ಕೊಡಗಿನ ಸಾವಿರ ಏಕರೆ ಪ್ರದೇಶದಲ್ಲಿ ಮರಗಿಡಗಳನ್ನು ಬೆಳೆಯಿರಿ : ಸದ್ಗುರು ಜಗ್ಗಿ ವಾಸುದೇವ್ ಸಲಹೆ

September 4, 2019
9:00 AM

ಮಡಿಕೇರಿ :ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿರುವ ಜೀವನದಿ ಕಾವೇರಿಯ ಉಳಿವಿಗಾಗಿನ ‘ಕಾವೇರಿ ಕೂಗು’ ಅಭಿಯಾನಕ್ಕೆ ಕೊಡಗು ಹೆಚ್ಚಿನ ಸ್ಪಂದನ ನೀಡುವ ಅಗತ್ಯವಿದೆ ಎಂದು ಮನವಿ ಮಾಡಿರುವ ಈಶ ಫೌಂಡೇಶನ್‍ನ ಸದ್ಗುರು ಜಗ್ಗಿ ವಾಸುದೇವ್, ಕನಿಷ್ಠ ಜಿಲ್ಲೆಯ ಒಂದು ಸಾವಿರ ಏಕರೆ ಪ್ರದೇಶದಲ್ಲಿ ಮರಗಿಡಗಳನ್ನು ಬೆಳೆಸಲು ಇಲ್ಲಿನ ರೈತರು ಮುಂದಾಗಬೇಕೆಂದು ಕರೆ ನೀಡಿದ್ದಾರೆ.

ನಗರದ ಕ್ರಿಸ್ಟಲ್ ಹಾಲ್‍ನಲ್ಲಿ ಮಂಗಳವಾರ ನಡೆದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಸದ್ಗುರು, ಕಾವೇರಿಯ ಪುನರುಜ್ಜೀವನಕ್ಕೆ ಪೂರಕವಾಗಿ, ಜಿಲ್ಲೆಯ ಬೆಳೆಗಾರರು ತಮ್ಮ ಕಾಫಿ ತೋಟಗಳಲ್ಲೆ ಅವರಿಗಿಷ್ಟ ಬಂದಂತಹ ಮರಗಿಡಗಳನ್ನು ಈ ಅಭಿಯಾನದ ಮೂಲಕ ಬೆಳೆಸುವಂತೆ ಸಲಹೆ ನಿಡಿದರು. ಜಿಲ್ಲೆಯಲ್ಲಿ ಗಟ್ಟಿ ಮರಗಳನ್ನು ಬೆಳೆಯಲು ಪೂರಕ ವಾತಾವರಣವಿದ್ದು, ಇಲ್ಲಿನ ಜನತೆ ಇದರತ್ತ ಆಸಕ್ತರಾಗುವಂತೆ ತಿಳಿಸಿದರು.

ಮರದ ಹಕ್ಕು ಬೇಕು:ಕಾವೇರಿ ಕೂಗು ಅಭಿಯಾನದಡಿ ಮರಗಿಡಗಳನ್ನು ಬೆಳೆಯುವ ಮೂಲಕ ಅರಣ್ಯ ಕೃಷಿಯತ್ತ ಜನರನ್ನು ಆಸಕ್ತರನ್ನಾಗಿ ಮಾಡಲು ಉದ್ದೇಶಿಸಿದೆ. ಆದರೆ, ತಮ್ಮ ಜಾಗದಲ್ಲಿರುವ ಮರದ ಹಕ್ಕು ರೈತನಿಗೆ ಇಲ್ಲದ ಸ್ಥಿತಿ ಇದೆ. ಆದರೆ, ಕೃಷಿಕ ತನ್ನ ಜಾಗದಲ್ಲಿ ಬೆಳೆದ ಮರ ಸೇರಿದಂತೆ ಎಲ್ಲ ಉತ್ಪನ್ನಗಳು ಆತನಿಗೆ ಸೇರಬೇಕು ಮತ್ತು ಅದನ್ನು ಆತ ತನ್ನಿಷ್ಟದಂತೆ ಬಳಸುವ ಅವಕಾಶ ದೊರಕುವುದು ಅತ್ಯವಶ್ಯವೆಂದು ಸದ್ಗುರುಗಳು ಪ್ರತಿಪಾದಿಸಿದರು.

ಸರಕಾರದೊಂದಿಗೆ ಚರ್ಚೆ:ಕಾವೇರಿ ಕೂಗು ಅಭಿಯಾನದಡಿ ಕಾವೇರಿಯ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ನದಿ ಪಾತ್ರದ ಪ್ರದೇಶಗಳಲ್ಲಿ ರೈತರ ಜಮೀನುಗಳಲ್ಲಿ ಮರಗಿಡಗಳನ್ನು ಬೆಳೆಯವ ವಿಚಾರ ಮತ್ತು ಬೆಳೆದ ಮರದ ಹಕ್ಕಿನ ವಿಚಾರಗಳ ಬಗ್ಗೆ ಇದೇ ಸೆ. 18 ರಂದು ಈಶ ಫೌಂಡೇಶನ್ ರಾಜ್ಯ ಸರ್ಕಾರದೊಂದಿಗೆ ಮಾತುಕತೆ ನಡೆಸಲಿದೆ. ಈ ಸಭೆಯಲ್ಲಿ ಮುಖ್ಯಮಂತ್ರಿಗಳೊಂದಿಗೆ ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಕಾವೇರಿ ಕಾಲಿಂಗ್: ಕಾವೇರಿ ನದಿ ಪಾತ್ರದ ಪ್ರದೇಶಗಳಲ್ಲಿನ ಹಸಿರ ವಲಯ ಅತ್ಯಂತ ಗಂಭೀರ ಸ್ವರೂಪದಲ್ಲಿ ಕಣ್ಮರೆಯಾಗುತ್ತಾ ಸಾಗಿದ್ದು, ಕಳೆದ ಏಳೆಂಟು ವರ್ಷಗಳಲ್ಲಿ ಕಾವೇರಿ ಆತಂಕಕಾರಿ ಸ್ವರೂಪದಲ್ಲಿ ಕ್ಷೀಣಿಸುತ್ತಿದ್ದಾಳೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ‘ಕಾವೇರಿ ಕಾಲಿಂಗ್’ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು. ತಲಕಾವೇರಿಯಿಂದ ಪೂಂಪುಹಾರ್‍ವರೆಗೆ ಕಾವೇರಿ ನದಿ ಹರಿಯುವ ನದಿಯ ಇಕ್ಕೆಲಗಳಲ್ಲಿ 242 ಕೋಟಿ ಮರಗಿಡಗಳನ್ನು ಬೆಳೆಸುವ ಉದ್ದೇಶವನ್ನು ಹೊಂದಲಾಗಿದೆ. ಇದರ ಅನುಷ್ಟಾನದೊಂದಿಗೆ ಕಾವೇರಿಯ ಸ್ವರೂಪ ಬದಲಾಗುವುದರೊಂದಿಗೆ, ನದಿ ಪಾತ್ರದಲ್ಲಿ ಅರಣ್ಯ ಕೃಷಿ ನಡೆಸಿದ ರೈತ ಸಮುದಾಯವು ಅಭಿವೃದ್ಧಿಯನ್ನು ಕಾಣಲು ಸಾಧ್ಯವಿದೆಯೆಂದು ಸದ್ಗುರು ಹೇಳಿದರು.ಕಾವೇರಿ ನದಿ ಕಳೆದ ಕೆಲ ವರ್ಷಗಳಲ್ಲಿ ಕ್ಷೀಣಿಸುತ್ತಿದ್ದು, ವರ್ಷದ ಐದೂವರೆ ತಿಂಗಳಷ್ಟು ಅವಧಿಯಲ್ಲಿ ಕಾವೇರಿ ನದಿಯ ನೀರು ಸಮುದ್ರವನ್ನೆ ಸೇರುವುದಿಲ್ಲ. ಕಾರಣ, ನದಿ ಸಮುದ್ರ ಸೇರುವ ಪ್ರದೇಶದಿಂದ ಹಲವು ಕಿ.ಮೀ. ದೂರದಲ್ಲೆ ಬತ್ತಿ ಹೋಗುತ್ತಿರುವುದಾಗಿ ಕಳವಳ ವ್ಯಕ್ತಪಡಿಸಿ, ಇದಕ್ಕೆ ಕಾರಣ ನೀರಿನ ಅಸಮರ್ಪಕವಾದ ಬಳಕೆಯೇ ಆಗಿದೆಯೆಂದು ನೊಂದು ನುಡಿದರು. ಈ ಗಂಭೀರ ಸಮಸ್ಯೆಯ ಬಗ್ಗೆ ನಮಗೆಲ್ಲರಿಗು ಅರಿವಿದ್ದು, ಪರಿಹಾರ ಕ್ರಮದ ಬಗ್ಗೆಯೂ ತಿಳುವಳಿಕೆ ಇದೆಯಾದ್ದರಿಂದ, ಕಾವೇರಿ ಕೂಗು ಅಭಿಯಾನದ ಮೂಲಕ ಕಾವೇರಿಯ ಪುನಶ್ಚೇತನಕ್ಕೆ ಕೈಜೋಡಿಸುವಂತೆ ಕರೆ ನಿಡಿದರು.

ಸಭೆಯಲ್ಲಿ ಸಂಸದೆ ಶೊಭಾ ಕರಂದ್ಲಾಜೆ, ಶಾಸಕ ಕೆ.ಜಿ. ಬೋಪಯ್ಯ, ನಿವೃತ್ತ ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ, ಚಲನ ಚಿತ್ರ ನಟರಾದ ದಿಗಂತ್ ಮತ್ತು ರಕ್ಷಿತ್ ಶೆಟ್ಟಿ ಉಪಸ್ಥಿತರಿದ್ದರು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಎತ್ತುಗಳಿಂದ ಡ್ರೋನ್‌ವರೆಗೆ… ಇದು ಭಾರತದ ಕೃಷಿಯ 79 ವರ್ಷಗಳ ಪಯಣ..!
August 15, 2026
7:42 AM
by: ದ ರೂರಲ್ ಮಿರರ್.ಕಾಂ
ತೀವ್ರ ವಿರೋಧದ ಹಿನ್ನೆಲೆ – ರಾಜ್ಯದಲ್ಲಿ ಗುಟ್ಕಾ ನಿಷೇಧ ಹಿಂತೆಗೆದುಕೊಳ್ಳಲು ಸರ್ಕಾರ ನಿರ್ಧಾರ – ಹೊರಬೀಳದ ಅಧಿಕೃತ ಆದೇಶ..!
August 15, 2026
7:18 AM
by: ದ ರೂರಲ್ ಮಿರರ್.ಕಾಂ
ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?
August 14, 2026
7:14 AM
by: ಮಹೇಶ್ ಪುಚ್ಚಪ್ಪಾಡಿ
ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ
August 13, 2026
2:01 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror