ಯುವಶಕ್ತಿ ದಿಕ್ಕುತಪ್ಪದಿರಲು ಹಿರಿಯರ ಮಾರ್ಗದರ್ಶನವೇ ದೀಪಸ್ತಂಭ

March 13, 2026
7:02 PM
ಯುವಜನತೆಗೆ ಸರಿಯಾದ ದಿಕ್ಕು ತೋರಿಸುವುದು ಹಿರಿಯರ ತಾತ್ವಿಕ ಮತ್ತು ಸಾಮಾಜಿಕ ಹೊಣೆಗಾರಿಕೆಯಾಗಿದೆ. ಅನುಭವ ಮತ್ತು ಮೌಲ್ಯಗಳ ವರ್ಗಾವಣೆ ಮೂಲಕವೇ ಸಮಾಜದ ಭವಿಷ್ಯ ದೃಢವಾಗುತ್ತದೆ.

ಮಾನವ ಸಮಾಜದ ನಿರಂತರತೆಯೇ ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಹರಿದುಹೋಗುವ ಜ್ಞಾನ, ಅನುಭವ ಮತ್ತು ಮೌಲ್ಯಗಳ ಪ್ರವಾಹ. ಈ ಪ್ರವಾಹದಲ್ಲಿ ಯುವಜನತೆ ಹೊಸ ನೀರಿನಂತೆ  ಉತ್ಸಾಹಭರಿತ, ಚಂಚಲ, ಮತ್ತು  ಹುಡುಕುವ ಸ್ವಭಾವದದು. ಆದರೆ ಆ ನೀರು ಪ್ರವಾಹವಾಗಿ ವ್ಯರ್ಥವಾಗದಂತೆ, ನದಿಯಾಗಿ ಸಮಾಜವನ್ನು ಪೋಷಿಸುವಂತೆ ಮಾಡುವ ಹೊಣೆ ಹಿರಿಯರ ಮೇಲಿದೆ. ಹಿರಿಯರ ಮಾರ್ಗದರ್ಶನ ಇಲ್ಲದೆ ಯುವಶಕ್ತಿ ದಿಕ್ಕುತಪ್ಪಬಹುದು; ಆದರೆ ಅವರ ಸೂಕ್ತ ಮಾರ್ಗದರ್ಶನದಿಂದ ಅದೇ ಶಕ್ತಿ ಸಮಾಜದ ಶಿಲ್ಪಿಯಾಗಬಹುದು.

ತತ್ವಶಾಸ್ತ್ರ ಹೇಳುವಂತೆ, ಸ್ವಾತಂತ್ರ್ಯವೆಂದರೆ ನಿಯಂತ್ರಣರಹಿತತೆಯಲ್ಲ; ಜವಾಬ್ದಾರಿಯೊಂದಿಗೆ ಆಯ್ಕೆ ಮಾಡುವ ಶಕ್ತಿ. ಈ ಜವಾಬ್ದಾರಿಯ ಅರಿವು ಯುವಜನತೆಗೆ ದೊರಕುವುದು ಹಿರಿಯರ ಮಾರ್ಗದರ್ಶನದಿಂದಲೇ.

ಇದನ್ನು ನಾವು ನಾಲ್ಕು  ವಿಭಾಗದಲ್ಲಿ ನೋಡಬಹುದು.

1 .ಗುರು–ಶಿಷ್ಯ ಪರಂಪರೆ: ಪ್ರಶ್ನೆಯಿಂದ ಪ್ರಜ್ಞೆಗೆ

ಭಾರತೀಯ ಚಿಂತನೆಯ ಹೃದಯದಲ್ಲಿರುವುದು ಗುರು–ಶಿಷ್ಯ ಪರಂಪರೆ. ಇಲ್ಲಿ ಗುರು ಎಂದರೆ ಕೇವಲ ಪಾಠ ಹೇಳುವವನು ಅಲ್ಲ; ಶಿಷ್ಯನೊಳಗಿನ ಪ್ರಶ್ನೆಗಳಿಗೆ ದಾರಿ ತೋರಿಸುವವನು. ಉಪನಿಷತ್ತಿನಲ್ಲಿ ಶಿಷ್ಯನು ಪ್ರಶ್ನಿಸುತ್ತಾನೆ, ಗುರುನು ಉತ್ತರ ನೀಡುವುದಕ್ಕಿಂತ ಹೆಚ್ಚಾಗಿ ಆಲೋಚನೆಗೆ ಪ್ರೇರೇಪಿಸುತ್ತಾನೆ. ಒಳ್ಳೆಯ ಗುರು “ಇದು ಸರಿ–ಅದು ತಪ್ಪು” ಎಂದು ಕಟ್ಟಿಹಾಕುವುದಿಲ್ಲ; ಬದಲಾಗಿ “ನೀನು ಯೋಚಿಸು” ಎಂದು ಮನಸ್ಸಿನ ಕಿಟಕಿಯನ್ನು ತೆರೆದಿಡುತ್ತಾನೆ. ಇಂತಹ ಮಾರ್ಗದರ್ಶನ ಯುವಜನತೆಗೆ ಬೌದ್ಧಿಕ ಸ್ವಾತಂತ್ರ್ಯವನ್ನೂ, ನೈತಿಕ ಹೊಣೆಗಾರಿಕೆಯನ್ನುೂ ನೀಡುತ್ತದೆ.

ಒಬ್ಬ ಶಿಷ್ಯ ಪರೀಕ್ಷೆಯಲ್ಲಿ ವಿಫಲನಾದಾಗ, ಗುರು ಅವನನ್ನು ದಂಡಿಸುವುದಕ್ಕಿಂತ, “ಈ ವಿಫಲತೆ ನಿನಗೆ ಏನು ಕಲಿಸಿತು?” ಎಂದು ಕೇಳಿದರೆ , ಆ ಪ್ರಶ್ನೆಯೇ ಅವನ ಬದುಕಿನ ದಿಕ್ಕನ್ನು ಬದಲಿಸಬಲ್ಲದು.

2 .ಪೋಷಕ–ಮಗು: ನಿಯಂತ್ರಣದಿಂದ ನಂಬಿಕೆಗೆ.

ಪೋಷಕರ ಪಾತ್ರವು ಬಹುಸಾರಿ ಮಾರ್ಗದರ್ಶನ ಮತ್ತು ಹಸ್ತಕ್ಷೇಪದ ನಡುವೆ ಗೊಂದಲಕ್ಕೆ ಒಳಗಾಗುತ್ತದೆ. ಮಗು ಬೆಳೆಯುವಂತೆ ಪೋಷಕರೂ ಬೆಳೆಯಬೇಕು. ಬಾಲ್ಯದಲ್ಲಿ ಕೈ ಹಿಡಿದು ನಡೆಯಿಸುವುದು ಅಗತ್ಯ; ಯೌವನದಲ್ಲಿ ಕೈ ಬಿಡುವ ಧೈರ್ಯವೂ ಅಷ್ಟೇ ಅಗತ್ಯ.

ತತ್ವಶಾಸ್ತ್ರ ಹೇಳುತ್ತದೆ  ಯಾರು ನಂಬಿಕೆ ನೀಡುತ್ತಾರೋ, ಅವರು ಜವಾಬ್ದಾರಿಯನ್ನೂ ಹುಟ್ಟಿಸುತ್ತಾರೆ. ಪೋಷಕರು ಮಕ್ಕಳ ನಿರ್ಧಾರಗಳನ್ನು ಸಂಪೂರ್ಣವಾಗಿ ತಳ್ಳಿಹಾಕದೆ, ಅವುಗಳ ಪರಿಣಾಮಗಳನ್ನು ಅರಿಯಲು ನೆರವಾದರೆ, ಮಕ್ಕಳು ತಪ್ಪಿನಿಂದಲೂ ಕಲಿಯುತ್ತಾರೆ.

ಒಬ್ಬ ಪೋಷಕ ಮಗನಿಗೆ “ನೀನು ಈ ದಾರಿ ಆಯ್ಕೆ ಮಾಡಬಾರದು” ಎಂದು ಹೇಳುವ ಬದಲು, “ಈ ದಾರಿಯಲ್ಲಿ ಸವಾಲುಗಳು ಇವೆ; ನೀನು ಅವನ್ನು ಎದುರಿಸಲು ಸಿದ್ಧನಾಗಿದ್ದೀಯಾ ?” ಎಂದು ಕೇಳಿದಾಗ, ಮಾರ್ಗದರ್ಶನ ಉಪದೇಶವಾಗದೆ , ಸಂವಾದವಾಗುತ್ತದೆ.

3 .ಉದ್ಯೋಗಕ್ಷೇತ್ರದ ಹಿರಿಯ–ಕಿರಿಯ: ಅನುಭವದಿಂದ ಸಾಮರ್ಥ್ಯಕ್ಕೆ.

ಉದ್ಯೋಗಕ್ಷೇತ್ರದಲ್ಲಿ ಹಿರಿಯರು ಸಂಸ್ಥೆಯ ಸ್ಮೃತಿ; ಕಿರಿಯರು ಅದರ ಭವಿಷ್ಯ. ಆದರೆ ಇಲ್ಲಿ ಸಂಬಂಧ ಅಧಿಕಾರದ ಆಧಾರದಲ್ಲೇ ನಿಂತರೆ, ಯುವಕಾರು ಕುಗ್ಗುತ್ತಾರೆ . ಹಿರಿಯರು ತಮ್ಮ ಅನುಭವವನ್ನು ಆಜ್ಞೆಯಾಗಿ ಬಳಸದೆ, ಮಾರ್ಗದರ್ಶಕನಂತೆ ಬಳಸಿದಾಗ ಮಾತ್ರ ಸಂಸ್ಥೆ ಬೆಳೆಯುತ್ತದೆ.

ಒಬ್ಬ ಅನುಭವೀ ಉದ್ಯೋಗಿ ತನ್ನ ಕಿರಿಯ ಸಹೋದ್ಯೋಗಿಯ ತಪ್ಪನ್ನು ತಕ್ಷಣ ತಿದ್ದಿ ಅವಮಾನಿಸುವುದಕ್ಕಿಂತ, ಅದನ್ನು ಕಲಿಕೆಯ ಅವಕಾಶವನ್ನಾಗಿ ಮಾಡಿಸಿದರೆ , ಅಲ್ಲಿ ನಿಜವಾದ ನಾಯಕತ್ವ ವ್ಯಕ್ತವಾಗುತ್ತದೆ.

ನಾಯಕತ್ವ ಎಂದರೆ ಮುಂದೆ ನಡೆಯುವುದು ಮಾತ್ರವಲ್ಲ; ಜೊತೆಯಲ್ಲಿ ನಡೆಯುವುದೂ ಹೌದು. ಈ ತತ್ವವನ್ನು ಅರಿತ ಹಿರಿಯರು, ಯುವಜನತೆಯನ್ನು ಸ್ಪರ್ಧಿಗಳಂತೆ ಅಲ್ಲ, ಸಹಯಾತ್ರಿಗಳಂತೆ ಕಾಣುತ್ತಾರೆ.

4 .ಮೌನದ ಮಾರ್ಗದರ್ಶನ.

ಹಿರಿಯರ ಮಾರ್ಗದರ್ಶನ ಸದಾ ಮಾತಿನಲ್ಲೇ ಇರಬೇಕೆಂದಿಲ್ಲ. ಕೆಲವೊಮ್ಮೆ ಮೌನವೇ ದೊಡ್ಡ ಪಾಠ. ಸಂಕಷ್ಟದ ಸಂದರ್ಭದಲ್ಲಿ ಯುವಕನ ಪಕ್ಕದಲ್ಲಿ ನಿಂತು, ಅವನನ್ನು ಕೇಳುವ ಸಹನೆ ಇದ್ದಾರೆ ಅದು  ಮಾತಿಗಿಂತ ದೊಡ್ಡ ಮಾರ್ಗದರ್ಶನ. ಯುವಜನತೆಯ ಉತ್ತರಕ್ಕಿಂತ ಹೆಚ್ಚು ಬೇಕಾಗಿರುವುದು, ಅವರ ಮಾತು ಕೇಳುವ ಮನಸ್ಸು.

ಭವಿಷ್ಯ ನಿರ್ಮಾಣದ ತಾತ್ವಿಕ ಹೊಣೆ.

ಯುವಜನತೆಗೆ ಮಾರ್ಗದರ್ಶನ ನೀಡುವುದು ಹಿರಿಯರ ದಯೆಯಲ್ಲ; ಅದು ಸಮಾಜದ ತಾತ್ವಿಕ ಕರ್ತವ್ಯ. ಇಂದು ಹಿರಿಯರು ಯುವಜನತೆಯೊಳಗೆ ಯಾವ ಮೌಲ್ಯಗಳನ್ನು ಬೀಜವಾಗಿ ಬಿತ್ತುತ್ತಾರೋ, ನಾಳೆ ಸಮಾಜ ಅದನ್ನೇ ಫಲವಾಗಿ ಅನುಭವಿಸುತ್ತದೆ.

ಅನುಭವದಿಂದ ಹುಟ್ಟಿದ ವಿವೇಕ, ವಿವೇಕದಿಂದ ಬೆಳೆಯುವ ಮೌಲ್ಯ – ಇವೆರಡನ್ನು ಯುವಜನತೆಗೆ ವರ್ಗಾಯಿಸುವುದೇ ಹಿರಿಯರ ಶ್ರೇಷ್ಠ ಸಾಧನೆ. ಇಂತಹ ಮಾರ್ಗದರ್ಶನವಿರುವ ಸಮಾಜದಲ್ಲಿ ಮಾತ್ರ ಯುವಶಕ್ತಿ ದಿಕ್ಕುತಪ್ಪದೆ, ಧರ್ಮ, ಮಾನವೀಯತೆ ಮತ್ತು ಜವಾಬ್ದಾರಿಯೊಂದಿಗೆ ಮುಂದಿನ ಪೀಳಿಗೆಯನ್ನು ಕಟ್ಟುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

This opinion article highlights the philosophical and social responsibility of elders in guiding youth. It explains how mentorship through trust, dialogue, experience, and silent support can channel youthful energy towards responsible nation-building and value-driven societal progress.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಕುಮಾರಸುಬ್ರಹ್ಮಣ್ಯ ಮುಳಿಯಾಲ

ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಅವರು, ಬೆಂಗಳೂರಿನ ಬಯೋ ಕ್ರಾಸ್ ಕೆಮ್, ಎಲ್ಎಲ್ ಪಿ  ಎಂಬ ಔಷಧಿ ಕಂಪೆನಿಯಲ್ಲಿ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ. ದ.ಕ. ಜಿಲ್ಲೆಯ ಪುತ್ತೂರಿನ ಸಮೀಪ ಹಿಂದಾರು ಎಂಬಲ್ಲಿ ಅಡಿಕೆ , ತೆಂಗು, ಕರಿಮೆಣಸು ಕೃಷಿ ಭೂಮಿ ಹೊಂದಿದ್ದಾರೆ. ಮೂಲತಃ ಅಡ್ಯನಡ್ಕ ಸಮೀಪದ ಮುಳಿಯಾಲದವರಾಗಿದ್ದು ಕೃಷಿ ಭೂಮಿ ಹೊಂದಿದ್ದು, ಕೃಷಿ ಚಿಂತನೆಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ

ಹೊಸರುಚಿ | ಹಲಸಿನ ಹಣ್ಣಿನಿಂದ ಇಷ್ಟು ರುಚಿ ಸಿಗುತ್ತದಾ…? ಈ ಕಸ್ಟರ್ಡ್ ಮಿಸ್ ಮಾಡ್ಬೇಡಿ…!
March 14, 2026
8:05 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 14-03-2026 | ಇಂದು ಕರಾವಳಿ ಜಿಲ್ಲೆಯಲ್ಲಿ ಮಳೆ ಸಾಧ್ಯತೆ – ರಾಜ್ಯದ ಹಲವೆಡೆ ಗುಡುಗು ಮಳೆ ಮುನ್ಸೂಚನೆ
March 14, 2026
2:43 PM
by: ಸಾಯಿಶೇಖರ್ ಕರಿಕಳ
ಮಲೇಷ್ಯಾದಲ್ಲಿ ರಬ್ಬರ್ ಉತ್ಪಾದನೆ ಇಳಿಕೆ – ಭಾರತೀಯ ರೈತರಿಗೆ ಏನು ಸಂದೇಶ?
March 14, 2026
7:21 AM
by: ದ ರೂರಲ್ ಮಿರರ್.ಕಾಂ
ಕಾಡಾನೆ ದಾಳಿಗೆ ಕಾಫಿ ತೋಟದ ಮಾಲೀಕ ಬಲಿ; ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ
March 14, 2026
7:01 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror