರಕ್ಕೆ ‘ಸ್ವರ್ಗ’ದ ತೃಪ್ತಿ ಸಿಗದು. ಬದುಕು ಹೇಗೆ ಬದಲಾಗುತ್ತದೆ ಎನ್ನಲಾಗದು. ಉದಾಹರಣೆ ಸಾಕಷ್ಟಿದೆ. ಇಂದು ಶ್ರೀಮಂತನಾದವನು ನಾಳೆ ಏನೂ ಆಗಬಹುದು. ಹಾಗಾಗುವುದು ಬೇಡ.
ನಿಜವಾದ ಸಂಪತ್ತು ಇರುವುದು ಬಡವರಲ್ಲಿ! ಬಡವ ಅಂದರೆ ದರಿದ್ರ ಎಂದರ್ಥವಲ್ಲ. ಹಾಗೆ ಸಾಮಾನ್ಯರಂತೆ ಬದುಕುವ ಮಂದಿ ಎನ್ನೋಣ. ಅವರಲ್ಲಿರುವ ಸಜ್ಜನಿಕೆ, ಹೃದಯ ವೈಶಾಲ್ಯತೆ, ಪರರನ್ನು ಗೌರವಿಸುವ ಗುಣಗಳು ಬದುಕು ಕಲಿಸಿರುತ್ತದೆ. ಮನೆಗೆ ಅತಿಥಿಗಳು ಬಂದಾಗ ಆದರಿಸುವ ರೀತಿ ಮನನೀಯ. ತಾನು ದುಡಿದು, ಮನೆಮಂದಿಯ ಆಶೋತ್ತರಗಳನ್ನು ಈಡೇರಿಸಿ, ಸ್ನೇಹಿತರ ಬಾಯಿ ಸಿಹಿ ಮಾಡುವ ಮನಸ್ಸು ಇದೆಯಲ್ಲಾ ಇದಕ್ಕಿಂತ ಹಿರಿದಾದ ಸಂಪತ್ತು ಯಾವುದು? ಸ್ವರ್ಗದ ಸುಖ ಇರುವುದು ಇಂತಹವರ ಮನೆಯಲ್ಲಿ. ಅವರ ಮನೆಯ ಚಾವಡಿಯಲ್ಲಿ. ಅವರ ಅಡುಗೆ ಮನೆಯಲ್ಲಿ.
ನನ್ನ ಸ್ನೇಹಿತರೊಬ್ಬರು ಕಲ್ಮಡ್ಕದಲ್ಲಿದ್ದಾರೆ. ಅವರು ಸಾವಯವ ವಿಧಾನದಲ್ಲಿ ತುಂಬಾ ಕಾಳಜಿಯಿಂದ ತರಕಾರಿ ಬೆಳೆಯುತ್ತಾರೆ. ಮಾರಾಟ ಮಾಡುವುದಕ್ಕಲ್ಲ. ತನ್ನ ಆತ್ಮೀಯರಿಗೆ ಉಚಿತವಾಗಿ ಹಂಚುತ್ತಾರೆ. ಹೀಗೆ ವಿತರಿಸುವುದರಲ್ಲಿ ಅವರಿಗೆ ತೃಪ್ತಿ, ಖುಷಿ. ಅವರಿಗದು ‘ಸ್ವರ್ಗ ಸುಖ’! ಎಷ್ಟು ಮಂದಿಗೆ ಇಂತಹ ಮನಸ್ಸು ಇದೆ? ಮಾರಾಟಕ್ಕಾಗಿ  ಬೆಳೆಯುವುದು ಬೇರೆ. ಹಂಚುವುದಕ್ಕಾಗಿ ಬೆಳೆಯುವುದು ಬೇರೆ. ಮಾರಾಟ ಮಾಡುವವನು ಹಂಚಿದರೆ ಅವನಿಗೆ ಲಾಭವಾಗದು. ಆದರೆ ಹಂಚುವುದಕ್ಕಾಗಿ ಬೆಳೆಯುತ್ತಾರಲ್ಲಾ ಅದು ‘ಮನದ ಶ್ರೀಮಂತಿಕೆ’. ಅದು ಲೆಕ್ಕಕ್ಕೆ ಸಿಗದ ಲಾಭ. ಹೀಗೆ ಬದುಕಿನಲ್ಲಿ ಹಾದು ಹೋಗುವ ‘ಸ್ವರ್ಗ’ವನ್ನು ನಿಜವಾಗಿ ಆಳುವ ಒಬ್ಬ ಶ್ರೀಮಂತನಿದ್ದಾನೆ. ಅವನ ಪರಿಚಯ ಮಾಡಿಕೊಳ್ಳೋಣ.
ಸ್ವರ್ಗಾಧಿಪ ದೇವೇಂದ್ರ : ಕಶ್ಯಪರಿಂದ ಅದಿತಿಯ ಗರ್ಭದಲ್ಲಿ ಜನಿಸಿದ ಹನ್ನೆರಡು ಮಂದಿ ಆದಿತ್ಯರಲ್ಲಿ ಒಬ್ಬನು. ತಾನು ಮಾಡಿದ ಸತ್ಕರ್ಮದ ಫಲವಾಗಿ ದೇವಶ್ರೇಷ್ಠನಾಗಿ ಸ್ವರ್ಗದ ಧರ್ಮಸಿಂಹಾಸನದಲ್ಲಿ ವಿರಾಜಮಾನನಾಗಿದ್ದಾನೆ.
ಸ್ವರ್ಗದಲ್ಲಿರುವ ದೇವಸಭೆಯು ನೂರೈವತ್ತು ಯೋಜನ ಉದ್ದ, ನೂರು ಯೋಜನ ಅಗಲ, ಐದು ಯೋಜನ ಎತ್ತರವಿದೆ. ಈ ಮಂದಿರದಲ್ಲಿ ರತ್ನಖಚಿತ ಆಸನಗಳಿವೆ. ಸಭಾಮಂದಿರದ ಮಧ್ಯೆ ಎತ್ತರವಾದ, ಸುಂದರವಾದ ಸ್ವರ್ಣಮಯ ಸಿಂಹಾಸನದಲ್ಲಿ ದೇವೇಂದ್ರನು ಆಸೀನನಾಗಿರುತ್ತಾನೆ. ಈತ ರತ್ನಖಚಿತ ಕಿರೀಟ, ಕನಕಾಂಗದ-ಕೇಯೂರಗಳ ಶ್ವೇತ ವಸ್ತ್ರಗಳನ್ನು ಧರಿಸಿದ್ದಾನೆ. ವಿವಿಧ ವರ್ಣಗಳಿಂದ ಕೂಡಿರುವ ಸುಗಂಧಮಯವಾದ ದೇವ ಸು-ಮಾಲೆಗಳನ್ನು ಧರಿಸಿದ್ದಾನೆ.
ದೇವೆಂದ್ರನ ಪತ್ನಿ ಶಚಿ.  ಸೌಂದರ್ಯರಾಶಿಯೇ ತುಂಬಿರುವ ಅಪ್ಸರೆಯರು, ಗಂಧರ್ವರ ನೃತ್ಯ, ಗೀತ ಗಾಯನಗಳು ನಿರಂತರ. ಸಿದ್ಧರು, ಸಾಧ್ಯರು, ದೇವರ್ಷಿಗಳು, ದೇವಗಣಗಳು, ಮರುತ್ವಂತರು – ಇವರೆಲ್ಲಾ ಇಂದ್ರನನ್ನು ಉಪಾಸನೆ ಮಾಡುತ್ತಿರುತ್ತಾರೆ. ಈ ಸಭಾಭವನದ ಹೆಸರು ‘ಪುಷ್ಕರಮಾಲಿನೀ’.
ಇಲ್ಲಿ – ತಪಸ್ಸಿದ್ಧಿಯನ್ನು ಪಡೆಯದವರಿಗೆ, ಯಜ್ಞ-ಯಾಗಾದಿಗಳನ್ನು ಮಾಡದವರಿಗೆ, ಅಧರ್ಮಿಗಳಿಗೆ, ಬದುಕಿನಲ್ಲಿ ವೃತನಿಷ್ಠನಲ್ಲದವನಿಗೆ ವೇದಾಧ್ಯಯನ ಮಾಡದವನಿಗೆ, ಯಜ್ಞಘಾತಕನಿಗೆ, ನೀಚನಿಗೆ, ದುರುಳರಿಗೆ – ಸ್ಥಾನವಿಲ್ಲ. ಈ ಸಭೆಯಲ್ಲಿ ಆಶ್ರಯ ಹೊಂದಿದವರಿಗೆ ದೌರ್ಬಲ್ಯ, ಮುಪ್ಪು, ದುಃಖ, ಭಯ ಉಂಟಾಗುವುದೇ ಇಲ್ಲ.
ಕಾಮಧೇನು, ಕಲ್ಪವೃಕ್ಷ, ಸ್ವರ್ಶಮಣಿ, ಮೇಘರಥ, ಐರಾವತ, ವಜ್ರಾಯುಧ.. ಸ್ವರ್ಗದ ವಿಶೇಷಗಳು. ದ್ವಾಪರದಲ್ಲಿ ಶ್ರೀಕೃಷ್ಣನಿಗೆ ‘ಗೋವಿಂದ’ನೆಂಬ ಬಿರುದು ನೀಡಿ ಗೌರವಿಸಿದ, ತನ್ನ ಮಗನಾದ ಅರ್ಜುನನ್ನು ಸಮಾನಾಸನದಲ್ಲಿ ಕುಳ್ಳಿರಿಸಿದ, ವಿಶ್ವಾಮಿತ್ರರ ತಪೋಭಂಗಕ್ಕೆ ಮೇನಕೆಯನ್ನು ಕಳುಹಿಸಿದ.. ಅನೇಕಾನೇಕ ಘಟನೆಗಳು ನಡೆದಿವೆ. ಅಲ್ಲದೆ ಋಣಾತ್ಮಕವಾದ ಸಂಗತಿಗಳಿಂದಲೂ ಅಪಕೀರ್ತಿಯನ್ನು ಹೊಂದಿದ್ದಾನೆ.
