ಅನುಕ್ರಮ

#ವಿಶ್ವಆಹಾರದಿನ‌ | ಹಸಿವಿನ‌ ಮಾಪನದಲ್ಲಿ ಭಾರತ 100 ಕ್ಕಿಂತ ಕೆಳಗಡೆ ಕುಸಿತ…..| ವಿವೇಕಾನಂದ ಎಚ್‌ ಕೆ ಬರೆಯುತ್ತಾರೆ… |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
  • ಹಸಿವಿನ‌ ಮಾಪನದಲ್ಲಿ ಭಾರತ 100 ಕ್ಕಿಂತ ಕೆಳಗಡೆ ಕುಸಿತ….
  • ಭಾರತದ ರಕ್ಷಣಾ ಉದ್ಯಮದಲ್ಲಿ ಮತ್ತೊಂದು ಸ್ವದೇಶಿ ಖಾಸಗಿ ಸಂಸ್ಥೆ ಪ್ರಾರಂಭ……

ಇದರಲ್ಲಿ ಯಾವ ಸುದ್ದಿ ಪ್ರಾಮುಖ್ಯತೆ ಪಡೆಯಬೇಕು. ದೇಶದ ಪ್ರಜ್ಞಾವಂತ ಜನ ಯಾವ ವಿಷಯದ ಬಗ್ಗೆ ಹೆಚ್ಚು ಚಿಂತನೆ ನಡೆಸಬೇಕು……..

Advertisement

ಒಂದು ಮೂಲದ ಪ್ರಕಾರ ಭಾರತದಲ್ಲಿ 80 ಲಕ್ಷಕ್ಕೂ ಹೆಚ್ಚು ಜನ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅದೇ ಸಮಯದಲ್ಲಿ ಭಾರತದಲ್ಲಿ ಸಾರ್ವಜನಿಕ ಸಮಾರಂಭಗಳಲ್ಲಿ ಉಣ ಬಡಿಸುವ ಆಹಾರದಲ್ಲಿ ಶೇಕಡಾ 23% ರಷ್ಟು ಎಲೆ ಅಥವಾ ತಟ್ಟೆಗಳಲ್ಲಿ ‌ವ್ಯರ್ಥವಾಗುತ್ತದೆ….

ಅದೇ ಸಮಯದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತದ ಹಸಿವಿನ ಸೂಚ್ಯಂಕ ಕುಸಿಯುತ್ತಿದೆ. ಅದೇ ಸಮಯದಲ್ಲಿ ರಕ್ಷಣಾ ಸ್ವಾವಲಂಬನೆಯ ಉದ್ಯಮ ಬೆಳೆಯುತ್ತಿದೆ.

ಆಹಾರ – ಹಸಿವು – ರಕ್ಷಣೆ…..

ಬಲಪಂಥೀಯರಿಗೆ ರಕ್ಷಣಾ ಉದ್ಯಮದ ಬೆಳವಣಿಗೆಯ ಸುದ್ದಿ ಮುಖ್ಯವಾದರೆ, ಎಡಪಂಥೀಯರಿಗೆ ಹಸಿವಿನ ಸೂಚ್ಯಂಕ ಕುಸಿತ ಮುಖ್ಯ ಸುದ್ದಿಯಾದರೆ, ಇತರ ಮನಸ್ಸುಗಳಿಗೆ ಆಹಾರ ವ್ಯರ್ಥವಾಗುವುದು ಮುಖ್ಯವಾಗುತ್ತದೆ…..

Advertisement

75 ವರ್ಷಗಳ ಸ್ವಾತಂತ್ರ್ಯ ನಂತರ ಭಾರತದ ಒಟ್ಟು ಪರಿಸ್ಥಿತಿ ಅಧೋಗತಿಯೋ, ಸಮಾಧಾನವೋ, ತೃಪ್ತಿಕರವೋ, ಸಂತೃಪ್ತಿಯೋ, ಅತ್ಯುತ್ತಮವೋ ನಿಮ್ಮ ವಿವೇಚನೆಗೆ ಬಿಡುತ್ತಾ……..

ಹಸಿವು – ರಕ್ಷಣೆಯ ನಡುವೆ ಯುವ ಮನಸ್ಸುಗಳು ತೊಳಲಾಡುತ್ತಿರುವ ಸಂದರ್ಭದಲ್ಲಿ ಆಯ್ಕೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ………

ವಿಶ್ವ ಆಹಾರ ದಿನ ಅಕ್ಟೋಬರ್ 16……….

ಭಕ್ಷ್ಯ ಭೋಜನವನ್ನು ಸವಿದು ಆಹಾರ ಸಂಸ್ಕೃತಿಯನ್ನು ಸಂಭ್ರಮದಿಂದ ನೆನಪಿಸಿ ತಿಂದು ತೇಗಲು ಈ ದಿನವನ್ನು ಆಚರಿಸಲು ಕರೆ ಕೊಡಲಾಗಿದೆ ಎಂದು ಭಾವಿಸಿದ್ದರೆ ಅದು ತಪ್ಪು.

1945 ರಲ್ಲಿ ವಿಶ್ವಸಂಸ್ಥೆಯ ಕೃಷಿ ವಿಭಾಗದ ಸ್ಥಾಪನೆಯ ನೆನಪಿಗಾಗಿ ಈ ದಿನವನ್ನು ” ಹಸಿವಿನ ವಿರುದ್ಧ ಹೋರಾಟ “ ಕ್ಕಾಗಿ ಪ್ರಾರಂಭಿಸಲಾಯಿತು. 1981 ರ ನಂತರ ಅಧಿಕೃತವಾಗಿ ಮತ್ತು ವ್ಯಾಪಕವಾಗಿ ಜಾರಿಗೆ ತರಲಾಯಿತು.

Advertisement

ಹೊಟ್ಟೆ ಇರುವ ಯಾವ ಜೀವಿಗೂ ಆಹಾರದ ಪ್ರಾಮುಖ್ಯತೆಯ ಬಗ್ಗೆ ಹೇಳಿಕೊಡುವ ಅವಶ್ಯಕತೆ ಇಲ್ಲ. ಪ್ರತಿ ಜೀವಿಯ ಜೀವನಾಧಾರವೇ ಅದರ ಊಟ. ಅದಿಲ್ಲದೆ ಪ್ರಾಣವೇ ಇಲ್ಲ. ಆದರೆ 2021 ರ ಈ ದಿನದಂದು ಮನುಷ್ಯ ಪ್ರಾಣಿಗಳಿಗೆ ಆಹಾರದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಆಹಾರ ದಿನವನ್ನು ಆಚರಿಸುತ್ತಿರುವುದು ವಿಷಾದನೀಯ. ಆತ ಮಾನಸಿಕವಾಗಿ ತಲುಪಿರುವ ಅನಾಗರಿಕತೆ ಮತ್ತು ದಿವಾಳಿತನಕ್ಕೆ ಸಾಕ್ಷಿ.

ಎರಡು ಮಹಾಯುದ್ಧಗಳ ನಂತರದ ಪರಿಸ್ಥಿತಿ ಬಿಡಿ, ಈಗ ಕೊರೋನಾ ನಂತರದ ದಿನಗಳಲ್ಲಿ ಒಟ್ಟು ವಿಶ್ವ ಜನಸಂಖ್ಯೆಯ ಅಂದರೆ ಸುಮಾರು ‌750 ಕೋಟಿ ಜನಸಂಖ್ಯೆಯಲ್ಲಿ 100 ಕೋಟಿಗೂ ಹೆಚ್ಚು ಜನ ತಾವು ಬಯಸುವ ಆಹಾರ ಸೇವಿಸಲು ಸಾಧ್ಯವಾಗುತ್ತಿಲ್ಲ. ಸುಮಾರು 25 ಕೋಟಗೂ ಹೆಚ್ಚು ಜನಸಂಖ್ಯೆಗೆ ಕನಿಷ್ಠ ಪ್ರಮಾಣದ ಊಟ ಸಿಗುತ್ತಿಲ್ಲ. ಆಹಾರದ ಕೊರತೆಯ ಕಾರಣದಿಂದಾಗಿ ಅಪೌಷ್ಟಿಕತೆಯಿಂದ ನರಳುತ್ತಿರುವವರು ಇನ್ನೆಷ್ಟೋ…..

ಭಾರತದಲ್ಲಿ ಹಸಿವಿನಿಂದ ಸಾಯುತ್ತಿರುವವರು ತೀರಾ ಅಪರೂಪ ಇರಬಹುದು. ಆದರೆ ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳು ಮತ್ತು ವಯೋವೃದ್ದರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಪ್ರತಿನಿತ್ಯ ತಾವು ಇಷ್ಟ ಪಟ್ಟು ತಿನ್ನಲು ಬಯಸುವ ಆಹಾರದ ಆಯ್ಕೆಯ ಸ್ವಾತಂತ್ರ್ಯ ಇರುವವರು ಬಹುಶಃ ಶ್ರೀಮಂತರು ಅಥವಾ ಮೇಲ್ ಮಧ್ಯಮ ವರ್ಗದವರಿಗೆ ಮಾತ್ರ ಸಾಧ್ಯವಾಗುತ್ತಿರಬಹುದು. ಉಳಿದ ಬಹುತೇಕರು ಹಬ್ಬ ಅಥವಾ ಸಮಾರಂಭಗಳನ್ನು ಹೊರತುಪಡಿಸಿ ಆಸೆ ಪಟ್ಟ ಆಹಾರ ತಿನ್ನುವುದು ಅಪರೂಪವೇ…..

ಹಾಗೆಂದು ಪ್ರಕೃತಿಯಲ್ಲಿಯೇ ಆಹಾರದ ಕೊರತೆ ಇದೆಯೇ ? ನಮ್ಮ ಆಹಾರದ ಬೇಡಿಕೆ ಪೂರೈಸಲು ಅದಕ್ಕೆ ಸಾಧ್ಯವಾಗುತ್ತಿಲ್ಲವೇ ?

ಈ ಕ್ಷಣದಲ್ಲಿ ವಿಶ್ವದ ಪ್ರತಿ ಮನುಷ್ಯರಿಗೂ ಆತನ ಅವಶ್ಯಕತೆಯಷ್ಟು ಆಹಾರ ಪೂರೈಸುವ ಸಾಮರ್ಥ್ಯ ಪ್ರಕೃತಿಗೆ ಖಂಡಿತ ಇದೆ. ಆದರೆ ಉತ್ಪಾದನೆ, ಸಂಗ್ರಹ, ಪೂರೈಕೆ, ಹಂಚಿಕೆ, ಸದುಪಯೋಗ ಇವುಗಳ ನಡುವೆ ಸಮನ್ವಯ ಸಾಧ್ಯವಾಗದೆ ಎಂದಿನಂತೆ ಉಳ್ಳವರ ದುರಹಂಕಾರಕ್ಕೆ ದುರ್ಬಲರು ಆಹಾರವಿಲ್ಲದಂತೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಕ್ರಮಬದ್ಧವಲ್ಲದ ಅವೈಜ್ಞಾನಿಕ ಕೃಷಿ ವಿಧಾನದಿಂದ ಒಂದಷ್ಟು, ಸಾಗಾಣಿಕೆ ಮತ್ತು ಸಂಗ್ರಹದ ವ್ಯವಸ್ಥೆಯಿಲ್ಲದೆ ಇನ್ನೊಂದಿಷ್ಟು, ಮಾರುಕಟ್ಟೆಯ ದುರಾಸೆ ಮತ್ತು ಅವ್ಯವಸ್ಥೆಗೆ ಮತ್ತೊಂದಿಷ್ಟು ಇದರ ಜೊತೆಗೆ ಮನುಷ್ಯರ ನಿರ್ಲಕ್ಷ್ಯ ಮತ್ತು ದುರಹಂಕಾಕ್ಕೆ ಸಾಕಷ್ಟು ಆಹಾರ ವ್ಯರ್ಥವಾಗುತ್ತಿದೆ.

