ವಿಶ್ವ ಜಲ ದಿನ | 2025 ರ ವಿಶ್ವ ಜಲ ದಿನದ ಥೀಮ್ ‘ಹಿಮನದಿ ಸಂರಕ್ಷಣೆ’ | ಭವಿಷ್ಯಕ್ಕಾಗಿ ಜಲಸಂಪನ್ಮೂಲ ರಕ್ಷಣೆ ಅನಿವಾರ್ಯ |

March 22, 2025
10:35 AM
ನಮ್ಮ ಭವಿಷ್ಯಕ್ಕಾಗಿ ನಾವೆಲ್ಲರೂ ಜಲ ಸಂರಕ್ಷಣೆಯ ಕಡೆಗೆ ಮನಸ್ಸು ಮಾಡಬೇಕಿದೆ. ಈ ಮೂಲಕ ನಮ್ಮದೇ ಪೀಳಿಗೆಗೆ ಸಮೃದ್ಧ ಜಲ, ಪರಿಸರವನ್ನು ಕೊಡುಗೆಯಾಗಿ ನೀಡಬೇಕಿದೆ.

ಇಂದು ವಿಶ್ವ ಜಲ ದಿನ. ಜಲ ಸಂರಕ್ಷಣೆ ಮಾತ್ರವಲ್ಲ ಶುದ್ಧ ನೀರು, ಪರಿಸರ ಸೇರಿದಂತೆ ಅರಣ್ಯ ಸಂರಕ್ಷಣೆಯ ಭಾಗವೂ ಇಲ್ಲಿ ಸೇರಿದೆ. ಕುಡಿಯುವ ನೀರು ಇಂದು ಕಲುಷಿತವಾಗುತ್ತಿರುವುದರ ಜೊತೆಗೆ ಅನೇಕ ಹಳ್ಳಿಗಳಲ್ಲಿ ನೀರಿಲ್ಲದೆ ಪರದಾಟ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಜಲಸಂರಕ್ಷಣೆಯ ಪಾಠ ಒಂದು ಕಡೆಯಾದರೆ, ವಿಶ್ವದಲ್ಲಿ ಜಲ ದಿನದ ಮೂಲಕ ವಿಶ್ವಸಂಸ್ಥೆಯು ಸಿಹಿ ನೀರಿನ ಮಹತ್ವವನ್ನು ಎತ್ತಿ ತೋರಿಸುತ್ತದೆ.………ಮುಂದೆ ಓದಿ……..

ಭಾರತದಲ್ಲಿ ನಗರೀಕರಣ, ಕೈಗಾರಿಕೀಕರಣ, ಸುಸ್ಥಿರವಲ್ಲದ ಕೃಷಿ ಪದ್ಧತಿಗಳು, ಹವಾಮಾನ ಬದಲಾವಣೆ ಮತ್ತು ನೀರಿನ ಅಸಮರ್ಥ ನಿರ್ವಹಣೆ ಮುಂತಾದ ಅಂಶಗಳಿಂದಾಗಿ ಭಾರತವು ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದೆ, ಇದು ನೀರಿನ ಕೊರತೆ ಮತ್ತು ಮಾಲಿನ್ಯಕ್ಕೆ ಕಾರಣವಾಗುತ್ತದೆ. ಹೀಗಾಗಿ ಜಲ ಸಂರಕ್ಷಣೆಯ ಅನಿವಾರ್ಯತೆ ಇಂದು ಭಾರತದಲ್ಲೂ ಇದೆ.

2025 ರ ವಿಶ್ವ ಜಲ ದಿನದ ಅಂಗವಾಗಿ ವಿಶ್ವಸಂಸ್ಥೆಯು ಈ ಬಾರಿ ‘ಹಿಮನದಿ ಸಂರಕ್ಷಣೆʼ ಯ ಥೀಂ ಮೂಲಕ  ವಿಶ್ವಜಲದಿನವನ್ನು ಆಚರಿಸುತ್ತಿದೆ. ಹಿಮನದಿಗಳು ಎಂದಿಗಿಂತಲೂ ವೇಗವಾಗಿ ಕರಗುತ್ತಿವೆ. ಹವಾಮಾನ ಬದಲಾವಣೆಯಿಂದಾಗಿ ತಾಪಮಾನ ಅಧಿಕವಾಗಿ ,ನೀರಿನ ಚಕ್ರವನ್ನು ಅನಿರೀಕ್ಷಿತ  ತೀವ್ರಗೊಳಿಸುತ್ತದೆ. ಇದು ಕೂಡಾ ಅಪಾಯಕಾರಿಯಾಗಿದೆ. ಹಿಮನದಿ ಕರಗುವ ಕಾರಣದಿಂದ ನೀರಿನ ಹರಿವುಗಳು ಬದಲಾಗುತ್ತಿವೆ, ಇದು ಪ್ರವಾಹಗಳು, ಬರಗಳು, ಭೂಕುಸಿತಗಳು ಮತ್ತು ಸಮುದ್ರ ಮಟ್ಟ ಏರಿಕೆಗೆ ಕಾರಣವಾಗುತ್ತದೆ ಮತ್ತು ಪರಿಸರ ವ್ಯವಸ್ಥೆಗಳಿಗೆ ಹಾನಿ ಮಾಡುತ್ತದೆ. ಈ ಕಾರಣಕ್ಕಾಗಿ ಹಿಮನದಿ ಸಂರಕ್ಷಣೆಯು ಅಗತ್ಯವಾಗಿದೆ.  ಕರಗುವ ನೀರನ್ನು ಹೆಚ್ಚು ಸುಸ್ಥಿರವಾಗಿ ನಿರ್ವಹಿಸಲು ನಾವು ಒಟ್ಟಾಗಿ ಕೆಲಸ ಮಾಡಬೇಕು ಎನ್ನುವುದು ಈ ವರ್ಷದ ಹಿಮನದಿ ಸಂರಕ್ಷಣೆಯ ಥೀಂ ಅಂಶವಾಗಿದೆ.

ವಿಶ್ವ ಜಲ ದಿನದ ಅಂಗವಾಗಿ ಪರಿಸರ ಹೋರಾಟಗಾರ, ಪರಿಸರ ತಜ್ಞ ಶಿವಾನಂದ ಕಳವೆ ಅವರು ತಮ್ಮ ಪೇಸ್‌ಬುಕ್‌ ವಾಲ್‌ನಲ್ಲಿ ಹೀಗೆ ಬರೆದಿದ್ದಾರೆ…

ಕೊಳವೆ ಬಾವಿಗಳ ಮಧ್ಯೆ ಹನಿ ಕಥೆ
ಮಳೆ ಬಂದರೆ ನೀರಾಗುತ್ತದೆಂಬ ಮಾತು ಸುಳ್ಳಾಗುತ್ತಿದೆ. ವಾಡಿಕೆಗಿಂತ ಹೆಚ್ಚು ಮಳೆ ಸುರಿದರೂ ಆ ವರ್ಷ ಜಲಕ್ಷಾಮ ಇರುತ್ತದೆ. ಸುಮಾರು 39,173 ಕೆರೆಗಳ ನಮ್ಮ ರಾಜ್ಯದಲ್ಲಿ. ಈ ವಿಕೇಂದ್ರೀಕೃತ ನೀರಾವರಿ ವ್ಯವಸ್ಥೆ ಕುರಿತು ಸರಕಾರದಲ್ಲಿಯೇ ಅಜ್ಞಾನವಿದೆ. ಕೆರೆ ಹೂಳು ತೆಗೆಯುವ ಕಾಮಗಾರಿ ಮಹತ್ವ ಪಡೆದಿಲ್ಲ! ಕಳೆದ 40 ವರ್ಷಗಳಿಂದ ಯಾವುದೇ ಕೆರೆ ಹೂಳು ತೆಗೆಯಲು ಮಂಜೂರಾದ ಹಣದಲ್ಲಿ ಶೇಕಡಾ 10 ರಿಂದ 15 ರಷ್ಟು ಮಾತ್ರ ಹೂಳು ತೆಗೆಯಲು ವಿನಿಯೋಗಿಸುವ ನಿರ್ಧಾರ ಮಾಡಿದ ಜಾಣ ಇಂಜಿನಿಯರ್ ಗಳು ಈ ರಾಜ್ಯದವರು! ಹೂಳು ತೆಗೆಯಲು ಮಂಜೂರು ಹಣದಲ್ಲಿ ಕಾಲುವೆ, ತಡೆ ಗೋಡೆ, ತೂಬು ದುರಸ್ತಿ, ಕಾಲುವೆ ಮುಂತಾದ ಕಾಂಕ್ರಿಟ್ ಕಾರ್ಯಗಳಿಗೆ ಖಾಲಿಯಾಗುತ್ತದೆ. ಕೆರೆ ಹೂಳು ತೆಗೆಯುವ ನೆಪದಲ್ಲಿ ಇನ್ನೇನೋ ಮಾಡುತ್ತೇವೆ. ಆಳಕ್ಕೆ ಹೂಳು ತೆಗೆಯುವುದು ಮರೆತಿದ್ದೇವೆ.ನಗರದ ಕೆರೆಯ ಸುತ್ತ ಉದ್ಯಾನ ನಿರ್ಮಾಣ ಮುಖ್ಯ ಕೆಲಸವಾಗಿದೆ. ನೀರು ಹಿಡಿಯುವುದು, ಇಂಗಿಸುವುದು ಮರೆತೇ ಹೋಗಿದೆ.

ರಾಜ್ಯದ ಪ್ರಮುಖ ಎಲ್ಲಾ ನದಿಗಳಿಂದ 3472.5 ಟಿಎಂಸಿ ನೀರಿದೆ. ಇವುಗಳಲ್ಲಿ ಬಹುತೇಕ ಈಗಾಗಲೇ ನೀರಾವರಿಗೆ ಬಳಕೆಯಾಗಿದೆ.

1984ರವರೆಗೂ ಹಳ್ಳದಲ್ಲಿ, ತೆರೆದ ಬಾವಿಗಳಲ್ಲಿ ನೀರಿದ್ದ ಕೋಲಾರ,ಚಿತ್ರದುರ್ಗದಂಥ ಪ್ರದೇಶದಲ್ಲಿ. ಇಂದು ಸಾವಿರ ಅಡಿ ಆಳದ ಕೊಳವೆ ಬಾವಿಗಳಿಗೂ ಇಂದು ನೀರು ಸಿಗುತ್ತಿಲ್ಲ. ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ 45 ಲಕ್ಷಕ್ಕೂ ಹೆಚ್ಚು ಕೊಳವೆ ಬಾವಿಗಳು ಇವೆಯಂತೆ! ಪ್ರತೀ ವರ್ಷ ಆಳ ಕೊರೆತ ಜಾಸ್ತಿಯಾಗುತ್ತಿದೆ. ನೀರಾವರಿ ಬೆಳೆ ಅದರಲ್ಲಿಯೂ ಬಹುವಾರ್ಷಿಕ ತೋಟಗಾರಿಕೆ ಕ್ಷೇತ್ರ ವಿಸ್ತರಣೆಯು ನಡೆದಿದೆ. ನಾಳೆ ನೀರು ಇರುತ್ತದೆಯೇ?ಗೊತ್ತಿಲ್ಲ. ಟ್ಯಾಂಕರ್ ನೀರು ಪಡೆದು ಟೊಮೆಟೋ, ಅಡಿಕೆ ಬದುಕಿಸುವ ಪ್ರಯತ್ನಗಳು ಸಾಮಾನ್ಯವಾಗಿವೆ.

2016ರ ಬರಗಾಲದಲ್ಲಿ ಕೋಲಾರದ ಮಾಲೂರು ದೊಡ್ಡ ಕಲ್ಲಹಳ್ಳಿಯಲ್ಲಿ ಬಿಂದಿಗೆ ನೀರಿಗಾಗಿ ಹಿರಿಯರ ಜೊತೆಗೆ ಈ ಪುಟ್ಟ ಬಾಲಕಿ ನಿಂತಿದ್ದಳು, ಅಮ್ಮನ ಪರವಾಗಿ ನಾಲ್ಕೈದು ತಾಸು ನೀರಿಗಾಗಿ ಕಾಯುತ್ತಿದ್ದಳು! ಇವಳು ದೊಡ್ಡವಳಾಗುವ ಕಾಲಕ್ಕೆ ಊರ ನೀರ ಗತಿ ಊಹಿಸಲೂ ಅಸಾಧ್ಯ. ಈ ಚಿತ್ರ ನಾಳಿನ ನೀರಿನ ಭವಿಷ್ಯ ಹೇಳುತ್ತದೆ.

ನಾವುಗಳೆಲ್ಲ ಮಳೆ ಹನಿ ಹನಿ ಕಥೆ ಹೇಳುತ್ತಿದ್ದರೆ. ವಿಧಾನ ಸೌಧದಲ್ಲಿ ಮಧು ಬಲೆ ಪ್ರಸಂಗವೇ ಜೋರಾಗಿದೆ. ಕೊಳವೆ ಬಾವಿಗೆ ಬಿದ್ದ ಕರ್ನಾಟಕಕ್ಕೆ ವಿಶ್ವ ಜಲ ದಿನದ ಶುಭಾಶಯ ಎಲ್ಲಿಂದ ಆರಂಭಿಸೋಣ?

 

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಎಲ್ಲಾ ಜಿಲ್ಲೆಗಳಲ್ಲಿ ಕ್ಯಾನ್ಸರ್ ಆರೈಕೆ ಕೇಂದ್ರ | ಮುಂದಿನ ವರ್ಷದ ವೇಳೆಗೆ ಆರಂಭ
March 22, 2025
2:32 PM
by: The Rural Mirror ಸುದ್ದಿಜಾಲ
ಭತ್ತದ ಬೆಳೆ ಸಂರಕ್ಷಣೆಗಾಗಿ ತುಂಗಭದ್ರ ಬಲದಂಡೆ ಕಾಲುವೆಯಿಂದ ನೀರು ಹರಿಸಲು ಮನವಿ
March 22, 2025
2:29 PM
by: The Rural Mirror ಸುದ್ದಿಜಾಲ
ರಾಜ್ಯದಲ್ಲಿ ನಕ್ಸಲ್ ನಿಗ್ರಹ ಘಟಕ ವಿಸರ್ಜನೆ | ನಕ್ಸಲರು ನುಸುಳುವ ಸಾಧ್ಯತೆಯ ಬಗ್ಗೆ ನಿಗಾ | ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ
March 22, 2025
2:25 PM
by: The Rural Mirror ಸುದ್ದಿಜಾಲ
ಬೆಂಗಳೂರಿನಲ್ಲಿ ನೀರಿನ ಸಂರಕ್ಷಣೆಗೆ ವಿಶೇಷ ಅಭಿಯಾನ
March 22, 2025
2:20 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror