ನಾನು ಕೃಷಿಗೆ ಬಂದು 40 ವರ್ಷಗಳಲ್ಲಿ ಈ ವರ್ಷದ ಹವಾಮಾನ ಬಲು ವಿಚಿತ್ರ. 2022ರಲ್ಲಿ ಜನವರಿ ಮತ್ತು ಫೆಬ್ರವರಿ ತಿಂಗಳು ಮಾತ್ರ ಸರಿಯಾಗಿ ಬಿಸಿಲು ಕಾದದ್ದು. ತೋಟಕ್ಕೆ ಸ್ಪಿಂಕ್ಲರ್ ನೀರಾವರಿ ಮಾಡಿದ್ದು ಕೇವಲ ನಾಲ್ಕು ವಾರ. (ಫೆಬ್ರವರಿ ತಿಂಗಳು ಮಾತ್ರ) ಮಾರ್ಚ್ ನಿಂದ ನಂತರ ಪ್ರತಿವಾರವೂ ಮಳೆ. 35 ಅಡಿ ಆಳಕ್ಕಿಳಿಯುವ ಜಲಮಟ್ಟ ಈ ವರ್ಷ ಕೇವಲ ನಾಲ್ಕು ಅಡಿ ಮಾತ್ರ ಇಳಿದದ್ದು. ಜಲಮಟ್ಟ ಇಷ್ಟು ಮೇಲ್ಮಟ್ಟದಲ್ಲಿ ಇದ್ದದ್ದು ಇದೇ ಪ್ರಥಮ. ಹೆಚ್ಚಿನ ಮಳೆ ಬಂದ ವರ್ಷಗಳಲ್ಲಿ ಸಂಜೆ ಹೊತ್ತಿಗೆ ಮಳೆ ಬಂದರೂ ಹಗಲೆಲ್ಲಾ ಸುಡು ಬಿಸಿಲು. ಈ ವರ್ಷ ಮಾತ್ರ ವಿಚಿತ್ರ ಹಗಲೆಲ್ಲ ಮೋಡ. ಮಧ್ಯ ಮಧ್ಯದಲ್ಲಿ ಸ್ವಲ್ಪ ಸ್ವಲ್ಪ ಬಿಸಿಲು ಹಾಗಾಗಿ ಒಣಗಿಸುವ ಕಾರ್ಯಗಳಿಗೆ ಬಲು ಸಮಸ್ಯೆ.
ಸುಗ್ಗಿ ಭತ್ತ ಕೊಯ್ದು ಒಳಬರುವುದು ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ಆರಂಭದಲ್ಲಿ. ಅಕ್ಕಿಯ ರುಚಿ ಹೆಚ್ಚಬೇಕಾದರೆ, ಬಾಳ್ವಿಕೆ ಜಾಸ್ತಿ ಇರಬೇಕಾದರೆ, ಒಂದೆರಡು ತಿಂಗಳಾದರೂ ಅದು ಗೋದಾಮುಗಳಲ್ಲಿ ಇರಬೇಕಾಗುತ್ತದೆ. ಎಪ್ರಿಲ್ 15ರ ಮೇಲೆ ಬೇಯಿಸುವುದು ಪದ್ಧತಿ. ಅಕ್ಕಿ ನೆಲದಲ್ಲಿ ಹರಡಿ ಕನಿಷ್ಠ ಮೂರು ಗಂಟೆಗಳ ಹೊತ್ತಾದರೂ ಸುಡುಬಿಸಿಲು ಸಿಕ್ಕಿದರೆ ಮಾತ್ರ ಅಕ್ಕಿಯ ಗುಣಮಟ್ಟ ಚೆನ್ನಾಗಿರುತ್ತದೆ. ಸರಿಯಾಗಿ ಒಣಗದೆ ಮರುದಿನಕ್ಕೆ ಉಳಿದರೆ ಹುಳಿ ಬಂದು ಹಾಳಾಗುತ್ತದೆ. ಆರಂಭದಲ್ಲಿಯೇ ಈ ವರ್ಷ ಬಿಸಿಲು ಕೈಕೊಟ್ಟಿತು. ಮುಂದಿನ ದಿನಗಳಲ್ಲಿ ಆದರೂ ಬರಬಹುದು ಬರಬಹುದು ಎಂಬ ನಿರೀಕ್ಷೆಯಲ್ಲಿಯೇ, ಅವಧಿಗೆ ಮುಂಚಿತವಾಗಿಯೇ ಮಳೆಗಾಲವು ಆರಂಭಿಸಿ ಬಿಟ್ಟಿತು.
ಯಾವುದೇ ಕೃಷಿಕನಲ್ಲಿ ಮಾತನಾಡಿಸಿದರೂ ಬರುವ ಉತ್ತರಗಳು ಇಂತಹವೇ ಹಲವಾರು. ನಾಲ್ಕನೇ ಕೊಯಿಲು ಅಡಿಕೆ ಅಂಗಳದಲ್ಲಿಯೇ ಬಾಕಿ ಇದೆ, ತೆಂಗಿನಕಾಯಿ ಇದೆ, ಮನೆ ಖರ್ಚಿಗೆ ಆಗುವ ಎಣ್ಣೆ ಮಾಡಿಸಲು ಒಣಗಿಸುವ ಧೈರ್ಯವಿಲ್ಲ. ಮಳೆಗಾಲದಲ್ಲಿ ಒಲೆ ಉರಿಸುವುದಕ್ಕೆ ಒಂದಷ್ಟು ತೆಂಗಿನ ಗರಿ ಸಂಗ್ರಹಿಸಬೇಕಿತ್ತು, ಎಲ್ಲಾ ಒದ್ದೆಯಾಗಿ ಹೋಗಿದೆ. ಕಾಡು ಮಾವಿನ ಹಣ್ಣು ಬೇಕಾದಷ್ಟಿದೆ, ಮಾಂಬಳವಾದರೂ ಹಾಕೋಣ ಎಂದರೆ ಬಿಸಿಲೇ ಇಲ್ಲ, ಎಲ್ಲವೂ ಹಾಳಾಗಿ ಹೋಯಿತು. ಹಲಸಿನ ಹಪ್ಪಳ ಮಾಡೋಣವೆಂದರೆ ಹಲಸಿನಕಾಯಿ ಬೆಳೆದಿಲ್ಲ ಬೆಳೆಯುವಾಗ ಬಿಸಿಲಿಲ್ಲ. ಗೇರುಬೀಜವಂತೂ ಕಪ್ಪಾಗಿ ಹೋಯಿತು ಇಂತಹ ಹಲವಾರು ಇಲ್ಲಗಳ ಪಟ್ಟಿ ಬರುತ್ತದೆ. ಅಯ್ಯಪ್ಪ ಎಂತಾ ಸೆಖೆ, ಬಿಸಿಲು ಎಂದು ಉದ್ಗರಿಸುವ ನಾವುಗಳು ಬಿಸಿಲನ್ನು ಅದೆಷ್ಟು ಅವಲಂಬಿಸಿದ್ದೇವೆ. ಯಾವುದೇ ವಿಷಯದ ಮಹತ್ವದ ಅರಿವಾಗುವುದು ಅದು ಇಲ್ಲದಿದ್ದಾಗ ಮಾತ್ರ. ಈಗ ಬಿಸಿಲಿಲ್ಲದರ ಪರಿಣಾಮ ಮುಂದಿನ ದಿನಗಳಲ್ಲಿ ಏನು ಆಗುವುದು ಮುಂದೆಯೇ ನೋಡಬೇಕಷ್ಟೇ.
ಮೋಡ ಅರೆಬಿಸಿಲಿನ ಆಟದಲ್ಲಿ ಅದು ಹೇಗೋ ಮಾಂಬಳವನ್ನು ಸ್ವಲ್ಪ ಸ್ವಲ್ಪ ಹಾಕಿ ಒಲೆಯ ಮೇಲಿಟ್ಟು ಒಣಗಿಸುತ್ತಿದ್ದ ಮಿತ್ರೆಯೊಬ್ಬರು ಮೊನ್ನೆ ತಾನೆ ಹಗಲಿರುಳು ಸುರಿದ ಮಳೆಯನ್ನು ನೋಡಿ ಇನ್ನೂ ಹಾಕುವುದಿಲ್ಲ ಎಂದು ಶಪಥ ಗೈದರಂತೆ. ಮರುದಿನದ ಅರುಣೋದಯವನ್ನು ನೋಡಿ ತಾನೇ ಹಾಕಿದ ಶಪಥವನ್ನು ಮುರಿದರಂತೆ. ಆಮೇಲೆ ಅವರ ಅರಿವಿಗೆ ಬಂತು ಸೂರ್ಯನಿಗೂ ವರುಣನಿಗೂ ಜಗಳವಂತೆ ತಾನು ಹೆಚ್ಚು ತಾನು ಹೆಚ್ಚು ಎಂದು. ತಂದೆತಾಯಿಗಳ ಜಗಳದಲ್ಲಿ ಕೂಸು ಬಡವಾಯಿತು ಎಂಬ ಗಾದೆಯಂತೆ ವರುಣ ಸೂರ್ಯ ಜಗಳದಲ್ಲಿ ಕೃಷಿಕರೆಲ್ಲರೂ ಬಡವಾದದ್ದು ಅಂತೂ ಸತ್ಯ.
ಎ.ಪಿ. ಸದಾಶಿವ.ಮರಿಕೆ.
ಮಾರುಕಟ್ಟೆಗೆ ಯೋಗ್ಯವಲ್ಲದ ತೆಂಗಿನಕಾಯಿಯಿಂದ ಪಡೆದ ತೆಂಗಿನ ಎಣ್ಣೆಯನ್ನು ಬಳಸಿ ಸುಸ್ಥಿರ ವಿಮಾನ ಇಂಧನ…
ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು ಯುವ ಉದ್ಯಮಶೀಲತೆಗೆ ಮುಂದಿನ ದೊಡ್ಡ ಅವಕಾಶಗಳಾಗಿದ್ದು,…
ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಕಡಿತದ ಅವಧಿಯನ್ನು…
ಕರ್ನಾಟಕದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ…
ಮಂಗಳೂರಿನ ಅಶ್ಮಿತ್ ಎ.ಜೆ. ಅವರು ಝೀ ಕನ್ನಡದ ‘ಸರಿಗಮಪ 2026’ರ ವಿಜೇತರಾಗಿ ₹20…
ದಕ್ಷಿಣ ಕನ್ನಡದ ಮಲೆನಾಡು ತಪ್ಪಲಿನ ಸುಬ್ರಹ್ಮಣ್ಯ, ಸುಳ್ಯ, ಕಡಬ ಸೇರಿದಂತೆ ಹಲವು ಪ್ರದೇಶಗಳಲ್ಲಿ…