ಅಡಿಕೆ ಬೆಳೆಗಾರರು ಇನ್ನು ಚಿಂತೆ ಬಿಟ್ಟು ಯೋಚಿಸಬೇಕು ಏಕೆ? |

December 31, 2022
9:16 AM
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಚಿಂತೆ ಬಿಟ್ಟು ಯೋಚಿಸಬೇಕು ಎನ್ನುವುದನ್ನು  ಕೃಷಿಕ ಪ್ರಬಂಧ ಅಂಬುತೀರ್ಥ ಅವರು ಹೇಳಿದ್ದಾರೆ ಇಲ್ಲಿ…

ವಾರದ ಹಿಂದೆ ಪೇಟೆಯಲ್ಲಿ ನನ್ನ ಸ್ನೇಹಿತರೊಬ್ಬರ ಎಲೆಕ್ಟ್ರಕಲ್ ಮಳಿಗೆಗೆ ಕಾರ್ಯನಿಮಿತ್ತ ಹೋಗಿದ್ದೆ. ನಾನು ಅವರ ಮಳಿಗೆಗೆ ಹೋದಾಗಲೇ ಒಬ್ಬ ಎಲೆಕ್ಟ್ರಿಕಲ್ ಉತ್ಪನ್ನ ಕಂಪನಿವೊಂದರ ಏಜಂಟ್ ರೊಬ್ಬರು ಬಂದು ತಮ್ಮ ಕಂಪನಿಯ ಉತ್ಪನ್ನ ಮಾರಾಟ ಮಾಡುವ ಏಜನ್ಸಿ ತೆಗೆದುಕೊಳ್ಳಲು ಅವರಿಗೆ ಒತ್ತಾಯ ಮಾಡುತ್ತಿದ್ದರು. ಆದರೆ ಆ ಅಂಗಡಿ ಮಾಲಿಕರು ಆ ಏಜನ್ಸಿ ತೆಗೆದುಕೊಳ್ಳಲು ಒಪ್ಪಲಿಲ್ಲ.

ಆ ಕಂಪನಿಯ ಏಜೆಂಟರು ಅತ್ತ ಹೋದ ಮೇಲೆ ಅಂಗಡಿ ಮಾಲಿಕರ ಬಳಿ ಆ ಏಜೆಂಟ್ ನಿಮಗೆ ಕೊಟ್ಟ “ಆಫರ್” ಚೆನ್ನಾಗಿಯೇ ಇತ್ತಲ್ಲವೇ…? ನೀವೇಕೆ ತಿರಸ್ಕಾರ ಮಾಡಿದಿರಿ ಎಂದೆ…,  ಅದಕ್ಕೆ ಆ ಅಂಗಡಿಯ ಮಾಲಿಕರು “ಸ್ವಾಮಿ ನಾವು ಈ ಮಲೆನಾಡಿನ ಅಡಿಕೆ ಬೆಳೆಗಾರರ ವ್ಯವಹಾರದ ಮೇಲೆ ಜೀವನ ನೆಡೆಸುತ್ತಿರುವುದು. ಈಗಾಗಲೇ ಅಡಿಕೆಗೆ ಎಲೆಚುಕ್ಕಿ ರೋಗ ಶುರುವಾಗಿದೆ. ಒಂದು ವೇಳೆ ಈ ವರ್ಷದಂತೆ ಬರುವ ವರ್ಷವೂ ಅಡಿಕೆಗೆ ಎಲೆಚುಕ್ಕಿ ರೋಗ ಇನ್ನಷ್ಟು ಬಾಧಿಸಿದರೆ ಅಡಿಕೆ ಬೆಳೆಗಾರ ಆರ್ಥಿಕ ವಾಗಿ ಕುಸಿದರೆ ಆಗ ನಮಗೆ ವ್ಯಾಪಾರ ವೇ ಆಗುವುದಿಲ್ಲ. ನಾವು ಯಾವ ದೈರ್ಯದಲ್ಲಿ ಹೊಸ ವ್ಯವಹಾರ ಮಾಡುವುದು…‌? ಎಂಬ ಕಾರಣ ನೀಡಿದರು.

ಒಬ್ಬ ಪೇಟೆಯ ಉದ್ಯಮಿ ಅಡಿಕೆ ಬೆಳೆಯ ಭವಿಷ್ಯದ ಬಗ್ಗೆ ಈ ಪರಿ ಆತಂಕದಿಂದ ಚಿಂತಿಸುತ್ತಾನೆಂದರೆ ನಾವು ಸ್ವತಃ ಅಡಿಕೆ ಬೆಳೆಗಾರರು ಇನ್ನೆಷ್ಟು ಈ ಬಗ್ಗೆ ಅವಲೋಕನ ಚಿಂತನ ಮಂಥನ ಮಾಡಬೇಕು ಹೇಳಿ….?. ಆದರೆ ಖಂಡಿತವಾಗಿಯೂ ನಮ್ಮ ಅಡಿಕೆ ಬೆಳೆಗಾರರ ಸಮೂಹದಲ್ಲಿ ಅದರಲ್ಲೂ ಇವತ್ತು ಎಲೆಚುಕ್ಕಿ ಬಾಧೆ, ಹಳದಿ ಎಲೆರೋಗ ಇರದ ಅಡಿಕೆ ಕೃಷಿಕರಂತೂ ಕಿಂಚಿತ್ತೂ ಈ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ. ಅವಕಾಶ ಇದ್ದಲ್ಲಿ ಇನ್ನಷ್ಟು ಅಡಿಕೆ ಬೆಳೆ ವಿಸ್ತರಣೆಯನ್ನೂ ಮಾಡಲು ಆಸಕ್ತರು.‌ ಹೆಚ್ಚಿನ ಯಾವ ಅಡಿಕೆ ಬೆಳೆಗಾರರಿಗೂ ಈಗಾಗಲೇ ರಾಜ್ಯ ಹೊರ ರಾಜ್ಯದಲ್ಲಿ ವಿಸ್ತರಣೆ ಆಗಿರುವ ಮತ್ತು ಆಗುತ್ತಿರುವ ಅಡಿಕೆ ಬೆಳೆ ಯಿಂದ ಬೆಲೆ ಗಂಭೀರ ಸ್ವರೂಪದಲ್ಲಿ ಕುಸಿ ಯುತ್ತದೆ ಎಂಬ ಆತಂಕ ಕಾಣಿಸುತ್ತಿಲ್ಲ.

ಒಂದು ಮಾತನ್ನ ಅಡಿಕೆ ಬೆಳೆಗಾರರೆಲ್ಲರೂ ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ” ಅಡಿಕೆ ಎಲೆಚುಕ್ಕಿ ರೋಗಬಾಧೆ ಮೊನ್ನೆ ಬೇಸಿಗೆ ಬಂದಾಗಿನಿಂದ ನಿಂತಿದೆ. ಆದರೆ ಇದು ಎಲೆಚುಕ್ಕಿ ರೋಗದ ಇಂಟ್ರವೆಲ್ ಮಾತ್ರ. ಈ ಆರು ತಿಂಗಳಲ್ಲಿ ಅಡಿಕೆ ಎಲೆಚುಕ್ಕಿ ರೋಗಕ್ಕೆ ಸರ್ಕಾರದ ಸಂಶೋಧನಾ ಕೇಂದ್ರ ಗಳು ಪರಿಣಾಮಕಾರಿ ಔಷಧ ಕಂಡು ಹಿಡಿದಲ್ಲಿ‌ ಮಾತ್ರ ಎಲ್ಲಾ ಅಡಿಕೆ ಬೆಳೆಗಾರರು ಬಚಾವಾಗುತ್ತಾರೆ. ಆದರೆ ಅಡಿಕೆ ಎಲೆಚುಕ್ಕಿ ರೋಗಕ್ಕೆ ಅಷ್ಟು ವೇಗವಾಗಿ ಮದ್ದು ಕಂಡುಹಿಡಿಯುತ್ತಾರಾ‌..? ಸಾಧ್ಯವೇ..?
ಅಡಿಕೆ ಎಲೆಚುಕ್ಕಿ ರೋಗ ಮತ್ತೆ 2023 ರ ಜುಲೈ ಆಗಷ್ಟ್ ಸೆಪ್ಟೆಂಬರ್ ತಿಂಗಳ ಘೋರ ಮಳೆಗಾಲದಲ್ಲಿ ಮತ್ತೆ ತನ್ನ ಕೆಲಸ ಶುರುಮಾಡುತ್ತದೆ. ಈ ವರ್ಷ ಅಡಿಕೆ ಎಲೆಚುಕ್ಕಿ ರೋಗದಿಂದ ಬಚಾವಾದವರು ಮುಂದಿನ ವರ್ಷ ಬಾಧಿತ ಸಾಲಿನಲ್ಲಿ ಇರುತ್ತಾರೆ. ಇದು ಎಲ್ಲಾ ಅಡಿಕೆ ಬೆಳೆಗಾರರೂ ಒಪ್ಪಿ‌ ಕೊಳ್ಳಬೇಕಾದ  ಸತ್ಯ.

ಅಕಸ್ಮಾತ್ತಾಗಿ ಅಡಿಕೆ ಎಲೆಚುಕ್ಕಿ ರೋಗದ ಆಟಾಠೋಪ ಈ ವರ್ಷಕ್ಕೇ ಕೊನೆಯಾದಲ್ಲಿ ಎಲ್ಲಾ ಅಡಿಕೆ ಬೆಳೆಗಾರರು ಅದೃಷ್ಟವಂತರಾಗುತ್ತಾರೆ. ಹಾಗಾಗಲೆಂದು ನಾವೆಲ್ಲರೂ ಸಕಾರಾತ್ಮಕವಾಗಿ ಚಿಂತನೆ ಮಾಡೋಣ.

ಅಕಸ್ಮಾತ್ತಾಗಿ ಅಡಿಕೆ ಎಲೆಚುಕ್ಕಿ ರೋಗ ಮುಂದುವರಿದಲ್ಲಿ. ಮುಂದುವರಿದರೆ ನೇರವಾಗಿ ಅಡಿಕೆಯನ್ನೇ ನಂಬಿಕೊಂಡ ಸಾಲ ಮೂಲ ಮಾಡಿಕೊಂಡ ಅಡಿಕೆ ಬೆಳೆಗಾರರ ಭವಿಷ್ಯದ ಕಥೆ ಏನು..? ಅಡಿಕೆ ಬೆಳೆಗಾರರಿಗೆ ಸರ್ಕಾರ ಎಷ್ಟು ಪರಿಹಾರ ಕೊಡುತ್ತದೆ…? ಎಲೆಚುಕ್ಕಿ ರೋಗದ ಹತ್ತಿರದಲ್ಲಿ ಇರುವ ಮಲೆನಾಡು ಕರಾವಳಿ ಪ್ರದೇಶದ ರೈತರು ಈ ಬಗ್ಗೆ ಖಂಡಿತವಾಗಿಯೂ ಚಿಂತೆ ಮತ್ತು ಚಿಂತನೆ ಮಾಡಬೇಕಾದ ಅತ್ಯವಶ್ಯಕತೆ ಇದೆ ಅಲ್ವಾ…?

ನಾನು  ನನ್ನ ಲೇಖನದಲ್ಲಿ ಅಡಿಕೆ ವಿಸ್ತರಣೆ, ಅಡಿಕೆಯ ಮಾರಕ ರೋಗದ ಬಗ್ಗೆ ಪ್ರಸ್ತಾಪ ಮಾಡಿದ ಲೇಖನ ಪ್ರಸ್ತುತ ಪಡಿಸಿದರೆ ಅಡಿಕೆ ಬೆಳೆಗಾರರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ವಿವಿಧ ಗುಂಪಿನಲ್ಲಿ ಹೆಚ್ಚಿನವರು ಆ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲಿಲ್ಲ. ನನ್ನ ಲೇಖನದ ವಸ್ತುವನ್ನು ಸಂಪೂರ್ಣವಾಗಿ ಓದದೆ ಅದನ್ನು ಬಿಜೆಪಿ ವಿರೋಧಿ‌ ಅಥವಾ ಸರ್ಕಾರ ವಿರೋಧಿ ಲೇಖನ ಅಂತ ತಪ್ಪಾಗಿ ಅರ್ಥೈಸಿಕೊಂಡವರು ಬಹಳ ಜನ.

ಖಂಡಿತವಾಗಿಯೂ ನಾವು ಅಡಿಕೆ ಬೆಳೆ/ ಬೆಲೆ ವಿಚಾರ ಬಂದಾಗ ಮೊದಲು ನಾವು ಅಡಿಕೆ ಬೆಳೆಗಾರರು ಮಾತ್ರ. ನಾವು ಅಡಿಕೆ ಬೆಳೆಗಾರರು ಚಾಲ್ತಿಯಲ್ಲಿರುವ ಎಲ್ಲಾ ಪ್ರಮುಖ ಪಕ್ಷದ ಆಡಳಿತವನ್ನು ನೋಡಿದ್ದೇವೆ.‌ ಯಾರು ಯಾರು ಅಡಿಕೆ ಬೆಳೆಗಾರರನ್ನು ಎಷ್ಟು ಉಳಿಸಿ ಬೆಳೆಸಿದ್ದಾರೆಂಬುದು ಕಣ್ಣಿಗೆ ಕಾಣಿಸುವ ಸತ್ಯ.

ಅಡಿಕೆ ವಿಸ್ತರಣೆಯ ಕಾರಣದಿಂದಾಗಿ ಸಾಂಪ್ರದಾಯಿಕವಾಗಿ ಲಗಾಯ್ತಿನಿಂದಲೂ ಅಡಿಕೆಯೊಂದನ್ನೇ ನಂಬಿಕೊಂಡ ರೈತರಿಗೆ ಬೆಲೆ ಕುಸಿತದ ಪ್ರಹಾರ ಉಂಟಾಗಬಾರದು. ಜೊತೆಯಲ್ಲಿ ಸಾಂಪ್ರದಾಯಿಕ ಅಡಿಕೆ ಬೆಳೆಗಾರರ ಅಡಿಕೆ ಉತ್ಪನ್ನ ಕ್ಕೆ ಪ್ರತ್ಯೇಕ ಮಾರುಕಟ್ಟೆ ಈ ಬಯಲು ಸೀಮೆಯ ಪ್ರದೇಶದ ಅಡಿಕೆ ವಿಸ್ತರಣೆ ಯ ಸಮಸ್ಯೆಗೆ ಪರಿಹಾರವಾಗಬಹುದು.

ಈ ಬಗ್ಗೆ ರಾಜ್ಯ ಕೇಂದ್ರ ದ ಪ್ರಭಾವಿ ಜನ‌ಪ್ರತಿನಿಧಿಗಳು, ರಾಜಕೀಯ ನಾಯಕರು, ಸಚಿವರಗಳ‌ ಸಖ್ಯ ಇರುವವರು ಸಮಸ್ತ ಅಡಿಕೆ ಬೆಳೆಗಾರರ ಪರವಾಗಿ ಈ ಬಗ್ಗೆ ಗಮನ ಹರಿಸುವಂತೆ ಅಹವಾಲು ಸಲ್ಲಿಸಿ.

ಇದನ್ನು ಈ ಹೊತ್ತು ಯಾವುದೇ ಪಕ್ಷದ ಆಡಳಿತ ಇದ್ದರೂ ಅವರಲ್ಲಿ ನಾವು ಅಡಿಕೆ ಬೆಳೆಗಾರರಾಗಿ ಕೇಳುತ್ತಿದ್ದೆವು. ಇದು ನಮ್ಮ ಹಕ್ಕು… ಅಡಿಕೆ ಬೆಳೆಗಾರರೇ ದಯಮಾಡಿ ಧ್ವನಿ ಎತ್ತಿ …. ಇಲ್ಲಿ ಪಕ್ಷಗಳನ್ನು ಒಳ ತರಬೇಡಿ..

ಅಡಿಕೆ ಬೆಳೆ ವಿಸ್ತರಣೆ ಆಗಿದೆ , ಮುಂದೆ ಬೆಲೆ ಕುಸಿಯುತ್ತದೆ ಎಂಬುದು ಸಾಮಾನ್ಯ ಜ್ಞಾನದ ವಿಷಯ. ‌ಇದು ಸಾಮಾನ್ಯವಾಗಿ ಎಲ್ಲರಿಗೂ ಅರಿವಿರುವ ವಿಷಯ. ಇದಕ್ಕಿಂತ ನಮಗೆ ನಮ್ಮ ಸಮಸ್ಯೆಗೆ ಪರಿಹಾರ ಬೇಕು. ಸಾಂಪ್ರದಾಯಿಕ ಅಡಿಕೆ ಬೆಳೆಗಾರರು. ನಮಗೆ ಅಡಿಕೆ ಬಿಟ್ಟರೆ ಬೇರೆ ಬೆಳೆ ಬೆಳೆಯಲು ಬರೋಲ್ಲ. ಆದ್ದರಿಂದ ಈ ವಿಸ್ತರಣೆ ಮತ್ತು ಎಲೆಚುಕ್ಕಿ ರೋಗಕ್ಕೆ ಔಷಧ ಕಂಡುಹಿಡಿದು ನಮ್ಮನ್ನು ನಮ್ಮ ಸರ್ಕಾರ ಕಾಪಾಡಲೆಂಬುದು ಸದಾಶಯ.ಇದು ನಮ್ಮೆಲ್ಲರ ಬಾಳು ಭವಿಷ್ಯದ ವಿಷಯ….

ನಮ್ಮನ್ನಾಳುವ ಜನಪ್ರತಿನಿಧಿಗಳು ಇಂತಹ ಗಂಭೀರ ಸಮಸ್ಯೆಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಕಾರ್ಯತತ್ಪರವಾಗಲಿ. ಅದು ಅವರ ಜವಾಬ್ದಾರಿ.ಈ ಆಶಯಕ್ಕೆ ಯಾವುದೇ ರಾಜಕೀಯ ಸ್ಪರ್ಶವಿಲ್ಲ.‌ಕೇವಲ ನೇರವಾಗಿ ಅಡಿಕೆಯನ್ನೇ ನಂಬಿಕೊಂಡ ಅಡಿಕೆ ಬೆಳೆಗಾರ ಅಂತಃಕರಣ ದ ಅಳಲಿದು..

ಬರಹ :
ಪ್ರಬಂಧ ಅಂಬುತೀರ್ಥ
ಪ್ರಬಂಧ ಅಂಬುತೀರ್ಥ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬಿ.ಎಸ್‌ಸಿ. ಕೃಷಿ ನಂತರ ಏನು ? ಉದ್ಯೋಗ, ಉದ್ಯಮ ಮತ್ತು ಉನ್ನತ ಶಿಕ್ಷಣದ ಅತ್ಯುತ್ತಮ ಅವಕಾಶಗಳು ಇಲ್ಲಿವೆ
August 11, 2026
7:14 AM
by: ದ ರೂರಲ್ ಮಿರರ್.ಕಾಂ
ಅಡಿಕೆ–ಕಾಳುಮೆಣಸು ಬೆಳೆ ವಿಮೆ: ರೈತರ ನೋಂದಣಿಗೆ ಆ.17 ಅಂತಿಮ ದಿನ
August 11, 2026
6:52 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 10.08.2026 | ಕರ್ನಾಟಕದಲ್ಲಿ ಬಿಟ್ಟು ಬಿಟ್ಟು ಸಾಮಾನ್ಯ ಮಳೆ; ಆಗಸ್ಟ್‌ 12ರಂದು ಕರಾವಳಿಯಲ್ಲಿ ಮಳೆ ಹೆಚ್ಚಳ ಸಾಧ್ಯತೆ
August 10, 2026
3:32 PM
by: ಸಾಯಿಶೇಖರ್ ಕರಿಕಳ
ಕಡಿಮೆ ನೀರು, ಕಡಿಮೆ ಗೊಬ್ಬರ… ಹೆಚ್ಚು ಇಳುವರಿ – ಕೃಷಿಯಲ್ಲಿ ಹೊಸ ಕ್ರಾಂತಿ
August 10, 2026
6:20 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror