ನೆನಪುಗಳೊಂದಿಗೆ……

May 15, 2020
11:19 PM

ಅವರು ವೈದ್ಯರು. ಮನೆ, ಮನೆತನದಲ್ಲಿ ರಕ್ತಗತವಾದ ವೈದ್ಯಕೀಯ ಕ್ಷೇತ್ರವನ್ನೇ ತನ್ನ ಕಾರ್ಯ ಕ್ಷೇತ್ರ ಮಾಡಿಕೊಂಡವರು. ಹಿರಿಯರಿಂದ ಬಳುವಳಿಯಾಗಿ ಬಂದ ಸೇವಾ ಮನೋಭಾವನೆಯನ್ನು ಅಕ್ಷರಶಃ ಚಾಚುತಪ್ಪದೆ ಪಾಲಿಸಿದವರು. ಒಂದೊಂದು ನಿಮಿಷಗಳನ್ನು ತನಗಾಗಿ ವ್ಯಯಿಸದೆ  ತನ್ನನ್ನೇ ನಂಬಿ ಬರುವ  ಪೇಷೆಂಟ್ ಗಳಿಗಾಗಿ‌ ಮುಡಿಪಾಗಿಟ್ಟವರು. ತನ್ನದು ತನ್ನ ಕುಟುಂಬವೆಂಬ ಪರಿದಿಯನ್ನೇ ಮೀರಿ ಸಮಾಜಕ್ಕೆ ತನ್ನನ್ನು ಮುಡಿಪಾಗಿಟ್ಟವರು.  ತನ್ನ ಪ್ರಾಥಮಿಕ ಆವಶ್ಯಕತೆಯನ್ನೇ  ಕಡೆಗಣಿಸಿ ಮುನ್ನಡೆದವರು.  ಮನಸಿನ ತುಂಬಾ ಸೇವೆಯನ್ನೆ ಧ್ಯೇಯವೆಂದು ಬಲವಾಗಿ ನಂಬಿ ಉಳಿದವರಿಗೇನೂ ಕಷ್ಟ ಬರದಿರಲಿ, ಅದೇನಿದ್ದರೂ ತನಗೇ ಇರಲಿ ಎಂಬ ಮನಸ್ಥಿತಿ ಯವರು.

ಒಮ್ಮೆ ಔಷಧ ಕೊಟ್ಟು ಸುಮ್ಮನಾಗದೆ,  ಹೇಗಾಯಿತು  ಏನಾಯಿತೆಂದು ಮರೆಯದೆ ಫೋನ್ ಮಾಡಿ  ವಿಚಾರಿಸುವವರು.  ಎಲ್ಲೆಲ್ಲಿಂದಲೋ ಕಾಲ್ ಮಾಡಿ ಮಾರ್ಗದರ್ಶನ ಕೇಳಿದರೂ ಸ್ವಲ್ಪವೂ ಬೇಸರಿಸದೆ ಪರಿಹಾರ ಸೂಚಿಸುತ್ತಿದ್ದವರು, ತನ್ನ ಸುತ್ತಮುತ್ತಲಿನ ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯ ವಾದ ಮಾರ್ಗದರ್ಶನ ವನ್ನು ಹಣಕಾಸಿನ ನೆರವನ್ನು ಕೊಟ್ಟು ಪ್ರೋತ್ಸಾಹಿಸುವ ಮನೋಭಾವ ಹೊಂದಿದವರು.  ಊಟ, ವಿಶ್ರಾಂತಿ, ಪ್ರಯಾಣ, ಕಾರ್ಯಕ್ರಮ ವೇನೇ ಇರಲಿ ಮೊಬೈಲ್ ಕರೆಗಳನ್ನು ಯಾವತ್ತೂ ನಿರ್ಲಕ್ಷಿಸಿ ದವರಲ್ಲ.‌ ಎಲ್ಲಿಯಾದರು ಮಿಸ್ ಆದರೆ ಕೂಡಲೇ ಕರೆ ಮಾಡಿ ವಿಚಾರಿಸುತ್ತಿದ್ದರು. ಏನಾದರೂ ಎಮರ್ಜೆನ್ಸಿ ಆಗಿದ್ದರೆ, ಸುಮ್ಮನೆ ಯಾಕೆ ಬೇರೆಯವರಿಗೆ ತೊಂದರೆ ಎಂದು ಯಾವಾಗಲೂ ರೆಸ್ಟ್ ಲೆಸ್ ಆಗಿರುತ್ತಿದ್ದರು. ದೇಹ ದಣಿದು ವಿಶ್ರಾಂತಿ ಬಯಸಿದರೂ ಅವರು ಅವಕಾಶವೇ ಕೊಡದೆ ಕೆಲಸದಲ್ಲೇ ಮಗ್ನರಾಗಿರುತ್ತಿದ್ದರು.
ತನ್ನ ತಂದೆ  ದೀರ್ಘ ಕಾಲ ಹಾಸಿಗೆ ಹಿಡಿದಿದ್ದಾಗ  ಮಗುವಿನಂತೆ ಆರೈಕೆ ಮಾಡಿದವರು. ಆ ಸಂದರ್ಭದಲ್ಲಿ ಕೂಡ ಕಷ್ಟವಾದರೂ ತೋರಿಸಿಕೊಳ್ಳದೆ ರೋಗಿಗಳಿಗೆ  ಅಗತ್ಯ ಸೇವೆಯನ್ನು  ಚಾಚುತಪ್ಪದೆ  ಒದಗಿಸಿದವರು. ಬಹಳ ಸ್ವಾಭಿಮಾನಿ. ಕೈ ಎತ್ತಿ ಕೊಟ್ಟೇನು  ಹೊರತು ಯಾರ ಮುಂದೆಯೂ ಕೈ
ಚಾಚದ, ಹೊಗಳು  ಭಟ್ಟರ ಮಾತಿಗೆ ಮರುಳಾಗದ  ವಿಶಿಷ್ಟ ವ್ಯಕ್ತಿತ್ವದ ಅಪರೂಪದ ಮನುಷ್ಯ.
ಇವರು ನನ್ನ ಮಾವ ಡಾ.ಪ್ರಕಾಶ. …..
ಡಾ.ಪಿ. ಎಸ್.ಗಣಪಯ್ಯರ ಅಣ್ಣ ಪಂಡಿತ ಪಿ.ಎಸ್ ಗೋವಿಂದಯ್ಯರವರ ಮಗ ಡಾ.ಪ್ರಕಾಶ. ( ಪಾಟಾಜೆ ಗೋವಿಂದಯ್ಯ ಸುಬ್ರಹ್ಮಣ್ಯ ಶ್ರೀ ಪ್ರಕಾಶ) ನನ್ನ ಪತಿ ಕೃಷ್ಣ ಮೂರ್ತಿ ಹಾಗೂ ಅಕ್ಕಂದಿರಿಗೆ ಸ್ವಂತ ಅಣ್ಣನಂತೆ , ಗೆಳೆಯನಂತೆ ಹೆಜ್ಜೆ ಹೆಜ್ಜೆಗೂ ಪ್ರೀತಿಯೊಂದಿಗೆ   ಮಾರ್ಗದರ್ಶನ ವನ್ನು ಕೊಡುತ್ತಿದ್ದವರು.
ಇಂದು ಪ್ರಕಾಶ್ ಬಾವ ನಮ್ಮೊಂದಿಗೆ ಇಲ್ಲ. ತಮ್ಮ ಜೀವನದ ಪ್ರಯಾಣದಲ್ಲಿ ಪತ್ನಿ ಲತಾಶಂಕರಿ , ಮಗ ನಿಖಿಲ್ ಗೋವಿಂದನನ್ನು ಬಿಟ್ಟು ತಮ್ಮ ನಿಲ್ದಾಣ ಬಂತೆಂದು ಅನಿರೀಕ್ಷಿತ ವಾಗಿ ಇಳಿದು  ಹೋಗಿದ್ದಾರೆ. ಏನಿದ್ದರೂ ಪ್ರಕಾಶ ಬಾವ   ಮರೆಯಲಾರದ  ಅಪರೂಪದ ಮಾಣಿಕ್ಯ. ನಮ್ಮ ಅತ್ತೆಯವರ ಧೈರ್ಯ ಗುಂದಿದಾಗಲೆಲ್ಲಾ ಎಂತ ಚಿಕ್ಕಮ್ಮ ಏನೂ ಆಗಿಲ್ಲ.   ಆರೋಗ್ಯವೆಲ್ಲಾ   ಸರಿ ಉಂಟು. ಹೆದರಬೇಕಾದ್ದಿಲ್ಲವೆಂದು  ಚಿಯರಪ್ ಮಾಡುತ್ತಿದ್ದರು.  ಅವರಿಗೆ ಎಲ್ಲರೂ ಗೆಳೆಯರೇ. ಒಂದು ವರುಷದ ಮಗುವಾದರೂ ಸರಿ ಎಂಬತ್ತು ವರ್ಷಗಳ ಹಿರಿಯರಾದರೂ  , ಮಿತ್ರರಂತೆ ಆತ್ಮೀಯತೆ ತೋರಿಸುತ್ತಿದ್ದರು. ಕೆಲವರಿಗಂತೂ ಅವರ ಬಳಿ ಮಾತನಾಡಿದಾಗಲೇ ಅರ್ಧ ಸಮಸ್ಯೆ ಪರಿಹಾರವಾಗುತ್ತಿತ್ತು. ಅವರ ಸ್ನೇಹಪರ ಗುಣಕ್ಕೆ ಮಾರು ಹೋಗದವರೇ ಇರಲಿಲ್ಲ.
ಯಾರು ಎಷ್ಟೇ ಹೊತ್ತಿಗೆ ಬಂದರೂ ನಗುನಗುತ್ತಾ ಆವಶ್ಯಕ ಚಿಕಿತ್ಸೆ ಕೊಟ್ಟು ಅಗತ್ಯ ಸಲಹೆಗಳನ್ನು ನೀಡುತ್ತಾ ತನ್ನ ಸಮಯವಾಯಿತೆಂದು ಸ್ವಲ್ಪವೂ  ಸೂಚನೆ ಕೊಡದೆ ಸೀದಾ  ಬಾರದ ಲೋಕಕ್ಕೆ  ನಡೆದು ಬಿಟ್ಟರು.
ಡಾ.ಪ್ರಕಾಶರು ಇನ್ನಿಲ್ಲವೆಂದು ತಿಳಿದಾಗ ಹಲವರು ಸ್ಪಂದಿಸಿದ ರೀತಿ ಮನಕರಗುವಂತಿತ್ತು.
ದೈಹಿಕವಾಗಿ ನಮ್ಮನ್ನು ಅಗಲಿದರೂ ಮಾನಸಿಕವಾಗಿ ಯಾವಾಗಲೂ ನಮ್ಮ ಜೊತೆಗೇ ಅನಂತವಾಗಿರುತ್ತಾರೆ.  ಪ್ರಕಾಶ್ ಬಾವನನ್ನು ಬಹುವಾಗಿ ನೆನಪಿಸಿಕೊಳ್ಳುತ್ತಾ….
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಎಳೆಅಡಿಕೆ ಮಾತ್ರವಲ್ಲ, ಬಲಿತ ಅಡಿಕೆಯೂ ಒಡೆದು ಬೀಳುತ್ತಿದೆ…! ಕಾರಣ ಏನು?
June 13, 2026
1:49 PM
by: ಮಹೇಶ್ ಪುಚ್ಚಪ್ಪಾಡಿ
ಸುಲಭವಾಗಿ ಮಾಡಿ ರುಚಿಕರ ಹಲಸಿನ ಕಾಯಿ ಚಟ್ನಿ – ಬಿಸಿ ಅನ್ನಕ್ಕೆ ಸೂಪರ್ ಕಾಂಬಿನೇಷನ್!
June 11, 2026
6:47 AM
by: ದಿವ್ಯ ಮಹೇಶ್
ಮಲೆನಾಡಿನ ಸಂಕಷ್ಟವೇ ಅವಕಾಶವಾಗಬಹುದೇ? : ‘ನಿರಪೇಕ್ಷಿತ ಕಾಡು ಕೃಷಿ’ ಹೊಸ ಪರಿಕಲ್ಪನೆ
June 5, 2026
8:20 PM
by: ಪ್ರಬಂಧ ಅಂಬುತೀರ್ಥ
ಬೇಸಿಗೆಯಲ್ಲಿ ನಿಮ್ಮ ಕಿಡ್ನಿಯನ್ನು ಕಾಪಾಡಿ..! ಮೂತ್ರಪಿಂಡದ ಕಲ್ಲು ಸಮಸ್ಯೆ ಏಕೆ ಹೆಚ್ಚುತ್ತಿದೆ?
May 23, 2026
7:12 AM
by: ಡಾ.ಆದಿತ್ಯ ಭಟ್‌, ಚಣಿಲ, BHMS

You cannot copy content of this page - Copyright -The Rural Mirror