ದಮ್ಮಾಮ್: “ಭಾರತ ವಿವಿಧ ಜಾತಿ, ಧರ್ಮ, ಭಾಷೆ, ಮತ್ತು ಸಂಸ್ಕೃತಿಗೆ ತಾಯ್ನೆಲವಾಗಿದೆ. ಸ್ವಾತಂತ್ರ್ಯೋತ್ತರ 1950ರ ದಶಕದಲ್ಲಿ ರಾಜ್ಯ ರಚನೆಯ ವಿಷಯ ಪ್ರಸ್ತಾಪವಾದಾಗ ಆಯಾ ರಾಜ್ಯಗಳಲ್ಲಿ ಭಾಷಾವಾರು ವಿಂಗಡಣೆಗಾಗಿ ಚಳುವಳಿಗಳು ನಡೆದು ಭಾಷೆಯ ಆಧಾರದಲ್ಲಿ ರಾಜ್ಯಗಳು ಸ್ಥಾಪನೆಯಾದವು. ಆದರೆ ಇಂದು ದೇಶದಲ್ಲಿ ಭಾಷಾ ವೈವಿಧ್ಯತೆಯನ್ನು ನಾಶ ಪಡಿಸಿ ಏಕ ಭಾಷೆ, ಏಕಸಂಸ್ಕೃತಿಯನ್ನು ಹೇರುವಂತಹ ಪ್ರಯತ್ನಗಳು ನಡೆಯುತ್ತಿದ್ದು, ನಾವೆಲ್ಲರೂ ಒಕ್ಕೊರಲಿನ ದನಿಯೊಂದಿಗೆ ಇದನ್ನು ವಿರೋಧಿಸಬೇಕಾಗಿದೆ” ಎಂದು ಇಂಡಿಯನ್ ಸೋಶಿಯಲ್ ಫಾರಂ ಕರ್ನಾಟಕ ಇದರ ಪೂರ್ವ ಪ್ರಾಂತ್ಯದ ಅಧ್ಯಕ್ಷ ಮುಹಮ್ಮದ್ ಷರೀಫ್ ಜೋಕಟ್ಟೆ ತಿಳಿಸಿದರು.
ಅವರು ಕೆ.ಎಂ.ಟಿ. ಹಾಗೂ ಅಡ್ವಾನ್ಸಡ್ ಬ್ಲೂ ಲೈನ್ (ಎ. ಬಿ. ಎಲ್. ಗ್ರೂಪ್) ಪ್ರಾಯೋಜಕತ್ವದೊಂದಿಗೆ ಇಂಡಿಯನ್ ಸೋಷಿಯಲ್ ಫಾರಂ ವತಿಯಿಂದ, ರಾಯಲ್ ಝಯ್ಕಾ ರೆಸ್ಟೋರೆಂಟ್ ಸಭಾಂಗಣದಲ್ಲಿ ನ.1ರಂದು ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.
“ಭಾರತದ ಸಾಮಾಜಿಕ, ಆರ್ಥಿಕ, ರಾಜಕೀಯ, ಕಲೆ ಮತ್ತು ಸಾಹಿತ್ಯ ಕ್ಷೇತ್ರಗಳಿಗೆ ಅಗಾಧ ಕೊಡುಗೆಯನ್ನು ಕರ್ನಾಟಕ ನೀಡಿದೆ. ಕರ್ನಾಟಕ ಏಕೀಕರಣ ಚಳುವಳಿಯ ನಾಯಕರ ಪ್ರಯತ್ನದಿಂದಾಗಿ ಕರ್ನಾಟಕ ಹುಟ್ಟಿಕೊಂಡಿತು” ಎಂದರು. ಸೌದಿ ಅರೇಬಿಯಾದಲ್ಲಿರುವ ಅನಿವಾಸಿ ಭಾರತೀಯರ ಮಕ್ಕಳು ಇಂಗ್ಲಿಷ್ ಭಾಷೆಯಲ್ಲಿ ಕಲಿಯುವುದರಿಂದಾಗಿ ಕನ್ನಡದಿಂದ ದೂರವುಳಿಯುತ್ತಿದ್ದಾರೆ. ನಾವು ಎಲ್ಲೇ ಹೋದರೂ ನಮ್ಮ ಮಾತೃ ಭಾಷೆಯನ್ನು ಮರೆಯಕೂಡದು. ‘ನೀನು ಇಂಗ್ಲಿಷ್ ಭಾಷೆಯನ್ನು ಕಲಿ. ಆದರೆ ಅದನ್ನು ಕನ್ನಡದಲ್ಲಿ ಕಲಿ’ ಎಂಬ ಯು. ಆರ್. ಅನಂತ ಮೂರ್ತಿಯವರ ಉಕ್ತಿಯನ್ನು ನಾವು ಅಳವಡಿಸಿಕೊಳ್ಳಬೇಕು” ಎಂದು ಅವರು ಕಿವಿ ಮಾತು ಹೇಳಿದರು. ಕರ್ನಾಟಕ ಏಕೀಕರಣ ಚಳುವಳಿಯ ಚುಟುಕು ಇತಿಹಾಸವನ್ನು ವಿವರಿಸಿದ ಅವರು