ಲೋಕದಲ್ಲಿ ಹುಟ್ಟಿದ ರಾಕ್ಷಸರು ಸ್ವರ್ಗಕ್ಕೆ ಏರಿ, ಯುದ್ಧ ಮಾಡಿ, ದೇವ ನಾಯಕನನ್ನು ಓಡಿಸುವುದು ರೂಢಿಯಾಗಿದೆ! ಯಾರೆಲ್ಲ ದೇವಲೋಕ ಪ್ರವೇಶ ಮಾಡಿ, ಅಲ್ಲಿನ ವ್ಯವಸ್ಥೆಯನ್ನು ಹಾಳು ಮಾಡಿದರೋ ಅವರೆಲ್ಲಾ ಉಳಿದಿಲ್ಲ! ಧರ್ಮ ಚಿರಾಯು.
ಹಿರಿಯ ಅರ್ಥದಾರಿ ಶ್ರೀ ಸಿ.ಗೋಪಾಲಕೃಷ್ಣ ಶಾಸ್ತ್ರಿ ಮೂಡಂಬೈರು ಅವರು ತಮ್ಮ ‘ಮಹಾಭಾರತ ಕೋಶ’ ಕೃತಿಯಲ್ಲಿ ಸ್ವರ್ಗದ ಮಹತ್ತನ್ನು ವಿವರಿಸಿದ್ದಾರೆ”
“ಸ್ವರ್ಗದಲ್ಲಿ ಮೂವತ್ತಮೂರು ಸಾವಿರ ಯೋಜನ ವಿಸ್ತಾರವುಳ್ಳ ಸುವರ್ಣಮಯ ಪರ್ವತವಿದೆ. ಅದು ‘ಮೇರು ಪರ್ವತ’ವೆಂಬ ಹೆಸರಿನಿಂದ ಪ್ರಖ್ಯಾತವಾಗಿದೆ. ಅಲ್ಲಿಯೇ ದೇವತೆಗಳ ‘ನಂದನ’ವೆಂಬ ಉದ್ಯಾನವಿದೆ.”
“ಸ್ವರ್ಗಲೋಕದಿಂದ ‘ಸ್ವರ್ಲೋಕ’ ತುಂಬಾ ಎತ್ತರದಲ್ಲಿದೆ ಅದಕ್ಕೆ ‘ಊದ್ರ್ವಗ’ ಎನ್ನುವ ಹೆಸರಿದೆ. ಅಲ್ಲಿರುವ ವ್ಯಕ್ತಿಗಳು ಯಾವಾಗಲೂ ವಿಮಾನದಲ್ಲಿ ಸಂಚರಿಸುತ್ತಾರೆ. ಧರ್ಮಾತ್ಮರು, ಮನಸ್ಸನ್ನು ವಶದಲ್ಲಿರಿಸಿಕೊಳ್ಳುವವರು, ಶಮದಮಗಳಿಂದ ಸಂಪನ್ನರು, ಅಸೂಯಾರಹಿತರು, ದಾನಧರ್ಮ ಪರಾಯಣರು, ಸತ್ಪುರುಷರಿಂದ ಸೇವಿಸಲ್ಪಡುವ ಪುಣ್ಯವಂತರು ಇಲ್ಲಿದ್ದಾರೆ. ಇಲ್ಲಿ ದೇವತೆ, ಸಾಧ್ಯ, ವಿಶ್ವೇದೇವ, ಮಹರ್ಷಿಗಣ, ಯಾಮ, ಧಾಮ, ಗಂಧರ್ವ ಮತ್ತು ಅಪ್ಸರೆಯರೇ ಮೊದಲಾದ ದೇವ ಸಮೂಹಗಳಿಗೆ ಬೇರೆ ಬೇರೆ ಪ್ರಕಾಶಮಾನವಾದ ಲೋಕಗಳಿವೆ..”

Advertisement
Advertisement
Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಇದನ್ನೂ ಓದಿ

ವಿಶ್ವಪರಿಸರ ದಿನ | ತಾಯಿಯ ಹೆಸರಲ್ಲಿ ಒಂದು ಮರ -2.0 ಅಭಿಯಾನ
June 5, 2025
7:47 AM
by: The Rural Mirror ಸುದ್ದಿಜಾಲ
ಒಂದು ಕ್ರೀಡಾ ಗೆಲುವಿಗೆ ಅಷ್ಟು ಅತಿರೇಕದ ಪ್ರತಿಕ್ರಿಯೆ ಒಳ್ಳೆಯ ಲಕ್ಷಣವಲ್ಲ……
June 4, 2025
7:21 AM
by: ವಿವೇಕಾನಂದ ಎಚ್‌ ಕೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣ | ಆರೋಗ್ಯ ಇಲಾಖೆ ಎಚ್ಚರಿಕೆ
June 3, 2025
11:01 PM
by: The Rural Mirror ಸುದ್ದಿಜಾಲ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಯಾವುದೇ ಆತಂಕ ಇಲ್ಲ
June 3, 2025
9:55 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group