ಸುಳ್ಯ: ವಿವಿಧ ವಸತಿ ಯೋಜನೆಯಡಿ ತಾಲೂಕಿನ 245 ಮಂದಿ ಫಲಾನುಭವಿಗಳಿಗೆ ಸಹಾಯಧನ ಹಣ ಬಿಡುಗಡೆಗೆ ಬಾಕಿ ಇರುವ ಅಂಶ ಸುಳ್ಯ ತಾ.ಪಂ.ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು. ತಾ.ಪಂ.ಸಾಮಾನ್ಯ ಸಭೆಯು ಅಧ್ಯಕ್ಷ ಚನಿಯ ಕಲ್ತಡ್ಕ ಅಧ್ಯಕ್ಷತೆಯಲ್ಲಿ ತಾ.ಪಂ.ಸಭಾಂಗಣದಲ್ಲಿ ನಡೆಯಿತು.
ಸದಸ್ಯ ಅಬ್ದುಲ್ ಗಪೂರ್ ವಿಷಯ ಪ್ರಸ್ತಾವಿಸಿ 2018-19ನೇ ಸಾಲಿನಲ್ಲಿ ವಸತಿ ಯೋಜನೆಯಡಿ ಗ್ರಾ.ಪಂ.ಗೆ ತಲಾ 20ರಂತೆ ಮನೆ ಮಂಜೂರಾಗಿತ್ತು. ಅರ್ಹ ಫಲಾನುಭವಿಗಳು ಅದನ್ನು ನಂಬಿ ಹಳೆ ಮನೆ ಕೆಡವಿದ್ದರು. ಆದರೆ ಆ ಯೋಜನೆ ಅರ್ಧದಲ್ಲೇ ಸ್ಥಗಿತಗೊಂಡಿದೆ. ಇದನ್ನು ಕೈ ಬಿಟ್ಟ ಬಗ್ಗೆ ಸರಕಾರದ ಆದೇಶ ಎಲ್ಲೂ ಸಿಗುತ್ತಿಲ್ಲ. ಜತೆಗೆ ಈಗಾಗಲೇ ಬೇರೆ ಬೇರೆ ಯೋಜನೆಯಡಿ ಮನೆ ನಿರ್ಮಿಸಿದ ಫಲಾನುಭವಿಗಳಿಗೆ ಒಂದು ವರ್ಷ ಕಳೆದರೂ ಸಹಾಯಧನ ಬಂದಿಲ್ಲ ಎಂದು ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎನ್.ಭವಾನಿಶಂಕರ ಹಣ ಬಿಡುಗಡೆಗೆ ಬಾಕಿ ಇರುವ ಫಲಾನುಭವಿಗಳಿಗೆ ಶೀಘ್ರ ಮೊತ್ತ ಬಿಡುಗಡೆಗೊಳಿಸುವ ಬಗ್ಗೆ ಸರಕಾರ ಮಟ್ಟದಲ್ಲಿ ಸಭೆ ನಡೆಸಿ ಜಿಲ್ಲಾಡಳಿತ ಮೂಲಕ ಮಾಹಿತಿ ನೀಡಿದೆ. ಗ್ರಾ.ಪಂ. ವ್ಯಾಪ್ತಿಗೆ ನೀಡಿದ ವಸತಿ ಮಂಜೂರಾತಿ ಪ್ರಕಾರ ನಾವು ಫಲಾನುಭವಿಗಳ ಪಟ್ಟಿಯನ್ನು ಆನ್ಲೈನ್ ಮೂಲಕ ಸಲ್ಲಿಸಿದ್ದೇವೆ. ಆದರೆ ಚುನಾವಣೆ ಬಳಿಕ ಅದು ಮತ್ತೆ ತೆರದಿಲ್ಲ. ಹೊಸ ಮನೆಗಿಂತ ನಿರ್ಮಾಣ ಹಂತದಲ್ಲಿರುವ ಮನೆಗಳಿಗೆ ವಸತಿ ನಿಗಮವು ಬಾಕಿ ಇರುವ ಮೊತ್ತ ಪಾವತಿಸಲು ಮೊದಲ ಆದ್ಯತೆ ನೀಡಿದೆ ಎಂದರು.
ಸಾಲಮನ್ನಾ ಫಲಾನುಭವಿಗಳ ಖಾತೆಗೆ ಪಾವತಿಯಾಗದ ಹಣ: ಸರ್ಕಾರ ಘೋಷಣೆ ಮಾಡಿದ ಸಾಲಮನ್ನಾ ಫಲಾನುಭವಿಗಳ ಖಾತೆಗೆ ನ.30 ರೊಳಗೆ ಹಣ ಪಾವತಿ ಆಗುತ್ತದೆ ಎಂದು ಈ ಹಿಂದಿನ ಸಭೆಯಲ್ಲಿ ಸಹಕಾರ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದ್ದರು. ಆದರೆ ಹಣ ಬಿಡುಗಡೆ ಆಗಿಲ್ಲ. ಮಾತ್ರವಲ್ಲದೆ ಈ ಬಾರಿ ತಾಲೂಕು ಪಂಚಾಯಿತಿ ಸಭೆಗೂ ಅಧಿಕಾರಿಗಳು ಬಂದಿಲ್ಲ ಎಂದು ತಾ.ಪಂ.ಸದಸ್ಯ ರಾಧಾಕೃಷ್ಣ ಬೊಳ್ಳೂರು ಹೇಳಿದರು. ಹಾಗಾಗಿ ಅಧಿಕಾರಿ ಈ ಸಭೆಗೆ ತಕ್ಷಣ ಬರುವಂತೆ ಆಗ್ರಹಿಸಿದರು. ಇದಕ್ಕೆ ಸದಸ್ಯರಾದ ಆಶೋಕ್ ನೆಕ್ರಾಜೆ, ಅಬ್ದುಲ್ ಗಫೂರ್ ಧ್ವನಿಗೂಡಿಸಿ, ಉಳಿತಾಯ ಖಾತೆ ಸರಿಪಡಿಸಿದ ಫಲಾನುಭವಿಗಳಿಗೂ ಹಣ ಬಂದಿಲ್ಲ ಎಂದರು. ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ ಮಾತನಾಡಿ ಅಧಿಕಾರಿ ಸಭೆಗೆ ಗೈರು ಆಗುವುದು ಸರಿಯಲ್ಲ. ಸಭೆಗೆ ಬರಲಿ ಎಂದು ಒತ್ತಾಯಿಸಿದರು. ಬಳಿಕ ತಾ.ಪಂ.ಅಧ್ಯಕ್ಷ ಹಾಗೂ ಇಓ ಸಹಕಾರ ಇಲಾಖೆಯ ಅಧಿಕಾರಿಯನ್ನು ಸಂರ್ಪಕಿಸಿ ಸಭೆಗೆ ಬರುವಂತೆ ಸೂಚಿಸಿದರು. ಸಭೆಗೆ ಗೈರು ಆದ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಕಲ್ಮಕಾರು ಗ್ರಾಮದ ಗೂನಡ್ಕ-ಶಕ್ತಿನಗರದಲ್ಲಿ ರಬ್ಬರ್ ತೋಟದ ನಡುವೆ ವಿದ್ಯುತ್ ಮಾರ್ಗ ಇದ್ದು, ಇದರಿಂದ ಪ್ರತಿ ವರ್ಷ ಅಗ್ನಿ ಅವಘಡಗಳು ಸಂಭವಿಸುತ್ತಿವೆ. ಈ ಹಿಂದೆ ಈ ಲೈನ್ ಮಾರ್ಗ ಬದಲಾವಣೆಗೆ ಮುಂದಾಗಿ ವಿದ್ಯುತ್ ಕಂಬ ತರಲಾಗಿತ್ತು. ಅದು ಅರ್ಧದಲ್ಲೇ ಬಾಕಿ ಆಗಿದೆ ಎಂದು ಸದಸ್ಯ ಉದಯ ಕೊಪ್ಪಡ್ಕ ಗಮನ ಸೆಳೆದರು. ಲೈನ್ ಮಾರ್ಗ ಬದಲಾವಣೆಗೆ ಮೆಸ್ಕಾಂನಲ್ಲಿ ಅನುದಾನ ಇಲ್ಲ ಎಂಬ ಮೆಸ್ಕಾಂ ಇಂಜಿನಿಯರ್ ಉತ್ತರಕ್ಕೆ ತಾ.ಪಂ.ಅದ್ಯಕ್ಷ ಚನಿಯ ಕಲ್ತಡ್ಕ, ಸದಸ್ಯ ರಾಧಾಕೃಷ್ಣ ಬೊಳ್ಳೂರು ಆಕ್ಷೇಪ ವ್ಯಕ್ತಪಡಿಸಿದರು. ವಾರದೊಳಗೆ ತೆರವು ಮಾಡುವಂತೆ ಅಧ್ಯಕ್ಷರು ಸೂಚಿಸಿದರು. ಸುಳ್ಯ-ಉಬರಡ್ಕ ಹಾಗೂ ಸುಳ್ಯ-ದೊಡ್ಡತೋಟ-ಮರ್ಕಂಜ ನಡುವೆ ಹೆಚ್ಚುವರಿ ಬಸ್ ಓಡಾಟಕ್ಕೆ ಕೆಎಸ್ಆರ್ಟಿಸಿ ಗಮನಕ್ಕೆ ತಂದರೂ, ಬೇಡಿಕೆ ಈಡೇರಿಲ್ಲ ಎಂದು ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ ಪ್ರಸ್ತಾವಿಸಿದರು. ದೇವರಹಳ್ಳಿ ಶಾಲಾ ಜಾಗದ ವಿಚಾರದ ಸಮಸ್ಯೆ ಬಗೆಹರಿದಿದೆ. ಈ ಶಾಲೆಯಲ್ಲಿ ಮಕ್ಕಳ ಸೇರ್ಪಡೆ ಇಲ್ಲದೆ ಈ ವರ್ಷ ಮುಚ್ಚಿದೆ. ಈ ಬಾರಿ ಸ್ಥಳೀಯ ಅಂಗನವಾಡಿಯಲ್ಲಿ 7 ಮಕ್ಕಳಿದ್ದು, ಅವರನ್ನು ಮುಂದಿನ ವರ್ಷದ ಶೈಕ್ಷಣಿಕ ಅವಧಿಯಲ್ಲಿ ಸೇರಿಸುವ ಪ್ರಯತ್ನ ಮಾಡಿದರೆ ಶಾಲೆ ಉಳಿಸಿಕೊಳ್ಳಬಹುದು ಎಂದು ಸದಸ್ಯ ಆಶೋಕ್ ನೆಕ್ರಾಜೆ ಹೇಳಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಶಾಲೆ ಪುನಾರಾರಂಭಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.
ತಾ.ಪಂ.ಉಪಾಧ್ಯಕ್ಷೆ ಶುಭದಾ ಎಸ್.ರೈ, ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು ವೇದಿಕೆಯಲ್ಲಿ ಉಪಸ್ಥಿತರಿದ್ದರು.