ಎಚ್ಚರಿಕೆ ಪ್ರಕೃತಿ ಮುನಿದಿದೆ…! ಆರ್ದ್ರಾ ಮಳೆ ಇಲ್ಲವಾದರೆ ದರಿದ್ರ….!

June 26, 2019
2:28 PM

 ಬಾಳಿಲದ ಪಿ ಜಿ ಎಸ್ ಎನ್ ಪ್ರಸಾದ್  ಮಳೆಯೊಂದಿಗೆ ಮಾತುಕತೆ ನಡೆಸುತ್ತಾರೆ. ಈ ಬಾರಿ ಅವರು ನಡೆಸಿದ ಮಾತುಕತೆ ಕೇಳಿ ದಿಗಿಲು ಹುಟ್ಟಿಸಿದೆ. ಪ್ರಕೃತಿಯನ್ನು, ನಮ್ಮ ಪರಿಸರವನ್ನು ವಿವಿಧ ಮಾರ್ಗದ ಮೂಲಕ ಹಾಳು ಮಾಡುತ್ತಾ ನಾವು ಯಾವುದೋ ಉದ್ದೇಶ ಇಲ್ಲದ , ಅರ್ಥ ಇಲ್ಲದ ಹೋರಾಟದಲ್ಲಿ ಕಾಲ ಕಳೆಯುತ್ತಿದ್ದೇವೆ. ಪರಿಸರ ಹೋರಾಟ ಮಾಡುವ,  ಕಾಳಜಿ ಇರುವ ಮಂದಿಯನ್ನು ಮರೆತಿದ್ದೇವೆ. ಪರಿಸರ ಅಳಿದರೆ ಮಳೆ ಇಲ್ಲ, ವಾತಾವರಣದಲ್ಲಿ ಏರುಪೇರಾಗುತ್ತದೆ ಎಂದು ಪರಿಸರ ಹೋರಾಟಗಾರರು ಹೇಳಿದರೂ ಕೇಳಲಿಲ್ಲ. ಈಗಲಾದರೂ ನಿಜವಾದ ಹೋರಾಟಕ್ಕೆ ಬೆಂಬಲವಾಗಿ ನಿಲ್ಲೋಣ, ಇದು ನಮಗಾಗಿ ಅಲ್ಲ ಭವಿಷ್ಯಕ್ಕಾಗಿ. ಈಗ ಮಳೆ ಇಲ್ಲ ಎನ್ನುವುದೇ ದೊಡ್ಡ ವಿಷಯವಾದರೆ ಈ ಹಿಂದೆ ಇದನ್ನೇ ಅನೇಕ ಪರಿಸರ ಹೋರಾಟಗಾರರು ಹೇಳಿದ್ದಾರೆ. ಪಿ ಜಿ ಎಸ್ ಎನ್ ಪ್ರಸಾದ್ ಮಳೆ ಲೆಕ್ಕ ಇಟ್ಟು ದಾಖಲೆ ಸಹಿತ ಹೇಳಿದ್ದರು. ಈಗ ನಿಜವಾಗುತ್ತಿದೆ. ಇನ್ನಾದರೂ ಭವಿಷ್ಯಕ್ಕಾಗಿ ಎಚ್ಚರವಾಗೋಣ. ಇದು ಸುಳ್ಯನ್ಯೂಸ್.ಕಾಂ ಕಾಳಜಿ. ಇದು ನಮ್ಮ ಆಂದೋಲನ. 

 

 

ಪಿ ಜಿ ಎಸ್ ಎನ್ ಪ್ರಸಾದ್  ಅವರ ಮಳೆಯೊಂದಿಗಿನ ಮಾತುಕತೆ ಹೀಗೆ ನಡೆಯುತ್ತದೆ…..

 

 

 

ಸಿಡಿಲು ಮಿಂಚಿನ ಐಭೋಗ….
ಕೆಂಧೂಳು ಎದ್ದೂ ಮುಗಿಲ ಮೋಡ ಕವಿದೂ…
ಹಗಲ್ ಇರುಳಾದೂ ಜಗಕೆಲ್ಲ – ಮಳೆರಾಯ
ಮುಗಿಲಿಳಿದು ಬರವೋ ಸಡಗರ – ಮಳೆ ಸಡಗರದ ಹಾಡು

ಕೃಷಿಯ ಪ್ರಾಥಮಿಕ ಅವಶ್ಯಕತೆ ಎಂದರೆ ಮಳೆ. ಹೀಗಾಗಿ ಮಳೆಯ ಬಗ್ಗೆ ಒಂದಷ್ಟು ಮಾಹಿತಿ ಅರಿಯುವುದು ಮುಖ್ಯ.

ಮೇಷ- ಮೀನ ಹನ್ನೆರಡು ರಾಶಿಗಳನ್ನು ಸೂರ್ಯನ ಚಲನೆಯೊಂದಿಗೆ ಇಪ್ಪತ್ತೇಳು ಮಹಾನಕ್ಷತ್ರಗಳಾಗಿ ವಿಂಗಡಿಸಿ, ಇಂತಹ ನಕ್ಷತ್ರದ ಅವಧಿಯಲ್ಲಿ ವಾತಾವರಣ ಹೀಗೇ ಇರುತ್ತದೆ ಎಂಬ ಕರಾರುವಕ್ಕಾದ ಲೆಕ್ಕಾಚಾರವನ್ನು ಈ ಜಗತ್ತಿನ ಮೊಟ್ಟ ಮೊದಲ ಜಲವಿಜ್ಞಾನಿಯೂ,ಖ್ಯಾತ ಗಣಿತಜ್ಞನೂ ಆದ ವರಾಹಮಿಹಿರ ಪ್ರಪಂಚದ ಮುಂದಿಟ್ಟಿದ್ದರು. ಎಪ್ರಿಲ್ ನಿಂದ ಮಾರ್ಚಿ ತನಕ ಹಂಚಿ ಹೋಗುವ ಅಶ್ವಿನಿ ನಕ್ಷತ್ರದಿಂದ ರೇವತಿ ನಕ್ಷತ್ರದವರೆಗೆ ಸಾಮಾನ್ಯವಾಗಿ ಹನ್ನೆರಡರಿಂದ ಹದಿನಾಲ್ಕು ದಿನಗಳಲ್ಲಿ ಸೂರ್ಯನು ಒಂದೊಂದು ನಕ್ಷತ್ರವನ್ನು ಪ್ರವೇಶಿಸುವುದನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಮಹಾನಕ್ಷತ್ರಗಳೆಂದು ಕರೆಯುವುದು ವಾಡಿಕೆ.

ಇಪ್ಪತ್ತೇಳರಲ್ಲಿ ಸುಮಾರು ಹದಿನೇಳು ನಕ್ಷತ್ರಗಳು ಮಳೆಯ ದೃಷ್ಟಿಯಿಂದ ಪ್ರಮುಖವಾದವುಗಳು.

ಬೇಸಗೆಯಲ್ಲಿ ಮಳೆ ತರುವ ರೇವತಿ,ಅಶ್ವಿನಿ,ಭರಣಿ,ಕೃತ್ತಿಕಾ,ರೋಹಿಣಿ.

ಮುಂಗಾರಿನಲ್ಲಿ ಮೃಗಶಿರಾ,ಆರ್ದ್ರಾ,ಪುನರ್ವಸು,ಪುಷ್ಯ, ಆಶ್ಲೇಷ, ಮಘ .

ಹಿಂಗಾರಿನಲ್ಲಿ ಪೂರ್ವಫಲ್ಗುಣಿ ಅಥವಾ ಹುಬ್ಬಾ,ಉತ್ತರಾ,ಹಸ್ತಾ,ಸ್ವಾತಿ,ವಿಶಾಖಾ, ಅನುರಾಧಾ ಇವೇ ಆ ಮಹಾ/ಮಳೆ ನಕ್ಷತ್ರಗಳು.

ಜೂನ್ 21/22 ರಿಂದ ಜುಲೈ 4 / 5 ಮಳೆ ನಕ್ಷತ್ರ ಆರ್ದ್ರಾದ ವೈಭವ. ಆರ್ದ್ರಾ ನಕ್ಷತ್ರಕ್ಕೆ ಅದರದೇ ಆದ ವಿಶೇಷತೆಯಿದೆ. “ಆದರೆ ಆರ್ದ್ರಾ – ಇಲ್ಲವಾದರೆ ದರಿದ್ರ” ಹಿರಿಯರು ಹೇಳಿದ ಮಾತು. ಈ ನಕ್ಷತ್ರದ ಅವಧಿಯಲ್ಲಿ ಗಿಡದ ಗೆಲ್ಲು ಮುರಿದು ಊರಿದರೂ ಚಿಗುರೊಡೆದು ಬೆಳೆಯಬಲ್ಲುದು ಎಂಬುದು ಅಂಬೋಣ. ಎಲ್ಲ ಕೃಷಿ ಚಟುವಟಿಕೆಗಳು ಮುಂದುವರಿಯಬೇಕಾದರೆ ಆರ್ದ್ರಾ ಮಳೆ ಚೆನ್ನಾಗಿ ಸುರಿಯಲೇಬೇಕು. ಆರ್ದ್ರಾ ಮಹಾ/ ಮಳೆ ನಕ್ಷತ್ರದಲ್ಲಿ ಚೆನ್ನಾದ ಮಳೆ ಬಂದರೆ ಮಾತ್ರ ಭೂಮಿಯಲ್ಲಿ ಒರತೆ ಆಗಿ,ಮುಂದೆ ಸ್ವಾತಿ (ಅಕ್ಟೋಬರ್ 24 ರಿಂದ ನವೆಂಬರ್ 5) ಮಹಾ/ಮಳೆ ನಕ್ಷತ್ರದಲ್ಲಿ ಮಳೆ ಹೆಚ್ಚು ಸುರಿದರೆ ಮುಂದಿನ ವರ್ಷ ಬೇಸಗೆಯಲ್ಲಿ ನೀರಿಗೆ ಕೊರತೆಯಾಗದು ಎಂದು ಹಿಂದಿನಿಂದಲೂ ನಂಬಿಕೊಂಡು ಬಂದ ಮಾತು.

 

ಒಂದಷ್ಟು ಅಂಕಿಅಂಶಗಳು 

ಕಳೆದ 1976 ರಿಂದ ಈಚೆಗೆ ಗಮನಿಸುವುದಾದರೆ ಆರ್ದ್ರಾ ಮಳೆ ನಕ್ಷತ್ರದ ಅವಧಿಯಲ್ಲಿ ಸರಾಸರಿ 554 ಮಿ.ಮೀ.ಮಳೆ ಸುರಿಯುತ್ತಿದೆ.

ಗರಿಷ್ಟ 1998 ರಲ್ಲಿ 1319 ಮಿ.ಮಿ.ಆಗಿದ್ದು,ಕನಿಷ್ಟ ಮಳೆ 1996 ರಲ್ಲಿ 54 ಮಿ.ಮೀ. ಅಷ್ಟೇ ಸುರಿದಿತ್ತು.

1996 ರಲ್ಲಿ ಸ್ವಾತಿ ಮಳೆಯೂ (032 ಮಿ.ಮೀ.) (ಸರಾಸರಿ 122 ಮಿ.ಮೀ) ಕೈಕೊಟ್ಟ ಕಾರಣ 1997 ರ ಬೇಸಗೆಯಲ್ಲಿ ಒಂದಷ್ಟು ನೀರಿನ ಕೊರತೆ ಆದ ಒಂದು ಉದಾಹರಣೆಯನ್ನು ಇಲ್ಲಿ ಗಮನಿಸಬಹುದು.

ಇಲ್ಲಿ ಇನ್ನೊಂದು ಕುತೂಹಲಕಾರಿ ಅಂಶವೂ ಇದೆ. ಈ ನಕ್ಷತ್ರದ ಗೊತ್ತಿರುವ 1976 ರಿಂದ 2018 ರ ತನಕವೂ ಜೂನ್ 22,23,24 ರಲ್ಲಿ ಇಷ್ಟೂ ವರ್ಷಗಳಲ್ಲಿ ಮಳೆ ದಾಖಲಾಗಿದೆ.ಆದರೆ ಈ ಬಾರಿ ಜೂನ್ 24 ಮಳೆ ದಾಖಲಾಗದ ದಿನವಾಗಿ ಇತಿಹಾಸದ ಪುಟ ಸೇರಿತು.

ಮಳೆಯ ಬಗ್ಗೆ ನಾವೆಲ್ಲರೂ ಕನಿಷ್ಟ ಜ್ಞಾನ ಹೊಂದಿರಬೇಕಾದ ಅವಶ್ಯಕತೆ ಇದೆ. ಅದಕ್ಕಾಗಿ ಇದೊಂದು ಪುಟ್ಟ ಪ್ರಯತ್ನ. ಸುರಿವ ಮಳೆಯಲ್ಲಿ ಶೇ.50 ಸಮುದ್ರಕ್ಕೆ, ಶೇ.30 ಪರ್ವತ ಪ್ರದೇಶಕ್ಕೆ, ಶೇ.20 ಮಾತ್ರ ಭೂಮಿಗೆ ಹಂಚಿಹೋಗುತ್ತದೆ ಎಂದು ಆಧುನಿಕ ಕೃಷಿಪದ್ಧತಿಯ ಪಿತಾಮಹ ಪರಾಶರ ಅಂದೇ ಕಂಡುಕೊಂಡಿದ್ದರು.ಆದ್ದರಿಂದ ಶೇ.20 ರ ಮಳೆಯಲ್ಲೇ ಕೃಷಿಕರು ಕೃಷಿ ನಡೆಸಲು ಯೋಜನೆ ಹಾಕಿಕೊಳ್ಳಬೇಕು ಎಂದಿದ್ದಾರೆ.
ಸಮರ್ಥ ಜಲ ಸಂರಕ್ಷಣಾ ಕ್ರಮಗಳನ್ನು ಕೈಗೊಂಡು ಮುಂದಿನ ಪೀಳಿಗೆಗೆ ಈ ಭೂಮಿಯನ್ನು ಉಳಿಸೋಣವೇ ?

ಬಾರೆಂದರೆ ಬಾರನು
ಹೋಗೆಂದರೆ ಹೋಗನು
ಯಾರಿಚ್ಚೆ ಹೇಳು ಮಳೆರಾಯ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಜಾಗತಿಕ ತಾಪಮಾನ ಏರಿಕೆ ಎಚ್ಚರಿಕೆ – 1 ಡಿಗ್ರಿ ತಾಪಮಾನ ಹೆಚ್ಚಾದರೆ ಭಾರತದ ಭತ್ತದ ಇಳುವರಿ 6.6% ಕುಸಿಯುವ ಸಾಧ್ಯತೆ
August 3, 2026
9:25 PM
by: ದ ರೂರಲ್ ಮಿರರ್.ಕಾಂ
ಹಿಂದೂ ಮಹಾಸಾಗರದ ಹವಾಮಾನದಲ್ಲಿ ಹಠಾತ್ ಬದಲಾವಣೆ – ಮತ್ತೆ ಮಹಾಮಳೆಗೆ ಕಾರಣವಾಗುತ್ತಿದೆಯೇ?
August 3, 2026
12:03 PM
by: ಸಾಯಿಶೇಖರ್ ಕರಿಕಳ
ಭಾರೀ ಮಳೆಯ ಎಚ್ಚರಿಕೆ | ಕರಾವಳಿ ಕರ್ನಾಟಕದಲ್ಲಿ ಅತಿ ಭಾರೀ ಮಳೆ – ಪ್ರವಾಹ- ಭೂಕುಸಿತದ ಎಚ್ಚರಿಕೆ
August 1, 2026
3:28 PM
by: ದ ರೂರಲ್ ಮಿರರ್.ಕಾಂ
ಭಾರತದ ಕೃಷಿ ರಫ್ತು ಪಟ್ಟಿಯಲ್ಲಿ ಈಗ 500ಕ್ಕೂ ಹೆಚ್ಚು ಉತ್ಪನ್ನಗಳು..! ಭಾರತದ ಕೃಷಿ ಕ್ಷೇತ್ರಕ್ಕೆ ಇದು ದೊಡ್ಡ ಸುದ್ದಿ-ರೈತರಿಗೆ ಹೊಸ ಜಾಗತಿಕ ಅವಕಾಶ
July 31, 2026
10:02 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror