Advertisement
ಅನುಕ್ರಮ

ಕೆಲವು ಶಿಫಾರಸಿಗೆ ಅಡಿಕೆ ಉಳಿಯಲ್ಲ..

Share

ಅಡಿಕೆ ಬೆಳೆಗಾರರಿಗೆ ಕಾಡುವ ದೊಡ್ಡ ಸಮಸ್ಯೆ ಮಹಾಳಿ. ಇಡೀ ವರ್ಷದ ದುಡಿತ ಒಂದು ವಾರದ ಎಡೆಬಿಡದ ಮಳೆಗೆ ಆಹುತಿ. ಮಳೆಗಾಲ ಆರಂಭವಾಗುವಾಗಲೇ ತಡವಾದ್ದರಿಂದ ಬೋರ್ಡೊ ದ್ರಾವಣ ಬಿಡುವವರು ಮಳೆಯಾಗದೆ ಬೇಡ ಅಂತ ಕೂತರು. ಮಳೆ ಬಂದಾಗ ಸಿಂಪಡಣೆಗೆ ಜನಕ್ಕೆ ತತ್ವಾರ. ಅಂತೂ ಇಂತೂ ಒಂದು ಸಲ ಸಿಂಪಡಣೆಗೆ ಅವಕಾಶ ಸಿಕ್ಕಿದಾಗ ಗುಡ್ಡ ತೋಟದವರು ಒಂದು ಸಲವೇ ಸಿಂಪಡಣೆ ಸಾಕು ಅನಿಸುತ್ತದೆ ಈ ಮಳೆಗಾಲಕ್ಕೆ ಅಂದವರೂ ಇದ್ದರು. ನಂತರ ಭರ್ಜರಿ ಮಳೆ ಸುರಿದದ್ದೇ ಸುರಿದದ್ದು. ಕೊಳೆರೋಗ ಹಿಡಿಯಲು ತಕ್ಕ ಮಳೆ. ಎಡೆಬಿಡದೆ ಸುರಿದ ಹನಿಕಡಿಯದ ಮಳೆ ಮತ್ತು ಶೀತ ಹವೆ ಸಾಕಷ್ಟು ತೋಟಗಳಿಗೆ ಕೊಳೆರೋಗವನ್ನು ಬಿತ್ತಿಬಿಟ್ಟಿತು. ಅದರಿಂದ ನಂತರ ಸಿಂಪಡಣೆಗೆ ಅವಕಾಶ ಸಿಕ್ಕಿದ್ದು ಕಡಿಮೆಯಾದ್ದರಿಂದ ಈಗಲೂ ಅನೇಕ ಕೃಷಿಕರು ಸಿಂಪಡಣೆಗಾಗಿ ಚಡಪಡಿಸುತ್ತಲೇ ಇದ್ದಾರೆ.

ನಮ್ಮಲ್ಲಿ ಅನೇಕರಿಗೆ ಪ್ರಯೋಗಗಳ ಹುಚ್ಚು. ಇನ್ನೊಬ್ಬರ ಶಿಫಾರಸಿನ ಮಾತುಗಳಿಗೆ ಬಲಿಬೀಳುವವರ ಸಂಖ್ಯೆಯೂ ಕಡಿಮೆ ಅಲ್ಲ. ಬೋರ್ಡೊ ದ್ರಾವಣ ತಯಾರಿಯಲ್ಲಿ ಅನೇಕರದ್ದು ಹಲವು ಪ್ರಯೋಗಗಳಿವೆ. ಕೆಲವರು ಒಂದು ಕಿಲೊ. ಮೈಲುತುತ್ತಿಗೆ ಕ್ರಮದಂತೆ ಒಂದು ಕಿಲೊ ಸುಣ್ಣ ಹಾಕಿದರೆ ಉಳಿದ ಕೆಲವರದ್ದು ಎರಡು ಕಿಲೊ ಸುಣ್ಣ. ಇನ್ನೂ ಹೆಚ್ಚು ಸುಣ್ಣ ಹಾಕಿ ಸಿಂಪಡಣೆಯ ನಂತರ ತೋಟವನ್ನೇ ಬಿಳಿಯಾಗಿಸುವವರೂ ಇದ್ದಾರೆ. ತಮ್ಮ ತೋಟಕ್ಕೆ ಸುಣ್ಣ ಹೆಚ್ಚು ಹಾಕಿ ಪ್ರಯೋಗ ಮಾಡಿ ಸುಮ್ಮನಾಗಿಬಿಟ್ಟರೆ ಒಳ್ಳೆಯದು. ಆದರೆ ಕೆಲವರು ಹಾಗಲ್ಲ. ತಾವು ನಿಮ್ಮಂತಲ್ಲ. ಈ ಸಲ ಸುಣ್ಣ ಹೆಚ್ಚು ಹಾಕಿ ತೋಟಕ್ಕೆ ಮಹಾಳಿ ರೋಗ ಕಾಲಿರಿಸದಂತೆ ತಡೆದೇ ಬಿಟ್ಟಿದ್ದೇನೆ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವುದು ಕಷ್ಟದ ಸಂಗತಿ. ಇಂತಹ ಮನುಷ್ಯರು ಕೆಲವೊಮ್ಮೆ ಊರಿನ ಆಢ್ಯ ವ್ಯಕ್ತಿಗಳಾಗಿದ್ದರೆ ಮುಗಿಯಿತು. ಅವರನ್ನು ಚಾಚೂ ತಪ್ಪದೆ ಅನುಸರಿಸುವವರ ಸಾಲೆ ಕೆಲವೊಮ್ಮೆ ಇರುವುದಿದೆ. ಪೂರ್ತಿಯಾಗಿ ಅನುಸರಿಸಿದರೆ ವಿನಾಶ ಕಟ್ಟಿಟ್ಟ ಬುತ್ತಿ. ಹೆಚ್ಚಾಗಿ ಹತ್ತು ಜನ ಒಂದಾಗಿ ಸಮಾರಂಭಗಳ ಮುನ್ನಾ ದಿನ ಪದಾರ್ಥಕ್ಕೆ ಹಚ್ಚುವ ಸಮಯ ನೋಡಿ ಸ್ವಲ್ಪ ದೊಡ್ಡ ಸ್ವರ ಇರುವವರು ತಮ್ಮ ಮಾತಿನ ವೈಖರಿ ಹರಿದುಬಿಟ್ಟು ಸಮ್ಮೋಹನಾಸ್ತ್ರಕ್ಕೆ ಹಲವರನ್ನು ಕೆಡಹುತ್ತಾರೆ. ಪಾಪ ಕೇಳಿದವರು ಇನ್ನು ಹತ್ತು ಜನರ ಕಿವಿಗೆ ಊದಿ ಅವರೆಲ್ಲ ಪ್ರಯೋಗಗಳಲ್ಲೆ ಅಡಿಕೆ ಕಳೆದುಕೊಳ್ಳುವ ಪ್ರಸಂಗ ಬಂದದ್ದೂ ಇರಬಹುದೇನೊ?

ಹಿಂದಿನಿಂದಲೇ ಬೋರ್ಡೊ ದ್ರಾವಣಕ್ಕೆ 1 : 1 ನಿಷ್ಪತ್ತಿಯಲ್ಲಿ ಸುಣ್ಣ ಮೈಲುತುತ್ತು ಬೆರೆಸಲಾಗುತ್ತಿತ್ತು. ಮೈಲುತುತ್ತು ಒಂದು ಪಾಕ ಸಿಂಪಡಣೆ ಮಾಡಿ ಮುಗಿದಾಗ ಪಾತ್ರೆಯಲ್ಲಿ ಕರಗದೆ ಉಳಿಯುತ್ತದೆ ಎಂದು ನೂರೊ ಇನ್ನೂರೊ ಗ್ರಾಂ. ಮೈಲುತುತ್ತು ಹೆಚ್ಚು ಹಾಕುವವರು ಮತ್ತು ಚಿಪ್ಪು ಸುಣ್ಣದಲ್ಲಿ ಕಲ್ಲುಗಳಿರುತ್ತವೆ ಎಂದು ಅದೂ ಒಂದು ನೂರಿನ್ನೂರು ಗ್ರಾಂನಷ್ಟು ಹೆಚ್ಚು ಹಾಕುವುದು ಬಿಟ್ಟರೆ ಹೆಚ್ಚು ಕಡಿಮೆ 1 : 1 ನಿಷ್ಪತ್ತಿಯಲ್ಲಿಯೇ ಇರುತ್ತದೆ. ಯಾವುದಿದ್ದರೂ ಮೈಲುತುತ್ತು ಮತ್ತು ಚಿಪ್ಪು ಸುಣ್ಣದ ಗುಣಮಟ್ಟ ಒಳ್ಳೆಯದಿರಬೇಕು ಎಂಬುದು ಎಲ್ಲದಕ್ಕಿಂತ ಮುಖ್ಯ. ಮೊನ್ನೆ ವಿಟ್ಲದಲ್ಲಿ ಕ್ಯಾಂಪ್ಕೋ ಸದಸ್ಯ ಬೆಳೆಗಾರರ ಸಭೆಯಲ್ಲಿ ಕೃಷಿಕರು ಗುಣಮಟ್ಟದ ಬಗ್ಗೆಯೇ ಮಾತನಾಡಿದರು. ಹೆಸರಿರುವ ಕಂಪೆನಿಯೊಂದರ ಮೈಲುತುತ್ತನ್ನು ಪ್ರದರ್ಶಿಸಿ ಅದರ ಕಳಪೆ ಗುಣವನ್ನು ಹೇಳಿದರು. ಕೆಲವೊಂದು ಹುಡಿರೂಪದಲ್ಲಿ ಮಾರುಕಟ್ಟೆಗೆ ಬರುವ ಮೈಲುತುತ್ತು ಸಿಂಪಡಣೆ ಮಾಡಿ ಅಡಿಕೆಯನ್ನು ಕಳಕೊಂಡ ವಿಷಯವೂ ಬೆಳೆಗಾರರೊಬ್ಬರಲ್ಲಿ ಮಾತನಾಡುವ ಸಮಯದಲ್ಲಿ ಬಂತು. ಕೈಗಾರಿಕೆಗಳಲ್ಲಿ ಬಳಕೆಯಾಗುವ ಮೈಲುತುತ್ತನ್ನು ಅಡಿಕೆಯ ಕೊಳೆರೋಗ ನಿವಾರಣೆಗೆ ಬಳಕೆ ಮಾಡುವುದೇ ತಪ್ಪು. ತಾಮ್ರದ ಅಂಶ 24.7% ಕ್ಕಿಂತ ಹೆಚ್ಚು ಇದ್ದರೆ ಮಾತ್ರ ಅದು ಸುಣ್ಣದ ಜೊತೆ ಮಿಶ್ರವಾಗಿ ಕೊಳೆರೋಗ ತಡೆಯಲು ಸೂಕ್ತ. ಯಾರದೋ ಶಿಫಾರಸಿಗೆ ಮೈಲುತುತ್ತಿನ ಕೆಲವು ಬ್ರಾಂಡಿನ ಹುಡಿ ಮತ್ತು ಸುಣ್ಣದ ಹುಡಿ ( ಬಹುಶಃ ಇದು ಕುಮ್ಮಾಯ) ಮಿಶ್ರಮಾಡಿ ಬೋರ್ಡೋ ತೋಟಕ್ಕೆ ಬಿಟ್ಟಾಯಿತು ಎಂದಲ್ಲಿ ಎಲ್ಲವೂ ಸರಿಯಿರುವುದಿಲ್ಲ ಎಂಬುದು ನೆನಪಿರಬೇಕು.

ಇನ್ನು ಬೋರ್ಡೊ ಸಿಂಪಡಣೆ ಮಾಡಿಸುವವರು ಅದಕ್ಕೆ ಮಿಶ್ರ ಮಾಡಿ ಇತರ ವಿಷಯುಕ್ತ ಕೀಟನಾಶಕಗಳನ್ನು ಸಿಂಪಡಿಸಿ ಸೊಳ್ಳೆ ಕೊಲ್ಲುವುದಿದೆ. ಈ ರೀತಿಯ ಪ್ರಯೋಗಗಳು ಕೆಲವೊಂದು ಸಾಮಾಜಿಕ ಜಾಲತಾಣಗಳ ಮಾತುಕತೆಗಳ ಫಲ. ನಾನು ಸಿಂಪಡಿಸಿದ್ದೇನೆ ಎಂದಾಗ ಅದರ ಲಾಭಾಲಾಭಗಳು ನಿರ್ಧಾರವಾಗುವುದಿಲ್ಲ. ಅದಕ್ಕೆ ಸಮಯ ಬೇಕು. ಅದನ್ನು ಗಮನಿಸಿದ ಮೇಲೆಯೇ ಇತರರಿಗೆ ಶಿಫಾರಸು ಮಾಡಲು ಅಭ್ಯಾಸ ಮಾಡಿಕೊಳ್ಳಬೇಕು. ಇಲ್ಲದೆ ಹೋದರೆ ನಾವು ಇತರರ ನಷ್ಟಕ್ಕೆ ಕಾರಣವಾಗುವುದು ನಿಶ್ಚಯ.

ಕೆಲವೊಂದು ಸಹಕಾರಿ ಸಂಘಗಳು ಖಾಸಗಿ ಬ್ರಾಂಡಿನ ಮೈಲುತುತ್ತನ್ನು ತಂದು ಕಿಲೊ ಒಂದಕ್ಕೆ ರೂ. 220 ರಿಂದ ರೂ. 240 ರೂಪಾಯಿವರೆಗೆ ಬೆಲೆ ನಿಗದಿ ಮಾಡಿ ತನ್ನದೇ ಕೃಷಿಕ ಸದಸ್ಯರಿಗೆ ಮಾರಾಟಮಾಡುತ್ತಿವೆ. ಅದೇ ಸಹಕಾರಿ ಸಂಘದಲ್ಲಿ ಅಥವ ಅದೇ ಪೇಟೆಯಲ್ಲಿ ಉತ್ತಮ ಗುಣಮಟ್ಟದ ವಿಶೇಷ ದರ ಕಡಿತವಿರುವ ಕ್ಯಾಂಪ್ಕೋ ಮೈಲುತುತ್ತು 195 ರೂಪಾಯಿಗೆ ಸಿಗುತ್ತಿರುವುದು ಕೆಲವು ಬೆಳೆಗಾರರು ಗಮನಿಸುತ್ತಿಲ್ಲ. ಕೆಲವು ಸಹಕಾರಿ ಸಂಘಗಳೂ ಗಮನಿಸಿಯೂ “ಸಹಕಾರಿಗಳ ನಡುವೆ ಸಹಕಾರ” ತತ್ವಕ್ಕೆ ಬದ್ಧರಾಗುತ್ತಿಲ್ಲ. ಇದರಿಂದ ನಷ್ಟವಾಗುವುದು ತಮ್ಮದೇ ಕೃಷಿಕ ಸದಸ್ಯರಿಗೆ ಎಂಬುದು ಅವರಿಗೆ ಮನದಟ್ಟಾಗುತ್ತಿಲ್ಲ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಶಂ. ನಾ. ಖಂಡಿಗೆ

ಕೃಷಿಕ, ಬರಹಗಾರರು

Published by
ಶಂ. ನಾ. ಖಂಡಿಗೆ

Recent Posts

ಹವಾಮಾನ ವರದಿ | 05-09-2026 | ಕರಾವಳಿಯಲ್ಲಿ ತೇವಾಂಶ ಇಳಿಕೆ, ಬಳಿಕ ಒಣಹವೆ?

ಸೆ.8ರಿಂದ ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮತ್ತೆ ಮಳೆ ಚಟುವಟಿಕೆ ಹೆಚ್ಚಾಗುವ ಸಾಧ್ಯತೆಯಿದೆ.…

1 hour ago

ಬೇರೊಬ್ಬರ ಬದುಕಿನ ಅಳತೆಯಲ್ಲಿ ನಮ್ಮ ಬದುಕನ್ನು ಅಳೆಯುತ್ತಿದ್ದೇವೆಯೇ?

ಬೇರೊಬ್ಬರ ಬದುಕಿನೊಂದಿಗೆ ನಿರಂತರ ಹೋಲಿಕೆ ನಮ್ಮ ನೆಮ್ಮದಿ ಮತ್ತು ಆತ್ಮವಿಶ್ವಾಸವನ್ನು ಕಸಿದುಕೊಳ್ಳಬಹುದು. ಮತ್ತೊಬ್ಬರ…

7 hours ago

ಗೂಗಲ್‌ ಮತ್ತು AIಯ ಕಾಲದಲ್ಲೂ ಗುರು ಏಕೆ ಬೇಕು..?

ಶಿಕ್ಷಕರ ದಿನಾಚರಣೆ ಶಿಕ್ಷಕರನ್ನು ಸನ್ಮಾನಿಸುವ ದಿನ ಮಾತ್ರವಲ್ಲ, ಶಿಕ್ಷಕತ್ವ ಮತ್ತು ಶಿಕ್ಷಣದ ನಿಜವಾದ…

8 hours ago

ಮಳೆ ಹೆಚ್ಚಿಸಲು ಮೋಡ ಬಿತ್ತನೆಗೆ ಚಾಲನೆ – ಮೋಡ ಬಿತ್ತನೆಯಿಂದ ಮಳೆ ಬರುತ್ತದೆಯೇ?

ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ₹28.52 ಕೋಟಿ ವೆಚ್ಚದ 60 ದಿನಗಳ…

16 hours ago

3,000 ವರ್ಷಗಳ ಹಿಂದೆಯೇ ರೈತರು ಹವಾಮಾನ ಬದಲಾವಣೆಗೆ ಹೊಂದಿಕೊಂಡಿದ್ದರು..! ಬಿಹಾರದ ಪುರಾತನ ಬೀಜಗಳು ಹೇಳಿದ ಕೃಷಿ ಪಾಠ

ಬಿಹಾರದ ಯುರೆನ್‌ನಲ್ಲಿ ಪತ್ತೆಯಾದ 5 ಲಕ್ಷಕ್ಕೂ ಹೆಚ್ಚು ಸುಟ್ಟ ಬೀಜಗಳ ಅಧ್ಯಯನವು ಭಾರತದ…

18 hours ago

ಶ್ರೀಕೃಷ್ಣನನ್ನು ದೇವನಾಗಿ ಮಾತ್ರವಲ್ಲ, ಗುರುವಿನ ರೂಪದಲ್ಲೂ ಕಾಣುವ ದೃಷ್ಟಿ

ಶ್ರೀಕೃಷ್ಣನನ್ನು ಕೇವಲ ದೇವರ ಅವತಾರವಾಗಿ ನೋಡುವುದಕ್ಕಿಂತ, ಮನುಷ್ಯರ ನಡುವೆ ನಿಂತು ಉಪದೇಶಿಸಿದ ಮಾನವಶಿಕ್ಷಕನಾಗಿಯೂ…

24 hours ago