ಸವಣೂರು : ನೀರು ಎಲ್ಲಿದೆ….. ಕುಡಿಯುವ ನೀರಾದರೂ ಉಂಟೇ…? ಹೀಗೆಂದು ಪ್ರಶ್ನೆ ಮಾಡುವ ಈ ಸಮಯದಲ್ಲಿ ಕಾನಾವು ಕೆರೆಯಲ್ಲಿ ಈಗಿನ ಸಂದರ್ಭದಲ್ಲಿ ಸಮೃದ್ಧ ನೀರಿದೆ.
ಈಗ ಎಲ್ಲೆಡೆ ನೀರಿನ ಬರದ್ದೆ ಸುದ್ದಿ. ಕುಡಿಯಲು ನೀರಿಲ್ಲ, ತೋಟ ನೀರಿಲ್ಲದೇ ಕೆಂಪಾಗಿದೆ ಎನ್ನುವ ಮಾತು ಬಹುವಾಗಿ ಕೇಳಿಬರುತ್ತಿದೆ. ನೀರಿನ ಬವಣೆ ಹೋಗಲಾಡಿಸುವ ಸಲುವಾಗಿ ಒಡ್ಡುಗಳನ್ನು ನಿರ್ಮಿಸಿ ಓಡುವ ನೀರನ್ನು ನಿಲ್ಲಿಸಿ, ನಿಂತ ನೀರನ್ನು ಇಂಗಿಸಿ ಎಂದು ಇಂದಿನ ದಿನಗಳಲ್ಲಿ ಸಲಹೆ ನೀಡುತ್ತಿದ್ದಾರೆ. ಇದರಿಂದ ಮಣ್ಣಿನ ಫಲವತ್ತತೆ ಹಾಗೂ ಅಂತರ್ಜಲ ಮಟ್ಟ ಏರಿಸಲು ಸಾಧ್ಯವಾಗುತ್ತದೆ ಎಂದೂ ಹೇಳುತ್ತಾರೆ. ಆದರೆ, ಎಷ್ಟು ಜನರು ಕಾರ್ಯರೂಪಕ್ಕೆ ತರುತ್ತಾರೆ ಎನ್ನುವುದು ತಿಳಿಯದು. ಒಡ್ಡುಗಳನ್ನು ನಿರ್ಮಿಸಿ ನೀರು ಇಂಗಿಸುವ ಕಾರ್ಯ ಬಹಳ ಹಿಂದಿನ ದಿನಗಳಲ್ಲೂ ನಡೆಯುತ್ತಿತ್ತು. ಇದಕ್ಕೆ ಉದಾಹರಣೆ ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಕಾನಾವು ಎಂಬಲ್ಲಿಯ ಮಂಜನಾಕಜೆ ಕಟ್ಟೆ.
ಕಾನಾವು ಕೆರೆ:
ಪೆರುವಾಜೆ ಗ್ರಾಮದ ಕಾನಾವು ಎಂಬಲ್ಲಿ ಸುಮಾರು 40 ವರ್ಷಗಳ ಹಿಂದೆ ನರಸಿಂಹ ಭಟ್ ಎಂಬವರು ಗುಡ್ಡದ ಬುಡದಲ್ಲಿ ಮಣ್ಣಿನ ಒಡ್ಡು ನಿರ್ಮಿಸಿ ಬೃಹತ್ ಕೆರೆ ನಿರ್ಮಾಣ ಮಾಡಿದ್ದಾರೆ. ಈ ಕೆರೆಯು ಸುಮಾರು 3 ಎಕರೆ ವಿಸ್ತೀರ್ಣದಲ್ಲಿದ್ದು, 30 ಅಡಿ ಆಳ ಹೊಂದಿದೆ. ಈ ಕೆರೆಯಲ್ಲಿ ಸಮೃದ್ಧವಾಗಿ ನೀರು ತುಂಬಿರುವುದರಿಂದ ಸುಮಾರು 35 ಎಕರೆ ಕೃಷಿ ತೋಟಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ. ಈ ಒಡ್ಡು ನಿರ್ಮಾಣದಿಂದಾಗಿ ಸುತ್ತಮುತ್ತಲಿನ ಪ್ರದೇಶದಲ್ಲೂ ಒರತೆ ಪ್ರಮಾಣ ಸಾಕಷ್ಟು ಹೆಚ್ಚಿದ್ದು ಅನೇಕರಿಗೆ ಪ್ರಯೋಜನವಾಗಿದೆ. ಮಳೆಗಾಲದಲ್ಲಿ ಒಡ್ಡುವಿನ ಒಂದು ಭಾಗವನ್ನು ತೆರೆದು ನೀರು ಹೊರಬಿಡಲಾಗುತ್ತಿದೆ.
ಪಂಪ್ಸೆಟ್ನ ಅಗತ್ಯವೇ ಇಲ್ಲ
ಈ ಕೆರೆಯಿಂದ ತಗ್ಗು ಪ್ರದೇಶದಲ್ಲಿ ಅಡಿಕೆ, ತೆಂಗು ತೋಟವಿರುವುದರಿಂದ ಪಂಪ್ಸೆಟ್ ಇಲ್ಲದೇನೇ ಒಮ್ಮೆಗೆ 15 ಸ್ಪ್ರಿಂಕ್ಲರ್ ಮೂಲಕ ನೀರು ಸಿಂಪಡಿಸಲು ಸಾಧ್ಯವಾಗುತ್ತಿದೆ. ನರಸಿಂಹ ಭಟ್ ಅವರ ಪುತ್ರರಾದ ಗೋಪಾಲಕೃಷ್ಣ ಭಟ್ ಹಾಗೂ ತಿರುಮಲೇಶ್ವರ ಭಟ್ ಇದೀಗ ಆ ನೀರಿನ ಫಲಾನುಭವಿಗಳು.
ನಿಯಮಿತವಾಗಿ ಅಂದರೆ, ಯಾವ ಪ್ರಮಾಣದಲ್ಲಿ ನೀರನ್ನು ಗಿಡಕ್ಕೆ ಸಿಂಪಡಣೆ ಮಾಡಬೇಕು ಎನ್ನುವ ಅರಿವು ಇರುವ ಇವರು ಅವಶ್ಯಕತೆಗೆ ತಕ್ಕಂತೆ ನೀರು ಬಳಕೆ ಮಾಡಿಕೊಂಡು, ಆ ಕೆರೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಕೆರೆಯ ಸುತ್ತುಮುತ್ತಲಿನ ಕಾಡಿನ ನಾಶ ಮಾಡದೇ ಇವರು ಅದನ್ನ ಸಂರಕ್ಷಿಸಿಕೊಂಡು ಬಂದಿರುವುದು ಮಾತ್ರವಲ್ಲದೇ ಗಿಡಗಳನ್ನು ನೆಟ್ಟು ಪೋಷಿಸಿ ಇತರರಿಗೆ ಮಾದರಿಯಾಗಿದ್ದಾರೆ.
ನೀರಿನ ಸಂರಕ್ಷಣೆ
ನೀರಿನ ಮಹತ್ವವನ್ನು ತಿಳಿದು ನೀರಿನ ಸಂರಕ್ಷಣೆ ಮಾಡುವುದು ಪ್ರಥಮ ಆದ್ಯತೆಯಾಗಬೇಕು. ಬರ ಬಂದ ಬಳಿಕ ದುಖಿಸುವ ಬದಲು ಈಗಿನಿಂದಲೇ ನೀರಿನ ಸಂರಕ್ಷಣೆ, ಸಂವರ್ಧನೆ ಕುರಿತು ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಬೇಕು. ಕೃಷಿಕರ ಪಂಪ್ಸೆಟ್ಗೆ ಉಚಿತ ವಿದ್ಯುತ್ ಪೂರೈಕೆಯಾಗುತ್ತಿಗುತ್ತಿರುವುದರಿಂದ ಕೆಲ ಕಡೆ ದುರುಪಯೋಗವಾಗುತ್ತಿರುವುದಕ್ಕೆ ಕಡಿವಾಣ ಬೀಳಬೇಕು. ಜನಸಾಮಾನ್ಯರು ನೀರಿನ ವಿಚಾರದಲ್ಲಿ ಸರಕಾರ ಅಥವಾ ಅಕಾರಿಗಳನ್ನು ಮಾತ್ರ ಬೊಟ್ಟು ಮಾಡಿ ತೋರಿಸದೇ ತಾವು ಅಳವಡಿಸಿಕೊಳ್ಳಬಹುದಾದ ಕ್ರಮಗಳತ್ತನೂ ಚಿಂತನೆ ಮಾಡಬೇಕು.
ಇಂದಿನ ನೀರಿನ ಸಮಸ್ಯೆ ಬಗ್ಗೆ ಮಾತನಾಡುವ ಗೋಪಾಲಕೃಷ್ಣ ಭಟ್ ಕಾನಾವು,“ನಾವು ಗಿಡ ನೆಟ್ಟು ಕಾಡು ಬೆಳೆಸಿ ಪ್ರಕೃತಿ ರಕ್ಷಣೆ ಮಾಡಲು ಮುಂದಾಗಬೇಕು. ನೀರಿನ ಮಹತ್ವ ತಿಳಿದು ಮಳೆಗಾಲದ ನೀರನ್ನು ಒಡ್ಡು ನಿರ್ಮಿಸುವುದರ ಮೂಲಕ ಇಂಗಿಸುವುದರೊಂದಿಗೆ ನೀರಿನ ಮಿತ ಬಳಕೆ ಮಾಡಬೇಕು, ಆಗ ಮಾತ್ರಾ ಪರಿಹಾರ ಸಾಧ್ಯ “ ಎಂದು ಹೇಳುತ್ತಾರೆ.
ಗೋಕರ್ಣದಲ್ಲಿ ನಡೆದ ಅನ್ನಬ್ರಹ್ಮ ಚಾತುರ್ಮಾಸ್ಯ ಧರ್ಮಸಭೆಯಲ್ಲಿ ಜಗದ್ಗುರು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು…
ಮಧ್ಯಪ್ರದೇಶದಲ್ಲಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಹಲವು…
ಗೋಕರ್ಣದ ಅಶೋಕೆಯ ಮೂಲಮಠದಲ್ಲಿ 'ಅನ್ನಬ್ರಹ್ಮ ಚಾತುರ್ಮಾಸ್ಯ' ಆರಂಭಗೊಂಡಿದ್ದು, ಸಮಾಜಕ್ಕೆ ಸರಿಯಾದ ದಾರಿ ತೋರಿಸುವುದು…
ಅಪೊಲೊ ಫಾರ್ಮಸಿ ವತಿಯಿಂದ ವಿವಿಧ ಹುದ್ದೆಗಳ ಭರ್ತಿಗಾಗಿ ಆಗಸ್ಟ್ 1ರಂದು ಪುತ್ತೂರಿನಲ್ಲಿ ನೇರ…
ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನಲ್ಲಿ ಇನ್ನೂ ಬಿಟ್ಟುಬಿಟ್ಟು ಮಳೆ ಮುಂದುವರಿಯಲಿದೆ. ಆದರೆ…
ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿಯುವ ಔಷಧಗಳನ್ನು ಸುರಕ್ಷಿತವಾಗಿ ಮರುಬಳಕೆ ಮಾಡಿದರೆ ಆರೋಗ್ಯ ಕ್ಷೇತ್ರದ ವೆಚ್ಚ…