ಪುತ್ತೂರು: ಭಾರತದ ಭೂಪ್ರದೇಶದಲ್ಲೇ ಬಹುಮುಖ್ಯ ಸೂಕ್ಷ್ಮ ಪ್ರದೇಶ ಕಾಶ್ಮೀರ. ಇದೇ ಕಾರಣಕ್ಕೆ ಭಾರತ-ಪಾಕಿಸ್ಥಾನದ ಗಡಿ ವಿವಾದವಾಗಿ ಗುರುತಿಸಲ್ಪಟ್ಟಿದೆ. ಹಿಂದೆ ಸಂವಿಧಾನ ರಚನಾ ಪ್ರಕ್ರಿಯೆ ಸಂದರ್ಭ ನಡೆದ ಕೆಲವೊಂದು ಗೊಂದಲಗಳಿಂದ ಜಮ್ಮು-ಕಾಶ್ಮೀರಕ್ಕೆ ‘ಆರ್ಟಿಕಲ್ 370’ ಎಂಬ ವಿಶೇಷ ಸ್ಥಾನವನ್ನು ನೀಡಬೇಕಾಯಿತು. ಆದರೆ ಈ ಆರ್ಟಿಕಲ್ ಕಾಶ್ಮೀರಕ್ಕೆ ಕಾನೂನಿನ ಪರದೆಯನ್ನು ನೀಡಿ ಕೆಲವು ಚಟುವಟಿಕೆಗಳಿಗೆ ಆಸ್ಪದವನ್ನು ನೀಡುತ್ತಿತ್ತು. ಬದಲಾಗಿ ಇದರಿಂದ ಆ ಪ್ರದೇಶದ ಅಭಿವೃದ್ಧಿ ಈವರೆಗೆ ನಡೆದೇ ಇಲ್ಲ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕ್ಯಾ. ಬ್ರಿಜೇಶ್ ಚೌಟ ಎಂದು ಅಭಿಪ್ರಾಯಟ್ಟರು.
ಅವರು ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದಲ್ಲಿ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳೊಂದಿಗೆ ನಡೆದ ‘ಆರ್ಟಿಕಲ್ 370’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.
‘ಆರ್ಟಿಕಲ್ 370 ಹಾಗೂ 35ಎ’ ನಿಂದ ಜಮ್ಮು-ಕಾಶ್ಮೀರವನ್ನು ಭಾರತದಿಂದ ದೂರಮಾಡಿದೆ. ಹಾಗೂ ಅಲ್ಲಿನ ಅಭಿವೃದ್ಧಿಗೆ ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಮಾತ್ರವಲ್ಲದೆ ಸಂವಿಧಾನದ ಮೂಲಭೂತ ಹಕ್ಕುಗಳನ್ನು ಪಡೆದುಕೊಳ್ಳಲು ಅಲ್ಲಿನ ಜನರಿಗೆ ಸಾಧ್ಯವಾಗಿಲ್ಲ. ಏಕೆಂದರೆ ಮಾಹಿತಿ ಹಕ್ಕು, ಮಹಿಳಾ ಹಕ್ಕು, ಶಿಕ್ಷಣದ ಹಕ್ಕುಗಳನ್ನು ಪಡೆಯಲು ಅಲ್ಲಿನ ಸಾಮಾನ್ಯ ಜನರು ವಿಫಲರಾಗಿದ್ದಾರೆ. ಏಕೆಂದರೆ ಆಡಳಿತ ವ್ಯವಸ್ಥೆಯಲ್ಲಿನ ಕೆಲವೊಂದು ಲೋಪಗಳು ಇದಕ್ಕೆ ಅಡೆತಡೆಯಾಗಿತ್ತು ಎಂದರು. ಆದರೆ ಈ ಆರ್ಟಿಕಲ್ ಅನ್ನು ತೆಗೆದ ಅನಂತ ಕೆಲವು ಬದಲಾವಣೆಗಳು ಈಗ ಆರಂಭವಾಗಿದೆ. ದೇಶದ ಕುರಿತು ಅಭಿಮಾನ ಹೊಂದಿದವರು ಇಂದು ದೇಶದ ಬಗ್ಗೆ ಮಾತನಾಡುತ್ತಿಲ್ಲ. ಹಾಗೆಂದು ಭಾರತದಲ್ಲಿ ಜ್ಞಾನದ ಕೊರತೆಯಿಲ್ಲ. ಬದಲಾಗಿ ದೇಶವನ್ನು ದೂರುವವರು ಮಾತ್ರ ಮಾತನಾಡುತ್ತಿದ್ದಾರೆ. ಹಾಗಾಗಿ ಇಂದು ದೇಶ ಪ್ರೇಮಿಗಳು ಅಥವಾ ಪ್ರಜ್ಞಾವಂತರು ಈ ಕುರಿತು ಸತ್ಯವನ್ನು ತಿಳಿದು ಮಾತನಾಡುವಂತಾಗಬೇಕು ಎಂದರು.
ಈ ಸಂದರ್ಭ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಎಸ್ಟೇಟ್ ಮ್ಯಾನೇಜರ್ ಲಕ್ಷ್ಮೀ ಪ್ರಸಾದ್, ಕಾಲೇಜಿನ ಐಕ್ಯುಎಸಿ ಸಂಯೋಜಕ ಡಾ. ಎಚ್.ಜಿ. ಶ್ರೀಧರ್, ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಂಯೋಜಕ ರಾಕೇಶ್ ಕುಮಾರ್ ಕಮ್ಮಜೆ, ಉಪನ್ಯಾಸಕಿ ಸುಷ್ಮಿತಾ ಜೆ., ರಾಧಿಕ ಕಾನತಡ್ಕ, ಉಪನ್ಯಾಸಕ ಭರತ್ರಾಜ್ ಕರ್ತಡ್ಕ, ವಿವೇಕಾನಂದ ಮಲ್ಟಿ ಮೀಡಿಯಾ ಸ್ಟುಡಿಯೋದ ಸಂತೋಷ್ ಕುಮಾರ್ ಉಪಸ್ಥಿತರಿದ್ದರು. ಉಪನ್ಯಾಸಕಿ ಪ್ರಜ್ಞಾ ಬಾರ್ಯ ಸ್ವಾಗತಿಸಿ, ವಂದಿಸಿದರು.