ಮಂಗಳೂರು: ಕಂಬಳದ ಗದ್ದೆಯಲ್ಲಿ ಉಸೇನ್ ಬೋಲ್ಟ್ ದಾಖಲೆ ಮುರಿದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಯುವಕ ಶ್ರೀನಿವಾಸಗೌಡ ಅವರಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಟ್ವಿಟ್ಟರ್ ಖಾತೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಉಪರಾಷ್ಟ್ರಪತಿಗಳ ಅಧಿಕೃತ ಟ್ವೀಟ್ ಖಾತೆಯಿಂದ ಬರೆದಿರುವ ವೆಂಕಯ್ಯ ನಾಯ್ಡು, ‘ಕಂಬಳ ಕ್ರೀಡೆಯಲ್ಲಿ ಅಪರೂಪದ ಸಾಧನೆ ಮಾಡಿರುವ ಹಾಗೂ ಉಸೇನ್ ಬೋಲ್ಟ್ ಅವರ ಸಾಧನೆಯೊಂದಿಗೆ ಹೋಲಿಕೆಯಾಗುತ್ತಿರುವ ಶ್ರೀನಿವಾಸ್ ಗೌಡ ಅವರಿಗೆ ಅಭಿನಂದನೆಗಳು. ದೇಶದಲ್ಲಿ ಸುಪ್ತವಾಗಿರುವ ಹಲವಾರು ಪ್ರತಿಭೆಗಳಿವೆ. ಅದನ್ನು ಗುರುತಿಸಿ, ಪೋಷಿಸಿ ಸಂಪೂರ್ಣವಾದ ಸಾಮರ್ಥ್ಯವನ್ನು ಹೊರತರುವ ಅಗತ್ಯವಿದೆ’ ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ. ಅಲ್ಲದೆ ಶ್ರೀನಿವಾಸರ ಪ್ರತಿಭೆಯನ್ನು ಗುರುತಿಸಿ, ಒಲಿಂಪಿಕ್ಸ್ ಗೆ ಅವರ ಕೌಶಲವನ್ನು ಅಣಿಗೊಳಿಸಲು ತರಬೇತಿ ನೀಡುವುದಾಗಿ ತಿಳಿಸಿರುವ ಕೇಂದ್ರ ಕ್ರೀಡಾ ಸಚಿವ ಕಿರೆಣ್ ರಿಜಿಜು ಅವರಿಗೆ ನನ್ನ ಅಭಿನಂದನೆಗಳು ಎಂದು ತಿಳಿಸಿದ್ದಾರೆ.
ಫೆ. 1ರಂದು ಮಂಗಳೂರು ಸಮೀಪದ ಐಕಳ ಎಂಬಲ್ಲಿ ನಡೆದ ತುಳುನಾಡಿನ ಸಾಂಪ್ರದಾಯಿಕ ಕಂಬಳ ಕ್ರೀಡೆಯಲ್ಲಿ ಶ್ರೀನಿವಾಸ ಗೌಡ ಅವರು 142.50 ಮೀಟರ್ ಕರೆ (ಕಂಬಳ ಕೋಣಗಳ ಟ್ರ್ಯಾಕ್) ಯನ್ನು ಕೇವಲ 13.62 ಸೆಕೆಂಡ್ ಗಳಲ್ಲಿ ಕ್ರಮಿಸಿದ್ದಾರೆ. ಇದು ಕಂಬಳ ಕ್ರೀಡೆಯಲ್ಲಿ ಇದುವರೆಗಿನ ಅತ್ಯಂತ ವೇಗದ ದಾಖಲೆಯಾಗಿದ್ದು ಶ್ರೀನಿವಾಸ ಗೌಡ ಅವರನ್ನು ಉಸೇನ್ ಬೋಲ್ಟ್ ಜೊತೆಗೆ ಹೋಲಿಸಲಾಗುತ್ತಿದೆ.
ಶ್ರೀನಿವಾಸ್ ಅವರ ಸಾಧನೆ ಗುರುತಿಸಿರುವ ಕಾರ್ಮಿಕ ಇಲಾಖೆಯ ಮಣಿವೆಣ್ಣನ್ ಅವರು ಅಭಿನಂದಿಸಿದ್ದಾರೆ. ಫೆ.17ರಂದು ಕುಮಾರಕೃಪಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಶ್ರೀನಿವಾಸ ಗೌಡ ಭೇಟಿಯಾಗಲಿದ್ದು , ಮುಖ್ಯಮಂತ್ರಿಗಳು ಗೌರವಿಸಲಿದ್ದಾರೆ.