ಪುತ್ತೂರು: ಹವ್ಯಕ ಭಾಷೆಯು ಕಾವ್ಯದ ರೂಪವನ್ನು ಹೊಂದಿದೆ. ಆದರೆ ಇಂದು ಹವ್ಯಕ ಭಾಷೆಯಲ್ಲಿ ಅಂಗ್ಲಭಾಷೆಯು ಹೊಂದಿಕೊಂಡಿರುವುದರಿಂದ ಈ ಭಾಷೆಯ ಪದಗಳು ಸ್ವಲ್ಪ ರೀತಿಯ ಬದಲಾವಣೆಯನ್ನು ತಂದಿದೆ. ಹಾಗಾಗಿ ಆಂಗ್ಲ ಭಾಷೆಯನ್ನು ಹವಿಗನ್ನಡದೊಂದಿಗೆ ಸಂಯೋಜಿಸಿ ಮಾತನಾಡುವುದರಿಂದ ಭಾಷಾ ಸ್ಪಷ್ಟನೆಯನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಭಾಷೆಯ ಪದಪುಂಜಗಳು ಮರೆಯಾಗುತ್ತಿವೆ. ಇದರಿಂದ ಹವಿಗನ್ನಡದ ಬಳಕೆಯು ಕಡಿಮೆಯಾಗುತ್ತ ಹೋಗಿದೆ ಎಂದು ಮುಂಬೈ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ತಾಳ್ತಜೆ ವಸಂತ ಕುಮಾರ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ ವಿವೇಕಾನಂದ ಸೆಂಟರ್ ಫಾರ್ ರಿಸರ್ಚ್ ಸ್ಟಡೀಸ್ ಆಶ್ರಯದಲ್ಲಿ ಹಾಗೂ ಕನ್ನಡ ವಿಭಾಗದ ಸಹಯೋಗದಲ್ಲಿ ಶನಿವಾರ ನಡೆದ ‘ಹವಿಗನ್ನಡ ಭಾಷೆ ಮತ್ತು ಸಾಹಿತ್ಯ’ ವಿಷಯದ ಕುರಿತ ರಾಜ್ಯಮಟ್ಟದ ವಿಚಾರಗೋಷ್ಠಿಯ ಸಮಾರೋಪದಲ್ಲಿ ಸಮಾರೋಪ ಭಾಷಣದಲ್ಲಿ ಮಾತನಾಡಿದರು.
ಸಂಸ್ಕೃತಿಯ ಮೇಲೆ ಹೊರಗಿನ ಅಂಶಗಳು ಪ್ರಭಾವ ಬೀರಿರುವುದರಿಂದ ಈ ಪದಪ್ರಯೋಗದಲ್ಲಿ ಬದಲಾವಣೆಯನ್ನು ಕಾಣಬಹುದು. ಆದುದರಿಂದ ಕಾಲ ಬದಲಾದಂತೆ ಈ ಭಾಷೆಯು ಬದಲಾಗುತ್ತಲೇ ಇದೆ. ಇಂದು ಹವಿಗನ್ನಡವನ್ನು ನೋಡಿದರೆ ಮಗುವಿನ ಮಾತುಗಳನ್ನು ಗಮನಿಸಿದರೆ ಹೇಗೆ ತಪ್ಪುಗಳು ಇರುತ್ತದೆಯೋ ಅದೇ ರೀತಿ ಭಾಷಾ ಬೆಳವಣಿಗಯ ಹಂತವನ್ನು ಗಮನಿಸಬಹುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ವಿ.ಬಿ. ಅರ್ತಿಕಜೆ ಮಾತನಾಡಿ, ಹವಿಗನ್ನಡ ಭಾಷೆಯು ಇಂದು ಮುಳುಗಿ ಹೋಗುವ ಸ್ಥಿತಿಯನ್ನು ಹೊಂದಿದೆ. ಆಂಗ್ಲಭಾಷೆಗೆ ಮನಸೋತಿರುವುದು, ಭಾಷೆಯ ಬಳಕೆಯನ್ನು ಮಾಡದೆ ಇರುವುದು ಇದಕ್ಕೆ ಕಾರಣ. ಆದುದರಿಂದ ಎಲ್ಲ್ಲರೂ ಹವಿಗನ್ನಡವನ್ನು ಗೌರವಿಸಿ, ಉಳಿಸಬೇಕು ಹಾಗೂ ಮುಂದಿನ ಪೀಳಿಗೆಯವರು ಕೂಡ ಗೌರವಿಸಬೇಕೆಂದು ಹೇಳಿದರು.
ಈ ಸಂದರ್ಭ ಕಾರ್ಯಕ್ರಮದ ಸಂಯೋಜಕ ಹಾಗೂ ಕನ್ನಡದ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ಎಚ್.ಜಿ. ಅವರು ಹವ್ಯಕ ಅಕಾಡೆಮಿ ಬಗ್ಗೆ ಶಿಫಾರಸು ಮಂಡಿಸಿದರು. ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ. ಎನ್. ಉಪಸ್ಥಿತರಿದ್ದರು.
ಕಾಲೇಜಿನ ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕ ಡಾ. ವಿಜಯಕಾರಂತ ಗಣಪತಿ ರಮೇಶ್ ಸ್ವಾಗತಿಸಿದರು. ಸ್ನಾತಕೋತ್ತರ ವಿಭಾಗಗಳ ಹಾಗೂ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕಿ ಡಾ. ವಿಜಯಸರಸ್ವತಿ ಬಿ. ಕಾರ್ಯಕ್ರಮ ನಿರೂಪಿಸಿದರು.