ಅನಿವಾಸಿ ಭಾರತೀಯರಲ್ಲಿ ಕನ್ನಡವನ್ನು ಪ್ರಚುರಪಡಿಸುವ ತನ್ನ ಪ್ರಯತ್ನವನ್ನು ಐ ಎಸ್ ಎಫ್ ಮುಂದುವರಿಸಲಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಾಯಲ್ ಝಯ್ಕಾ ಉಪಹಾರ ಗೃಹದ ಸತೀಶ್ ಕುಮಾರ್ ಮಾತನಾಡಿ ದೇಶದಲ್ಲಿ ಹಿಂದಿ ಹೇರಿಕೆಯ ಪ್ರಯತ್ನವನ್ನು ವಿಫಲಗೊಳಿಸಬೇಕು ಮತ್ತು ಕರುನಾಡ ನೈಜ ಜಾತ್ಯತೀತತೆಯನ್ನು ಮರಳಿ ಪಡೆಯಲು ಪಣ ತೊಡಬೇಕು ಎಂದು ಕರೆ ನೀಡಿದರು.
ಇನ್ನೋರ್ವ ಮುಖ್ಯ ಅತಿಥಿ ಇಂಡಿಯಾ ಫ್ರಾಟರ್ನಿಟಿ ಫೋರಂನ ಪೂರ್ವ ವಲಯ ಜಿಲ್ಲಾಧ್ಯಕ್ಷ ಅತಾವುಲ್ಲಾ ಉಚ್ಚಿಲ ಮಾತನಾಡುತ್ತ, ಪ್ರಾಂತೀಯ ಭಾಷಾ ಪ್ರೇಮದೊಂದಿಗೆ ವಿವಿಧತೆಯಲ್ಲಿ ಏಕತೆಯನ್ನು ಕಾಣಲು ಸಾಧ್ಯವಾಗಬೇಕು ಎಂದು ನುಡಿದರು.
ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು , ಈ ವೇಳೆ ಕನ್ನಡದ ಇತಿಹಾಸವನ್ನು ಆಧರಿಸಿದ ಕಿರು ಪ್ರಹಸನಗಳು ನೆರೆದವರ ಮನಸೂರೆಗೊಳಿಸಿತು. ಐ.ಎಸ್.ಎಫ್ ಜುಬೈಲ್ ತಂಡವು ಕರ್ನಾಟಕದ ಐತಿಹಾಸಿಕ ವ್ಯಕ್ತಿಗಳನ್ನು ನೆನಪಿಸುತ್ತಾ ನಡೆಸಿದ ಸ್ವಾಗತ ಶೈಲಿಯು ಅತ್ಯಾಕರ್ಷಕ ವಾಗಿತ್ತು. ಕರ್ನಾಟಕದ ಪ್ರಮುಖ ಇತಿಹಾಸ ಪುರುಷರಾದ ರಾಷ್ಟ್ರ ಕವಿ ಕುವೆಂಪು, ಕಿತ್ತೂರು ಚೆನ್ನಮ್ಮ, ಹಾಗೂ ಕರ್ನಾಟಕ ದ ಪುರಾತನ ಕಲೆಯಾದ ಕುಂಬಾರನ ವೇಷ ಧರಿಸಿ ವೇದಿಕೆಯಲ್ಲಿ ಹೆಜ್ಜೆ ಇಟ್ಟ ಪುಟಾಣಿ ಮಕ್ಕಳು ಆಕರ್ಷಣೆಯ ಕೇಂದ್ರ ಬಿಂದುವಾದರು.
ಕಾರ್ಯಕ್ರಮದಲ್ಲಿ ಕರ್ನಾಟಕದ ಇತಿಹಾಸ ಮತ್ತು ಕನ್ನಡ ಭಾಷೆಯ ಕುರಿತ ರಸ ಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕರ್ನಾಟಕದ ಇತಿಹಾಸವನ್ನು ತಿಳಿಸುವ ಚಿತ್ರ ಮತ್ತು ಬರಹಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಸಮಾರಂಭಕ್ಕೆ ಬರುವ ಕನ್ನಡಾಭಿಮಾನಿಗಳಿಗೆ ಸ್ವಾಗತ ಕೋರುತ್ತಾ ನಿಂತಿರುವ ರೈತರ ನೇಗಿಲ ಯೋಗಿಯ ಸ್ತಬ್ಧಚಿತ್ರ ಎಲ್ಲರ ಗಮನ ಸೆಳೆಯಿತು.
ಐ.ಎಸ್. ಎಫ್. ಪ್ರತಿ ವರ್ಷ ನಡೆಸಿಕೊಂಡು ಬರುವ ರಾಜ್ಯೋತ್ಸವ ಸನ್ಮಾನ ಕಾರ್ಯವನ್ನು ಪ್ರಸಕ್ತ ವರ್ಷದಲ್ಲಿ ಶಿಕ್ಷಣಕ್ಷೇತ್ರಕ್ಕೆ ಮೀಸಲಿಟ್ಟಿದ್ದು, ಅದರಂತೆ ಕಳೆದ ಹತ್ತು ವರುಷಗಳಿಂದ ದಮ್ಮಾಮ್ ಭಾರತೀಯ ರಾಯಭಾರಿ ಶಾಲೆಯಲ್ಲಿ ಕರುನಾಡ ಮಕ್ಕಳಿಗೆ ಕನ್ನಡ ಭಾಷಾ ಶಿಕ್ಷಣವನ್ನು ನೀಡುತ್ತಿರುವ ಶಿಕ್ಷಕಿ ಸಂಧ್ಯಾ ಶಿರ್ವರನ್ನು ಐ ಎಸ್ ಎಫ್ ಮಹಿಳಾ ಘಟಕದ ಸದಸ್ಯೆಯರು ಸನ್ಮಾನಿಸಿದರು. `
ಐ ಎಸ್ ಎಫ್ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಅಶ್ರಫ್ ಮುಕ್ವೆ, ಎಬಿಎಲ್ ಗ್ರೂಪ್ ನ ಸಿಇಓ ಅಬೂಬಕ್ಕರ್ ಸಿದ್ದೀಕ್, ಕೆಎಂಟಿ ಸಿಇಓ ಅಬ್ದುಲ್ ರಹ್ಮಾನ್, ಐ ಎಸ್ ಎಫ್ ದಮ್ಮಾಮ್ ಘಟಕ ಅಧ್ಯಕ್ಷ ಶಬೀರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಮಾರಂಭದ ಮೊದಲಿಗೆ ದಮ್ಮಾಮ್ ಘಟಕ ಕಾರ್ಯದರ್ಶಿ ಸಾಭಿತ್ ಪುತ್ತೂರು ಸ್ವಾಗತಿಸಿ, ಫಾರಂ ಸದಸ್ಯ ಅಬ್ದುಲ್ ಹಮೀದ್ ವಂದಿಸಿದರೆ, ಝಯಿನುದ್ದೀನ್ ಸಜೀಪ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಅನನ್ಯ ರೂಪದಲ್ಲಿ ಸಮಾರಂಭ ನಡೆಸಿದಕ್ಕಾಗಿ ಸಭಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
2024ರಲ್ಲಿ ಭಾರತದಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರು ಸೇರಿ 10,546 ಮಂದಿ ಆತ್ಮಹತ್ಯೆಯಿಂದ…
ಕರ್ನಾಟಕದಲ್ಲಿ ಈಗಾಗಲೇ 13,500 ಶಿಕ್ಷಕರ ನೇಮಕಾತಿ ನಡೆದಿದ್ದು, ಶಿಕ್ಷಣ ಇಲಾಖೆಯಲ್ಲಿ ಇನ್ನೂ 16…
ಕರ್ನಾಟಕದ ಹಲವು ಭಾಗಗಳಲ್ಲಿ ಸೆ.5ರಿಂದ ಕೆಲವು ದಿನ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ.…
ಹಿಮನದಿ ಕುಸಿತದಿಂದ ಸಂಭವಿಸಿದ ಭೀಕರ ಪ್ರವಾಹದ ಬಳಿಕ ನೇಪಾಳ ಪ್ರಧಾನಿ ಬಾಲೆಂದ್ರ ಶಾ…
2023ರಿಂದ 2026ರವರೆಗೆ ದೇಶದ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರೀಕ್ಷಿಸಿದ 70,652…
ಕಾಸರಗೋಡಿನ ICAR-CPCRIನಲ್ಲಿ ವಿಶ್ವ ತೆಂಗು ದಿನ–2026 ಆಚರಿಸಿ, ಹವಾಮಾನ ಅನಿಶ್ಚಿತತೆಯ ನಡುವೆ ತೆಂಗು…