  • ” ಹಸಿದವನೇ ಬಲ್ಲ ಅನ್ನದ ಮೌಲ್ಯ “
  • ” ತಿನ್ನುವ ಹಕ್ಕು ಇದೆ, ಆದರೆ ಬಿಸಾಡುವ ಹಕ್ಕು ನಮಗಿಲ್ಲ “
  • ” ಅಣ್ಣ ಚಿನ್ನಕ್ಕಿಂತ ಮುಖ್ಯ ನಮ್ಮ ಅನ್ನ “
  • ” ಆಹಾರವೇ ದೇವರು “

…. ಹೀಗೆ ನಾನಾ ರೀತಿಯ ಘೋಷಣೆಗಳೊಂದಿಗೆ ಆಹಾರದ ದುರುಪಯೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಪರಿಸ್ಥಿತಿ ಬಂದಿರುವುದು ದುರಂತ. ಯಾವುದು ಸಹಜವಾಗಿ ಗೌರವ ಪಡೆಯಬೇಕಾಗಿತ್ತೋ ಅದಕ್ಕಾಗಿ ಜಾಗೃತಿ ಮೂಡಿಸುವ ಪ್ರಚಾರ ಮಾಡಬೇಕಾಗಿರುವುದು ನಾಗರಿಕ ಸಮಾಜ ನಾಚಿಕೆಯಿಂದ ತಲೆತಗ್ಗಿಸ ಬೇಕಾದ ವಿಷಯ.

ಒಂದು ಅಂದಾಜಿನಂತೆ ಭಾರತದಲ್ಲಿ ಈಗಲೂ ಸುಮಾರು ಶೇಕಡಾ ‌23% ರಷ್ಟು ಆಹಾರ ಮದುವೆ ಮುಂತಾದ ಸಾರ್ವಜನಿಕ ಕಾರ್ಯಕ್ರಮಗಳ ಊಟ ಮುಗಿದ ನಂತರ ಎಲೆ ಅಥವಾ ತಟ್ಟೆಯಲ್ಲಿ ವ್ಯರ್ಥವಾಗಿ ಉಳಿಯುತ್ತದೆ ಮತ್ತು ಅದನ್ನು ಕಸದ ಬುಟ್ಟಿಗೆ ಸುರಿಯಲಾಗುತ್ತದೆ. ಇನ್ನು ಹೋಟೆಲು ಮತ್ತು ಖಾಸಗಿಯಾಗಿ ಮನೆಗಳಲ್ಲಿ ವ್ಯರ್ಥವಾಗುವುದು ಸರಿಯಾಗಿ ಲೆಕ್ಕಕ್ಕೇ ಸಿಗುವುದಿಲ್ಲ.

ನಾವು ತಿನ್ನುವ ಒಂದು ಹೊತ್ತಿನ ಸಾಧಾರಣ ಊಟ ತಯಾರಾಗಲು ಬಿತ್ತನೆಯಿಂದ ಅಡುಗೆ ಮನೆಯವರೆಗೆ ಎಷ್ಟೊಂದು ಪ್ರಕೃತಿಯ ವಸ್ತುಗಳು ಉಪಯೋಗಿಸಬೇಕು, ಅದು ಬೆಳೆಯಲು ಎಷ್ಟು ಸಮಯ ಬೇಕು, ಅದಕ್ಕಾಗಿ ಎಷ್ಟೊಂದು ಮಾನವ ಶ್ರಮ ಬೇಕು ಅದಲ್ಲದೇ ಇನ್ನೂ ಎಷ್ಟೊಂದು ಸಂಪನ್ಮೂಲಗಳ ಉಪಯೋಗವಾಗಿರುತ್ತದೆ ಎಂಬುದನ್ನು ಒಮ್ಮೆ ಯೋಚಿಸಿ ನೋಡಿ. ಅನ್ನದ ಮಹತ್ವ ಅರ್ಥವಾಗುತ್ತದೆ. ಮೇಲ್ನೋಟಕ್ಕೆ 50 ರೂಪಾಯಿಗೆ ಒಂದು ಊಟ ಸಿಗಬಹುದು. 50 ರೂಪಾಯಿಯ ಸಂಪಾದನೆಯೂ ಕೆಲವರಿಗೆ ಸುಲಭ ಇರಬಹುದು. ಆದರೆ ಅದರಿಂದಾಗಿ ನಾವು ಉಪಯೋಗಿಸುವ ಆಹಾರ ಮಾತ್ರ ತುಂಬಾ ಮೌಲ್ಯವುಳ್ಳದ್ದು.

ಸರ್ಕಾರಗಳ ಮಟ್ಟದಲ್ಲಿ ಇದಕ್ಕಾಗಿ ಸಾಕಷ್ಟು ಸುಧಾರಣೆ ಮಾಡಬೇಕಾದ ಅವಶ್ಯಕತೆ ಇದೆ. ಏಕೆಂದರೆ ಆಹಾರ ರಾಷ್ಟ್ರೀಯ ಸಂಪನ್ಮೂಲ. ಅದನ್ನು ಶ್ರೀಮಂತರ, ದುರಹಂಕಾರಿಗಳ, ಭ್ರಷ್ಟರ ತೆವಲುಗಳಿಗಾಗಿ ವ್ಯರ್ಥವಾಗಲು ಬಿಡಬಾರದು. ಅದಕ್ಕಾಗಿ ನಿಯಂತ್ರಣ ವ್ಯವಸ್ಥೆ ತುಂಬಾ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಜೊತೆಗೆ ಈಗ ಆಹಾರವೇ ವಿಷವಾಗುವ ಕಲಬೆರಕೆ ಹಂತಕ್ಕೆ ತಲುಪಿದ್ದೇವೆ. ಅದನ್ನು ದೇಶದ್ರೋಹವೆಂದು ಕಠಿಣ ಕ್ರಮ ಕೈಗೊಳ್ಳಬೇಕು. ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕಾದರೆ ಇದು ಅತ್ಯವಶ್ಯ.

Advertisement

ಹಾಗೆಯೇ ಇಂದಿನಿಂದ ವೈಯಕ್ತಿಕ ಮಟ್ಟದಲ್ಲಿ ನಾವು ಸಹ ಆಹಾರವನ್ನು ವ್ಯರ್ಥ ಮಾಡದಂತೆ ಸಾಧ್ಯವಾದಷ್ಟು ಪ್ರಯತ್ನ ಮಾಡೋಣ. ಎಷ್ಟು ಸಾಧ್ಯವೋ ಅಷ್ಟು ಆಹಾರವನ್ನು ಉಳಿಸಲು ಪ್ರತಿಜ್ಞೆ ಮಾಡೋಣ. ನಮ್ಮ ಸುತ್ತ ಮುತ್ತ ಯಾರಾದರೂ ಆಹಾರ ವ್ಯರ್ಥ ಮಾಡುತ್ತಿದ್ದರೆ ಪ್ರೀತಿಯಿಂದ ಅವರಿಗೆ ಮನವಿ ಮಾಡಿಕೊಂಡು ಜಾಗೃತಿ ಮೂಡಿಸೋಣ….

ಸಾರ್ವಜನಿಕ ಸಮಾರಂಭಗಳಲ್ಲಿ ಉಳಿದ ಆಹಾರವನ್ನು ಬಡ ಕೂಲಿ ಕಾರ್ಮಿಕರಿಗೆ ಹಂಚಲು ಹಗಲಿರಳು ನಿಸ್ವಾರ್ಥದಿಂದ ದುಡಿಯುತ್ತಿರುವ ಗೆಳೆಯ ಯುವರಾಜ್ ಎಂ ಆಹಾರ ಸಂರಕ್ಷಣೆ ಸೇರಿ ಅನೇಕ ಸಮಾಜ ಸೇವಕರ ಸೇವೆಯನ್ನು ನೆನೆಯುತ್ರಾ…..

ಭಾರತದ ಎಲ್ಲಾ ರಾಜಕಾರಣಿ – ಅಧಿಕಾರಿಗಳೇ….

ನಿಮಗೆ ಹೃದಯದಲ್ಲಿ ಸ್ವಲ್ಪವಾದರೂ ಮಾನವೀಯತೆ ಇದ್ದರೆ ದಯವಿಟ್ಟು ನಿಮ್ಮ ಮೊದಲ ಆದ್ಯತೆ “ ಹಸಿವು ಮುಕ್ತ ಭಾರತ “ ದ ಕಡೆ ಇರಲಿ, ನಂತರ ಉಳಿದದ್ದು ಎಂಬ ಆಶಯ ವ್ಯಕ್ತಪಡಿಸುತ್ತಾ……..

# ವಿವೇಕಾನಂದ ಎಚ್‌ ಕೆ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

Published by
ವಿವೇಕಾನಂದ ಎಚ್‌ ಕೆ

Recent Posts

ಹವಾಮಾನ ವರದಿ | 20-07-2025 | ಮತ್ತೆ ಬದಲಾಯಿತು ಹವಾಮಾನ | ಮಳೆ ಕಡಿಮೆಯಾಗುವ ಲಕ್ಷಣ |

ಮಧ್ಯಮ ಸ್ತರದ ಗಾಳಿಯು ಬಂಗಾಳಕೊಲ್ಲಿಯ ಕಡೆಯಿಂದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಕರಾವಳಿ…

3 hours ago

ಬದುಕು ಪುರಾಣ | ರಾಮಬಾಣದ ಇರಿತ

ಒಂದು ಔಷಧವು ಮಾರುಕಟ್ಟೆಗಿಳಿಯಲು ಹಲವು ಪರೀಕ್ಷೆಗೆ ಒಡ್ಡಿಕೊಂಡು, ಸರಕಾರದಿಂದ ಮಾನ್ಯತೆ ಪಡೆದಾಗ ಮಾತ್ರ…

11 hours ago

ವಾಸ್ತು ಶಾಸ್ತ್ರದ ಮೂಲಕ ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿಸುವ 5 ಟಿಪ್ಸ್

ನಿಮ್ಮ ಮನೆಯು ಕೇವಲ ಒಂದು ಇಟ್ಟಿಗೆಯ ಗೋಡೆಗಳ ಸಮೂಹವಲ್ಲ; ಇದು ನಿಮ್ಮ ಜೀವನದ…

11 hours ago

ಜಾಗತಿಕವಾಗಿ ಹವಾಮಾನ ವೈಪರೀತ್ಯ | ಒಂದೆಡೆ ಭಾರೀ ಮಳೆ- ಇನ್ನೊಂದೆಡೆ ಪ್ರವಾಹ – ಮತ್ತೊಂದೆಡೆ ಕಾಡ್ಗಿಚ್ಚು

ಪಾಕಿಸ್ತಾನ ಮತ್ತು ದಕ್ಷಿಣ ಕೊರಿಯಾದಿಂದ ಸ್ಪೇನ್, ಫ್ರಾನ್ಸ್ ಮತ್ತು ಸೈಬೀರಿಯಾದವರೆಗೆ ಭೀಕರ ಮಳೆ,…

21 hours ago

ಧನ ಧಾನ್ಯ ಕೃಷಿ ಯೋಜನೆ ಘೋಷಣೆ | ಯೋಜನೆಗೆ  ರೈತಾಪಿ ವರ್ಗದಿಂದ ಸ್ವಾಗತ

ದೇಶದ ಕೃಷಿ ಹಾಗೂ ಪೂರಕ ವಲಯಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸಚಿವ ಸಂಪುಟ…

21 hours ago

ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ರೈಲ್ವೆ ಕಾಮಗಾರಿ – 43 ಸಾವಿರ ಕೋ. ರೂ. ವೆಚ್ಚದಲ್ಲಿ ಶೀಘ್ರ ಪೂರ್ಣ

ರಾಜ್ಯದಲ್ಲಿ ನೆನೆಗುದ್ದಿಗೆ  ಬಿದ್ದಿದ್ದ  ಸುಮಾರು 43 ಸಾವಿರ ಕೋಟಿ ರೂಪಾಯಿ ವೆಚ್ಚದ  ರೈಲ್ವೆ…

21 hours ago